ಬುಧವಾರ, ಮಾರ್ಚ್ 31, 2010

ಎಲ್ಲಾರಿಗೂ ದೊಡ್ದಪುರದ ರಮೇಶನ ದೊಡ್ಡ ನಮಸ್ಕಾರಗಳು.....

               ಅಲ್ಲಿ-ಇಲ್ಲಿ ಕೇಳಿದ್ದು-ಓದಿದ್ದು ಎಲ್ಲಾನೂ ಸೇರಿಸಿ ಅವಾಗವಾಗ ಲೇಖನಗಳನ್ನ ಬರೀತಾ ಇರ್ತೀನಿ. ನೀವು ಹೋದಾಗ-ಬಂದಾಗ-ಬಿಡುವಾದಾಗಲೆಲ್ಲಾ ಇದನ್ನ ಒದ್ತಾ ಇರಿ. ನಿಮಗೆ ಸರಿ-ತಪ್ಪು ಅನ್ಸಿದ್ದನ್ನ ಇನ್ನೊಬ್ರಿಗೆ ಬೇಜಾರಗ್ದಿರೋ ರೀತಿ ಕಾಮೆಂಟ್ ಮಾಡಿ. ನೀವೂ ಅವಾಗವಾಗ ಬರ್ದು-ಗಿರ್ದು ಮಾಡ್ತಾ ಇರಿ.

ಇಂತಿ,
ರಮೇಶ ದೊಡ್ಡಪುರ

ಕೊಟ್ಟಾರೆ ಕೊಡು ಶಿವನೇ ಚಿರಂಜೀವಿಯಗಿಸೋ ವರವಾ...!

               ಹಳ ದಿನಗಳಿಂದ ಅದೇಕೋ ಅದೇ ವಿಷಯ ತಲೆಯನ್ನು ಕೊರೀತಾ ಇತ್ತು. ಹೀಗೆಲ್ಲಾ ಯಾಕೆ ಆಗುತ್ತೆ? ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನೇ ಹೇಳಿದ್ದಾನೆ, ಬಟ್ಟೆಯನ್ನು ಬದಲಿಸಿದಂತೆ ದೇಹವನ್ನು ಆತ್ಮವು ಬದಲಿಸುತ್ತದೆ ಎಂದು. ಆದರೂ ಏಕೆ ಈ ಜನಕ್ಕೆ ಆಗಿಹೋಗಿರುವ ಒಬ್ಬ ’ಆಪ್ತ’ನ ಸಾವನ್ನು ಒಪ್ಪಿಕೊಳ್ಳಲು ಆಗುವುದಿಲ್ಲ?....

               ಅವತ್ತು ಆಫೀಸ್ ಮುಗಿಸಿಕೊಂಡು ಬಿರಬಿರನೆ ಮನೆಕಡೆಗೆ ಹೊರಟು ಖೋಡೇಸ್ ವೃತ್ತದ ಸಿಗ್ನಲ್ ನಲ್ಲಿ ಹಸಿರು ನಿಶಾನೆಗಾಗಿ ಕಾಯುತ್ತಾ ನಿಂತಿದ್ದೆ. ತಕ್ಷಣ ಆಶ್ಚರ್ಯ, ನಗು, ಕೋಪ ಎಲ್ಲಾ ಒಟ್ಟೊಟ್ಟಿಗೇ ಆದ ಅನುಭವ. ಪೇಪರ್ ಮಾರುವ ಹುಡುಗನ ಕೈಲಿದ್ದ ಹಳದೀ(ಪೀತ) ಪತ್ರಿಕೆಯೊಂದರ ಮುಖಪುಟದಲ್ಲಿ ಬರೆದಿತ್ತು, "ಸಿಂಹ ಸಾಯಲಿಲ್ಲ- ಗುರಿಯಿಟ್ಟು ಹೊಡೆದರು". ಸಾಹಸ ಸಿಂಹ ವಿಷ್ಣುವರ್ಧನ್ ಸಾವಿನ ಕುರಿತು ಬರೆಯಲಾಗಿದ್ದ ತಲೆಯಿಲ್ಲದ ತಲೆಬರಹ ಅದು. ಇನ್ನು ಅದನ್ನು ಕೊಂಡು ಓದಿ ಒಂಭತ್ತು ರೂಪಾಯಿ ಹಾಳುಮಾಡಿಕೊಳ್ಳುವಷ್ಟು ಮೂರ್ಖನಾಗಿಲ್ಲದಿದ್ದರಿಂದ ಒಳಗೆ ಏನಿರಬಹುದೆಂದು ಊಹಿಸಿ ಸುಮ್ಮನಾದೆ.

               ತಕ್ಷಣ ಟ್ಯೂಬ್ ಲೈಟ್ ಹತ್ತಿಕೊಂಡಿತು! ಆ ಗಲಾಟೆಗಳಿಗೆಲ್ಲಾ ಇಂತಹ ಪತ್ರಿಕೆಗಳೇ ಕಾರಣ ಇರಬಹುದು. ಇಲ್ಲ ಸಲ್ಲದ್ದನ್ನೆಲ್ಲಾ ’ಬರೆ’ದು ತಮಾಷೆ ನೋಡುವ ಇಂಥವರಿಂದಲೇ ಇದೆಲ್ಲ. ತಿಳಿನೀರಿನಂತಿರುವ ಜನರ ಮನಸ್ಸಿಗೆ ಕಲ್ಲೆಸೆದು ತರಂಗಗಳನ್ನು ನೋಡುತ್ತಾ, ಏಳುವ ಬಗ್ಗಡವನ್ನು ಬಣ್ಣಿಸುತ್ತಾ ಕೂರುವವರು ಇವರು ಎನ್ನಿಸಿತು.

               ವಿಷ್ಣುವರ್ಧನ್ ನಿಧನದ ನಂತರ ನಡೆದ ಗಲಭೆಗಳನ್ನೆಲ್ಲಾ ನೆನೆಸಿಕೊಂಡರೆ ನಿಜವಾಗಲೂ ಬೇಸರವಾಗುತ್ತದೆ. ಯಾಕೆ ಬೇಕು ಈ ಜನಕ್ಕೆ ಈ ಪರಿಯ ಹುಚ್ಚು? ಒಬ್ಬ ಮನುಷ್ಯನ ಪ್ರಾಣ ಹೋದದ್ದಕ್ಕೆಲ್ಲಾ ಈ ಪಾಟಿ ಪ್ರತಿಕ್ರಿಯೆಯಾ? "ವಿಷ್ಣುವರ್ಧನ್ನೂ ಒಬ್ಬ ಮನುಷ್ಯ ತಾನೇ? ಅವನು ಸತ್ತದ್ದಕ್ಕೆ ಇವರೆಲ್ಲಾ ಯಾಕೆ ಬಾಯಿ ಬಡ್ಕೋ ಬೇಕು?" ಅಂದ್ರು ಗೆಳೆಯರೊಬ್ಬರು. ಹೌದು ಅನ್ನಿಸಿತ್ತು, ಆ ಸಮಯಕ್ಕೆ. ಆದರೂ, ಒಬ್ಬರ ಮೇಲೆ ಈ ಪಾಟಿ ಭಕ್ತಿ, ಪ್ರೀತಿಗಳನ್ನು ಇಟ್ಟುಕೊಳ್ಳಲು ಸಾಧ್ಯವೇ? ಆ ವ್ಯಕ್ತಿ ಜನರ ಮನಸ್ಸಿನಲ್ಲಿ ಏಳಿಸಿ ಹೋಗಿರುವ ಕಂಪನ ಯಾವ ರೀತಿಯದ್ದು ಅನ್ನಿಸಿತು. ೨೦೦೬ ರಲ್ಲಿ ವರನಟ ರಾಜ್ ಕುಮಾರ್ ನಿಧನದ ಸಮಯದಲ್ಲಿ ಆದ ಗಲಭೆ, ಗೋಲಿಬಾರ್ ವಿಷಯಗಳೆಲ್ಲಾ ಇನ್ನೂ ಹಸಿಯಾಗಿವೆ. ಸ್ವಲ್ಪ ಹೆಚ್ಚಿಗೆ ದೊಂಬಿಯಾದರೂ ಏಟು ಬೀಳುತ್ತದೆ ಅನ್ನುವುದು ಗೊತ್ತಿದೆ. ಆದರೂ ಈ ಜನ ಬೀದಿಗಿಳಿದು ತಮ್ಮ ಹತಾಶೆ, ಆಕ್ರೋಶಗಳನ್ನು ತೀರಿಸಿಕೊಳ್ಳುತ್ತಾರೆ. ಇನ್ನು, ಯಾರೋ ದುಡ್ಡು ಕೊಟ್ಟು ಇದನ್ನೆಲ್ಲಾ ಮಾಡಿಸುತ್ತಾರೆ ಎನ್ನುವುದು ಅರ್ಧ ಸತ್ಯ ಎನ್ನಿಸುತ್ತದೆ. ಈ ಗಲಾಟೆ, ದೊಂಬಿಗಳನ್ನೆಲ್ಲಾ ಬದಿಗಿಟ್ಟು ಒಮ್ಮೆ ನೋಡಿದರೆ, ನಿಧನರಾದ ಇಂತಹವರ ಜೀವನವೇ ಧನ್ಯ ಎನ್ನಿಸುತ್ತದೆ. ’ಒಬ್ಬ ಮನುಷ್ಯ ಎಷ್ಟು ದೊಡ್ಡವನು ಎಂದು ಅವನು ಸತ್ತ ನಂತರ ಅವನಿಗಾಗಿ ಎಷ್ಟು ಜನ ಕಂಬನಿ ಮಿಡಿಯುತ್ತಾರೆ ಎನ್ನುವುದರಿಂದ ತಿಳಿಯುತ್ತದೆ’ ಎಂದು ಎಲ್ಲೋ ಕೇಳಿದ ನೆನಪು.

               ಆಂಧ್ರ ಮುಖ್ಯಮಂತ್ರಿ ವೈ.ಎಸ್.ರಾಜಶೇಖರರೆಡ್ಡಿ ತೀರಿಕೊಂಡಾಗಲಂತೂ ೬೦-೭೦ ಜನ ಆತ್ಮಹತ್ಯೆ ಮಾಡಿಕೊಂಡರು ಎಂಬ ಸುದ್ದಿ ಕೇಳಿದವರಿಗೆ ರಾಜಶೇಖರರೆಡ್ಡಿ ತೀರಿಕೊಂಡದ್ದಕ್ಕಿಂತಲೂ ದೊಡ್ಡ ಆಘಾತವಾಗಿರುತ್ತದೆ. ಇನ್ನೂ ರಾಜಕೀಯದಿಂದ ನಿವೃತ್ತಿ ತೆಗೆದುಕೊಳ್ಳುತ್ತಿಲ್ಲ, ಇವನು ಅದ್ಯಾವಾಗ ಸಾಯ್ತಾನೋ ಅಂದೇ ಈ ದೇಶ ಉದ್ಧಾರ ಆಗುತ್ತೆ ಅಂತ ಜನರ ಬಾಯಿಯಿಂದ ಬೈಯ್ಯಿಸಿಕೊಳ್ಳುತ್ತಿರುವ ಅದೆಷ್ಟೋ ರಾಜಕಾರಣಿಗಳಿಗೆ ರಾಜಶೇಖರರೆಡ್ಡಿ ಒಂದು ಆದರ್ಶವಾಗಬೇಕು. (ಇದರರ್ಥ ಬೇಗ ಸಯಬೇಕು ಅಂತಲ್ಲ, ಬದುಕಿರೋವರೆಗೆ ಒಂದಷ್ಟು ಒಳ್ಳೇ ಕೆಲಸ ಮಾಡ್ಬೇಕು ಅಂತ).

               ದಿಟ್ಟ ನಿಲುವು ಎಂದು ಹೇಳಿಕೊಳ್ಳುವ ಅನೇಕ ಪತ್ರಿಕೆಗಳು, ಟಿ.ವಿ ವಾಹಿನಿಗಳು ಅನೇಕ ಪ್ರಮುಖ ವ್ಯಕ್ತಿಗಳ ಮೇಲೆ ಸುಳ್ಳು-ಸುಳ್ಳು ಬರೆಯುತ್ತಿರುತ್ತವೆ. ಆದರೆ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಜನ, ವೈ.ಎಸ್.ಆರ್ ಸಾವಿನ ಹಿಂದೆ ಅಂಬಾನಿ ಸೋದರರ ಸಂಚಿದೆ ಎಂಬ ಸಣ್ಣ ಸುದ್ದಿ ನೋಡಿದ ತಕ್ಷಣ ಹಿಂದೆ-ಮುಂದೆ ಯೋಚಿಸದೇ, "ರಿಲಯನ್ಸ್" ಎಂದು ಬರೆದಿದ್ದ ಯಾವ ಅಂಗಡಿ, ವ್ಯಾಪಾರವನ್ನೂ ಬಿಡದೇ ಚಚ್ಚಿ ಹಾಕುತ್ತಾರೆ ಅಂದರೆ ರಾಜಶೇಖರರೆಡ್ಡಿ ಇವರಲ್ಲಿ ತುಂಬಿಹೋಗಿರುವ ಭಾವನೆ ಎಂತಹದ್ದು? ನಿಜಕ್ಕೂ ವೈ.ಎಸ್.ಆರ್ ಗೊಂದು ಹ್ಯಾಟ್ಸಾಫ್.

               ಆಗಲೇ ಹೇಳಿದಂತೆ (ನಾನಲ್ಲ, ಕೃಷ್ಣ ಹೇಳಿದಂತೆ) ಹುಟ್ಟಿದ ಮೇಲೆ ಎಂದಾದರೂ ಸಾಯಲೇ ಬೇಕು. ಹಾಗೆಯೇ ಇಂದು ತಮಿಳು ತೆಲುಗು, ಹಿಂದಿ ಚಿತ್ರರಂಗದ ದೇವತೆಗಳೂ ಸಹಾ.....! ಹಾಗಾದಾಗ ಈ ಜನರ ಪಾಡೇನು? ಏಕೆಂದರೆ ಒಬ್ಬ ರಾಜ್ ಕುಮಾರ್ ಮೇಲೆ ಜನರು ಇಟ್ಟಿರುವಷ್ಟೇ ಪ್ರೀತಿಯನ್ನು ರಜನೀಕಾಂತ್ ಮೇಲೆ ಇಟ್ಟಿರುವವರ ಗತಿಯೇನು ಎಂದು ಊಹಿಸಿಕೊಂಡರೇ ಭಯವಾಗುತ್ತದೆ. ಒಬ್ಬ ಕರುಣಾನಿಧಿ, ಒಬ್ಬ ಜಯಲಲಿತಾ, ಒಬ್ಬ ಚಿರಂಜೀವಿ, ಒಬ್ಬ ಅಮಿತಾಭ್, ಒಬ್ಬ ಶಾರೂಖ್....... ರನ್ನೂ ಸಹಾ ಜನ ಅಷ್ಟೇ ಆರ‍ಾಧಿಸುತ್ತಾರೆ. ಅಂತಹ ಸಮಯದಲ್ಲಿ ಆಗುವ ಕೋಲಾಹಲಗಳನ್ನು ತಡೆಯಲು ಯಾರು ಏನು ತಾನೇ ಮಾಡಲು ಸಾಧ್ಯ? ಸರ್ಕಾರದಿಂದ ಪ್ರತಿಯೊಬ್ಬನಿಗೂ ಪೋಲೀಸ್ ಕಾವಲು ಹಾಕಲಂತೂ ಆಗುವುದಿಲ್ಲ. ಇನ್ನೇನು ಮಾಡಬಹುದು?

               ನಮ್ಮವರು ತೀರಿಕೊಂಡಾಗ, ಮನಸ್ಸಿಗೆ ಆಘಾತವಾದಾಗ, ಪ್ರಪಂಚವೇ ತಲೆಕೆಳಕಾದಂತೆ ಅನ್ನಿಸಿದಾಗ, ಜೀವನವೇ ಬೇಡವೆನಿಸಿದಾಗ ನಮ್ಮ ಜನಕ್ಕೆ ಅದನ್ನೆಲ್ಲಾ ತಡೆದುಕೊಳ್ಳುವ ಶಕ್ತಿ-ಸಾಮರ್ಥ್ಯಗಳನ್ನು ಕೊಡು ಎಂದು ಆ ದೇವರಲ್ಲಿ ಪ್ರಾರ್ಥಿಸಬಹುದು ಅಥವಾ ನಮ್ಮ ನೆಚ್ಚಿನ ಸಿನಿಮಾ ತಾರೆಯರು, ರಾಜಕಾರಣಿಗಳು, ಗುರುಗಳನ್ನೆಲ್ಲರನ್ನೂ ಹನುಮಂತನಂತೆ ಚಿರಂಜೀವಿಗಳನ್ನಾಗಿಸು ಎಂದು ಬೇಡಬಹುದಷ್ಟೇ.

               ಹುಲು ಮಾನವರು ನಾವು. ಆ ದೈತ್ಯ ಪ್ರೀತಿಯ ಮುಂದೆ ಇನ್ನೇನು ಮಾಡಲು ಸಾಧ್ಯ?

ಶುಕ್ರವಾರ, ಫೆಬ್ರವರಿ 26, 2010

ನಿರೀಕ್ಷೆಯಿರುವುದು ನ್ಯಾಯದ್ದಲ್ಲ, ನಿರೀಕ್ಷಣಾ ಜಾಮೀನುಗಳದ್ದು


          'ಒಂದು ದೊಡ್ಡ ಮರ ಬಿದ್ದಾಗ ಭೂಮಿ ಅಲುಗಾಡುವುದು ಸಹಜ' ಎಂದಿದ್ದರು ನಮ್ಮ ಅಂದಿನ A Prime Minister with vision ,ರಾಜೀವ ಗಾಂಧಿಯವರು. ಅವರ ಈ ಹುಂಕಾರ ಬಂದದ್ದು 1984ರಲ್ಲಿ ಇಂದಿರಾ ಗಾಂಧಿಯವರ ಹತ್ಯೆಯ ಸೇಡಿಗಾಗಿ ಕಾಂಗ್ರೆಸ್ ಕಾರ್ಯಕರ್ತರು, ದೆಹಲಿಯ ಬೀದಿ-ಬೀದಿಗಳಲ್ಲಿ ಸಿಖ್ಖರನ್ನು ಹುಡುಕಿ-ಹುಡುಕಿ ಕೊಲ್ಲುತ್ತಿದ್ದ ಬಗ್ಗೆ ಪ್ರತಿಕ್ರಿಯೆಯಾಗಿ. ಇಂದಿರಾ ಗಾಂಧಿಯವರನ್ನು ಕೊಂದದ್ದು ಒಬ್ಬ ಸಿಖ್ಖ್ ಎಂಬ ಒಂದೇ ಕಾರಣಕ್ಕಾಗಿ 3000 ಸಿಖ್ಖರನ್ನು ಬಲಿತೆಗೆದುಕೊಂಡ ಈ ನರಮೇಧವನ್ನು ಕಾರ್ಯರೂಪಕ್ಕೆ ತಂದದ್ದು ಅಂದಿನ ದೆಹಲಿಯ ಲೋಕಸಭಾ ಸದಸ್ಯರುಗಳಾಗಿದ್ದ ಜಗದೀಶ್ ಟೈಟ್ಲರ್, ಸಜ್ಜನ್ ಕುಮಾರ್, ಹಾಗೂ ಇತರರು ಎಂಬ ಗುಮಾನಿ 27 ವರ್ಷಗಳ ನಂತರವೂ ಹಾಗೆಯೇ ಇದೆ, ಮೊಕದ್ದಮೆ ನಡೆಯುತ್ತಿದೆ, ನಡೆಯುತ್ತಲೇ ಇದೆ, ........ಲೇ ಇರುತ್ತದೆ ಎನ್ನುವ ನಂಬಿಕೆಯೂ ಅಷ್ಟೇ ಬಲವಾಗುತ್ತಾ ಇದೆ. ಮೊನ್ನೆ 26ನೇ ತಾರೀಖು ಈ ಮೊಕದ್ದಮೆಯಲ್ಲಿ ಸಜ್ಜನ್ ಕುಮಾರ್ ಗೆ ನೀರೀಕ್ಷಣಾ ಜಾಮೀನು ಸಿಕ್ಕಿದೆ. ಅದ್ಯಾರು Anticipatory bail ಎಂಬ ಇಂಗ್ಲೀಷ್ ಪದಕ್ಕೆ ನೀರೀಕ್ಷಣಾ ಜಾಮೀನು ಎಂದು ಹೇಳಿದರೋ, ಇಂತಹ ಪ್ರಕರಣಗಳಲ್ಲಿ 'ನೀರೀಕ್ಷಣೆ'ಯಲ್ಲೇ ನ್ಯಾಯದ ಸಾವೂ ಆಗಿಹೋಗುತ್ತದೆ.
ಚಿದಂಬರಂ ಮೇಲೆ ಶೂ ಎಸೆಯುತ್ತಿರುವ ಪತ್ರಕರ್ತ
          ಕಳೆದ ವರ್ಷ ಟೈಟ್ಲರ್ ಹಾಗೂ ಸಜ್ಜನ್ ಕುಮಾರ್ ಗೆ ಲೋಕಸಭಾ ಟಿಕೆಟ್ ನೀಡದಂತೆ, ಕುಪಿತ ಸಿಖ್ಖ್ ಪತ್ರಕರ್ತನೊಬ್ಬ ಚಿದಂಬರಂ ಮೇಲೆ ಶೂ ಎಸೆದು, ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆದದ್ದಾಯಿತು. ಆದರೆ ಆಗಬೇಕಾದ ಶಿಕ್ಷೆಯ ಸುಳಿವೇ ಇಲ್ಲ. ಅಲ್ಪ ಸಂಖ್ಯಾತರಿಗೆ ದೇಶದ ಸಂಪನ್ಮೂಲಗಳನ್ನು ಬಳಸುವ ಮೊದಲ ಅಧಿಕಾರ ಇದೆ ಎಂದು ಹೇಳುವ 'ಅಲ್ಪ'ರದೂ ಈ ಬಗ್ಗೆ ಜಾಣ ಮೌನ. ತಮ್ಮದೇ ಸಮುದಾಯದವರಾಗಿದ್ದರೂ ಸಹ ಇಂತಹ ಕೊಲೆಗಡುಕರನ್ನು ರಕ್ಷಿಸುವ ಕಾರ್ಯ ಒಂದೆಡೆ ಆಗುತ್ತಿದ್ದರೆ, ಗುರುಗೋವಿಂದ ಸಿಂಹ, ಬಂದಾ ಬಹದ್ದೂರರ ನೈಜ ಸಂತಾನಗಳೂ ಇಂದು ಇವೆ. ಪಾಕಿಸ್ತಾನದಲ್ಲಿ ಇರುವ ಅಲ್ಪಸಂಖ್ಯಾತ ಸಿಖ್ಖ್ ಯುವಕರನ್ನು ಅಪಹರಣ ಮಾಡಿ, ನಿನ್ನ ಜುಟ್ಟನ್ನು ಕತ್ತರಿಸು, ಇಸ್ಲಾಂ ಸ್ವೀಕರಿಸು ಎಂದೆಲ್ಲಾ ಎಷ್ಟೇ ಹಿಂಸಿಸಿದರೂ ಸಹ ಒಪ್ಪಿಕೊಳ್ಳದೇ ಪ್ರಾಣವನ್ನು ಬಲಿಕೊಟ್ಟೂ ಸಹ ತಮ್ಮ Identity ಯನ್ನು ಉಳಿಸಿಕೊಂಡ ಜಸ್ಪಾಲ್ ಸಿಂಗ್, ಮಹಾಲ್ ಸಿಂಗ್ ಇಂದಿನ ಯುವಕರಿಗೆ ನಿಜವಾದ ಮಾದರಿಗಳು. ಕೃತ್ಯವನ್ನು ಖಂಡಿಸಿ ಜಮ್ಮುವಿನ ಪೂಂಛ್ ನಿಂದ ಹಿಡಿದು ಅಮೇರಿಕಾದಲ್ಲಿರುವ ಸಿಖ್ಖರವರೆಗೂ ಎಲ್ಲರೂ ಕ್ರೋಧಗೊಂಡಿದ್ದರೂ ಸಹಿತ, ಈ ಬಗ್ಗೆ ನಮ್ಮ ಸರ್ಕಾರದ ಪ್ರತಿಕ್ರಿಯೆ ಏನು? Pakistan must ensure safety of Minorities ಎಂಬ ವಿದೇಶಾಂಗ ಸಚಿವ ಕೃಷ್ಣಾ ಅವರ ಸೀದಾ ಅನಿಸಿಕೆ, Hope Pakistan will take proper action ಎನ್ನುವ ರಕ್ಷಣಾ ಸಚಿವ ಆಂಟನಿ ಅವರ ಸಾದಾ ಹೇಳಿಕೆ. ಇದನ್ನೆಲ್ಲಾ ಪ್ರತಿಕಿಯೆ ಇನ್ನಲೂ ಆಗುವುದಿಲ್ಲ. ಇದು ಪುಕ್ಕಲುತನದ ಪರಮಾವಧಿ ಅಷ್ಟೆ. ಇಂತಹ ಭಾಷೆ ಪಾಕಿಸ್ತಾನಕ್ಕೆ ಅರ್ಥ ಅಗೋದಿಲ್ಲ ಎಂದು ಈ  'ಹಿರಿಯ’ರಿಗೆ ಗೊತ್ತಿಲ್ಲವೇ? 

ಸಜ್ಜನ್‌ ಕುಮಾರ್ ಮತ್ತು ಜಗದೀಶ್  ಟೈಟ್ಲರ್
          ಕರ್ನಾಟಕದಲ್ಲಿ ಚರ್ಚ್ ಮೇಲೆ ಧಾಳಿಯಾದರೆ ಅದು ಜಾರ್ಜ್ ಬುಷ್ ವರೆಗೆ ತಲುಪುತ್ತದೆ. ಕಸಬ್ಗೆ ತೊಂದರೆ ಆದರೆ ಪಾಕಿಸ್ತಾನಕ್ಕೆ ಕೇಳಿಸುತ್ತದೆ. ಆದರೆ ಸಿಖ್ಖರು ಎಲ್ಲಿ ಹೋಗಬೇಕು? 2002ರಲ್ಲಿ ನಡೆದ ಗೋಧ್ರಾ ನಂತರದ ಘಟನೆಗಳನ್ನು ಮಾತ್ರ ಎಳೆ ಏಳೆಯಾಗಿ ಬಿಡಿಸಲು ಹೋಗುವ ನಮ್ಮ ಜನ್ಮ’ದತ್ತ’ ಪತ್ರಕಾರರಿಗೆ, ಕಾಶ್ಮೀರಕ್ಕೆ ’ಸ್ವಾತಂತ್ರ್ಯ’ಕೊಡಬೇಕೆನ್ನುವ ’ರಾಯ’ರಿಗೆ, ಮಾನವ ಹಕ್ಕು ಹೋರಾಟಗಾರರಿಗೆ ಇದೆಲ್ಲಾ ಒಂದು ಸಾಮಾನ್ಯ ವರದಿಯಾಗಿದೆ, ಸಿಖ್ಖರ ಹತ್ಯೆ ಬಗ್ಗೆ ಮಾತನಾಡುವುದು ಒಂದು ಕೋಮುವಾದಿ ಅಜೆಂಡಾ ಆಗಿಬಿಟ್ಟಿದೆ. 
          ಇಷ್ಟರ ಮಧ್ಯೆಯೂ  ಪಾಕಿಸ್ತಾನದೊಂದಿಗೆ ’ಶಾಂತಿ !’ಮಾತುಕತೆಗೆ ನಮ್ಮ ವಿದೇಶಾಂಗ ಸಚಿವರು ದುಂಬಾಲು ಬಿದ್ದು ಓಡಾಡುತ್ತಿದ್ದಾರೆ. 26/11 ರ ಮುಂಬೈ ಆಕ್ರಮಣಕ್ಕೆ ನ್ಯಾಯ ಸಿಗುವವರೆಗೆ ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆ ನಡೆಯುವುದಿಲ್ಲ ಎಂದುಕೊಂಡಿದ್ದವರಿಗೆ ನಿರಾಶೆ ಆಗಿದೆ. 
          ಆದರೆ, ಇಲ್ಲಿ ನಿಜವಾಗಿ ಕಾಡುವುದು ರಾಜಕೀಯ ಹಾಗೂ ಹಣದ ಆಮಿಷಕ್ಕೊಳಗಾಗಿ ಸಿಂಹಗಳಂತಿದ್ದ ಸಿಖ್ಖ್ ಸಮುದಾಯವೂ ನೀವೀರ್ಯವಾಯಿತೆ? ತಮ್ಮದೇ ಸಮುದಾಯದ ಪ್ರಧಾನಮಂತ್ರಿಯ ಸ್ಥಾನಕ್ಕೆ ಕುತ್ತು ತರಬಾರದೆಂದು ಅದು ಒಟ್ಟಾರೆ ಸರ್ಕಾರದ ಮೇಲೆ ಸುಮ್ಮನೆ ’ಗಾಳಿಯಲ್ಲಿ ಗುಂಡು’ ಹಾರಿಸುತ್ತಿದೆಯೇ? ಎಂಬ ಪ್ರಶ್ನೆ. ಹಾಗಂತ ಇವರೂ ಜಿಹಾದ್ ಮಾಡಬೇಕೆಂದಲ್ಲ. ಎಲ್ಲ ರಾಜಕೀಯವನ್ನೂ ಮರೆತು, ಪಕ್ಷ ರಹಿತವಾಗಿ ಸರ್ಕಾರದ ಮೇಲೆ ಒತ್ತಡ ತಂದರೆ ಪಾಕಿಸ್ತಾನದಲ್ಲಿರುವ, ಸಿಖ್ಖರನ್ನೊಳಗೊಂಡಂತೆ ಎಲ್ಲಾ ಹಿಂದೂಗಳಿಗೂ ರಕ್ಷಣೆ ಸಿಗಬಹುದು.