ವಿಜಯವಾಣಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವಿಜಯವಾಣಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಸೆಪ್ಟೆಂಬರ್ 19, 2021

ಪ್ರತಿಮೆಗಳನ್ನು ಅನಾಥವಾಗಿಸುವುದು ಸರಿಯೇ?

 ನಾಡು, ನುಡಿ, ದೇಶಕ್ಕೆ ಸೇವೆ ಸಲ್ಲಿಸಿದ ಮಹನೀಯರ ಪ್ರತಿಮೆಗಳನ್ನು ಸ್ಥಾಪಿಸಿ ಗೌರವಿಸುವುದು ಸಂಪ್ರದಾಯ. ಆದರೆ ಅವುಗಳ ರೂಪುರೇಷೆ, ನಿರ್ವಹಣೆಯ ಅರಿವಿಲ್ಲದೆ ಕ್ಷಣಕಾಲದ ಉತ್ತೇಜನೆಗೆ ಒಳಗಾಗಿ ಸ್ಥಾಪಿಸುವ ಪ್ರತಿಮೆಗಳು ಸಾರ್ವಜನಿಕರಿಗೆ ಕಿರಿಕಿರಿ, ಸಂಚಾರ ದಟ್ಟಣೆ ಜತೆಗೆ ಮಹನೀಯರಿಗೂ ಅವಮಾನವಾಗುವಂತೆ ಕಸಕಡ್ಡಿಗಳ ನಡುವೆ ತುಂಬಿವೆ. ಧೂಳು ಹಿಡಿದಿರುವ ಪ್ರತಿಮೆಗಳನ್ನು ಕಂಡರೆ ಬೇಸರವಾಗುತ್ತದೆ. ಸುಪ್ರೀಂಕೋರ್ಟ್‌ ಗಮನಕ್ಕೂ ಈ ವಿಚಾರ ಬಂದು ಪ್ರತಿಮೆಗಳನ್ನು ತೆರವುಗೊಳಿಸಲು ಆದೇಶಿಸಿದ್ದು, ಸಮಸ್ಯೆ ಉಲ್ಬಣವಾಗಲು ಸರ್ಕಾರದ ಅನಾಸಕ್ತಿಯೂ ಕಾರಣ.

Web Link: ಪ್ರತಿಮೆಗಳನ್ನು ಸ್ಥಾಪಿಸಿದರೆ ಸಾಕೆ?

(ವಿ.ಸೂ: ಚಿತ್ರವನ್ನು ಡೌನ್‌ಲೋಡ್‌ ಮಾಡಿಕೊಂಡು ಗ್ಯಾಲರಿಯಿಂದ ತೆರೆದರೆ ಲೇಖನವನ್ನು ಸ್ಪಷ್ಟವಾಗಿ ಓದಬಹುದು)



ಭಾನುವಾರ, ಡಿಸೆಂಬರ್ 13, 2020

‘ಪ್ರಾಕ್ಟೀಸಿಂಗ್ ಹಿಂದು’ ಬನ್ನಂಜೆ ಗೋವಿಂದಾಚಾರ್ಯ

‘ಬಹಳ ಮಠಗಳು ನಾಟಕ ಕಂಪನಿ ನಡೆಸುತ್ತವೆ....ಒಬ್ಬರು ನೂರೆಂಟು ಶ್ರೀ ಬೇಕೆಂದರೆ ಮತ್ತೊಬ್ಬರು ಸಾವಿರದೆಂಟು ಶ್ರೀ ಇರಲಿ ಎನ್ನುತ್ತಾರೆ...  ಸ್ವಾಮಿಗಳಿಗೆ ಸುತ್ತಮುತ್ತ ಬೇಲಿಗಳಿರುತ್ತವೆ. ಹೊರಗಿನ ಪ್ರಪಂಚದಲ್ಲಿ ಏನು ಆಗುತ್ತಿದೆ ಎಂಬುದು ಅವರಿಗೆ ತಿಳಿಯದಂತೆ ಮಾಡಲಾಗಿರುತ್ತದೆ. ಪ್ರಪಂಚದ ನಿಜಸತ್ಯ ತಿಳಿಯುವುದು ಬಹಳ ಕಷ್ಟ.... ನನಗೂ ಒಂದು ಆಶ್ರಮ ಕೊಡುವ ಪ್ರಸ್ತಾವನೆ ಬಂದಿತ್ತು. ದಮ್ಮಯ್ಯ ನನ್ನನ್ನು ನಾನಾಗಿರಲು ಬಿಟ್ಟುಬಿಡಿ ಎಂದೆ’

ಹೀಗೆ ಮಠಗಳ ಕುರಿತು ಯಾರೇ ಮಾತನಾಡಿದರೂ ಆಸ್ತಿಕರಿಗೆ ಸಿಟ್ಟು ಬರುವುದು ಸಹಜ. ಆದರೆ 2015ರ ಡಿಸೆಂಬರ್ 27ರಂದು ಈ ಮಾತಿಗೆ ಎದುರು ಕುಳಿತ ಸಾವಿರಾರು ಜನರು ಮುಗುಳ್ನಕ್ಕು ಸುಮ್ಮನಾದರು, ಕೆಲವರು ಚಪ್ಪಾಳೆ ತಟ್ಟಿದರು. ಅಲ್ಲಿದ್ದವರಲ್ಲಿ ಶೇ.100 ಜನರು ಆಸ್ತಿಕರೇ ಆಗಿದ್ದು, ಅನೇಕ ಮಠಗಳ ಸ್ವಾಮೀಜಿಗಳೂ ಇದ್ದರು ಎಂಬುದು ವಿಶೇಷ. ಈ ಮಾತುಗಳನ್ನಾಡಿದವರು ಬನ್ನಂಜೆ ಗೋವಿಂದಾಚಾರ್ಯ. 2015ರ ಡಿಸೆಂಬರ್ 23ರಿಂದ ಬೆಂಗಳೂರಿನ ದಯಾನಂದ ಸಾಗರ ಕಾಲೇಜಿನಲ್ಲಿ ಆಯೋಜಿಸಿದ್ದ ಐದು ದಿನಗಳ ‘ಬನ್ನಂಜೆ 80ರ ಸಂಭ್ರಮ’ದಲ್ಲಿ ಈ ಮಾತನ್ನಾಡಿದ್ದರು. ‘ವಿಜಯವಾಣಿ’ಗೆ ಕಾರ್ಯಕ್ರಮದ ವರದಿ ಮಾಡಲು ತೆರಳಿದ್ದು ನನಗೆ ಎಂದೂ ಮರೆಯದ ಅನುಭವ. ಇದೇ ಕಾರ್ಯಕ್ರಮದ ಸಮಾರೋಪದಲ್ಲಿ ಬನ್ನಂಜೆ ಎಂದಿನಂತೆ ಮನಬಿಚ್ಚಿ ಮಾತಾಡಿದ್ದರು.

ಅವರೊಬ್ಬ ‘ಪ್ರಾಕ್ಟೀಸಿಂಗ್ ಹಿಂದು’. ಹಿಂದು ಸಮಾಜ ಎಂದಿಗೂ ಟೀಕೆಗಳಿಗೆ ಹಿಂಜರಿಯುವುದಿಲ್ಲ. ಆದರೆ ಆ ಟೀಕೆ ಯಾರಿಂದ ಬರುತ್ತದೆ ಎಂಬುದು ಮಾತ್ರ ಮುಖ್ಯ. ತಮ್ಮ ವೈಯಕ್ತಿಕ ಜೀವನವನ್ನು ಶುದ್ಧವಾಗಿಟ್ಟುಕೊಂಡು, ಸಂಸ್ಕೃತಿಯನ್ನು ಪಾಲನೆ ಮಾಡಿದವರಾದರೆ ರಾಮನಂಥ ರಾಮನನ್ನು, ಸೀತೆಯಂಥ ಸೀತೆಯನ್ನೂ ವಸ್ತುನಿಷ್ಠವಾಗಿ ವಿಶ್ಲೇಷಣೆ ಮಾಡಿ ಜಯಿಸಿಕೊಳ್ಳಬಹುದು ಎಂಬುದಕ್ಕೆ ಡಾ. ಎಸ್. ಭೈರಪ್ಪನವರೇ ಸಾಕ್ಷಿ. ಆದರೆ ಅದೇ ಯು.ಆರ್. ಅನಂತಮೂರ್ತಿಯವರ ಟೀಕೆಯನ್ನು ಸಮಾಜ ಸಹಿಸಲಿಲ್ಲ, ಏಕೆಂದರೆ ಸಾಂಸ್ಕೃತಿಕ ವಿಚಾರದಲ್ಲಿ ಮಾತನಾಡಲು ಅವರೊಬ್ಬ ‘ಹೊರಗಿನವರು’ ಎಂಬ ಭಾವನೆ ಬೇರೂರಿತ್ತು. ‘ಇನ್‌ಸೈಡ್ ಕ್ರಿಟಿಕ್’ ಬನ್ನಂಜೆ ಮಾಡಿದ ಟೀಕೆಯನ್ನು ಸಹರ್ಷದಿಂದ ಜನರು ಸ್ವೀಕರಿಸಿದ್ದರು.

ಸುಖಾಸುಮ್ಮನೆ ಎಲ್ಲರ ವಿರುದ್ಧ ಮಾತನಾಡುತ್ತಾರೆ ಎಂಬ ಆರೋಪ ಬನ್ನಂಜೆ ಅವರ ಮೇಲೆ ಇದ್ದೇ ಇತ್ತು. ಬನ್ನಂಜೆ ಅವರೇ ಹೇಳಿದಂತೆ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿಯವರನ್ನೂ ಅವರು ಟೀಕಿಸದೇ ಬಿಟ್ಟಿಲ್ಲ. ಆದರೆ 80ರ ಸಂಭ್ರಮ ಕಾರ್ಯಕ್ರಮಕ್ಕೆ ವಿಶ್ವೇಶತೀರ್ಥರು ಆಗಮಿಸಿ ಹರಸಿದರು. ‘ಉಡುಪಿಯಲ್ಲಿ ಕೃಷ್ಣ ತಿರುಗಿಲ್ಲ ಎಂಬುದು ಅಲ್ಲಿನ ವಾಸ್ತು ನೋಡಿದರೆ ತಿಳಿಯಬಹುದು. ಈ ವಿಚಾರ ಸ್ವತಃ ಪೇಜಾವರರಿಗೆ ತಿಳಿದಿದ್ದರೂ ಯಾರೋ ಬೇಸರಪಟ್ಟುಕೊಳ್ಳುತ್ತಾರೆ ಎಂಬ ಕಾರಣಕ್ಕೆ ಸತ್ಯ ಹೇಳುತ್ತಿಲ್ಲ’ ಎಂದು ಅಲ್ಲಿಯೂ ಬನ್ನಂಜೆ ಹೇಳಿದ್ದರು. ಆದರೆ ಮರು ಕ್ಷಣವೇ ‘ಮಠಮಾನ್ಯಗಳಿಂದ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸುವ ಕೆಲಸ ಆಗುತ್ತಿರುವುದು ಸಂತಸದ ವಿಚಾರ‘ ಎಂಬ ಸತ್ಯವನ್ನೂ ಅಷ್ಟೇ ಸಹಜವಾಗಿ ಹೇಳುತ್ತಿದ್ದರು ಬನ್ನಂಜೆ.

ಯಾವುದೇ ಪ್ರವಚನ ಆರಂಭಕ್ಕೆ ಮುನ್ನ ಅವರು ಹೇಳುತ್ತಿದ್ದ ಸಾಲುಗಳನ್ನು ಹಾಗೆಯೇ ಓದಿದರೂ, ಅದು ಬನ್ನಂಜೆ ಅವರ ಧ್ವನಿಯಲ್ಲೇ ಕೇಳಿಸುತ್ತದೆ.

ಜಯತಿ ಪರಾಶರ ಸೂನುಃ ಸತ್ಯವತೀಹೃದಯ ನಂದನೋ ವ್ಯಾಸಃ 

ಯಸ್ಯಾಸ್ಯಕಮಲಗಲಿತಂ ವಾಜ್ಮಯಮ್ ಅಮೃತಂ ಜಗತ್ಬಿಬತಿ ॥

ಭುಜಗಭೋಗಾಭಮುದ್ಯಮ್ಯ ಹೃದ್ಯಂ ನಿಜಭುಜಂ ದಕ್ಷಿಣಂ ಲಕ್ಷಣಾಢ್ಯಮ್ 

ಲಳಿತಮುದ್ರಿಕ್ತವಿಜ್ಞಾನಮುದ್ರಂ ಭಜಭಜ ಅನಂತಮಿತ್ಯಾಲಪಂತಮ್ ॥

ಪ್ರಣತವಾನ್ ಪ್ರಾಣಿನಾಂ ಪ್ರಾಣಭೂತಂ ಪ್ರಣತಿಭಿಃ ಪ್ರೀಣಯೇ ಪೂರ್ಣಬೋಧಮ್ ॥

ಭವದವೋಷ್ಟೇನ ತಾತಪ್ಯಮಾನಾನ್ ಭುವಿ ಪರಂ ನಾಥಮಪ್ರೇಕ್ಷಮಾಣಾನ್ 

ಭುವನಮಾನ್ಯೇನ ಚ ಅನ್ಯೇನ ದೋಷ್ಟಾ ಭವತು ಭೀರ್ಮೇತಿ ನಃ ಸಾಸ್ತ್ವಯನ್ತಮ್ ॥

ಪ್ರಣತವಾನ್ ಪ್ರಾಣಿನಾಂ ಪ್ರಾಣಭೂತಂ ಪ್ರಣತಿಭಿಃ ಪ್ರೀಣಯೇ ಪೂರ್ಣಬೋಧಮ್ ॥


ಅವರ ವಾದಗಳಲ್ಲಿ, ವಿಚಾರಗಳಲ್ಲಿ ಅಧ್ವೈತ, ವಿಶಿಷ್ಟಾಧ್ವೈತ ಅನುಯಾಯಿಗಳಿಗೆ, ಅನೇಕ ಬಾರಿ ಧ್ವೈತ ಅನುಯಾಯಿಗಳಿಗೂ ಭಿನ್ನಾಭಿಪ್ರಾಯವಿರಬಹುದು. ಆದರೆ ದೇಶ, ಧರ್ಮ, ಭಾಷೆ, ಸಂಸ್ಕೃತಿ ಕುರಿತ ನಿಷ್ಠೆಯನ್ನು ಪ್ರಶ್ನಿಸಲು ಸಾಧ್ಯವೇ ಇಲ್ಲ.

ಬನ್ನಂಜೆ 80ರ ಸಂಭ್ರಮಕ್ಕೆ ಒಂದು ವರ್ಷ ಸಂದ ಸಂದರ್ಭದಲ್ಲಿ 2016ರ ಡಿಸೆಂಬರ್ 27ರಂದು ನಡೆದಿದ್ದ ‘ಬನ್ನಂಜೆ 80ರ ಸಂಭ್ರಮಕೆ ಒಂದು ವರುಷ’ ಕಾರ್ಯಕ್ರಮ ವರದಿಗೆ ತೆರಳುವ ಅವಕಾಶವೂ ಸಿಕ್ಕಿತ್ತು. ಈ ಸಂದರ್ಭದಲ್ಲಿ ಬನ್ನಂಜೆ ಹೇಳಿದ ಮಾತು ‘‘ಯಾವುದೇ ಕೆಲಸ ಮಾಡುವ ಮುನ್ನ ಅದನ್ನು ತಿಳಿಯಬೇಕು, ಶ್ರದ್ಧೆಯಿಂದ ಮುಂದುವರಿಯಬೇಕು. ತಿಳುವಳಿಕೆ ಮೂಡುವವರೆಗೂ ಪ್ರಶ್ನಿಸುತ್ತಲೇ ಇರಬೇಕು. ಋಷಿ ಮುನಿಗಳ ಕಾಲದಿಂದಲೂ ಇದ್ದ ಪ್ರಶ್ನೆ ಕೇಳುವ ಪದ್ಧತಿ ತಪ್ಪಿ ಹೋಗಿದ್ದಕ್ಕೆ ನಮ್ಮ ಹಿರಿಯರು ಕಾರಣ. ಮಕ್ಕಳು ಪ್ರಶ್ನಿಸಿದಾಗ ಉತ್ತರ ಹೇಳಲು ಅಶಕ್ತರಾಗಿದ್ದವರು ದಬಾಯಿಸಿದರು. ಪ್ರಶ್ನೆ ಮಾಡಿದರೆ ನರಕ ಪ್ರಾಪ್ತಿಯಾಗುತ್ತದೆ ಎಂದು ಬೆದರಿಸಿದರು. ಹೀಗೆ ಅನೇಕರಿಂದ ದಬಾಯಿಸಿಕೊಂಡು ಪ್ರಶ್ನೆ ಕೇಳುವುದನ್ನೆ ಬಿಟ್ಟಿದ್ದೆ. ಆದರೆ ಒಮ್ಮೆ ನನ್ನ ತಂದೆಯವರು, ‘ಪ್ರಶ್ನೆ ಕೇಳುವ ಶಕ್ತಿಯಿರುವವನು ಉತ್ತರವನ್ನೂ ಕಂಡುಕೊ’ ಎಂದರು. ಆ ಮಾತು ನನ್ನನ್ನು ಅಂತರ್ಮುಖಿಯನ್ನಾಗಿಸಿತು.’

ಈಗಾಗಲೆ ಭಾಗವತ ಭಾಷ್ಯ ರಚನೆ ಚಾಲ್ತಿಯಲ್ಲಿದೆ. ಋಗ್ವೇದದ ಪವಮಾನ ಮಂಡಲಕ್ಕೆ ಭಾಷ್ಯ ಬರೆಯುವ ಇಚ್ಛೆಯಿದೆ. ನನ್ನಲ್ಲಿ ಅಹಂಕಾರ ಬರದಂತೆ ಎಲ್ಲರೂ ಹರಸಿ ಎಂದಿದ್ದರು. ‘ನನಗೆ ಕೆಲವು ಕನಸುಗಳಿವೆ. ಇನ್ನು ಮುಂದೆಯೂ ಆ ಕನಸುಗಳು ನನಸು ಆದೀತು. ಕನಸುಗಳು ನನಸಾಗದೇ ಸಾಯಬಾರದು ಎಂದು ಅಂದುಕೊಂಡಿದ್ದೇನೆ, ಭಗವಂತ ನನ್ನನ್ನು ಹರಸಿ....’ ಎನ್ನುತ್ತ ಮೈಕ್ ಹಿಡಿದು ಗದ್ಗದಿತರಾಗಿದ್ದ ಬನ್ನಂಜೆ ಅವರ ಮಾತು ಈಗಲೂ ಕೇಳಿಸುತ್ತಿದೆ. ಅವರ ಆತ್ಮಕ್ಕೆ ಸದ್ಗತಿ ದೊರಕಲಿ.


-ರಮೇಶ ದೊಡ್ಡಪುರ

ಭಾನುವಾರ, ಜುಲೈ 14, 2019

ತಾರೆಗಳ ದಾಟುವೆವು- ಚಂದಿರನ ಮೀಟುವೆವು

ಚಂದ್ರನ ಮೇಲೆ ಮಾನವ ಕಾಲಿಟ್ಟ ೫೦ನೇ ವರ್ಷಕ್ಕೆ ಸರಿಯಾಗಿ ಭಾರತದ ಚಂದ್ರಯಾನ-೨ ಅರಂಭವಾಗುತ್ತಿದೆ. ಭಾರತೀಯನೊಬ್ಬ/ಒಬ್ಬಳು ಚಂದ್ರನ ಮೇಲೆ ಕಾಲಿಡುವ ಮುನ್ನ ಅಲ್ಲಿ ಅಶೋಕ ಚಕ್ರದ ಮುದ್ರೆ ಒತ್ತುವ ಕಾಲ. ಈ ಹೊತ್ತಿನಲ್ಲಿ ಇವತ್ತಿನ ವಿಜಯವಾಣಿ ವಿಜಯ_ವಿಹಾರದಲ್ಲಿ ಪರಿಚಯಾತ್ಮಕ ಲೇಖನ, ಸಣ್ಣ ವಿಶ್ಲೇಷಣೆ ಜತೆಗೆ.





ಬುಧವಾರ, ಜೂನ್ 29, 2016

ಕೇಸರೀಕರಣ ಆರೋಪಕ್ಕೆ ತರ್ಕಬದ್ಧ ಚರ್ಚೆಯಾಗಲಿ- ಡಾ. ಮುರಳಿ ಮನೋಹರ ಜೋಶಿ ಸಂದರ್ಶನ


ಕೇಸರೀಕರಣ ಆರೋಪಕ್ಕೆ ತಕ೯ಬದ್ಧ ಚಚೆ೯ಯಾಗಲಿ
ಭಾರತೀಯ ಜನತಾ ಪಾರ್ಟಿಯ ಹಿಂದಿನ ಅವತರಣಿಕೆ ಭಾರತೀಯ ಜನಸಂಘದ ಕಾಲದಿಂದಲೂ ಪಕ್ಷವನ್ನು ಬೆಳೆಸಿದ ಪ್ರಮುಖರಲ್ಲಿ ಡಾ. ಮುರಳಿ ಮನೋಹರ ಜೋಶಿ ಸಹ ಒಬ್ಬರು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಒಂದೇ ದೇಶ ಎಂಬ ಧ್ಯೇಯದಡಿ 1991ರಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಜೋಶಿಯವರು
ರಮೇಶ ದೊಡ್ಡಪುರ ಬೆಂಗಳೂರು
  • ತುರ್ತುಪರಿಸ್ಥಿತಿಯಂತಹ ವಿಚಾರಗಳು ಇಂದಿನ ಯುವ ಪೀಳಿಗೆಯನ್ನು ಅಷ್ಟು ತೀಕ್ಷ್ಣವಾಗಿ ತಟ್ಟುತ್ತಿಲ್ಲವಲ್ಲ? ಕಾರಣವೇನು?
-ಇದೊಂದು ಸ್ವಾಭಾವಿಕ ಪ್ರಕ್ರಿಯೆ. ತುರ್ತುಪರಿಸ್ಥಿತಿಯೊಂದೇ ಅಲ್ಲ. ದೇಶವಿಭಜನೆಯ ಸಮಯದಲ್ಲಿನ ಭಯಾನಕತೆಯನ್ನೂ ಮರೆತಿದ್ದಾರೆ. ಜನರ ಎದುರು ಆಗಿಂದಾಗ್ಗೆ ಎದುರಾಗುವ ವಿಚಾರಗಳು ಮಹತ್ವ ಪಡೆಯುತ್ತವೆ. ಮತ್ತೊಮ್ಮೆ ತುರ್ತು ಸ್ಥಿತಿ ಹೇರಲು ಬಹುತೇಕ ಅಸಾಧ್ಯ ಎನ್ನುವಂತಹ ಕಾನೂನನ್ನು ನಂತರ ರಚಿಸಲಾಯಿತು. ಮರೆಯಲು ಇದೂ ಒಂದು ಕಾರಣವಿರಬಹುದು. ಆದರೆ ನೆನಪಿನಲ್ಲಿರಲೇಬೇಕಾದ ಕೆಲವು ವಿಚಾರಗಳೂ ಮರೆಯುತ್ತಿರುವುದು ಕಳವಳದ ಸಂಗತಿ. 
ಇದನ್ನು ಸರಿಪಡಿಸುವುದು ಯಾರ ಜವಾಬ್ದಾರಿ? ಸರ್ಕಾರದ್ದೋ ಅಥವಾ ನಾಗರಿಕರದ್ದೊ?
-ಇಬ್ಬರ ಹೊಣೆಯೂ ಇದೆ. ಪ್ರಮುಖವಾಗಿ ಸರ್ಕಾರದ ಯೋಜನೆಗಳು ಹಾಗೂ ನೀತಿಗಳು ಇತಿಹಾಸವನ್ನು ಪ್ರಭಾವಿಸುತ್ತವೆ. ನಾವು ಶಾಲೆಯಲ್ಲಿದ್ದಾಗ ಶಿವಾಜಿ, ರಾಣಾ ಪ್ರತಾಪ್, ಶೇರ್ ಷಾ ಸೂರಿ, ಗುರುಗೋವಿಂದ ಸಿಂಹರಂತಹ ಕಥೆ ಕೇಳುತ್ತಿದ್ದೆವು. ಆನಂತರದ ಸರ್ಕಾರದ ಕಾರ್ಯಕ್ರಮಗಳು ಹಾಗೂ ನೀತಿಯ ಆಧಾರದಲ್ಲಿ ಇವೆಲ್ಲ ಬದಲಾಗಿವೆ.
ನೀವು ಮಾನವ ಸಂಪನ್ಮೂಲ ಸಚಿವರಾಗಿದ್ದಾಗ ಮಾಡಿದ ಇಂತಹ ಪ್ರಯತ್ನಕ್ಕೆ ಕೇಸರೀಕರಣದ ಆರೋಪ ಹೊರಿಸಲಾಗಿತ್ತಲ್ಲವೇ?
-ಆರೋಪಕ್ಕೆ ನಾವು ಹೆದರಲಿಲ್ಲ. ನಮ್ಮ ಕೆಲಸ ಮಾಡಿದ್ದೆವು. ಬಳಿಕ ಅಧಿಕಾರ ಹಿಡಿದ ಕಾಂಗ್ರೆಸ್ ಮತ್ತೆ ಅದನ್ನು ಬದಲಿಸಿತು. ನಮ್ಮ ಮಕ್ಕಳಿಗೆ ಇತಿಹಾಸವೆಂದು ಏನು ಕಲಿಸಬೇಕು ಎಂಬುದನ್ನು ನಿರ್ಧರಿಸಬೇಕು. ಬ್ರಿಟನ್ ಶಾಲಾ ಪಠ್ಯದಲ್ಲಿ ಅಲ್ಲಿನ ವೀರರ, ಗೌರವಶಾಲಿ ಘಟನೆಗಳ ವಿವರಣೆಯಿರುತ್ತದೆ. ಮಕ್ಕಳು ಅವನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ನಮ್ಮಲ್ಲಿ ಅಂತಹ ಪಠ್ಯ ಅಳವಡಿಸಿಲ್ಲ. ಪೈಥಾಗೊರಸ್‍ಗೆ ಮುನ್ನವೇ ಬೋಧಾಯನ ಗಣಿತದಲ್ಲಿ ಸಾಧನೆ ಮಾಡಿದ್ದ ಎಂದರೆ ಕೇಸರೀಕರಣ ಎಂದು ಬೊಬ್ಬೆ ಹೊಡೆಯುತ್ತಾರೆ. 
ಪ್ರಜಾತಾಂತ್ರಿಕ ಸರ್ಕಾರವೊಂದು ಕೇಸರೀಕರಣದ ಆರೋಪವನ್ನು ನಿಭಾಯಿಸುವುದು ಹೇಗೆ? -ರಾಷ್ಟ್ರಧ್ವಜದಲ್ಲಿ ಮೊದಲನೆ ಸ್ಥಾನದಲ್ಲಿ ಕೇಸರಿಯಿದೆ. ಅಂದರೆ ತ್ರಿವರ್ಣ ಧ್ವಜ ಕೋಮುವಾದದ ಸಂಕೇತವೇ?
ಸನ್ಯಾಸಿಗಳು ತ್ಯಾಗ, ಶೌರ್ಯದ ಸಂಕೇತವಾಗಿ ಕಾವಿ ಧರಿಸುತ್ತಾರೆ. ಕೇರಳದಲ್ಲಿ ಕೆಲವು ಕ್ರೈಸ್ತ ಪಾದ್ರಿಗಳೂ ಕೇಸರಿ ಉಡುಪು ಧರಿಸುತ್ತಾರೆ. ಅವರೂ ಕೋಮುವಾದಿಗಳೆ? ಇಂತಹ ತರ್ಕಬದ್ಧ ಪ್ರಶ್ನೆಗಳನ್ನು ಮುಂದಿರಿಸಿಕೊಂಡು ಪ್ರಾಮಾಣಿಕತೆಯಿಂದ ಪಠ್ಯದಲ್ಲಿ ಅಳವಡಿಸಿದರೆ ಜನರು ಸ್ವೀಕರಿಸುತ್ತಾರೆ. ?
ಕಾಲೇಜುಗಳಲ್ಲಿ ಯೋಗ ಅಳವಡಿಕೆಯಂತಹ ಕೇಂದ್ರ ಸರ್ಕಾರದ ನಿರ್ಧಾರಕ್ಕೂ ಕೇಸರೀಕರಣದ ಆರೋಪ ವ್ಯಕ್ತವಾಗುತ್ತಿದೆಯಲ್ಲ?
-ಇದು ಅಜ್ಞಾನದ ಸಂಕೇತವೆನ್ನದೆ ವಿ„ಯಿಲ್ಲ. ಯೋಗವು ಕಲೆ, ವಿಜ್ಞಾನ ಹಾಗೂ ತತ್ತ್ವಶಾಸದ ಸಮ್ಮಿಲನ. ಸಂಪೂರ್ಣ ವೈಜ್ಞಾನಿಕವಾದ ಯೋಗವನ್ನು ವಿಶ್ವವೇ ಸ್ವೀಕರಿಸಿದೆ. ಯೋಗದಿಂದ ಮನಸ್ಸು, ಬುದ್ಧಿ, ಶರೀರ ಹಾಗೂ ಆತ್ಮ ವಿಕಸನವಾಗುತ್ತದೆ. ಮುಸ್ಲಿಮರ ನಮಾಜ್ ಕೂಡ ಯೋಗದ ಒಂದು ಭಂಗಿಯೇ ಎಂಬುದು ನನ್ನ ಭಾವನೆ. 
ಜಮ್ಮು-ಕಾಶ್ಮೀರದಲ್ಲಿ ಪಿಡಿಪಿ ಜತೆಗೆ ಬಿಜೆಪಿ ಸರ್ಕಾರ ರಚಿಸಿದೆ. ಶ್ಯಾಮ ಪ್ರಸಾದ್ ಮುಖರ್ಜಿಯವರಿಂದ ನಿಮ್ಮವರೆಗಿನ ಹೋರಾಟಕ್ಕೆ -Àಲ ದೊರಕುತ್ತದೆ ಎನ್ನಿಸುತ್ತದೆಯೇ?
-ಕಾಶ್ಮೀರದಲ್ಲಿ ನಡೆದಿರುವುದು ದಿಟ್ಟ ಪ್ರಯೋಗ. ಈ ರೀತಿಯ ಪ್ರಯೋಗ ನಡೆಯುತ್ತದೆ ಎಂಬ ನಿರೀಕ್ಷೆ ಯಾರಿಗೂ ಇರಲಿಲ್ಲ. ಜಮ್ಮು ಪ್ರದೇಶದಲ್ಲಿ ಬಿಜೆಪಿ ಹಾಗೂ ಕಾಶ್ಮೀರ ಕಣಿವೆಯಲ್ಲಿ ಪಿಡಿಪಿ ಜಯಿಸಿವೆ. ಇಬ್ಬರಿಗೂ ಬಹುಮತವಿಲ್ಲ. ಕಾಶ್ಮೀರ ಭಾಗದಲ್ಲಿ ಮಾತ್ರ ಇರುವ ಪಿಡಿಪಿ ಹಾಗೂ ಇತರೆ ಪಕ್ಷಗಳು ಅ„ಕಾರ ಹಿಡಿದರೆ ಜಮ್ಮು ಪ್ರದೇಶದ ನಾಗರಿಕರಿಗೆ ದನಿಯಿಲ್ಲದಂತಾಗುತ್ತಿತ್ತು. ಈ ಪ್ರಯೋಗದಿಂದ ಹಲವು ದಾರಿಗಳು ತೆರೆದುಕೊಂಡಿವೆ. ಕಾಶ್ಮೀರ ಪ್ರದೇಶವನ್ನು ಪ್ರವೇಶಿಸಿ, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿ„ ನಿಮಗೆ ಅಗತ್ಯವಿಲ್ಲ ಎಂದು ತಿಳಿಸಬಹುದು. ಇಡೀ ದೇಶ ಒಂದು ಎಂದು ಮನವರಿಕೆ ಮಾಡಬಹುದು. ಭಾರತೀಯ ಸೇನೆ ಇಲ್ಲಿರುವುದು ಭಯೋತ್ಪಾದಕರಿಗೆ ವಿರುದ್ಧವಾಗಿಯೇ ಹೊರತು ನಿಮ್ಮ ವಿರುದ್ಧವಲ್ಲ ಎಂಬುದನ್ನು ಮನಗಾಣಿಸಬಹುದು. ಪಾಕ್ ಆಕ್ರಮಿತ ಕಾಶ್ಮೀರದಲ್ಲೂ ಭಾರತದ ಪರ ಧ್ವನಿ ಹೆಚ್ಚಾಗುತ್ತಿದೆ, ನೀವೂ ಭಾರತದ ಅಂಗ ಎಂದು ಹೇಳಬಹುದು.
ನಿಮ್ಮಂಥವರು ಕಷ್ಟಪಟ್ಟು ಬೆಳೆಸಿದ ಪಕ್ಷ ಇದೀಗ ವಿಶ್ವದ ನಂ.1 ಪಕ್ಷವಾಗಿದೆ. ಏನೆನ್ನಿಸುತ್ತಿದೆ?
-ನಾನು ಅಧ್ಯಕ್ಷನಾಗಿದ್ದಾಗ ಹಲವು ಸಂಸದರಿದ್ದರು, ಮಧ್ಯಪ್ರದೇಶ, ಪಂಜಾಬ್‍ನಲ್ಲಿ ಸರ್ಕಾರವಿತ್ತು. ಬಂಗಾಳದಲ್ಲಿ ಶೇ.11ರಷ್ಟು ಬಿಜೆಪಿ ಮತಗಳಿದ್ದವು. ಬಹುತೇಕ ಎಲ್ಲ ಪ್ರದೇಶ ತಲುಪಿದ್ದೆವು. ಇದೀಗ ಕಾಲದ ಅವಶ್ಯಕತೆಗೆ ತಕ್ಕಂತೆ ಪಕ್ಷದ ವ್ಯಾಪ್ತಿ ವಿಸ್ತರಿಸಿದೆ. ಹಿಂದಿನ ಎಲ್ಲ ಕಾರ್ಯಕರ್ತರ ತಪಸ್ಸಿನ ಕಾರಣದಿಂದ ಈ ಮಟ್ಟಕ್ಕೇರಿದ್ದೇವೆ. ಸಹಜವಾಗಿಯೇ ಸಂತೋಷವಾಗುತ್ತಿದೆ. 
ಸಣ್ಣ ವಿಚಾರಕ್ಕೂ ಖಿನ್ನರಾಗುವ ಯುವಕರು ಒಂದೆಡೆಯಿದ್ದರೆ, ಈ ವಯೋಮಾನದಲ್ಲೂ ನೀವು ಉತ್ಸಾಹ ಕಾಯ್ದುಕೊಂಡಿದ್ದೀರ. ಇದು ಹೇಗೆ ಸಾಧ್ಯ? ನಿಮ್ಮ ದಿನಚರಿ ಹೇಗಿದೆ?
-ಸಮಾಜದಲ್ಲಿ ಕೊಳ್ಳುಬಾಕತನ ಹೆಚ್ಚಾಗುತ್ತಿದೆ. ಇದರಿಂದಾಗಿ ಯುವಕರು ಹಣ ಗಳಿಕೆಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ. ಅವರ ಜೀವನಶೈಲಿಯೂ ಹಾಗೆಯೇ ಬದಲಾಗಿದೆ. (ನಗುತ್ತಾ) ನನ್ನ ದಿನಚರಿಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಸ್ವಲ್ಪ ವಯಸ್ಸಾಗಿದೆ ಎಂಬುದನ್ನು ಬಿಟ್ಟರೆ ಅದೇ ವಿಚಾರಗಳು, ಅದೇ ವೇಷ, ಅದೇ ಶಲ್ಯ, ಅದೇ ಕುಂಕುಮ ಇದೆ. ಪಕ್ಷವನ್ನೂ ಬದಲಾಯಿಸಿಲ್ಲ... ಒಟ್ಟಿನಲ್ಲಿ ಏನೂ ಬದಲಾಗಿಲ್ಲ(ಮತ್ತೊಮ್ಮೆ ನಗು)
ಕೇಂದ್ರ ಸರ್ಕಾರದ ಆಡಳಿತದ ಬಗ್ಗೆ ನಿಮ್ಮ ಅಭಿಪ್ರಾಯಗಳೇನು? ಯಾವ ವಿಚಾರಗಳಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು?
-ಕಾಂಗ್ರೆಸ್ ಸರ್ಕಾರದ ಕಸವನ್ನು ಸ್ವಚ್ಛಗೊಳಿಸುವುದರಲ್ಲೆ ಈಗಿನ ಸರ್ಕಾರದ ಬಹುಪಾಲು ಸಮಯ ಕಳೆದಿದೆ. ಯಾವ ವಿಚಾರಕ್ಕೆ ಪ್ರಾಶಸ್ತ್ಯ ನೀಡಬೇಕು ಎಂಬುದನ್ನು ಸರ್ಕಾರ ನಿರ್ಧರಿಸುತ್ತದೆ. ನನ್ನದು ಅನಿಸಿಕೆಯಷ್ಟೆ. ರೈತರು, ಯುವಕರು, ಸೂಕ್ಷ್ಮ ಹಾಗೂ ಸಣ್ಣ ಉದ್ಯಮಿಗಳ ಕಡೆ ಹೆಚ್ಚಿನ ಗಮನ ನೀಡಬೇಕು. ಭಾರತೀಯರ ಉದ್ಯಮಶೀಲತೆ ಹೆಚ್ಚಿಸಬೇಕು. ಈ ಕುರಿತು ಪ್ರಧಾನಿ ಮೋದಿಯವರು ಮೇಕ್ ಇನ್ ಇಂಡಿಯಾ, ಕೌಶಲ ಅಭಿವೃದ್ಧಿ, ಮುದ್ರಾ, ಸ್ಟ್ಯಾಂಡ್‍ಅಪ್ ಇಂಡಿಯಾದಂತಹ ಉತ್ತಮ ಯೋಜನೆಗಳನ್ನು ರೂಪಿಸಿದ್ದಾರೆ. ಹಿಂದಿನಿಂದಲೂ ಬಿಜೆಪಿ ಬೆನ್ನೆಲುಬಾಗಿರುವ ವ್ಯಾಪಾರಿಗಳ ಯೋಗಕ್ಷೇಮಕ್ಕೆ ಸ್ವಲ್ಪ ಒತ್ತು ನೀಡಬೇಕು. ಈ ಕಾರ್ಯವನ್ನು ಪ್ರಧಾನಿ ಮಾಡುತ್ತಾರೆಂಬ ಭರವಸೆ ಇದೆ. 
ಕರ್ನಾಟಕದಲ್ಲಿ ಚುನಾವಣೆಗೆ ಇನ್ನೆರಡ ವರ್ಷವಿರುವಾಗ ಹೊಸ ಅಧ್ಯಕ್ಷರ ನೇಮಕವಾಗಿದೆ. ಇದರ ಕುರಿತು ನಿಮ್ಮ ಅಭಿಪ್ರಾಯವೇನು?
-ಯಡಿಯೂರಪ್ಪನವರು ರಾಜ್ಯ ಘಟಕದ ಅಧ್ಯಕ್ಷರಾದ ನಂತರ ಪಕ್ಷದಲ್ಲಿ ಹೊಸ ಉತ್ಸಾಹ ಮೂಡಿದೆ. ಸಾರ್ವಜನಿಕರಲ್ಲೂ ಪಕ್ಷದ ಕುರಿತು ಹೊಸ ನಿರೀಕ್ಷೆಗಳು ಗರಿಗೆದರಿವೆ. ಪಕ್ಷ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಈ ವಿಚಾರಗಳು ಕಾಣುತ್ತಿವೆ. ಇದೇ ವಾತಾವರಣವನ್ನು ಉಳಿಸಿಕೊಂಡು, ಎಲ್ಲರೂ ಒಟ್ಟಾಗಿ ಶ್ರಮಿಸಿದಲ್ಲಿ 2 ವರ್ಷದ ನಂತರ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವುದರಲ್ಲಿ ಅನುಮಾನವಿಲ್ಲ.
ನಿಮ್ಮ ಜತೆ ಒಡನಾಡಿದ ಅಟಲ್ ಬಿಹಾರಿ ವಾಜಪೇಯಿ ಇದೀಗ ಸಕ್ರಿಯರಾಗಿಲ್ಲ. ಅವರ ವ್ಯಕ್ತಿತ್ವವನ್ನು ಕೆಲವೇ ಪದಗಳಲ್ಲಿ ಹೇಳಲು ಸಾಧ್ಯವೇ?
-ರಾಜಕೀಯಕ್ಕೆ ಹೊರತಾಗಿ, ಅವರೊಬ್ಬ ಉತ್ತಮ ಮನುಷ್ಯ. ಅವರು ರಾಜಕಾರಣಿಯಲ್ಲ, ಮುತ್ಸದ್ದಿ. ಕವಿಹೃದಯದವರು. ಎಲ್ಲರಲ್ಲೂ ಸಾಮರಸ್ಯ ಮೂಡಿಸಿ ಒಟ್ಟಾಗಿ ಕರೆದೊಯ್ಯುವ ಗುಣವುಳ್ಳವರು.