ಪತ್ರಿಕೋದ್ಯಮ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪತ್ರಿಕೋದ್ಯಮ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಅಕ್ಟೋಬರ್ 15, 2021

ರಾಜಕೀಯ ದೃಷ್ಟಿಯಲ್ಲಿ ಮೋಹನ ಭಾಗವತ್‌ ಭಾಷಣ

ವಿಶ್ವದ ಅತಿದೊಡ್ಡ ಮಾನವ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್‌) ಸದ್ಯದಲ್ಲೆ, ಅಂದರೆ 2025ರಲ್ಲಿ 100ನೇ ಸಂಸ್ಥಾಪನಾ ವರ್ಷವನ್ನು ಆಚರಿಸಲಿದೆ. ಪ್ರತಿ ವರ್ಷ ಆರೆಸ್ಸೆಸ್‌ ಸರಸಂಘಚಾಲಕರು ನಾಗಪುರದಿಂದ ನೀಡುವ ವಿಜಯದಶಮಿ ಭಾಷಣ ಸಂಘದ ಕಾರ್ಯಕರ್ತರ ಜತೆಗೆ ಸರ್ಕಾರಗಳು, ಸಾಮಾನ್ಯ ಜನರು, ತಜ್ಞರು, ವಿವಿಧ ಕ್ಷೇತ್ರದವರನ್ನು ಕುರಿತಾಗಿರುತ್ತದೆ. ಇತ್ತೀಚಿನ ದಶಕದಲ್ಲಿ ವಿಜಯ ದಶಮಿ ಭಾಷಣಕ್ಕೆ ಹೆಚ್ಚಿನ ಕುತೂಹಲ ಏರ್ಪಡುತ್ತಿದೆ. ಅದಕ್ಕೆ ಮೊದಲ ಕಾರಣ, ದೇಶದ ರಾಜಕಾರಣದ ಮೇಲೆ ಆರೆಸ್ಸೆಸ್‌ ಹೊಂದಿರುವ ಪ್ರಭಾವ. ತನ್ನನ್ನು ಸಾಂಸ್ಕೃತಿಕ ಸಂಘಟನೆ ಎಂದು ಕರೆದುಕೊಂಡರೂ, ಸಾಂಸ್ಕೃತಿಕ ಭಾರತ ನಿರ್ಮಾಣಕ್ಕೆ ರಾಜಕೀಯವೂ ಒಂದು ಸಾಧನ ಎಂದು ಭಾವಿಸಿರುವುದರಿಂದ ರಾಜಕೀಯದಿಂದ ಸಂಪೂರ್ಣ ವಿಮುಖತೆ ಆರೆಸ್ಸೆಸ್ಸಿಗೆ ಇಲ್ಲ. ಎರಡನೇ ಸರಸಂಘಚಾಲಕ ಗೋಳ್ವಲ್ಕರ್‌ ಗುರೂಜಿ ಅವರ ನಿರ್ದೇಶನದ ಮೇರೆಗೆ, ಕಾರ್ಮಿಕ, ರೈತ, ವಿದ್ಯಾರ್ಥಿ, ಶಿಕ್ಷಣ ಕ್ಷೇತ್ರದ ಜತೆಗೆ ರಾಜಕೀಯ ಕ್ಷೇತ್ರದಲ್ಲೂ ತನ್ನ ಕಾರ್ಯಕರ್ತರ ಮೂಲಕ ಸಂಘಟನೆಯನ್ನು ಆರಂಭಿಸಲಾಯಿತು. ಪ್ರಾರಂಭದಲ್ಲಿ ಜನಸಂಘ ಎಂದಿದ್ದ ಆ ಸಂಘಟನೆ ಈಗ ಭಾರತೀಯ ಜನತಾ ಪಕ್ಷ(ಬಿಜೆಪಿ) ಆಗಿದೆ. ಸದ್ಯ ಕಳೆದ 7 ವರ್ಷದಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದೆ.

ವಿಜಯ ದಶಮಿ ಭಾಷಣವು ರಾಜಕೀಯವಾಗಿದ್ದಲ್ಲ, ಅದು ಒಟ್ಟಾರೆ ಸಮಾಜ, ಇತಿಹಾಸ, ಮುಂದಿನ ದಿಕ್ಕುಗಳ ಕುರಿತಾಗಿದ್ದು ಎಂದು ಹೇಳಿದರೂ, ಚಲನಶೀಲ ಸಂಘಟನೆಯಾಗಿ ತತ್ಕಾಲೀನ ರಾಜಕೀಯ ಪರಿಸ್ಥಿತಿಗಳಿಗೂ ಸ್ಪಂದಿಸುವುದು ಸಹಜವಾಗಿಯೇ ಇರುತ್ತದೆ. ಕೆಲವೊಮ್ಮೆ ನೇರವಾಗಿ, ಆದರೆ ಬಹುತೇಕ ಬಾರಿ ಪರೋಕ್ಷವಾಗಿ ದೇಶದ ರಾಜಕೀಯ ಸ್ಥಿತಿಗತಿಗೆ ವಿಜಯದಶಮಿ ಭಾಷಣ ಸ್ಪಂದಿಸಿದೆ.

ಈ ವರ್ಷದ ವಿಜಯ ದಶಮಿ ಭಾಷಣದಲ್ಲಿ ಸರಸಂಘಚಾಲಕ ಮೋಹನ್‌ ಭಾಗವತ್‌ ಅವರು ರಾಜಕೀಯವಾಗಿ ಅನೇಕ ಸಂದೇಶಗಳನ್ನು ನೀಡಿದ್ದಾರೆ.

1. ಸ್ವಾತಂತ್ರ್ಯ ಪ್ರಾಪ್ತಿಯಾದದ್ದು ಶಾಂತಿಯ ಮಾರ್ಗದ ಜತೆಗೆ ಸಶಸ್ತ್ರ ಕ್ರಾಂತಿಯ ಮೂಲಕವೂ ಹೌದು ಎಂಬ ತನ್ನ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಲಾಗಿದೆ. ಸಶಸ್ತ್ರ ಕ್ರಾಂತಿಯಿಂದಲೇ ಸ್ವತಂತ್ರ್ಯ ದೊರಕಿದ್ದು, ಶಾಂತಿಯ ಪಾತ್ರ ಅತ್ಯಂತ ಕಡಿಮೆ ಎಂದು ಕ್ಲೆಮೆಂಟ್‌ ಆಟ್ಲಿಯನ್ನು ಉದಾಹರಿಸುತ್ತಿದ್ದ ಸ್ಥಿತಿಯಿಂದ ಇದು ಸ್ವಲ್ಪ ಮಟ್ಟಿಗೆ ಹೊರಳಿ ಮಧ್ಯಮ ಮಾರ್ಗವನ್ನು ಕಂಡುಕೊಂಡಿದೆ. ಮಹಾತ್ಮಾ ಗಾಂಧೀಜಿಯವರ ಉದಾಹರಣೆಯನ್ನು ಹೆಚ್ಚೆಚ್ಚು ಧನಾತ್ಮಕ ಸ್ವರೂಪದಲ್ಲಿ ಉದಾಹರಿಸಲಾಗುತ್ತಿರುವುದೂ ಕಳೆದ ಕೆಲವು ವರ್ಷಗಳಲ್ಲಾದ ಬದಲಾವಣೆ.

2. ಜಾತಿಗಳ ನಡುವೆ ಸಮರಸತೆಯ ಬದಲಿಗೆ ಪರಸ್ಪರ ಧ್ವೇಷ ಭಾವನೆ ಮೂಡಿಸಲಾಗುತ್ತಿದೆ ಎಂದು ತಿಳಿಸುವ ಮೂಲಕ, ನೇರವಾಗಿ ರಾಜಕೀಯ ಕ್ಷೇತ್ರದತ್ತ ಬೊಟ್ಟು ಮಾಡಿದ್ದಾರೆ. ಏಕೆಂದರೆ ಜಾತಿಗಳು ಇಂದಿನ ಚುನಾವಣೆಯ ಕೇಂದ್ರವಾಗುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಇತ್ತೀಚೆಗಷ್ಟೇ ಒಂದು ಭಾಷಣದಲ್ಲಿ, ರಾಜಕಾರಣವು ಸಮಾಜವನ್ನು ಒಡೆಯುವ ಶಕ್ತಿಯನ್ನು ಮಾತ್ರ ಹೊಂದಿದೆಯೇ ಹೊರತು, ಜೋಡಿಸುವುದು ಅದರಿಂದ ಸಾಧ್ಯವಿಲ್ಲ ಎಂದು ಹೇಳಿದ್ದರ ಮುಂದುವರಿದ ಭಾಗದಂತೆ ಇದು. ಜತೆಗೆ, ಇತ್ತೀಚೆಗೆ ಅಸ್ಸಾಂ ಹಾಗೂ ಮಿಜೋರಾಂ ರಾಜ್ಯಗಳ ನಡುವೆ ನಡೆದ ರಕ್ತಸಹಿತ ಸಂಘರ್ಷದ ಕುರಿತು ಪರೋಕ್ಷವಾಗಿ, ಕಟುವಾಗಿ ಟೀಕಿಸುತ್ತ, ಒಂದೇ ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುವ ಎರಡು ರಾಜ್ಯಗಳು ಹೊಡೆದಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಭಾಷೆಯ ವಿಚಾರದಲ್ಲೂ ವಿಭಜನೆ ಸೃಷ್ಟಿಸಿ ಅರಾಜಕತೆ ಉಂಟುಮಾಡುವ ಪ್ರಯತ್ನ ನಡೆಯುತ್ತಿದೆ ಎಂದರು.

3.  ಒಟಿಟಿ ಪ್ಲಾಟ್‌ಫಾರಂ, ಬಿಟ್‌ಕಾಯಿನ್‌, ಡ್ರಗ್ಸ್‌ಗಳ ಹಾವಳಿ ತಿಳಿಸುತ್ತಲೇ ಈಗಷ್ಟೇ ಮಾದಕ ವಸ್ತು ಸೇವನೆ ಆರೋಪದಲ್ಲಿ ಬಂಧನದಲ್ಲಿರುವ ಚಿತ್ರನಟ ಶಾಹ್‌ರೂಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ವಿಚಾರವನ್ನು “ಉಚ್ಛ ವರ್ಗದವರಿಂದ” ಎಲ್ಲರಿಗೂ ಇದರ ತೊಂದರೆ ತಟ್ಟಿದೆ ಎಂದು ಉದಾಹರಿಸಿದರು. ಇವುಗಳನ್ನು ತಡೆಯಲು ಕುಟುಂಬ ವ್ಯವಸ್ಥೆ, ಮನಸ್ಸಿನ ನಿಯಂತ್ರಣಕ್ಕೆ ಒತ್ತು ನೀಡಿದರು.

4. ಸ್ವಾತಂತ್ರ್ಯ ಹೋರಾಟದ ಉದಾಹರಣೆಯನ್ನು ನೀಡುತ್ತ ತಮಿಳುನಾಡಿನ ವೀರಪಾಂಡ್ಯ ಕಟ್ಟಬೊಮ್ಮನ್‌ ಅವರ ಉದಾಹರಿಸಿ, ನಂತರದಲ್ಲಿ ಮಹಾತ್ಮಾ ಗಾಂಧೀಜಿ ಉಪ್ಪಿನ ಸತ್ಯಾಗ್ರಹ ನಡೆಸಿದ್ದನ್ನು ಉದಾಹರಿಸಿದರು. ಪರಸ್ಪರ ಎರಡೂ ಪ್ರದೇಶಗಳಲ್ಲಿ ಸಂವಹನ ಇಲ್ಲದೆಯೂ ಸಮಾನ ಆಲೋಚನೆ ಇಡೀ ದೇಶದಲ್ಲಿ ಇದೆ ಎನ್ನುವ ಮೂಲಕ ಉತ್ತರ ಹಾಗೂ ದಕ್ಷಿಣ ಭಾರತ ಪ್ರತ್ಯೇಕ ಎನ್ನುವ ಮಾತಿಗೆ ಉತ್ತರ ನೀಡುವ ಪ್ರಯತ್ನ ಮಾಡಿದರು. ದಕ್ಷಿಣದಲ್ಲೂ ವಿಶೇಷವಾಗಿ, ಪ್ರತ್ಯೇಕತೆಯ ಮಾತನ್ನು ತೀವ್ರವಾಗಿ ಪ್ರತಿಪಾದಿಸುವ ತಮಿಳುನಾಡಿನ ಉದಾಹರಣೆಯನ್ನೇ ನೀಡಿದ್ದು ವಿಶೇಷವಾಗಿತ್ತು.

5. ದೇಶದ ಅಖಂಡತೆ, ಸ್ವತಂತ್ರ ಹೋರಾಟಗಳ ಕುರಿತು ವಿವರಿಸುವಾಗ ಮೋಹನ್‌ ಭಾಗವತ್‌ ಅವರು ಆಯ್ಕೆ ಮಾಡಿಕೊಂಡ ಉದಾಹರಣೆಗಳು ಇಂದಿನ ರಾಜಕೀಯ ಸ್ಥಿತಿಗೆ ಅನುಗುಣವಾಗಿವೆ. ಮೊದಲಿಗೆ, ಧರ್ಮವನ್ನು ಉಳಿಸುವ ಸಲುವಾಗಿ ಬಲಿದಾನಗೈದ ಗುರು ತೇಗ್‌ಬಹದ್ದೂರ್‌ ಅವರ ಉದಾಹರಣೆಯನ್ನು ಮೊದಲಿಗೆ ನೀಡಿದ್ದಾರೆ. ಇದು ಪಂಜಾಬ್‌ ಕೇಂದ್ರಿತವಾಗಿ ಕಳೆದ ಅನೇಕ ತಿಂಗಳುಗಳಿಂದ ನಡೆಯುತ್ತಿರುವ ಕೃಷಿ ಕಾಯ್ದೆಗಳ ವಿರುದ್ಧವಾದ ಮಾತಿಗಿಂತಲೂ, ಆ ಹೋರಾಟದೊಳಗೆ ನುಸುಳಿರುವ ಖಾಲಿಸ್ಥಾನ ಮಾನಸಿಕತೆಯನ್ನು ಉದ್ದೇಶಿಸಿದಂತಿದೆ. ತೇಗ್‌ ಬಹದ್ದೂರ್‌ “ಹಿಂದ್‌ ಕಾ ಚಾದರ್‌ʼ, “ವೀರರ ಆಕಾಶಗಂಗೆಯ ಸೂರ್ಯ” ಎಂದು ಬಣ್ಣಿಸಿದ್ದಾರೆ.

-ಎರಡನೆಯದಾಗಿ ಸ್ವತಂತ್ರ ಜೀವನಎಂಬ ಪದವು ಭಾರತೀಯ ಪರಿಕಲ್ಪನೆಯಲ್ಲಿ ಒಂದು ನಿರ್ದಿಷ್ಟ ಅರ್ಥವನ್ನು ಹೊಂದಿದೆ ಎನ್ನುತ್ತ, ಮೊದಲಿಗೆ ಮಹಾರಾಷ್ಟ್ರದ ಸಂತ ಜ್ಞಾನೇಶ್ವರರ ಪಸಾಯನದಾನ ಹಾಗೂ ಎರಡನೆಯದಾಗಿ ಪಶ್ಚಿಮ ಬಂಗಾಳದ ರವೀಂದ್ರನಾಥ ಠಾಗೋರರ ಕವಿತೆಯನ್ನು ಉದಾಹರಿಸಿದರು. ಮುಂದುವರಿದು, ಭಾರತದ ಜನ, ಭಾರತದ ಇತಿಹಾಸ, ಭಾರತೀಯ ಸಂಸ್ಕೃತಿ ಮತ್ತು ಭಾರತದ ಪುನರುಜ್ಜೀವನಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಗಳ ವಿರುದ್ಧ ಅಪಪ್ರಚಾರದ ಮೂಲಕ ಜಗತ್ತನ್ನು ಮತ್ತು ಭಾರತದ ಪ್ರಜೆಗಳನ್ನೂ ಸಹ ಗೊಂದಲಕ್ಕೀಡುಮಾಡಲು ಒಂದು ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಮುಂಬರುವ ಸೋಲು ಮತ್ತು ಸಂಪೂರ್ಣ ವಿನಾಶದ ಭಯದಿಂದ, ಪಡೆಗಳು ತಮ್ಮ ಕಾರ್ಯಾಚರಣೆಗಳನ್ನು ಬಹಿರಂಗವಾಗಿ ಮತ್ತು ರಹಸ್ಯವಾಗಿ ಕಾರ್ಯಗತಗೊಳಿಸಲು ಒಗ್ಗೂಡುತಿವೆ. ನಾವು ಇಂತಹ ಎಲ್ಲಾ ಪಡೆಗಳು ಸೃಷ್ಟಿಸಿತ್ತಿರುವ ಮಾನಸಿಕ ಮಾಯಾ ಜಾಲಗಳಿಂದ ನಮ್ಮನ್ನು ಮತ್ತು ನಮ್ಮ ಸಮಾಜವನ್ನು ಎಚ್ಚರಿಕೆಯಿಂದ ರಕ್ಷಿಸಬೇಕು ಎಂದಿರುವುದು ಈ ಎರಡೂ ರಾಜ್ಯಗಳಲ್ಲಿರುವ, ಮುಖ್ಯವಾಗಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ಮಮತಾ ಬ್ಯಾನರ್ಜಿ ಸರ್ಕಾರದ ನಡೆಯನ್ನು ಟೀಕಿಸಿದ್ದು ಎಂದು ಅರ್ಥೈಸಬಹುದು.

6. ರೋಗಗಳ ತಡೆಗಟ್ಟುವಲ್ಲಿ ನಮ್ಮ ಸಾಂಪ್ರದಾಯಿಕ ಜೀವನಶೈಲಿಯ ಪರಿಣಾಮಕಾರಿ ಪಾತ್ರ ಮತ್ತು ಕರೋನಾದ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯಲ್ಲಿ ಆಯುರ್ವೇದ ಔಷಧಿಗಳ ಪರಿಣಾಮಕಾರಿ ಪಾತ್ರವನ್ನು ನಾವು ಅರಿತುಕೊಂಡಿದ್ದೇವೆ ಎನ್ನುವ ಮೂಲಕ, ಕರೊನಾ ಸಂದರ್ಭದಲ್ಲಿ ಆಯುರ್ವೇದ ಹಾಗೂ ಅಲೋಪತಿ ನಡುವೆ ನಡೆದ ಸಂಘರ್ಷವನ್ನು ಪ್ರಸ್ತಾಪಿಸಿದರು. ಎಲ್ಲ “ಪಥಿ”ಗಳೂ ತಮ್ಮತನವನ್ನು ಉಳಿಸಿಕೊಂಡು, ತಮ್ಮದೇ ಶ್ರೇಷ್ಠ ಎಂಬ ಅಹಂಕಾರವನ್ನು ತ್ಯಜಿಸಬೇಕು ಎಂದು ಹೇಳಿದರಾದರೂ, ಈ ಮಾತು, ಆಯುರ್ವೇದದ ಕುರಿತು ಬಹಿರಂಗ ಸಮರ ಸಾರಿದ್ದ ಅಲೋಪಥಿ ಕ್ಷೇತ್ರದತ್ತ ಬೊಟ್ಟುಮಾಡಿದಂತಿತ್ತು.

7. ಭಾರತೀಯ ದೃಷ್ಟಿಯ ಧರ್ಮ ಕೇಂದ್ರಿತ ಅರ್ಥ ಮತ್ತು ಕಾಮಗಳನ್ನೊಳಗೊಂಡ ಆರ್ಥಿಕತೆಯ ದಾರಿಯನ್ನು ಕಂಡುಕೊಳ್ಳಬೇಕು ಎಂದು ಕರೆ ನೀಡಿದರು. ಕಳೆದ ಏಳು ವರ್ಷದಲ್ಲಿ ಈ ಕುರಿತು ನಡೆದಿರಬಹುದಾದ ಅಂತಹ ಯಾವುದೇ ಉದಾಹರಣೆಯನ್ನು ನೀಡದೆ ಸಮಸ್ಯೆಯನ್ನಷ್ಟೆ ಪಟ್ಟಿ ಮಾಡಿದ್ದು ಗಮನಿಸಿದರೆ, ಈ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ಈ ನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳು ನಡೆದಿಲ್ಲ ಎಂದು ಸೂಚಿಸುವಂತಿತ್ತು. ಇನ್ನಾದರೂ ಇತ್ತ ಗಮನ ಹರಿಸಿ ಎಂದು ತಿಳಿಸಿದಂತಿತ್ತು.

8. ಜನಸಂಖ್ಯಾ ನಿಯಂತ್ರಣದ ಕುರಿತು ಮುಖ್ಯವಾಗಿ ಮುಸ್ಲಿಂ ಸಮುದಾಯದ ಮೇಲೆ ನೇರ ಆರೋಫ ಮಾಡದೆ, ಬಹಳ ರಾಜತಾಂತ್ರಿಕವಾದ ಭಾಷೆಯನ್ನು ಬಳಸುವ ಮೂಲಕ ಸಮರ್ಥನೆ ಮಾಡಿದರು. ಜತೆಗೆ, ಈ ವಿಷಯವನ್ನು 2015ರ ಸಭೆಯಲ್ಲೇ ನಿರ್ಣಯ ಮಾಡಲಾಗಿದೆ ಎಂದು ಅಲ್ಲಿನ ನಿರ್ಣಯವನ್ನು ಓದಿದರು. ಬಹುಶಃ ಸಮಾನ ನಾಗರಿಕ ಸಂಹಿತೆ ಎಂಬುದು ಸದ್ಯದಲ್ಲೆ ಅಥವಾ 2024ರ ಚುನಾವಣೆಗೆ ಮುನ್ನ ಸಂಸತ್ತಿನಲ್ಲಿ ಮಂಡನೆಯಾಗುವ ಎಲ್ಲ ಲಕ್ಷಣಗಳೂ ಇವೆ. ಚುನಾವಣೆ ಕಾಲದಲ್ಲಿ ಆರೆಸ್ಸೆಸ್‌ ಈ ವಿಚಾರ ಪ್ರಸ್ತಾಪಿಸುತ್ತಿದೆ ಎಂಬ ಆರೋಪ ಬಾರದಂತೆ 2015ರ ನಿರ್ಣಯವನ್ನು ಉಲ್ಲೇಖಿಸಿರುವ ಸಾಧ್ಯತೆಯಿದೆ.

9. ದೇವಸ್ಥಾನಗಳನ್ನು ಸರ್ಕಾರ ನಿರ್ವಹಣೆ ಮಾಡುವುದರ ಕುರಿತು ಬಹುತೇಕ ಆಕ್ಷೇಪ ವ್ಯಕ್ತಪಡಿಸುತ್ತಲೇ ಸಮಾಜಕ್ಕೆ ದೇವಸ್ಥಾನವನ್ನು ನೀಡಿದರೆ ಅದನ್ನು ಸಾಮಾಜಿಕ ದೃಷ್ಟಿಕೋನದಲ್ಲಿ ಮುನ್ನಡೆಸುವ ಸಾಮರ್ಥ್ಯವನ್ನು ಸಮಾಜ ಹೊಂದಿದೆಯೇ ಎಂಬುದನ್ನೂ ಪ್ರಶ್ನಿಸಿದರು. ಇತ್ತೀಚೆಗೆ ಆಂಧ್ರ ಪ್ರದೇಶದಲ್ಲಿ ದೇವಸ್ಥಾನಗಳ ಮೇಲೆ ನಡೆಯುತ್ತಿರುವ ದಾಳಿ, ಕರ್ನಾಟಕದಲ್ಲಿ ದೇವಸ್ಥಾನದ ಕುರಿತು ಇತ್ತೀಚೆಗೆ ನಡೆದ ವ್ಯಾಪಕ ಚರ್ಚೆಗಳ ಹಿನ್ನೆಲೆಯಲ್ಲಿ ದೇಶಾದ್ಯಂತ ದೇವಸ್ಥಾನಗಳ ಕುರಿತು ಏಕಾಭಿಪ್ರಾಯ ಮೂಡಿಸುವ ಪ್ರಯತ್ನ ಇದ್ದಂತಿದೆ. ಭೂಮಿಯ ವಿಚಾರವು ಸಂವಿಧಾನಾತ್ಮಕವಾಗಿ ರಾಜ್ಯ ಸರ್ಕಾರಕ್ಕೆ ಸೇರಿದ್ದಾದ್ಧರಿಂದ ದೇವಸ್ಥಾನ ರಕ್ಷಣೆಗಾಗಿ ಕೇಂದ್ರದಿಂದ ಕಾಯ್ದೆ ತರಲಾಗದು.

10. ಇತ್ತೀಚಿನ ದಿನಗಳಲ್ಲಿ ಮೋಹನ್‌ ಭಾಗವತ್‌ ಅವರು ಪ್ರಬಲವಾಗಿ ಪ್ರತಿಪಾದಿಸುತ್ತಿರುವ ಹಿಂದು ಮುಸ್ಲಿಂ ಏಕ ಮೂಲದ ವಿಚಾರವನ್ನು ಇಲ್ಲಿಯೂ ಪ್ರಬಲವಾಗಿ ಮಂಡಿಸಿದರು. “ಹೊರಗಿನಿಂದ ವಲಸೆ ಬಂದಿರುವ ಸಮುದಾಯಗಳ ಸದಸ್ಯರನ್ನು ಒಳಗೊಂಡಂತೆ ಎಲ್ಲಾ ಭರತವಾಸಿಗಳು, ನಮ್ಮ ಆಧ್ಯಾತ್ಮಿಕ ನಂಬಿಕೆಗಳು ಮತ್ತು ಪೂಜಾ ವಿಧಾನಗಳ ವ್ಯತ್ಯಾಸಗಳ ಹೊರತಾಗಿ ನಾವೆಲ್ಲರೂ ಸಾಮಾನ್ಯ ಶಾಶ್ವತ ನಾಗರೀಕತೆ, ಸಂಸ್ಕೃತಿ ಮತ್ತು ಪೂರ್ವಜರ ವಾರಸುದಾರರು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅನನ್ಯ ಅನುವಂಶಿಕತೆಯೇ ನಮ್ಮ ಧಾರ್ಮಿಕ ಸ್ವಾತಂತ್ರ್ಯದ ಮೂಲವಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ತನಗೆ ಸೂಕ್ತವೆಂದು ಭಾವಿಸುವ ಪೂಜಾ ವಿಧಾನವನ್ನು ಆಯ್ಕೆ ಮಾಡಲು ಸ್ವತಂತ್ರನಾಗಿರುತ್ತಾನೆ. ವಿದೇಶಿ ದಾಳಿಕಾರರ ಜೊತೆಗೆ ಅನೇಕ ಧಾರ್ಮಿಕ ಪಂಥಗಳೂ ನಮ್ಮ ದೇಶಕ್ಕೆ ಬಂದವು ಎಂಬುದು ಐತಿಹಾಸಿಕ ಸತ್ಯ. ಆದರೆ ಇಂದು ಭಾರತದಲ್ಲಿ ಪಂಥಗಳನ್ನು ನಂಬುವವರ ಸಂಬಂಧವು ಆಕ್ರಮಣಕಾರರ ಜೊತೆಗಿಲ್ಲ, ಅವರ ಸಂಬಂಧವಿರುವುದು ದೇಶದ ರಕ್ಷಣೆಗಾಗಿ ಅವರೊಂದಿಗೆ ಹೋರಾಡಿದ ಹಿಂದೂ ಪೂರ್ವಜರೊಂದಿಗೆ. ನಮ್ಮ ಆದರ್ಶಗಳು ನಮ್ಮ ಸಾಮಾನ್ಯ ಪೂರ್ವಜರು” ಎನ್ನುತ್ತ ಹಸನ್ಖಾನ್ ಮೇವತಿ, ಹಕೀಮ್ ಖಾನ್ ಸೂರಿ, ಖುದಾಬಕ್ಷ್ ಮತ್ತು ಗೌಸ್ ಖಾನ್ ರಂತಹ ಹುತಾತ್ಮರನ್ನು ಮತ್ತು ಅಶ್ಫಾಖುಲ್ಲಾ ಖಾನ್ ರಂತಹ ಕ್ರಾಂತಿಕಾರರನ್ನು ದೇಶವು ನೋಡಿದೆ ಎಂದು ಸ್ಮರಿಸಿದರು.

11. ಇತ್ತೀಚೆಗಷ್ಟೆ ಸಾವರ್ಕರ್‌ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮೋಹನ್‌ ಭಾಗವತ್‌ ಈ ಭಾಷಣದಲ್ಲೂ ಸಾವರ್ಕರ್‌ ಉದಾಹರಣೆ ನೀಡಿದರು. ಇದೇ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಭಾಗವಹಿಸಿ, ಸಾವರ್ಕರ್‌ ಕ್ಷಮಾಪಣೆ ಕೋರಿದ್ದು ಗಾಂಧೀಜಿಯವರ ಮಾತಿಗೆ ಬೆಲೆ ಕೊಟ್ಟು ಎಂದಿದ್ದರು. ಜಾಗೃತ ಭಾರತವು ಗೀತೆಯ ಸಾರವನ್ನೇ ಹೇಳುತ್ತದೆ ಎಂಬ ಸಾವರ್ಕರ್‌ ಮಾತನ್ನು ವಿಜಯದಶಮಿ ಭಾಷಣದಲ್ಲಿ ಮೋಹನ್‌ ಭಾಗವತ್‌ ಉದಾಹರಿಸಿದರು. ಇತ್ತೀಚಿನ ದಿನಗಳಲ್ಲಿ ಸಾವರ್ಕರ್‌ ಕುರಿತ ಮಾತುಗಳು ರಾಷ್ಟ್ರ ರಾಜಕಾರಣ, ಚರ್ಚೆಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿವೆ. ಇತ್ತೀಚೆಗಷ್ಟೆ ಕರ್ನಾಟಕದವರೇ ಆದ ವಿಕ್ರಂ ಸಂಪತ್‌ ಅವರು ಸಾವರ್ಕರ್‌ ಕುರಿತು ರಚಿಸಿದ ಕೃತಿಯೂ ಬಿಡುಗಡೆ ಆಗಿದೆ. ಇದೆಲ್ಲದರ ಜತೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಷಾ ಇದೇ ದಿನದಂದು ಅಂಡಮಾನ್‌ನ ಸೆಲ್ಯುಲರ್‌ ಜೈಲಿಗೆ ಭೇಟಿ ನೀಡಿದರು. ಸಾವರ್ಕರ್‌ ಅವರನ್ನು ಕೂಡಿಟ್ಟಿದ್ದ ಕೋಣೆ, ಅವರ ಸ್ಮರಣೆಯುಳ್ಳ ಬರಹಗಳನ್ನು ವೀಕ್ಷಿಸಿದರು. ಸಾವರ್ಕರ್‌ ಅವರ ಜೀವನವನ್ನು ಅನುಮಾನದಿಂದ ನೋಡುವವರನ್ನು ಟೀಕಿಸಿದರು. ಸದ್ಯದಲ್ಲೇ ಸಾವರ್ಕರ್‌ ಕುರಿತು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಳ್ಳುವ ಮುನ್ಸೂಚನೆ ಇದು ಎಂದು ವಿಶ್ಲೇಷಿಸಬಹುದು. ಸಾವರ್ಕರ್‌ ಹೆಸರು ಸದಾ ಸಂಚಲನ ಸೃಷ್ಟಿಸುವ ಶಕ್ತಿ ಹೊಂದಿದ್ದು, ಲೋಕಸಭೆ ಚುನಾವಣೆಗೂ ಇದು ಬಿಜೆಪಿಗೆ ಸಹಾಯವಾಗುವ ಎಲ್ಲ ಸಾಧ್ಯತೆ ಇದೆ.

ಭಾನುವಾರ, ಸೆಪ್ಟೆಂಬರ್ 19, 2021

ಪ್ರತಿಮೆಗಳನ್ನು ಅನಾಥವಾಗಿಸುವುದು ಸರಿಯೇ?

 ನಾಡು, ನುಡಿ, ದೇಶಕ್ಕೆ ಸೇವೆ ಸಲ್ಲಿಸಿದ ಮಹನೀಯರ ಪ್ರತಿಮೆಗಳನ್ನು ಸ್ಥಾಪಿಸಿ ಗೌರವಿಸುವುದು ಸಂಪ್ರದಾಯ. ಆದರೆ ಅವುಗಳ ರೂಪುರೇಷೆ, ನಿರ್ವಹಣೆಯ ಅರಿವಿಲ್ಲದೆ ಕ್ಷಣಕಾಲದ ಉತ್ತೇಜನೆಗೆ ಒಳಗಾಗಿ ಸ್ಥಾಪಿಸುವ ಪ್ರತಿಮೆಗಳು ಸಾರ್ವಜನಿಕರಿಗೆ ಕಿರಿಕಿರಿ, ಸಂಚಾರ ದಟ್ಟಣೆ ಜತೆಗೆ ಮಹನೀಯರಿಗೂ ಅವಮಾನವಾಗುವಂತೆ ಕಸಕಡ್ಡಿಗಳ ನಡುವೆ ತುಂಬಿವೆ. ಧೂಳು ಹಿಡಿದಿರುವ ಪ್ರತಿಮೆಗಳನ್ನು ಕಂಡರೆ ಬೇಸರವಾಗುತ್ತದೆ. ಸುಪ್ರೀಂಕೋರ್ಟ್‌ ಗಮನಕ್ಕೂ ಈ ವಿಚಾರ ಬಂದು ಪ್ರತಿಮೆಗಳನ್ನು ತೆರವುಗೊಳಿಸಲು ಆದೇಶಿಸಿದ್ದು, ಸಮಸ್ಯೆ ಉಲ್ಬಣವಾಗಲು ಸರ್ಕಾರದ ಅನಾಸಕ್ತಿಯೂ ಕಾರಣ.

Web Link: ಪ್ರತಿಮೆಗಳನ್ನು ಸ್ಥಾಪಿಸಿದರೆ ಸಾಕೆ?

(ವಿ.ಸೂ: ಚಿತ್ರವನ್ನು ಡೌನ್‌ಲೋಡ್‌ ಮಾಡಿಕೊಂಡು ಗ್ಯಾಲರಿಯಿಂದ ತೆರೆದರೆ ಲೇಖನವನ್ನು ಸ್ಪಷ್ಟವಾಗಿ ಓದಬಹುದು)



ಗುರುವಾರ, ಜುಲೈ 01, 2021

ಚೀನಾ ಕಮ್ಯುನಿಸ್ಟ್‌ ಸರ್ಕಾರದ ಸಾಫ್ಟ್‌ ಪವರ್‌ ಭಾರತದಲ್ಲೂ ಇದೆ: ತನಿಖಾ ವರದಿ

ಚೀನಾದಲ್ಲಿ ಆಡಳಿತ ನಡೆಸುತ್ತಿರುವ ಕಮ್ಯುನಿಸ್ಟ್‌ ಸರ್ಕಾರಕ್ಕೆ ಇಂದಿಗೆ ನೂರು ವರ್ಷವಾಗಿದೆ. ರಾಷ್ಟ್ರೀಯವಾದಿ ರಿಪಬ್ಲಿಕ್‌ ಆಫ್‌ ಚೀನಾ ಸರ್ಕಾರದ ಜತೆಗೆ ನಾಗರಿಕ ಸಂಘರ್ಷದ ನಂತರ 1949ರಲ್ಲಿ ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಚೈನಾ(ಪಿಆರ್‌ಸಿ) ಹೆಸರಿನಲ್ಲಿ ಸರ್ಕಾರ ಸ್ಥಾಪನೆ ಮಾಡಲಾಯಿತು. ತನ್ನ ಸರ್ಕಾರದ ಕುರಿತು ಸದಭಿಪ್ರಾಯ, ಸಾಫ್ಟ್‌ಕಾರ್ನರ್‌ ಹಾಗೂ ರಾಜತಾಂತ್ರಿಕ ಮೇಲುಗೈ ಸಾಧನೆಗೆ ವಿಶ್ವದ ಅನೇಕ ದೇಶಗಳಲ್ಲಿ ಸಮಾನಾಂತರ ಮಾರ್ಗವನ್ನು ಪಿಆರ್‌ಸಿ ಕಂಡುಕೊಂಡಿದೆ. ಅಂತಹ "ಫ್ರೆಂಡ್‌ಷಿಪ್ ಅಸೋಸಿಯೇಷನ್‌"ಗಳ ಕುರಿತು ಈ ತನಿಖಾ ವರದಿ.


ಚೀನಾ ಸ್ನೇಹ ಜಾಲ

"ಈಚೆಗೆ 1962 ರಲ್ಲಿ ಚೀನಾ ನಮ್ಮ ದೇಶದ ಮೇಲೆ ಆಕ್ರಮಣ ಮಾಡಿ ‘ದಾಗಲೂ ಪೀಕಿಂಗ್‌ವಾದಿ ಕಮ್ಯುನಿಸ್ಟರು ಅದನ್ನು ಆಕ್ರಮಣ ಎಂದು ಕರೆಯಲು ಸಿದ್ಧರಾಗಲಿಲ್ಲ. ಬದಲಾಗಿ, ಭಾರತವೇ ಚೀನದ ಭೂಭಾಗಗಳನ್ನು ಆಕ್ರಮಿಸಿದೆ ಎಂದು ಆಪಾದಿಸಿದರು. ಸರಕಾರವು ಭದ್ರತಾ ಕ್ರಮವಾಗಿ ಕೆಲವು ಪ್ರಮುಖ ಪೀಕಿಂಗ್‌ವಾದಿ ಪಿತೂರಿಗಾರ ಕಮ್ಯುನಿಸ್ಟರನ್ನು ಬಂಧಿಸಿದೊಡನೆ ಇಡೀ ಕಮ್ಯುನಿಸ್ಟ್ ಲೋಕವೆಲ್ಲ - ಎಡ, ಬಲ, ಮಧ್ಯ ಎಲ್ಲ’ಒಂದೇ ಸಮನೆ ಬೊಬ್ಬೆ ಇಟ್ಟವು. ರಷ್ಯದ ʼಪ್ರಾವ್ಡಾ’ ಭಾರತ ಸರ್ಕಾರದ ಕ್ರಮವನ್ನು ಉಗ್ರವಾಗಿ ಟೀಕಿಸಿತು. ಭಾರತ ಸರ್ಕಾರವೂ ಅದಕ್ಕೆ ಮಣಿದು -ಕೂಡಲೇ ಅವರೆಲ್ಲರನ್ನೂ ಬಿಡುಗಡೆ ಮಾಡಿತು..."

"ಇದುವರೆಗಿನ ಮಿಕ್ಕೆಲ್ಲ ಆಕ್ರಮಣಕಾರಿಗಳಿಗಿಂತ ರಷ್ಯ-ಚೀನ ಆಕ್ರಮಣದ ಈ ಸ್ವರೂಪವು ಸಾವಿರ ಪಾಲು ಘಾತಕರವಾಗಿದೆ. ಏಕೆಂದರೆ ಈ ಆಕ್ರಮಣವನ್ನು ಆಕ್ರಮಣವೆಂದೇ ಭಾವಿಸದೆ ಅದನ್ನು ತಾತ್ವಿಕವಾಗಿ ಸ್ವಾಗತಿಸುವ ಗುಂಪು ಒಂದೊಂದು ದೇಶದಲ್ಲಿ ತಯಾರಾಗುತ್ತದೆ. ಇದು ವರೆಗಿನ ಅನ್ಯಾನ್ಯ ಆಕ್ರಮಕರು ಪರದೇಶದವರಾಗಿದ್ದು, ಅವರೇ ನೇರವಾಗಿ ಬಂದು ತಮ್ಮ ರಾಜ್ಯ ಚಲಾಯಿಸುತ್ತಿದ್ದುದರಿಂದ ಅವರನ್ನು ಶತ್ರುಗಳೆಂದು ಗುರುತಿಸಲು ಅಲ್ಲಿನ ಜನಕ್ಕೆ ಸಾಧ್ಯವಾಗುತ್ತಿತ್ತು. ಕಮ್ಯುನಿಸ್ಟರಾದರೋ ಆಯಾ ದೇಶದವರೇ ಆಗಿರುವ ಕಾರಣ, ಅವರ ನಿಜವಾದ ಬಣ್ಣ ಗೊತ್ತಾಗುವುದು ಸಾಮಾನ್ಯ ಜನಕ್ಕೆ ಕಷ್ಟವಾಗುತ್ತದೆ..."

ಇವು ಕರ್ನಾಟಕದ ಪ್ರಮುಖ ಚಿಂತಕರಲ್ಲೊಬ್ಬರಾದ ಹೊ.ವೆ. ಶೇಷಾದ್ರಿ ಅವರು ತಮ್ಮ ಕ್ರಾಂತಿಯಲ್ಲ, ಭ್ರಾಂತಿ(1970) ಕೃತಿಯಲ್ಲಿ ಕಮ್ಯುನಿಸ್ಟ್ ಕುರಿತು ಹೇಳುವ ಮಾತುಗಳು.

ಇನ್ನೊಂದೆಡೆ ಚಿಂತಕ ದೀನದಯಾಳ್ ಉಪಾಧ್ಯಾಯ ಅವರು ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಬಗ್ಗೆ ಹೀಗೆ ಬರೆಯುತ್ತಾರೆ. "ದೇಶದಲ್ಲಿ ಕಮ್ಯುನಿಸ್ಟ್ ಶಕ್ತಿಗೆ ನೆರವಾಗುತ್ತಿರುವ ಅತ್ಯಂತ ಹೆಚ್ಚಿನ ಒಂದೇ ಒಂದು ಸಹಕಾರೀ ಅಂಶವೆಂದರೆ ಪ್ರಧಾನ ಮಂತ್ರಿಯವರು ಅದರ ಬಗೆಗೆ ತಳೆದಿರುವ ಮೃದುಧೋರಣೆ, ಕಮ್ಯುನಿಸಮ್ ಸರಿಯಾದದ್ದೇ ಆಗಿದೆ. ಆದರೆ ಭಾರತದ ಕಮ್ಯುನಿಸ್ಟರು ಮಾತ್ರ ಕೆಟ್ಟವರೆಂಬ ಅವರ ಸಿದ್ಧಾಂತವು ದೇಶದಲ್ಲಿ ಕಮ್ಯುನಿಸಮ್ ಅನ್ನು ಗೌರವಾರ್ಹವನ್ನಾಗಿ ಮಾಡಿದೆ. ಅವರು ಮತ್ತು ಕಾಂಗ್ರೆಸ್ಸಿನ ಇತರ ಅವರ ಸಹ ಪ್ರಯಾಣಿಕರು ಸಿಪಿಐನ ನಿಜವಾದ ಶಕ್ತಿಯಾಗಿದ್ದಾರೆ. (ಪಂಡಿತ್ ದೀನದಯಾಳ ಉಪಾಧ್ಯಾಯ ಅವರ ಸಮಗ್ರ ಬರೆಹಗಳು- ಸಂಪುಟ 8- ಪುಟ76)".

ಭಾರತದ ರಾಜಕಾರಣ ಹಾಗೂ ಯುದ್ಧದ ಮೇಲೆ ಚೀನಾ ಪ್ರಭಾವದ ಕುರಿತು ರಾಷ್ಟ್ರೀಯ ಮಟ್ಟದ ಅನೇಕ ಚಿಂತಕರು ಈ ಮೇಲಿನಂತೆ ಗಮನ ಸೆಳೆದಿದ್ದಾರೆ. ಚೀನಾ ಎಂದೊಡನೆ ಪ್ರಮುಖವಾಗಿ ಅಲ್ಲಿನ ಕಮ್ಯುನಿಸ್ಟ್ ಪಕ್ಷದ ಸರ್ಕಾರದ ಮೇಲೆ ಸಹಜವಾಗಿ ದೃಷ್ಟಿ ಹರಿಯುತ್ತದೆ. ಎರಡನೆಯದು, 1962ರಲ್ಲಿ ಭಾರತದ ವಿರುದ್ಧ ಚೀನಾ ಯುದ್ಧ ಸಾರಿದಾಗ ನಮ್ಮ ನಾಯಕರು(ಪ್ರಧಾನಿ ನೆಹರೂ) ಸರಿಯಾಗಿ ನಿಭಾಯಿಸದೆ ತಲೆತಗ್ಗಿಸುವಂತಹ ಸೋಲನುಭವಿಸಬೇಕಾಯಿತು ಎಂಬುದು. ಮೂರನೆಯದು, ನಮ್ಮ ದೇಶದಲ್ಲಿರುವ ಕಮ್ಯುನಿಸ್ಟರು ಭಾರತದ ಸಂವಿಧಾನಕ್ಕೆ ಬದ್ಧವಾಗಿರದೆ ಚೀನಾ ಪರ ವಾಲುತ್ತಾರೆ ಎನ್ನುವುದು. ನಾಲ್ಕನೆಯದು, ಇತ್ತೀಚಿನ ದಶಕಗಳಲ್ಲಿ ಚೀನಾ ತನ್ನ ಅಗ್ಗದ ಸರಕನ್ನು ಭಾರತದಲ್ಲಿ ಡಂಪಿಂಗ್ ಮಾಡುತ್ತ ದೇಶಿ ಮಾರುಕಟ್ಟೆಯನ್ನು ಕಸಿದುಕೊಳ್ಳುತ್ತಿದೆ ಎಂಬುದು. ರಾಷ್ಟ್ರೀಯ ವಿಚಾರಧಾರೆಯ ಸಾಕಷ್ಟು ಚರ್ಚೆಗಳಲ್ಲಿ ಈ ವಿಚಾರಗಳು ವಿಸ್ತೃತವಾಗಿ ಬಹಿರಂಗಗೊಂಡಿವೆ. ಆದರೆ ಹೆಚ್ಚು ಪ್ರಚಲಿತವಿಲ್ಲದ ಅಂಶವೆಂದರೆ ಸದ್ಯ ಚೀನಾದಲ್ಲಿ ಅಧಿಕಾರದಲ್ಲಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ನಿಯಂತ್ರಣದಲ್ಲಿರುವ ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ(ಪಿಆರ್‌ಸಿ) ಎಂಬ ಆಡಳಿತವು ಸರ್ಕಾರ ಭಾರತ ಸೇರಿದಂತೆ ವಿವಿಧ ದೇಶಗಳ ಜನರಲ್ಲಿ ತನ್ನ ಪರ ಮೃದು ಧೋರಣೆ ತಳೆಯಲು ಬಳಸುವ ತಂತ್ರಗಳು.


ಫ್ರೆಂಡ್‌ಷಿಪ್ ಅಸೋಸಿಯೇಷನ್‌ಗಳು

ಚೀನಾ ಗಣತಂತ್ರವನ್ನು ಸೋಲಿಸಿದ ನಂತರ 1949ರಿಂದ ‘ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ(ಪಿಆರ್‌ಸಿ)’ ಹೆಸರಲ್ಲಿ ಆಡಳಿತ ನಡೆಸುತ್ತಿರುವ ಚೀನಾ ಕಮ್ಯುನಿಸ್ಟ್ ಪಕ್ಷ ಪ್ರಾರಂಭದಲ್ಲಿ ಐಡೆಂಟಿಟಿ ಪಡೆಯಬೇಕಿತ್ತು. ಹಾಂಗ್‌ಕಾಂಗ್, ಟಿಬೆಟ್, ತೈವಾನ್ ಸೇರಿ ಅನೇಕ ಭೂಭಾಗದ ಜನರು ಪಿಆರ್‌ಸಿ ವಿರುದ್ಧ ಹೋರಾಟ ನಡೆಸುತ್ತಿದ್ದವು. ಈಗಾಗಲೆ ವಿಶ್ವಮಾನ್ಯತೆ ಪಡೆದ ದೇಶಗಳು ಪಿಆರ್‌ಸಿಯನ್ನು ತನ್ನ ಅಧಿಕೃತ ಸಂಪರ್ಕದ ಕೊಂಡಿಯಾಗಿ, ಅಂದರೆ ಒಂದು ದೇಶದ ಆಡಳಿತ ಎಂದು ಗುರುತಿಸಬೇಕಿತ್ತು.

Formation of Sino -India Friendship Association in may 16, 1952
1952ರ ಮೇ 16ರಂದು ಚೀನಾ-ಭಾರತ ಫ್ರೆಂಡ್‌ಷಿಪ್‌
ಅಸೋಸಿಯೇಷನ್‌ ಉದ್ಘಾಟನೆ.

ಈಗಾಗಲೆ ಅನೇಕರು ತಿಳಿಸಿರುವಂತೆ ಪಿಆರ್‌ಸಿ ಕುರಿತು ಅಂದಿನ ಭಾರತದ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರಿಗೆ ಅಭಿಮಾನ. ಪಿಆರ್‌ಸಿಯನ್ನು ಒಂದು ದೇಶವಾಗಿ ಅನೇಕ ದೇಶಗಳಿಗೂ ಮೊದಲೇ ಗುರುತಿಸಿದರು. ಆದರೆ ಚೀನಾದ ಆಡಳಿತ, ನೆಹರೂ ತಿಳಿದಷ್ಟು ಪಾರದರ್ಶಕವಾಗಿರಲಿಲ್ಲ. ವಿಸ್ತಾರ ಮನೋಭಾವ ಹೊಂದಿದ್ದ ಚೀನಾ ಕಮ್ಯುನಿಸ್ಟ್ ಪಕ್ಷಕ್ಕೆ, ದೇಶವಿದೇಶಗಳ ಗೌಪ್ಯ ಮಾಹಿತಿ ಸಂಗ್ರಹಿಸಿ ನೀಡಲು ಯುನೈಟೆಡ್ ಫ್ರಂಟ್ ವರ್ಕ್ ಡಿಪಾರ್ಟ್‌ಮೆಂಟ್ ಸ್ಥಾಪನೆ ಮಾಡಿಕೊಂಡಿತು. ವಿವಿಧ ದೇಶಗಳಲ್ಲಿ ಪಿಆರ್‌ಸಿ ಕುರಿತು ಮೃದು ಧೋರಣೆ ತಳೆಯುವಂತೆ ಮಾಡಲು ಹಾಗೂ ಕಾಲಕ್ರಮೇಣ ಅಲ್ಲಿನ ಸಂಸ್ಕೃತಿ, ರಾಜಕೀಯ ಪ್ರಭುತ್ವವನ್ನು ಆಕ್ರಮಿಸಲು ಚೈನೀಸ್ ಪೀಪಲ್ಸ್ ಅಸೋಸಿಯೇಷನ್ ಫಾರ್ ಫ್ರೆಂಡ್‌ಷಿಪ್ ವಿತ್ ಫಾರಿನ್ ಕಂಟ್ರೀಸ್(ಸಿಪಿಎಎಫ್‌ಎಫ್‌ಸಿ) ಸ್ಥಾಪಿಸಿತು. ಸಿಪಿಎಎಫ್‌ಎಫ್‌ಸಿ ಮೂಲಕ ಭಾರತದಲ್ಲಿ ಐಸಿಎಫ್‌ಎ ಸೇರಿದಂತೆ 40 ದೇಶಗಳಲ್ಲಿ ಫ್ರೆಂಡ್‌ಷಿಪ್ ಅಸೋಸಿಯೇಷನ್‌ಗಳನ್ನು ಸ್ಥಾಪಿಸಿದೆ.

ಅನೇಕ ವಿದೇಶಾಂಗ ತಜ್ಞರು ಹೇಳಿರುವಂತೆ, ಸಿಪಿಎಎಫ್‌ಎಫ್‌ಸಿ ಎಂಬುದು ಯುನೈಟೆಡ್ ಫ್ರಂಟ್ ವರ್ಕ್ ಡಿಪಾರ್ಟ್‌ಮೆಂಟ್‌ನ ಮುಖವಾಡ. ಆದರೆ ವಿದ್ಯಾರ್ಥಿಗಳಿಗೆ ಶಿಕ್ಷಣದ ಅವಕಾಶ, ಚೀನಾದ ಕೃಷಿ-ಕೈಗಾರಿಕೆ ಕುರಿತು ಪ್ರಾತ್ಯಕ್ಷಿಕೆ, ಪ್ರವಾಸ ಉತ್ತೇಜನದ ಹೆಸರಿನಲ್ಲಿ ನಡೆಸುತ್ತಿರುವ ಐಸಿಎಫ್‌ಎ ಹಿನ್ನೆಲೆ ಬಹುತೇಕರಿಗೆ ತಿಳಿದಿಲ್ಲ. 1962ರಲ್ಲಿ ಚೀನಾ ಜತೆಗೆ ಯುದ್ಧ ನಡೆದಾಗ ಐಸಿಎಫ್‌ಎ ರದ್ದುಪಡಿಸಲಾಗಿತ್ತು. ಮತ್ತೆ 1992ರಿಂದ ಚಾಲನೆ ನೀಡಲಾಗಿದ್ದು, ಕರ್ನಾಟಕ ಸೇರಿ ಅನೇಕ ರಾಜ್ಯಗಳಲ್ಲಿ ಇದರ ಶಾಖೆಗಳಿವೆ.


ಭಾರತದಲ್ಲಿ ಹೆಚ್ಚಿದ ಮೃದು ಧೋರಣೆ

ದೇಶದಲ್ಲಿ ಐಸಿಎಫ್‌ಎ ಸ್ಥಾಪನೆಯಾದಾಗ ಅದರ ಮೊದಲ ಪ್ರಧಾನ ಕಾರ್ಯದರ್ಶಿ ಆದವರು ಕಲ್ಕತ್ತಾ ವಿವಿಯ ಚೀನಾ ಇತಿಹಾಸ ಪ್ರೊಫೆಸರ್ ತ್ರಿಪುರಾರಿ ಚಕ್ರವರ್ತಿ. ಬಹುತೇಕ ಕಮ್ಯುನಿಸ್ಟ್ ಚಿಂತಕರು ಹಾಗೂ ದೇಶದ ಘಟಾನುಘಟಿ ಚಿಂತಕರ ಗುಂಪನ್ನು ಚೀನಾ ಪ್ರವಾಸಕ್ಕೆ ಕರೆದೊಯ್ಯಲಾಯಿತು. ಈ ನಂತರದಲ್ಲಿ ಇಂಗ್ಲಿಷ್ ಹಾಗೂ ಭಾರತೀಯ ಭಾಷೆಗಳಿಗೆ ಮಾವೋ ತ್ಸೆ ತುಂಗ್ ಕೃತಿಗಳು ದೊಡ್ಡ ಪ್ರಮಾಣದಲ್ಲಿ ಅನುವಾದಗೊಂಡವು. ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಐಸಿಎಫ್‌ಎ ಶಾಖೆಗಳನ್ನು ಸ್ಥಾಪಿಸಲಾಯಿತು. ಮೇ ಡೇ ಆಚರಣೆಗೆ ದೇಶದ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು, ಪ್ರಧಾನಿ ನೆಹರೂ ಸಹೋದರಿ ವಿಜಯಲಕ್ಷ್ಮೀ ಪಂಡಿತ್ ನೇತೃತ್ವದ ಸರ್ಕಾರಿ ನಿಯೋಗ ಸೇರಿ ಅನೇಕರು ತಂಡೋಪತಂಡಗಳಲ್ಲಿ ಚೀನಾ ಪ್ರವಾಸ ನಡೆಸಿ ಈ ಕುರಿತು ಭಾರತದಲ್ಲಿ ಮೃದು ಧೋರಣೆ ಪ್ರಸಾರ ಮಾಡಿದರು.



2001ರಲ್ಲಿ ಚೀನಾ ಪ್ರವಾಸ ಕೈಗೊಂಡಿದ್ದ ಕರ್ನಾಟಕದ ನಿಯೋಗದಲ್ಲಿ ಸಿದ್ದರಾಮಯ್ಯ, ಕಾಗೋಡು ತಿಮ್ಮಪ್ಪ, ಬಿ.ಎಲ್. ಶಂಕರ್, ಮೋಹನ್ ಕೊಂಡಜ್ಜಿ, ಆರ್.ವಿ. ದೇಶಪಾಂಡೆ, ಸಿ. ಭೈರೇಗೌಡ ಮುಂತಾದವರು.

ಸಿಪಿಎಎಫ್‌ಎಫ್‌ಸಿ ಎಂಬುದು ಸುಮ್ಮನೆ ಹಾಡು, ಕುಣಿತಕ್ಕೆ, ಮನರಂಜನೆಗೆ ಸೀಮಿತವಾದ ಸಂಸ್ಥೆಯಲ್ಲ ಎಂಬುದಕ್ಕೆ ಇತ್ತೀಚೆಗೆ ನಡೆದ ಬೆಳವಣಿಗೆಯೇ ಉದಾಹರಣೆ. ಸಿಪಿಎಎಫ್‌ಎಫ್‌ಸಿಯ ಈಗಿನ ಅಧ್ಯಕ್ಷ ಲಿನ್ ಸಾಂಗ್ಟಿಯಾನ್. ಕಳೆದ ವರ್ಷದ ಏಪ್ರಿಲ್‌ವರೆಗೆ ದಕ್ಷಿಣ ಆಫ್ರಿಕಾದಲ್ಲಿ ಚೀನಾ ರಾಯಭಾರಿಯಾಗಿದ್ದ ಲಿನ್ ಸಾಂಗ್ಟಿಯಾನ್, ಇದೀಗ ವಿಶ್ವವನ್ನೇ ಕಾಡುತ್ತಿರುವ ಕರೊನಾ ವೈರಸ್ ಕುರಿತು ಸುದ್ದಿಯಾಗಿದ್ದರು. ಚೀನಾದ ವುಹಾನ್‌ನಲ್ಲಿ ಕರೊನಾ ವೈರಸ್ ಹರಡುವಿಕೆ ಆರಂಭವಾಯಿತು ಎನ್ನುವುದು ಇದೀಗ ಬಹುತೇಕ ಎಲ್ಲರೂ ಒಪ್ಪುವ ಮಾತು. ಆದರೆ ಚೀನಾದಲ್ಲಿ ಈ ಕುರಿತ ಅನೇಕ ಅಂತೆ ಕಂತೆಗಳು ಚಾಲ್ತಿಯಲ್ಲಿವೆ. ವುಹಾನ್‌ಗೆ ಕಳೆದ ವರ್ಷ ಕ್ರೀಡಾಕೂಟಕ್ಕೆ ಆಗಮಿಸಿದ್ದ ಅಮೆರಿಕನ್ನರು ಕರೊನಾ ವೈರಸನ್ನು ಬಿಟ್ಟು ತೆರಳಿದ್ದರು ಎಂಬುದು ಈ ಕಥೆಗಳ ಕೇಂದ್ರಬಿಂದು. ಇದೇ ಕಥೆಯನ್ನು ಜಗತ್ತಿಗೆ ಮಾರಲು ಹೊರಟ ಮೊದಲಿಗರೆಂದರೆ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜಾವ್ ಲಿಜಿಯಾನ್. ಬಹುಶಃ ವುಹಾನ್‌ಗೆ ಚೀನಾ ಸೇನೆಯು ಕರೊನಾ ವೈರಸ್ ಅನ್ನು ಪಸರಿಸಿತು ಎಂದು ಅವರು ತಿಳಿಸಿದ್ದರು. ನಂತರದಲ್ಲಿ ವಿಶ್ವದ ವಿವಿಧ ಭಾಗಗಳಲ್ಲಿ ಈ ಕಥೆ ಮಾರಲು ಸಹಾಯ ಮಾಡಿದವರು ಆ ಸಮಯದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಚೀನಾ ರಾಯಭಾರಿಯಾಗಿದ್ದ ಲಿನ್ ಸಾಂಗ್ಟಿಯಾನ್. ಈ ಹೇಳಿಕೆಗಳಿಗೆ ಕೆರಳಿದ್ದ ಅಂದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕರೊನಾ ವೈರಸ್ ಅನ್ನು ಚೀನಾ ವೈರಸ್ ಎಂದು ಸಂಬೋಧಿಸಿದರು.

ಇಷ್ಟ ಮಟ್ಟಿಗೆ ಚೀನಾ ಕಮ್ಯುನಿಸ್ಟ್ ಪಕ್ಷದ ನೆಚ್ಚಿನ ಸೇನಾನಿಯಾದ ಲಿನ್ ಸಾಂಗ್ಟಿಯಾನ್‌ರನ್ನು ದಕ್ಷಿಣ ಆಫ್ರಿಕಾದ ರಾಯಭಾರಿ ಸ್ಥಾನದಿಂದ ಮಾರ್ಚ್‌ನಲ್ಲಿ ಇದ್ದಕ್ಕಿದ್ದಂತೆ ಹಿಂಪಡೆಯಲಾಯಿತು. ಒಂದು ವರ್ಷದಿಂದ ದಕ್ಷಿಣ ಆಫ್ರಿಕಾ ದೇಶವು ಚೀನಾದ ಬೀಜಿಂಗ್‌ನಲ್ಲಿ ತನ್ನ ರಾಯಭಾರಿಯನ್ನು ನೇಮಿಸದೆ ಅವಮಾನ ಮಾಡಿದೆ, ಈ ಸಿಟ್ಟಿಗಾಗಿ ದಕ್ಷಿಣ ಆಫ್ರಿಕಾದಿಂದ ತನ್ನ ರಾಯಭಾರಿಯನ್ನು ಕರೆಸಿಕೊಳ್ಳುತ್ತಿದೆ ಎಂದು ಸುದ್ದಿ ಹಬ್ಬಿಸಲಾಯಿತು. ಆದರೆ ಕೆಲವೇ ದಿನಗಳಲ್ಲಿ ಅಸಲಿ ಬಣ್ಣ ಬಯಲಾಯಿತು. ಲಿನ್ ಸಾಂಗ್ಟಿಯಾನ್‌ರನ್ನು ಸಿಪಿಎಎಫ್‌ಎಫ್‌ಸಿ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು.

ಚೀನಾದ, ಅದಕ್ಕಿಂತಲೂ ಹೆಚ್ಚಾಗಿ ಈಗಿನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮಹತ್ವಾಕಾಂಕ್ಷೆಯ ಬೆಲ್ಟ್ ಆಂಡ್ ರೋಡ್ ಇನಿಷಿಯೇಟಿವ್(ಬಿಆರ್‌ಐ) ಯೋಜನೆಯನ್ನು ಸಾಕಾರಗೊಳಿಸಲು ಹಾದಿ ಸುಗಮಗೊಳಿಸುವುದು ಈ ನೇಮಕದ ಉದ್ದೇಶ. ಬಿಆರ್‌ಐ ಬಲವಾದ ಸಮರ್ಥಕರಾದ ಲಿನ್, ಚೀನಾದ ಸಾಧನೆಯನ್ನು ತಡೆಯಲಾಗದವರು ಮಾತ್ರ ಇದನ್ನು ವಿರೋಧಿಸುತ್ತಾರೆ ಎಂದು ಅನೇಕ ಬಾರಿ ಸ್ಪಷ್ಟವಾಗಿ ಹೇಳಿದ್ದಾರೆ. ಈ ಬಿಆರ್‌ಐ ಯೋಜನೆಯು ಭಾರತದ ಸಾರ್ವಭೌಮತೆಗೆ ಧಕ್ಕೆ ಉಂಟು ಮಾಡುತ್ತದೆ ಎಂಬ ಕಾರಣಕ್ಕೆ ಭಾರತ ಈಗಲೂ ವಿರೋಧ ಮಾಡುತ್ತಲೇ ಬಂದಿದೆ. ಆದರೆ ಸ್ನೇಹದ ಕುರಿತ ವೇದಿಕೆಯೊಂದಕ್ಕೆ ಆಕ್ರಮಣಕಾರಿ ಮನೋಭಾವದ ವ್ಯಕ್ತಿಯನ್ನು ಚೀನಾ ನೇಮಕ ಮಾಡಿರುವುದರಿಂದಲೇ ಈ ಸಿಪಿಎಎಫ್‌ಎಫ್‌ಸಿ ಒಟ್ಟಾರೆ ಮನೋಭಾವನೆ ತಿಳಿಯುತ್ತದೆ.



ಅನೇಕ ಸಂದರ್ಭಗಳಲ್ಲಿ ಇಂಡೋ-ಚೀನಾ ರೆಂಡ್‌ಷಿಪ್‌ ಅಸೋಸಿಯೇಷನ್‌ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಕರ್ನಾಟಕದ ಪ್ರಮುಖ ರಾಜಕಾರಣಿಗಳು ಹಾಗೂ ಆಹ್ವಾನ ಪತ್ರಿಕೆ.

ದೇಶ ವಿದೇಶಗಳಲ್ಲಿ ಚೀನಾ ಕಮ್ಯುನಿಸ್ಟ್ ಪಕ್ಷದ ಆಡಳಿತಕ್ಕೆ ಅಧಿಕೃತತೆ ಒದಗಿಸಿಕೊಡುವುದು ಈ ಸಂಸ್ಥೆಯ ಉದ್ದೇಶ. ಆಯಾ ದೇಶದ ಪ್ರಮುಖ ರಾಜಕೀಯ, ಸಾಂಸ್ಕೃತಿಕ ನಾಯಕರ ಗಮನ ಸೆಳೆಯುವುದು. ಉಚಿತವಾಗಿ ಕ್ಯುರೇಟೆಡ್ ಚೀನಾ ಪ್ರವಾಸ ಆಯೋಜಿಸುವುದು. ಕಮ್ಯುನಿಸ್ಟ್ ಪಕ್ಷದ ಸರ್ಕಾರದ ಆಡಳಿತದಲ್ಲಿನ ದಕ್ಷತೆ, ಶಿಸ್ತು, ಅದರಿಂದ ದೇಶದ ಕೃಷಿ, ಕೈಗಾರಿಕೆ, ಶಿಕ್ಷಣ ವ್ಯವಸ್ಥೆಯಲ್ಲಿ ಉಂಟಾಗಿರುವ ಅಗಾಧ ಸುಧಾರಣೆಗಳನ್ನು ಪ್ರವಾಸಿಗರ ಮನಸ್ಸಿನಲ್ಲಿ ಬಿತ್ತುವುದು. ಭಾರತದಲ್ಲಿ ಫ್ರೆಂಡ್‌ಷಿಪ್ ಅಸೋಸಿಯೇಷನ್‌ಗಳ ಮೂಲಕ ಕಾರ್ಯಕ್ರಮಗಳನ್ನು ಆಯೋಜಿಸಿ ಭಾರತ-ಚೀನ ಪಾರಂಪರಿಕ ಸಾಂಸ್ಕೃತಿಕ ಸಂಬಂಧಗಳ ಬಗ್ಗೆ ಹೊಗಳುವುದು ಇದರ ಉದ್ದೇಶ. ಅಷ್ಟಕ್ಕೂ ಪ್ರಾಚೀನ ಚೀನ ಹಾಗೂ ಭಾರತದ ಸಂಸ್ಕೃತಿಯ ನಡುವೆ ಅನೇಕ ಸಾಮ್ಯತೆಗಳಿವೆ. ಆದರೆ ಈಗ 7 ದಶಕದಿಂದ ಚೀನಾದಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೂ ಆ ಸಂಸ್ಕೃತಿಗೂ ಸಂಬಂಧವಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿಯುವುದಿಲ್ಲ.


ಇಂತಹ ಪ್ರವಾಸ ಆಯೋಜನೆಯ ಬಲೆಗೆ ಭಾರತದ, ಅದರಲ್ಲೂ ಕರ್ನಾಟಕದ ರಾಜಕಾರಣಿಗಳೂ ಬಿದ್ದಿದ್ದಾರೆ. 2001ರಲ್ಲಿ ಈ ರೀತಿಯ ಕರ್ನಾಟಕದ ನಿಯೋಗದಲ್ಲಿ ಸಿದ್ದರಾಮಯ್ಯ, ಕಾಗೋಡು ತಿಮ್ಮಪ್ಪ, ಬಿ.ಎಲ್. ಶಂಕರ್, ಮೋಹನ್ ಕೊಂಡಜ್ಜಿ, ಆರ್.ವಿ. ದೇಶಪಾಂಡೆ, ಸಿ. ಭೈರೇಗೌಡ ಮುಂತಾದವರು ತೆರಳಿದ್ದರು. ಇದೀಗ ಅಖಿಲ ಭಾರತ ಪಟ್ಟದ ಐಸಿಎಎಫ್‌ಗೆ ಕರ್ನಾಟಕದವರೇ ಆದ ಹಿರಿಯ ರಾಜಕಾರಣಿ ಪಿ.ಜಿ.ಆರ್. ಸಿಂಧ್ಯಾ ಅಧ್ಯಕ್ಷರು. ಕರ್ನಾಟಕ ಶಾಖೆಗೆ ಕೋಲಾರ ಶಾಸಕ ಕೆ. ಶ್ರೀನಿವಾಸ ಗೌಡ ಅಧ್ಯಕ್ಷರು, ವಿ. ಭಾಸ್ಕರನ್ ಪ್ರಧಾನ ಕಾರ್ಯದರ್ಶಿ. 2020ರ ಜ.19ಕ್ಕೆ ಕ್ಯಾಪಿಟಲ್ ಹೋಟೆಲ್‌ನಲ್ಲಿ ಐಸಿಎಫ್‌ಎನ 70ನೇ ವರ್ಷದ ಕಾರ್ಯಕ್ರಮ ನಡೆಯಿತು. ಭಾರತಲ್ಲಿರುವ ಚೀನಾ ರಾಯಭಾರಿ ಸನ್ ವೀಡಾಂಗ್ ಸೇರಿ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಚೀನಾವನ್ನು ಹಾಡಿ ಹೊಗಳಿದ್ದರು.

ಈ ಹಿಂದೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಮಾಜಿ ಮಂತ್ರಿ ಎಂ.ವಿ. ರಾಜಶೇಖರನ್ ಅವರು ಸೇರಿ ದೇಶದ ಗಣ್ಯ ರಾಜಕಾರಣಿಗಳನ್ನು ಈ ಕಾರ್ಯಕ್ರಮಗಳಿಗೆ ಆಹ್ವಾನಿಸಿ ಚೀನಾ-ಭಾರತ ಸಂಬಂಧಗಳ ಬಗ್ಗೆ ಮೃದುಧೋರಣೆ ಮೂಡಿಸುವ ಕೆಲಸ ಆಗಿದೆ. ಇದೇ ಮುಂದುವರಿದ ಭಾಗವಾಗಿ ಕರ್ನಾಟಕದಲ್ಲಿ 2004ರಲ್ಲಿ ನಡೆದ ಐಸಿಎಫ್‌ಎ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಜ್ಯದ ಹಿರಿಯ ರಾಜಕಾರಣಿ ಹಾಗೂ ಅಂದಿನ ಕೇಂದ್ರ ಸಚಿವ ದಿವಂಗತ ಎಂ.ವಿ. ರಾಜಶೇಖರನ್ ಅವರು, ಚೀನಾದ ಇತ್ತೀಚಿನ ಭೇಟಿಯಿಂದ ತಮ್ಮ ಮೇಲೆ ಬೀರಿದ್ದ ಪ್ರಭಾವವನ್ನು ವರ್ಣಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ, ಸ್ಪೀಕರ್ ಕೃಷ್ಣ ಸಹ ಭಾಗವಹಿಸಿದ್ದರು. ಇಂತಹ ಬಹುತೇಕ ಕಾರ್ಯಕ್ರಮಗಳಿಗೆ ಭಾರತದಲ್ಲಿರುವ ಚೀನಾ ರಾಯಭಾರಿ ಆಗಮಿಸುತ್ತಾರೆ, ಚೀನಾದ ಸಾಧನೆಗಳನ್ನು ವಿವರಿಸುತ್ತಾರೆ. ಇದರಿಂದಾಗಿಯೇ, ಭಾರತದಲ್ಲಿ ಪಾಕಿಸ್ತಾನದ ವಿರುದ್ಧ ವ್ಯಕ್ತವಾದಷ್ಟು ಧೋರಣೆಗಳು ಚೀನಾ ವಿರುದ್ಧ ಆಗುವುದೇ ಇಲ್ಲ. ಹಾಗೆಂದು ಈ ಸಂಘಟನೆ ಜತೆಗೆ ಗುರುತಿಸಿಕೊಂಡ ಮೇಲಿನ ಯಾವುದೇ ರಾಜಕೀಯ ನಾಯಕರ ದೇಶಭಕ್ತಿ ಪ್ರಶ್ನಿಸುವುದು ಇಲ್ಲಿನ ಉದ್ದೇಶವಲ್ಲ. ಅವರಿಗೇ ಅರಿವಿಲ್ಲದಂತೆ ಚೀನಾ ಯಾವ ರೀತಿ ತನ್ನ ಕೆಲಸವನ್ನು ಮಾಡಿಕೊಳ್ಳುತ್ತಿದೆ ಎಂಬುದನ್ನು ಗಮನಿಸಬೇಕು.

ನೇರವಾಗಿ ಕಮ್ಯುನಿಸ್ಟರ ಜತೆಗೆ ಗುರುತಿಸಿಕೊಂಡವರು 1962ರ ಯುದ್ಧದಲ್ಲಿ ಭಾರತದ ಸೇನೆಯನ್ನೇ ಟೀಕಿಸಿದ್ದರು. ಆದರೆ ಇದೀಗ ಚೀನಾದ ಈ ಸ್ನೇಹ ಜಾಲಕ್ಕೆ ಸಿಲುಕುವ ಅನೇಕ ನೀತಿ ನಿರೂಪಕರು ಚೀನಾ ವಿರುದ್ಧ ಮಾತನಾಡದೆ ಮೌನಕ್ಕೆ ಶರಣಾಗುತ್ತಾರೆ. ಅಷ್ಟರ ಮಟ್ಟಿಗೆ ಚೀನಾ ಗೆದ್ದಂತೆ. ದೇಶದೊಳಗಿನವರ ಮನಸ್ಸಿನಲ್ಲಿ ತನ್ನ ಪರ ಧೋರಣೆಯನ್ನು ಬಿತ್ತಿ ಬಿಆರ್‌ಐನಂತಹ ಭಾರತ ವಿರೋಧಿ ಯೋಜನೆಯನ್ನು ಸಲೀಸಾಗಿ ಜಾರಿಗೊಳಿಸುವುದು ಚೀನಾದ ಉದ್ದೇಶ. ಭವಿಷ್ಯದಲ್ಲಿ ಬಿಆರ್‌ಐ ಕುರಿತ ಚರ್ಚೆ ಸಂಸತ್ತಿನಲ್ಲೊ, ಸಾರ್ವಜನಿಕ ವಲಯದಲ್ಲೊ ಬಂದರೆ ಈ ಮೃದುಧೋರಣೆ ಹೊಂದಿರುವ ನಾಯಕರು ಚೀನಾ ಸಹಾಯಕ್ಕೆ ಬಂದೇ ಬರುತ್ತಾರೆ ಎಂಬ ನಂಬಿಕೆ ಆ ದೇಶದ್ದು.


(ವರದಿಯನ್ನು ಬೇರೆಡೆ ಬಳಸಬಹುದು. ಪೂರ್ಣ ಪ್ರಮಾಣದಲ್ಲಿ ಅಥವಾ ಭಾಗಶಃ ಬಳಸಿಕೊಂಡರೆ ಮೂಲ ಲೇಖಕರ ಹಾಗೂ ಬ್ಲಾಗ್‌ ವಿಳಾಸವನ್ನು ನಮೂದಿಸುವಂತೆ ಮನವಿ

ಭಾನುವಾರ, ಡಿಸೆಂಬರ್ 13, 2020

‘ಪ್ರಾಕ್ಟೀಸಿಂಗ್ ಹಿಂದು’ ಬನ್ನಂಜೆ ಗೋವಿಂದಾಚಾರ್ಯ

‘ಬಹಳ ಮಠಗಳು ನಾಟಕ ಕಂಪನಿ ನಡೆಸುತ್ತವೆ....ಒಬ್ಬರು ನೂರೆಂಟು ಶ್ರೀ ಬೇಕೆಂದರೆ ಮತ್ತೊಬ್ಬರು ಸಾವಿರದೆಂಟು ಶ್ರೀ ಇರಲಿ ಎನ್ನುತ್ತಾರೆ...  ಸ್ವಾಮಿಗಳಿಗೆ ಸುತ್ತಮುತ್ತ ಬೇಲಿಗಳಿರುತ್ತವೆ. ಹೊರಗಿನ ಪ್ರಪಂಚದಲ್ಲಿ ಏನು ಆಗುತ್ತಿದೆ ಎಂಬುದು ಅವರಿಗೆ ತಿಳಿಯದಂತೆ ಮಾಡಲಾಗಿರುತ್ತದೆ. ಪ್ರಪಂಚದ ನಿಜಸತ್ಯ ತಿಳಿಯುವುದು ಬಹಳ ಕಷ್ಟ.... ನನಗೂ ಒಂದು ಆಶ್ರಮ ಕೊಡುವ ಪ್ರಸ್ತಾವನೆ ಬಂದಿತ್ತು. ದಮ್ಮಯ್ಯ ನನ್ನನ್ನು ನಾನಾಗಿರಲು ಬಿಟ್ಟುಬಿಡಿ ಎಂದೆ’

ಹೀಗೆ ಮಠಗಳ ಕುರಿತು ಯಾರೇ ಮಾತನಾಡಿದರೂ ಆಸ್ತಿಕರಿಗೆ ಸಿಟ್ಟು ಬರುವುದು ಸಹಜ. ಆದರೆ 2015ರ ಡಿಸೆಂಬರ್ 27ರಂದು ಈ ಮಾತಿಗೆ ಎದುರು ಕುಳಿತ ಸಾವಿರಾರು ಜನರು ಮುಗುಳ್ನಕ್ಕು ಸುಮ್ಮನಾದರು, ಕೆಲವರು ಚಪ್ಪಾಳೆ ತಟ್ಟಿದರು. ಅಲ್ಲಿದ್ದವರಲ್ಲಿ ಶೇ.100 ಜನರು ಆಸ್ತಿಕರೇ ಆಗಿದ್ದು, ಅನೇಕ ಮಠಗಳ ಸ್ವಾಮೀಜಿಗಳೂ ಇದ್ದರು ಎಂಬುದು ವಿಶೇಷ. ಈ ಮಾತುಗಳನ್ನಾಡಿದವರು ಬನ್ನಂಜೆ ಗೋವಿಂದಾಚಾರ್ಯ. 2015ರ ಡಿಸೆಂಬರ್ 23ರಿಂದ ಬೆಂಗಳೂರಿನ ದಯಾನಂದ ಸಾಗರ ಕಾಲೇಜಿನಲ್ಲಿ ಆಯೋಜಿಸಿದ್ದ ಐದು ದಿನಗಳ ‘ಬನ್ನಂಜೆ 80ರ ಸಂಭ್ರಮ’ದಲ್ಲಿ ಈ ಮಾತನ್ನಾಡಿದ್ದರು. ‘ವಿಜಯವಾಣಿ’ಗೆ ಕಾರ್ಯಕ್ರಮದ ವರದಿ ಮಾಡಲು ತೆರಳಿದ್ದು ನನಗೆ ಎಂದೂ ಮರೆಯದ ಅನುಭವ. ಇದೇ ಕಾರ್ಯಕ್ರಮದ ಸಮಾರೋಪದಲ್ಲಿ ಬನ್ನಂಜೆ ಎಂದಿನಂತೆ ಮನಬಿಚ್ಚಿ ಮಾತಾಡಿದ್ದರು.

ಅವರೊಬ್ಬ ‘ಪ್ರಾಕ್ಟೀಸಿಂಗ್ ಹಿಂದು’. ಹಿಂದು ಸಮಾಜ ಎಂದಿಗೂ ಟೀಕೆಗಳಿಗೆ ಹಿಂಜರಿಯುವುದಿಲ್ಲ. ಆದರೆ ಆ ಟೀಕೆ ಯಾರಿಂದ ಬರುತ್ತದೆ ಎಂಬುದು ಮಾತ್ರ ಮುಖ್ಯ. ತಮ್ಮ ವೈಯಕ್ತಿಕ ಜೀವನವನ್ನು ಶುದ್ಧವಾಗಿಟ್ಟುಕೊಂಡು, ಸಂಸ್ಕೃತಿಯನ್ನು ಪಾಲನೆ ಮಾಡಿದವರಾದರೆ ರಾಮನಂಥ ರಾಮನನ್ನು, ಸೀತೆಯಂಥ ಸೀತೆಯನ್ನೂ ವಸ್ತುನಿಷ್ಠವಾಗಿ ವಿಶ್ಲೇಷಣೆ ಮಾಡಿ ಜಯಿಸಿಕೊಳ್ಳಬಹುದು ಎಂಬುದಕ್ಕೆ ಡಾ. ಎಸ್. ಭೈರಪ್ಪನವರೇ ಸಾಕ್ಷಿ. ಆದರೆ ಅದೇ ಯು.ಆರ್. ಅನಂತಮೂರ್ತಿಯವರ ಟೀಕೆಯನ್ನು ಸಮಾಜ ಸಹಿಸಲಿಲ್ಲ, ಏಕೆಂದರೆ ಸಾಂಸ್ಕೃತಿಕ ವಿಚಾರದಲ್ಲಿ ಮಾತನಾಡಲು ಅವರೊಬ್ಬ ‘ಹೊರಗಿನವರು’ ಎಂಬ ಭಾವನೆ ಬೇರೂರಿತ್ತು. ‘ಇನ್‌ಸೈಡ್ ಕ್ರಿಟಿಕ್’ ಬನ್ನಂಜೆ ಮಾಡಿದ ಟೀಕೆಯನ್ನು ಸಹರ್ಷದಿಂದ ಜನರು ಸ್ವೀಕರಿಸಿದ್ದರು.

ಸುಖಾಸುಮ್ಮನೆ ಎಲ್ಲರ ವಿರುದ್ಧ ಮಾತನಾಡುತ್ತಾರೆ ಎಂಬ ಆರೋಪ ಬನ್ನಂಜೆ ಅವರ ಮೇಲೆ ಇದ್ದೇ ಇತ್ತು. ಬನ್ನಂಜೆ ಅವರೇ ಹೇಳಿದಂತೆ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿಯವರನ್ನೂ ಅವರು ಟೀಕಿಸದೇ ಬಿಟ್ಟಿಲ್ಲ. ಆದರೆ 80ರ ಸಂಭ್ರಮ ಕಾರ್ಯಕ್ರಮಕ್ಕೆ ವಿಶ್ವೇಶತೀರ್ಥರು ಆಗಮಿಸಿ ಹರಸಿದರು. ‘ಉಡುಪಿಯಲ್ಲಿ ಕೃಷ್ಣ ತಿರುಗಿಲ್ಲ ಎಂಬುದು ಅಲ್ಲಿನ ವಾಸ್ತು ನೋಡಿದರೆ ತಿಳಿಯಬಹುದು. ಈ ವಿಚಾರ ಸ್ವತಃ ಪೇಜಾವರರಿಗೆ ತಿಳಿದಿದ್ದರೂ ಯಾರೋ ಬೇಸರಪಟ್ಟುಕೊಳ್ಳುತ್ತಾರೆ ಎಂಬ ಕಾರಣಕ್ಕೆ ಸತ್ಯ ಹೇಳುತ್ತಿಲ್ಲ’ ಎಂದು ಅಲ್ಲಿಯೂ ಬನ್ನಂಜೆ ಹೇಳಿದ್ದರು. ಆದರೆ ಮರು ಕ್ಷಣವೇ ‘ಮಠಮಾನ್ಯಗಳಿಂದ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸುವ ಕೆಲಸ ಆಗುತ್ತಿರುವುದು ಸಂತಸದ ವಿಚಾರ‘ ಎಂಬ ಸತ್ಯವನ್ನೂ ಅಷ್ಟೇ ಸಹಜವಾಗಿ ಹೇಳುತ್ತಿದ್ದರು ಬನ್ನಂಜೆ.

ಯಾವುದೇ ಪ್ರವಚನ ಆರಂಭಕ್ಕೆ ಮುನ್ನ ಅವರು ಹೇಳುತ್ತಿದ್ದ ಸಾಲುಗಳನ್ನು ಹಾಗೆಯೇ ಓದಿದರೂ, ಅದು ಬನ್ನಂಜೆ ಅವರ ಧ್ವನಿಯಲ್ಲೇ ಕೇಳಿಸುತ್ತದೆ.

ಜಯತಿ ಪರಾಶರ ಸೂನುಃ ಸತ್ಯವತೀಹೃದಯ ನಂದನೋ ವ್ಯಾಸಃ 

ಯಸ್ಯಾಸ್ಯಕಮಲಗಲಿತಂ ವಾಜ್ಮಯಮ್ ಅಮೃತಂ ಜಗತ್ಬಿಬತಿ ॥

ಭುಜಗಭೋಗಾಭಮುದ್ಯಮ್ಯ ಹೃದ್ಯಂ ನಿಜಭುಜಂ ದಕ್ಷಿಣಂ ಲಕ್ಷಣಾಢ್ಯಮ್ 

ಲಳಿತಮುದ್ರಿಕ್ತವಿಜ್ಞಾನಮುದ್ರಂ ಭಜಭಜ ಅನಂತಮಿತ್ಯಾಲಪಂತಮ್ ॥

ಪ್ರಣತವಾನ್ ಪ್ರಾಣಿನಾಂ ಪ್ರಾಣಭೂತಂ ಪ್ರಣತಿಭಿಃ ಪ್ರೀಣಯೇ ಪೂರ್ಣಬೋಧಮ್ ॥

ಭವದವೋಷ್ಟೇನ ತಾತಪ್ಯಮಾನಾನ್ ಭುವಿ ಪರಂ ನಾಥಮಪ್ರೇಕ್ಷಮಾಣಾನ್ 

ಭುವನಮಾನ್ಯೇನ ಚ ಅನ್ಯೇನ ದೋಷ್ಟಾ ಭವತು ಭೀರ್ಮೇತಿ ನಃ ಸಾಸ್ತ್ವಯನ್ತಮ್ ॥

ಪ್ರಣತವಾನ್ ಪ್ರಾಣಿನಾಂ ಪ್ರಾಣಭೂತಂ ಪ್ರಣತಿಭಿಃ ಪ್ರೀಣಯೇ ಪೂರ್ಣಬೋಧಮ್ ॥


ಅವರ ವಾದಗಳಲ್ಲಿ, ವಿಚಾರಗಳಲ್ಲಿ ಅಧ್ವೈತ, ವಿಶಿಷ್ಟಾಧ್ವೈತ ಅನುಯಾಯಿಗಳಿಗೆ, ಅನೇಕ ಬಾರಿ ಧ್ವೈತ ಅನುಯಾಯಿಗಳಿಗೂ ಭಿನ್ನಾಭಿಪ್ರಾಯವಿರಬಹುದು. ಆದರೆ ದೇಶ, ಧರ್ಮ, ಭಾಷೆ, ಸಂಸ್ಕೃತಿ ಕುರಿತ ನಿಷ್ಠೆಯನ್ನು ಪ್ರಶ್ನಿಸಲು ಸಾಧ್ಯವೇ ಇಲ್ಲ.

ಬನ್ನಂಜೆ 80ರ ಸಂಭ್ರಮಕ್ಕೆ ಒಂದು ವರ್ಷ ಸಂದ ಸಂದರ್ಭದಲ್ಲಿ 2016ರ ಡಿಸೆಂಬರ್ 27ರಂದು ನಡೆದಿದ್ದ ‘ಬನ್ನಂಜೆ 80ರ ಸಂಭ್ರಮಕೆ ಒಂದು ವರುಷ’ ಕಾರ್ಯಕ್ರಮ ವರದಿಗೆ ತೆರಳುವ ಅವಕಾಶವೂ ಸಿಕ್ಕಿತ್ತು. ಈ ಸಂದರ್ಭದಲ್ಲಿ ಬನ್ನಂಜೆ ಹೇಳಿದ ಮಾತು ‘‘ಯಾವುದೇ ಕೆಲಸ ಮಾಡುವ ಮುನ್ನ ಅದನ್ನು ತಿಳಿಯಬೇಕು, ಶ್ರದ್ಧೆಯಿಂದ ಮುಂದುವರಿಯಬೇಕು. ತಿಳುವಳಿಕೆ ಮೂಡುವವರೆಗೂ ಪ್ರಶ್ನಿಸುತ್ತಲೇ ಇರಬೇಕು. ಋಷಿ ಮುನಿಗಳ ಕಾಲದಿಂದಲೂ ಇದ್ದ ಪ್ರಶ್ನೆ ಕೇಳುವ ಪದ್ಧತಿ ತಪ್ಪಿ ಹೋಗಿದ್ದಕ್ಕೆ ನಮ್ಮ ಹಿರಿಯರು ಕಾರಣ. ಮಕ್ಕಳು ಪ್ರಶ್ನಿಸಿದಾಗ ಉತ್ತರ ಹೇಳಲು ಅಶಕ್ತರಾಗಿದ್ದವರು ದಬಾಯಿಸಿದರು. ಪ್ರಶ್ನೆ ಮಾಡಿದರೆ ನರಕ ಪ್ರಾಪ್ತಿಯಾಗುತ್ತದೆ ಎಂದು ಬೆದರಿಸಿದರು. ಹೀಗೆ ಅನೇಕರಿಂದ ದಬಾಯಿಸಿಕೊಂಡು ಪ್ರಶ್ನೆ ಕೇಳುವುದನ್ನೆ ಬಿಟ್ಟಿದ್ದೆ. ಆದರೆ ಒಮ್ಮೆ ನನ್ನ ತಂದೆಯವರು, ‘ಪ್ರಶ್ನೆ ಕೇಳುವ ಶಕ್ತಿಯಿರುವವನು ಉತ್ತರವನ್ನೂ ಕಂಡುಕೊ’ ಎಂದರು. ಆ ಮಾತು ನನ್ನನ್ನು ಅಂತರ್ಮುಖಿಯನ್ನಾಗಿಸಿತು.’

ಈಗಾಗಲೆ ಭಾಗವತ ಭಾಷ್ಯ ರಚನೆ ಚಾಲ್ತಿಯಲ್ಲಿದೆ. ಋಗ್ವೇದದ ಪವಮಾನ ಮಂಡಲಕ್ಕೆ ಭಾಷ್ಯ ಬರೆಯುವ ಇಚ್ಛೆಯಿದೆ. ನನ್ನಲ್ಲಿ ಅಹಂಕಾರ ಬರದಂತೆ ಎಲ್ಲರೂ ಹರಸಿ ಎಂದಿದ್ದರು. ‘ನನಗೆ ಕೆಲವು ಕನಸುಗಳಿವೆ. ಇನ್ನು ಮುಂದೆಯೂ ಆ ಕನಸುಗಳು ನನಸು ಆದೀತು. ಕನಸುಗಳು ನನಸಾಗದೇ ಸಾಯಬಾರದು ಎಂದು ಅಂದುಕೊಂಡಿದ್ದೇನೆ, ಭಗವಂತ ನನ್ನನ್ನು ಹರಸಿ....’ ಎನ್ನುತ್ತ ಮೈಕ್ ಹಿಡಿದು ಗದ್ಗದಿತರಾಗಿದ್ದ ಬನ್ನಂಜೆ ಅವರ ಮಾತು ಈಗಲೂ ಕೇಳಿಸುತ್ತಿದೆ. ಅವರ ಆತ್ಮಕ್ಕೆ ಸದ್ಗತಿ ದೊರಕಲಿ.


-ರಮೇಶ ದೊಡ್ಡಪುರ

ಭಾನುವಾರ, ನವೆಂಬರ್ 01, 2020

ವಿಧಾನಸೌಧದಲ್ಲಿ “ಚೆಲ್ಲಿದರು ಮಲ್ಲಿಗೆಯ”: ಕರ್ನಾಟಕಕ್ಕೆ ಜಯವಾಗಲಿ ಎಂದ ದಿನ ಇಂದು

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ದೇವರಾಜ ಅರಸು ಭಾಷಣ. 1973, ನವೆಂಬರ್‌ 1

1956ರಿಂದ ಮೈಸೂರು ರಾಜ್ಯವೆಂದಿದ್ದ ಪ್ರದೇಶ 1973ರ ನವೆಂಬರ್‌ 1ರಿಂದ "ಕರ್ನಾಟಕ ರಾಜ್ಯ”ವಾಯಿತು. ಕರ್ನಾಟಕಕ್ಕೆ ಜಯವಾಗಲಿ ಎಂಬ ಘೋಷಣೆ ಅಧಿಕೃತವಾಗಿ ಮೊಳಗಿದ ಮೊದಲ ದಿನ ಅದು. ಮುಖ್ಯಮಂತ್ರಿ ದೇವರಾಜ ಅರಸು ಕರ್ನಾಟಕದ ನಾಮಕರಣ ಘೋಷಣೆ ಮಾಡುತ್ತಿದ್ದಂತೆಯೇ ಶಾಸಕರಾದ ವಾಟಾಳ್‌ ನಾಗರಾಜ್‌ ಹಾಗೂ ಎಸ್‌. ಬಂಗಾರಪ್ಪ ಅಕ್ಷರಶಃ ಸದನದಲ್ಲಿ ಮಲ್ಲಿಗೆ ಹೂಗಳ ಮಳೆ ಸುರಿಸಿದರು. ದೇವರಾಜ ಅರಸರು ಮಾಡಿದ ಪ್ರಸ್ತಾವನೆಯ ಭಾಷಣ ಹಾಗೂ ನಾಮಕರಣಕ್ಕೆ ಒಪ್ಪಿಗೆ ದೊರೆತ ಅಪೂರ್ವ ಘಳಿಗೆಯ ಯಥಾವತ್‌ ವರದಿ ಇಲ್ಲಿದೆ.

--------------------------

ಮಾನ್ಯ ಅಧ್ಯಕ್ಷರೇ:
ವಿಶಾಲ ಮೈಸೂರಿನ ಮುಖ್ಯಮಂತ್ರಿಯಾದ ನಾನು, ರಾಜ್ಯದ ಹೆಸರನ್ನುಕರ್ನಾಟಕಎಂದು ಮಾರ್ಪಡಿಸುವ ಸರ್ಕಾರದ ನಿರ್ಣಯವನ್ನು ಸಭೆಯ ಮುಂದೆ ಮಂಡಿಸುತ್ತೇನೆ.ಈ ದಿವಸ ನಮ್ಮ ದೇಶದ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯದ ದಿವಸ. ವಿಶಾಲ ಮೈಸೂರು ಆದ ಮೇಲೆ, ಈ ರಾಜ್ಯದ ಹೆಸರು ಬದಲಾವಣೆ ಆಗಬೇಕೆಂಬ ವಿಚಾರ ನಮ್ಮಇಡೀ ರಾಜ್ಯದ ಜನತೆಯ ಮನಸ್ಸನ್ನು ಸೆಳೆದು,
ಆ ಒಂದು ಮಹತ್ವದ ವಿಷಯ ಇದುವರೆಗೂ ಇತ್ಯರ್ಥವಾಗದೆ ಹಾಗೆಯೇ ವಿಚಾರದಲ್ಲಿಯೇ ಉಳಿದು ಬಂದಿದೆ. ಬಹು ಜನರ ಅಪೇಕ್ಷೆ ಬದಲಾವಣೆ ಆಗಬೇಕೆಂಬುದಾಗಿದ್ದರೂ ಅದಕ್ಕೆ ಒಂದು ಪ್ರಬಲ ವಿರೋಧವಿತ್ತು ಎಂದು ನನಗೆ ಗೊತ್ತು. ಆ ಕಾಲದಲ್ಲಿ ರಾಜ್ಯ ಎರಡು ಆಗಬೇಕು ಒಂದು ಆಡಳಿತ ದೃಷ್ಟಿಯಿಂದ, ಇನ್ನೊಂದು ಶಾಸ್ತ್ರೀಯ ದೃಷ್ಟಿಯಿಂದ, ಎಂದು ಹೇಳುವುದರಲ್ಲಿ ನಾನೂ ಒಬ್ಬನಾಗಿದ್ದೆ.
ಮೊದಲು ಕನ್ನಡ ಜನ ಎಲ್ಲಾ ಒಂದು ಕಡೆ ಸೇರೋಣ. ಅದು ಆಗಲಿ ಅನಂತರ ಹೆಸರಿನ ಬದಲಾವಣೆಯ ಬಗ್ಗೆ ನಿಧಾನವಾಗಿ ಯೋಜನೆ ಮಾಡಿ, ಇತರರು ಇದನ್ನು ಮನ ಒಲಿದು ಒಪ್ಪವ ರೀತಿ ಮಾಡಿ ಬದಲಾಯಿಸೋಣ ಎಂದು ಅದನ್ನು ಹಾಗೇ ಇಟ್ಟುಕೊಂಡರು. ಜನತೆ ಒಂದು ಕಡೆ ಹೆಸರು ಬದಲಾವಣೆ ಆಗಬೇಕು ಎಂದು ಇಚ್ಛೆಪಡುತ್ತಾ ಬಂದಿದ್ದರೆ, ಶಾಸನ ಸಭೆಯ ಆಡಳಿತ ಪಕ್ಷದವರು ಇದನ್ನು ಮುಂದೂಡಿಕೊಂಡು ಬಂದಿದ್ದಾರೆ.
1969ನೇ ಜುಲೈ ಕಾಂಗ್ರೆಸ್‌ ಪಕ್ಷದ ಚರಿತ್ರೆ ಬದಲಾವಣೆ ಆಯಿತು. ಆ ಬದಲಾವಣೆಯ ಪರಿಣಾಮವಾಗಿ ನಾವು ಇಲ್ಲಿ ಈ ಸಭೆಯಲ್ಲಿದ್ದೇವೆ. 1970-71ರಲ್ಲಿ ನಡೆದಂಥ ಮಧ್ಯಂತರ ಚುನಾವಣೆ ಕಾಲದಲ್ಲಿ ಅಲ್ಲಲ್ಲಿ ಈ ಹೆಸರು ಬದಲಾವಣೆ ಬಗ್ಗೆ ಬಹಿರಂಗವಾಗಿ, ಅಂತರಂಗವಾಗಿ ವಾದ-ವಿವಾದಗಳು ನಡೆಯುತ್ತಿದ್ದವು. ಮದ್ಯಂತರ ಚುನಾವಣೆ ಆದ ಮೇಲೆ 1972ರ ಚುನಾವಣೆಯ ಕಾಲಕ್ಕೆ ಈ ಹೆಸರಿನ ವಿಚಾರ ಬಹಳ ಪ್ರಬಲವಾಗಿ ಜನಸಾಮಾನ್ಯರ ಮನಸ್ಸನ್ನು ಸೆಳೆಯುವುದಕ್ಕೆ ಒಂದು ಕಾರಣವಾಯಿತು. ಈ ರಾಜಕೀಯ ತಿಕ್ಕಾಟದಲ್ಲಿ ನಾನು ಒಂದು ಕಡೆ ಮಾಡಿದಂಥ ಭಾಷಣದಿಂದ ಸ್ವಲ್ಪ ಕಿಡಿ ಹಾರಿತು. ಅದು ದೇಶದಾದ್ಯಂತ ವ್ಯಾಪ್ತಿಗೊಂಡಿತು.



ನನ್ನ ಅಭಿಪ್ರಾಯ ಏನೇ ಇರಲಿ. ಶ್ರೀ ಸಾಮಾನ್ಯರ ಅಭಿಪ್ರಾಯದಲ್ಲಿ ಅವರಿಗೆ ಈ ಬದಲಾವಣೆಯಿಂದ ಒಂದು ಆನಂದ, ಒಂದು ತೃಪ್ತಿ, ಒಂದು ಸಮಾಧಾನ, ಒಂದು ಭಾವೈಕ್ಯತೆ ಬರುವುದಾದರೆ ನಮಗೆ ಅದರಿಂದ ತೊಂದರೆ ಆಗುವುದು ಏನೂ ಇಲ್ಲ ಸಂತೋಷ ಎಂದು ಹೇಳುವುದರ ಜೊತೆಗೆ ನಾಳೆ ಚುನಾವಣೆ ಆದ ಮೇಲೆ ನಮ್ಮಪಕ್ಷ ಬಹುಮತ ಪಡೆದು ಬಂದು ಅಧಿಕಾರವನ್ನು ಪಡೆಯುವುದಾದರೆ ಸಭೆಯಲ್ಲಿ ಚರ್ಚೆ ಮಾಡಿ, ಶಾಸನ ಸಭೆಯಲ್ಲಿ ಚರ್ಚೆ ಮಾಡಿ, ಶಾಸನ ಸಭೆಯಲ್ಲಿ ನಿಮ್ಮಪ್ರತಿನಿಧಿಗಳು ಯಾರು ಇರುತ್ತಾರೆ ಅವರ ಅಭಿಪ್ರಾಯದಂತೆ ಹೋಗುವುದಕ್ಕೆ ನನ್ನ ಅಡ್ಡಿ ಇಲ್ಲ. ಹೆಸರು ಬದಲಾವಣೆ ಮಾಡೋಣ, ಬಹುಮತ ಅಭಿಪ್ರಾಯದಂತೆ ಹೋಗೋಣ ಎನ್ನುವ ಮಾತನ್ನು ಜನತೆಯ ಮುಂದೆ ನನ್ನ ಪಕ್ಷದ ಪರವಾಗಿ ಹೇಳಿದ್ದುಂಟು. ನಾನು, ನೀವು ಜನತೆಗೆ ಕೊಟ್ಟಂಥ ಮಾತನ್ನು ಉಳಿಸಿಕೊಳ್ಳುವುದಕೋಸ್ಕರ ಇವೊತ್ತು ತಮ್ಮ ಎಲ್ಲರ ಅಪ್ಪಣೆ ಪಡೆದು ಈ ಒಂದು "ಠರಾವನ್ನುನಾನು ಈ ಸಭೆಯ ಮುಂದೆ ಮಂಡಿಸುತ್ತಿದ್ದೇನೆ.

 

ಮತ್ತೆ ಈ ಹೆಸರು ಯಾವುದು ಇರಬೇಕು ಎನ್ನುವ ಬಗ್ಗೆ ಕೂಡ ನಮ್ಮನಾಡಿನಲ್ಲಿ ಬಹಳ ಕಾಲ ಚರ್ಚೆಡೆದಿದೆ. ಇಂತಹ ಬದಲಾವಣೆಯನ್ನು ಮಾಡುವುದು ಎಂದರೆ ಕರ್ನಾಟಕ'” ಎಂದು ಮಾಡಬಹುದು ಎನ್ನುವ ಒಂದು ನಿರ್ಣಯವನ್ನು ಇಲ್ಲಿ ಮಂಡಿಸಿದ್ದೇನೆ. ಕರ್ನಾಟಕ ಎನ್ನುವ ಹೆಸರನ್ನು ಹಿಂದೆ ರಾಜ್ಯಗುರುಗಳು ಉಪಯೋಗಿಸುತ್ತಿದ್ದರು. ಕರ್ನಾಟಕ ಸಿಂಹಾಸನಾಧೀಶ್ವರ ಎಂದು ಒಂದು ಕಾಲದಲ್ಲಿ ಮೈಸೂರು ರಾಜರು ಇಟ್ಟುಕೊಂಡಿದ್ದರು. ಹೊಯ್ಸಳರು ಕದಂಬರರೂ ಇಟ್ಟುಕೊಂಡಿದ್ದರು. ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಈ ಹೆಸರು ಬರುತ್ತಲೇ ಇತ್ತು. ಸಾಹಿತಿಗಳು ಸಾಹಿತ್ಯದಲ್ಲಿ ಕರ್ನಾಟಕಎಂಬ ಹೆಸರನ್ನು ಇಡಬಹುದೆಂದು ಹೇಳಿದ್ದಾರೆ. ಅದರಂತೆ ಇಲ್ಲಿ ನಿರ್ಣಯವನ್ನು ಮಂಡಿಸಿದ್ದೇನೆ.

ಒಂದೂವರೆ ತಿಂಗಳ ಹಿಂದೆ ಈ ಠರಾವನ್ನು ಕ್ಯಾಬಿನೆಟ್‌ ಮುಂದೆ ಬಂದಾಗ ಬಹು ಜನತೆ ಹಾಗೂ ಶಾಸಕರು ಅಭಿಪ್ರಾಯಪಡುವಂತೆ ನಮ್ಮರಾಜ್ಕಕ್ಕೆ ಒಂದು ಶಾಶ್ವತವಾದ ಹೆಸರನ್ನು ಇಟ್ಟು ಈಗಿನ ಹೆಸರನ್ನು ಬದಲಾವಣೆ ಮಾಡಬಹುದು ಎಂಬ ತೀರ್ಮಾನಕ್ಕೆ ಬಂದೆವು. ನಾನು ತಮ್ಮ ಮುಂದೆ ಠರಾದಿನಲ್ಲಿ ಕರ್ನಾಟಕಎಂದು ಏನು ಹೆಸರನ್ನು ಇಟ್ಟಿದ್ದೇನೋ, ಅದೇ ಬಹುಮತ ಅಭಿಪ್ರಾಯ ಎಂದು ನನ್ನ ನಂಬಿಕೆ. ನಮ್ಮಪಕ್ಷದಲ್ಲಿ ಕೂಡ ಇದನ್ನು ಚರ್ಚೆಮಾಡಿ ಎಲ್ಲರೂ ಒಪ್ಪುವಂತೆ ಠರಾವನ್ನು ಇಲ್ಲಿ ತಂದಿದ್ದೇನೆ. ಒಂದು ಸಂತೋಷದ ವಿಚಾರ ಎಂದರೆ ನಮ್ಮಪಕ್ಷದಲ್ಲಿ ಕಿಲವು ವಿಚಾರದಲ್ಲಿ ಅಭಿಪ್ರಾಯ ಭೇದಗಳು ಇದ್ದರೂ ಇದರಲ್ಲಿಲ್ಲ. ಎಲ್ಲರೂ ಇಂತಹ ಒಂದು ಬದಲಾವಣೆಯನ್ನು ಮಾಡಲು ಹೃದಯ ತುಂಬಿ ಒಪ್ಪಿದ್ದಾರೆ.

ಆದರೆ ಪ್ರಜಾಪ್ರಭುತ್ವದ ತತ್ವದ ನೀತಿಗೆ ಕಟ್ಟುಬಿದ್ದು ಬಹುಮತದ ಅಭಿಪ್ರಾಯದಂತೆ ಯಾವ ರೀತಿಯಲ್ಲಿ ಇರಬೇಕೆಂದು ತೀರ್ಮಾನ ಮಾಡುತ್ತಾರೋ ಆ ತೀರ್ಮಾನವನ್ನು ತೆಗೆದುಕೊಂಡು ಅದಕ್ಕೆ ನಾವೆಲ್ಲರೂ ಸಂತೋಷದಿಂದ ಒಪ್ಪಿಕೊಂಡು ಹೋಗೋಣ ಎಂದು ಎಲ್ಲರೂ ಒಂದು ದೊಡ್ಡ ಮನೋಭಾವವನ್ನು ಪ್ರದರ್ಶನ ಮಾಡಿದ್ದಾರೆ. ಇದು ಒಂದು ಹರ್ಷದ ಸಂಗತಿ. ನಾವೆಲ್ಲ ಮೈಸೂರು ಇಲ್ಲವೇ ಕರ್ನಾಟಕ ದೇಶದಲ್ಲಿರಲಿ, ಇಡೀ ಭಾರತ ದೇಶದಲ್ಲಿ ಸೇವೆ ಮಾಡುತ್ತಿದ್ದರೂ ಕಾಲ ಸನ್ನಿವೇಶಕ್ಕೆ ತಕ್ಕ ಹಾಗೆ ಆರ್ಥಿಕವಾಗಿ, ಐಹಿಕ ವಿಚಾರಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತಿದ್ದೇವೆ. ಇದು ಮನುಷ್ಯನಿಗೆ ತೃಪ್ತಿ ತರುವ ವಿಚಾರವಾಗಿದ್ದರೂ ಒಂದು ರೀತಿಯಲ್ಲಿ ಇದರಲ್ಲಿ ಹೊಂದಿಕೊಂಡು ಹೋಗುವ ಒಂದು ಭಾವನೆ ಬೆಳೆಯಬೇಕು.

ಇದು ಮನುಷ್ಯನಿಗೆ ಆನಂದವನ್ನು ತರುವ ಒಂದು ಸಂಗತಿಯಾಗಿದೆ. ಇಂತಹ ಒಂದು ಆನಂದವನ್ನು ಅನುಭವಿಸುತ್ತಿರುವ ಸದಸ್ಯರುಗಳನ್ನು ನೋಡಿ ನಾವೂ ಆ ಆನಂದದಲ್ಲಿ ಭಾಗಿಯಾಗಬೇಕು. ನಮ್ಮರಾಜ್ಯದ ಹೆಸರಿನ ಬದಲಾವಣೆಯಿಂದಾಗಿ ಅವರಿಗೆ ಆನಂದ ಹಾಗೂ ಸಂತೋಷ ಉಂಟಾಗುತ್ತದೆ. ಬಹುಜನರು ಎಂದರೆ ಈ ದೇಶದಲ್ಲಿರುವ ಬೇರೆ ಬೇರೆ ವರ್ಗದವರೂ ಸೇರುತ್ತಾರೆ. ಅನೇಕ ಸಾಹಿತಿಗಳು ಕರ್ನಾಟಕದಲ್ಲಿ ಇದ್ದಾರೆ. ಇಂತಹ ಸಾಹಿತಿಗಳಲ್ಲಿ ಹಿರಿಯರಿಂದ ಕಿರಿಯರವರೆಗೂ ಎಂದರೆ ಶ್ರೀಮಾನ್‌ ಬೇಂದ್ರೆಯವರು, ಹಾಗೂ ರಾಷ್ಟ್ರದ ದೊಡ್ಡ ಕವಿಗಳಾದ ಶ್ರೀಮಾನ್‌ ಕೆ. ವಿ. ಪುಟ್ಟಪ್ಪನವರು ಮತ್ತೆ ಇನ್ನಿತರ ಎಲ್ಲ ಸಾಹಿತಿಗಳೂ ಈಗಿರುವ ಹೆಸರನ್ನು ಬದಲಾವಣೆ ಮಾಡಿ ಕರ್ನಾಟಕ ಎಂದು ಮಾಡಬೇಕೆಂದು ಸತತವಾಗಿ ಒತ್ತಾಯ ಮಾಡುತ್ತಾ ಬಂದಿದ್ದಾರೆ.

ಬುದ್ಧಿ ಜೀವಿಗಳೂ ಕೂಡ ಹೆಸರು ಬದಲಾವಣೆಯಾಗಬೇಕೆಂದು ಹೇಳಿದ್ದಾರೆ. ವಿದ್ಯಾರ್ಥಿಗಳು, ಮಧ್ಯಮ ವರ್ಗದ ಜನರೂ, ಬದಲಾವಣೆ ಯಾಗಬೇಕೆಂದು ಹೇಳಿಕೊಂಡು ಬರುತ್ತಿದ್ದಾರೆ. ಅದೇ ರೀತಿ ಆಡಳಿತ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿರತಕ್ಕ ಜನ ಅಭಿಪ್ರಾಯಪಟ್ಟಿದ್ದಾರೆ. ಇದು ಅವರೆಲ್ಲರ ಹಿರಿದಾದ ಆಸೆ, ನಾವು ಜನತಾ ಪ್ರತಿನಿಧಿಗಳಾಗಿರುವುದರಿಂದ ಅವರ ಆಸೆಗೆ ಅಡ್ಡಿ ತರತಕ್ಕದ್ದು ಸೂಕ್ತವಲ್ಲ, ಇಷ್ಟೊಂದು ಜನಕ್ಕೆ ಸಂತೋಷವಾಗಬೇಕಾದರೆ ಅಂತಹ ಸಂತೋಷವಾಗಿರುವ ಜನತೆಯಲ್ಲಿ ನಾವೂ ಸಹ ಭಾಗಿಯಾಗೋಣ. ನಮ್ಮ ಕೈಲಾದ ಅಲ್ಪ ಸೇವೆಯನ್ನು ಸಲ್ಲಿಸೋಣ ಎನ್ನುವ ಒಂದು ಸಂತೋಷದಿಂದ ನಾನು ಇಲ್ಲಿ ಇಂತಹ ಒಂದು ನಿರ್ಣಯವನ್ನು ತರುವ ಕಾಲ ಬಂತಲ್ಲ ಎಂದು ಸಂತೋಷಿಸುತ್ತೇನೆ ಮತ್ತು ಇದರಲ್ಲಿ ನಮ್ಮ ಜವಾಬ್ದಾರಿಯೂ ಇದೆ ಎನ್ನುವ ಮಾತನ್ನು ಹೇಳಿ ಇಂತಹ ಒಂದು ನಿರ್ಣಯ ಇಲ್ಲಿ ಬಂದಿದೆ. ಇದನ್ನು ತಮ್ಮಅಪ್ಪಣೆ ಪಡೆದು ನಮ್ಮ ಈ ಸಭೆಯ ಮುಂದೆ ಇಟ್ಟಿದ್ದೇನೆ.

ಹಳೆಯ ಮೈಸೂರಿನ ಭಾಗದಿಂದ ಬಂದ ಜನರಿಗೆ ಮೈಸೂರು ರಾಜ್ಯದ ಹೆಸರಿನ ಬಗ್ಗೆ ಹಿಂದಿನಿಂದಲೂ ಚಾರಿತ್ರಿಕವಾಗಿ ಒಂದು ಅಭಿಮಾನ ಬೆಳೆದು ಬಂದಿದೆ. ಮೈಸೂರು ರಾಜ್ಯ ಎಂಬುದು ಇಡೀ ಇಂಡಿಯಾ ದೇಶದಲ್ಲಿ ಕೀರ್ತಿ ಪಡೆದಿರುವುದಲ್ಲದೆ, ಹೊರ ದೇಶಗಳಲ್ಲಿಯೂ ಸಹ ಕೀರ್ತಿಪಡೆದಿದೆ. ಮೈಸೂರು ಜನತೆಯ ವಿಚಾರದಲ್ಲಿ. ಮೈಸೂರು ಸಾಮಾನುಗಳ ವಿಚಾರದಲ್ಲಿ ತಿಳಿದಂತಹ ಜನರು ಹೊರ ದೇಶಗಳಲ್ಲಿ ಇದ್ದಾರೆ. ಅದಕೋಸ್ಕರ ಮೈಸೂರು ರಾಜ್ಯ ಹೆಚ್ಚಿನ ಗೌರವ ಹಾಗೂ ಕೀರ್ತಿ ಪಡೆದುಕೊಂಡಿದೆ. ಮೈಸೂರು ಎಂಬ ಹೆಸರಿಗೆ ಶಕ್ತಿ ಇದೆ.
ಈ ಹೆಸರು ಅಸ್ತಂಗತವಾದರೂ ಸಹ ಇನ್ನೊಂದು ಹೆಸರು ಉದಯವಾಗುತ್ತಿದೆ. ಹೊಸ ಹೆಸರಿನಲ್ಲಿ ಭಾವೈಕ್ಯತೆ ಇದೆ. ವಿಶ್ವಾಸವಿದೆ. ಹೆಚ್ಚಿನ ಜನರಿಗೆ ಸಂಶೋಷ, ಆನಂದ ಉಂಟಾಗುತ್ತದೆ ಬದಲಾವಣೆಯಲ್ಲಿ ಹಳೆಯದು ಹೋಗಿ, ಹೊಸದು ಬರುವಾಗ ತೊಂದರೆ ಇಲ್ಲ. ಆನಂದ ಬರುತ್ತದೆ. ಆದ್ದರಿಂದ ಈ ಬಗ್ಗೆ ಹೆಚ್ಚು ಚಿಂತನೆ ಮಾಡಬೇಕಿಲ್ಲ, ಹೊಸದನ್ನು ನೋಡಿ, ನಲಿದು ಸಂತೋಷ ಪಡುವ ಕಾಲ ಇದು. ಆದ್ದರಿಂದ ಈ ನಿರ್ಣಯಕ್ಕೆ ಮಾನ್ಯ ಸಭೆ ಒಪ್ಪಿಗೆ ಕೊಡುತ್ತದೆಂಬ ಪೂರ್ಣ ವಿಶ್ವಾಸ ನನಗೆ ಇದೆ. ಬಹುಮತದ ವಿಶ್ವಾಸವಲ್ಲ ನಾವೆಲ್ಲರೂ ಸೇರಿ ಒಮತದಿಂದ ಈ ಹೆಸರನ್ನು ಕರೆಯೋಣ. ಆ ರೀತಿ ನಾವು ಆನಂದದಿಂದ, ಸಂತೋಷದಿಂದ ಕರೆಯುವಾಗ ಕನ್ನಡ ಜನತೆಯ ಏಳಿಗೆಯಾಗಲಿ ಮತ್ತು ಈ ಶುಭ ಮುಹೂರ್ತದಲ್ಲಿ ಈ ಹೆಸರನ್ನು ಕರೆದು ರಾಜ್ಯ ಉನ್ನತವಾಗಿ ಬೆಳೆದು, ಹಿಂದಿನಿಂದ ಈ ರಾಜ್ಯ ಚರಿತ್ರೆಯಲ್ಲಿ ಏನು ಒಂದು ಒಳ್ಳೆಯ ಕೀರ್ತಿ, ಹೆಸರನ್ನು ಪಡೆದಿತ್ತೋ ಅದಕ್ಕಿಂತ ಹೆಚ್ಚಿನ ಕೀರ್ತಿಯನ್ನು ಪಡೆದು ಕನ್ನಡ ಜನಕೋಟಿ ಏನಿದ್ದಾರೆ ಅವರ ಬಾಳ್ವೆ ಹಸನಾಗಬೇಕು.

ನಮ್ಮ ಸಂಸ್ಕೃತಿ, ಸಾಹಿತ್ಯ, ಕಲೆ, ಇವೆಲ್ಲವೂ ಬೆಳೆದು ಇಡೀ ಭಾರತದಲ್ಲಿಯೇ ಅಲ್ಲ ಇಡೀ ಪ್ರಪಂಚದಲ್ಲಿಯೇ ಹೆಚ್ಚಿನ ಕೀರ್ತಿ ಪಡೆಯುವಂತಾಗಬೇಕು. ಅಂತಹ ಕಾರ್ಯಕ್ಕೆ ಇವೂತ್ತು ನಾವು ಅಂಕುರಾರ್ಪಣ ಮಾಡೋಣ ಎನ್ನುವ ಮಾತನ್ನು ತಿಳಿಸಿ ಈ ಠರಾವನ್ನು ತಮ್ಮ ಒಪ್ಪಿಗೆಗಾಗಿ ಮಂಡಿಸುತ್ತಿದ್ದೇವೆ. ನಾನು ಸರಕಾರದ ವತಿಯಿಂದ ಮಂಡಿಸಿದಂಥ ನಿರ್ಣಯಕ್ಕೆ ಎಲ್ಲ ಕಡೆಯಿಂದಲೂ, ಎಲ್ಲಾ ಪಕ್ಷಗಳಿಂದಲೂ ಸರ್ವತೋಮುಖವಾದ ಬೆಂಬಲ ಬಂದಿರತಕ್ಕದ್ದು ನನಗಂತೂ, ಬಹಳ ಸಂತೋಷ ಉಂಟುಮಾಡಿದೆ. ನಾನು ಮೊದಲೇ ಈ ಸಭೆಯಲ್ಲಿ ಅರಿಕೆ ಮಾಡಿಕೊಂಡ ಹಾಗೆ ಏನಾದರೂ ಇಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಇದ್ದರೂ, ಹೆಸರು ಬದಲಾವಣೆ ಆಗತಕ್ಕ ಕಾಲದಲ್ಲಿ ಮನಸ್ಸಿಗೆ ಸ್ವಲ್ಪ ನೋವು ಆದಂಥವರು ಕೂಡ ಅಂತಿಮವಾಗಿ ನಿರ್ಣಯಕ್ಕೆ ಬೆಂಬಲ ಕೊಟ್ಟಿದ್ದಾರೆ ಮತ್ತು ಬದಲಾವಣೆಯನ್ನು ಸ್ವಾಗತಿಸಿದ್ದಾರೆ, ನಾವು ಕರ್ನಾಟಕ ಎಂಬ ಹೆಸರು ಇಡಬೇಕು ಎಂಬುದನ್ನು ಕೂಡ ಒಪ್ಪಿದ್ದಾರೆ. ಆದಕಾರಣ ಮೂರು ದಿವಸಗಳಿಂದ ಮಾತನಾಡಿ ತಮ್ಮ ಹೃದಯದಿಂದ ಬಂದ ಬೆಂಬಲವನ್ನು ಕೊಟ್ಟಂಥ ಮಾನ್ಯ ಸದಸ್ಯರಿಗೂ, ಈ ಚರ್ಚೆಯಲ್ಲಿ ಭಾಗವಹಿಸದೆ ಮೌನದಿಂದ ಕುಳಿತು ಮಾತುಗಳನ್ನು ಕೇಳಿದವರಿಗೂ ಮತ್ತು ಮೌನದಿಂದಲೇ ಬೆಂಬಲ ಕೊಟ್ಟಂಥ ಎಲ್ಲಾ ಸದಸ್ಯರಿಗೂ ನನ್ನ ಧನ್ಯವಾದಗಳನ್ನು ಅರ್ಪಿಸುವುದಕ್ಕೆ ನಾನು ಅಪ್ಪಣೆ ಬೇಡುತ್ತೇನೆ. ಈ ಸಂದರ್ಭದಲ್ಲಿನಾನು ಈ ನಿರ್ಣಯವನ್ನು ಮಂಡಿಸುವುದಕ್ಕೆ ಮನಸ್ಸು ಮಾಡಿದ್ದಕ್ಕಾಗಿ ಅಥವಾ ತಂದಿದ್ದಕ್ಕಾಗಿ ನನ್ನ ಬಗ್ಗೆ ಕೆಲವರು ಒಳ್ಳೆಯ ಭಾಷಣವನ್ನು ಮಾಡಿದ್ದಾರೆ, ಮೆಚ್ಚುಗೆಯನ್ನು ನನ್ನ ಮಿತ್ರರು, ಎದುರು ಪಕ್ಷದಲ್ಲಿರತಕ್ಕ ನಾಯಕರು ವ್ಯಕ್ತಪಡಿಸಿದ್ದಾರೆ.

ಇಂತಹ ಮಹತ್ವದ ಕಾರ್ಯಗಳು ಆಗುವಾಗ, ನಾವು ಒಂದೊಂದು ಕಾಲಕ್ಕೆ ನಿಮಿತ್ತ ಮಾತ್ರರಾಗುತ್ತೇವೆ ಅಷ್ಟೇ ಎಂದು ನಾನು ತಿಳಿದುಕೊಂಡಿದ್ದೇನೆ. ಇದು ನನಗೆ ವೈಯಕ್ತಿಕವಾಗಿ ಹೆಮ್ಮೆ ಎಂದಲ್ಲ, ನಾನು ಒಂದು ನಿಮಿತ್ತವಾಗಿದ್ದೇನೆ, ಅದಕ್ಕೆ ಸಂದರ್ಭ ಕಾರಣ. ಇದರಿಂದ ಬರತಕ್ಕ ಕೀರ್ತಿ ಮೆಚ್ಚಿಗೆ ಇಡೀ ಸದನಕ್ಕೆ ಸೇರಿದ್ದು. ಅದರಲ್ಲಿ ನಾನೂ ಒಬ್ಬ ಇದ್ದೇನೆ ಅಷ್ಟೇ. ವೈಯಕ್ತಿಕವಾಗಿ ಇದರಲ್ಲಿ ನನ್ನ ಪ್ರತಿಷ್ಠೆ ಇಲ್ಲ, ಜನಮನಕ್ಕೆ ಸ್ಪಂದಿಸಿದ್ದೇನೆ ನುಡಿದಂತೆ ನಡೆದಿದ್ದೇನೆ ಎಂಬ ನಂಬಿಕೆ. ತಿಳಿವಳಿಕೆ ಇಲ್ಲದೆ ಧ್ಹರ್ಯ ಬರುವುದಿಲ್ಲ. ನಡೆದ ವಿಚಾರವನ್ನು ಸರಿಯಾಗಿ ತಿಳಿಯಬೇಕಾದರೆ ನಿರ್ವಿಕಾರ ಮನಸ್ಸು ಬೇಕು. ಈ ದೃಷ್ಟಿಯಿಂದ ನಡೆಯುವುದಕ್ಕೆ ಧೈರ್ಯ ಮಾಡಿದೆ ಅಷ್ಟೇ.

ಯುಗಯುಗಾಂತರಗಳಿಂದ ಸಾಮಾಜಿಕವಾಗಿ, ಆರ್ಥಿಕವಾಗಿ ನೊಂದು, ಬೆಂದು ಹಿಂದುಳಿದಿರತಕ್ಕೆ, ಜನ-ಜನಾಂಗಗಳ ಉದ್ದಾರ ಆಗಬೇಕು. ಆ ದಿಕ್ಕಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದೇವೆ. ಅದಕ್ಕೆ ಎಲ್ಲರ ತೆರೆದ ಹೃದಯದ ಸಹಕಾರಬೇಕು. ಈ ದಿಕ್ಕಿನಲ್ಲಿ ಅಂಜದೆ ನಾವು ನುಡಿದಂತೆ ನಡೆಯಬೇಕಾದುದ್ದು ನಮ್ಮ ಕರ್ತವ್ಯ. ಅದನ್ನು ಮಾಡುತ್ತೇವೆಂದು ಹೇಳಿ ತಮಗೆ ಆಶ್ವಾಸನೆ ಕೊಡಬಲ್ಲೆ. ಕೆಲವು ಭಾಗಗಳಲ್ಲಿ ಕೆಲವು ತೊಂದರೆಗಳಿವೆ. ನೀರಿನ ಅಭಾವ, ಮಳೆ ಇಲ್ಲದೆ ತೊಂದರೆ, ಯಾವ ಭಾಗದಲ್ಲಿ ತೊಂದರೆಯಾದರೂ ಅದನ್ನು ಪರಿಹರಿಸುವುದು ಸರ್ಕಾರದ ಕರ್ತವ್ಯ. ಎಲ್ಲಿಯವರೆಗೆ ನಮಗೆ ಸರ್ಕಾರ ನಡೆಸುವ ಜವಾಬ್ದಾರಿ ಇರುತ್ತದೆಯೋ ಅಲ್ಲಿಯವರೆಗೆ ಆ ಭಾಗ, ಈ ಭಾಗ, ನಮ್ಮವರು, ನಿಮ್ಮವರು ಎಂಬ ಪಕ್ಷಪಾತಕ್ಕೆ ಎಡೆಯಲ್ಲ. ಎಲ್ಲ ಭಾಗಗಳೂ ನಮ್ಮ ರಾಜ್ಯ, ನಮ್ಮ ಜನ ಎಂಬ ಒಂದೇ ಗುರಿ ಎನ್ನುವ ಆಶ್ವಾಸನೆಯನ್ನು ಕೂಡಾ ನಾನು ಕೊಡುತ್ತೇನೆ.

ಕೊನೆಯದಾಗಿ ಒಂದು ಮಾತು. ಈ ನಿರ್ಣಯವನ್ನು ನನ್ನ ಒಂದು ಸ್ಥಾನದಿಂದ ತಂದಿರತಕ್ಕದ್ದು ಸಂತೋಷ ಎಂಬ ಅಭಿಪ್ರಾಯ, ಇವರು ಅರಸು ಮನೆತನದವರು ಆಗಿದ್ದರೂ ಇದನ್ನು ತಂದಿದ್ದಾರೆಂದು ಹೇಳಿದ್ದಾರೆ. ಇದರ ಬಗ್ಗೆ ನಾನು ಏನೂ ಹೇಳಬೇಕಾದ ಅಗತ್ಯವಿಲ್ಲ. ನಾನು ಯಾವಾಗ ರಾಜಕೀಯದಲ್ಲಿ ಕಾಲಿಟ್ಟನೋ ಆವಾಗಿನಿಂದ ನಾನು ಅರಸು ಮನೆತನಕ್ಕೆ ಸೇರಿದವನು ಜನತೆಯೇ ಬೇರೆ ನಾನು ಬೇರೆ ಎಂದು ತಿಳಿದವನಲ್ಲ. ನಾನು ಹುಟ್ಟಿದ್ದು ಹಳ್ಳಿಯಲ್ಲಿ ಬೆಳೆದಿದ್ದು ಹಳ್ಳಿಯಲ್ಲಿ ಇದ್ದದ್ದೂ ಹಳ್ಳಿಯಲ್ಲಿ ದೇಶದ ವಿಚಾರ ಬಂದಾಗ ದೇಶಾಭಿಮಾನ ಇರುವಂಥವನು, ಯಾವ ಜಾತಿ, ಮತ ಭೇದವಿಲ್ಲದೆ, ಯಾರ್ಯಾರಿಗೆ ಸ್ವಾತಂತ್ರಾಭಿಮಾನ ಇದೆಯೋ, ಅವರೆಲ್ಲರೂ ದೇಶಕ್ಕಾಗಿ ಹೋರಾಟವನ್ನು ಮಾಡಿದ್ದಾರೆ. ಅಂತಹ ಹೋರಾಟ ಮಾಡಿದ ಲಕ್ಟೋಪಲಕ್ಷ ಜನರಲ್ಲಿ ನಾನೂ ಒಬ್ಬ. ನನಗೆ ತನ್ನ ಜಾತಿಯೆಂದು ಏನೂ ಹೆಚ್ಚಿನ ಪ್ರೀತಿಯೂ ಇಲ್ಲ ಅಥವಾ ಬೇರೆ ಜಾತಿಯವರಲ್ಲಿ ಕಡಿಮೆ ರೀತಿಯ ಪ್ರೀತಿಯೂ ಇಲ್ಲ. ನಾವೆಲ್ಲರೂ ಒಂದೇ ಜಾತಿಯವರು ಎಂಬ ಭಾವನೆ. ಈ ರಾಜತತ್ವಕ್ಕೆ ನಾನು ಎಂದೋ ವಿರೋಧಿ ಗಾಂಧೀಜಿಯವರು ಈ ರಾಜರುಗಳ ಬಗ್ಗೆ ಹೇಳಿದಾಗ ಅದು ಸರಿ ಎಂದು ನನಗೆ ತೋರಿ ಆಗಿನಿಂದಲೇ ವಿರೋಧವಾದ ಮನೋಭಾವ ಬೆಳೆದು ಬಂದಿತ್ತು. ಅವರ ವಿರುದ್ಧವಾಗಿ ಎದ್ದು ನಿಂತಿದ್ದೇನೆ.

ತಾವೆಲ್ಲರೂ ಈ ನಿರ್ಣಯವನ್ನು ವಿರೋಧ ಮಾಡದೆ ಸರ್ವಾನುಮತದ ಸ್ವಾಗತ ಮಾಡಿದ್ದಕ್ಕಾಗಿ ತಮಗೆಲ್ಲರಿಗೂ ನಾನು ಅಭಿನಂದಿಸುತ್ತೇನೆ. ಈ ಮಹತ್ತರವಾದ ನಿರ್ಣಯವನ್ನು ತಮ್ಮಅಧ್ಯಕ್ಷತೆಯಲ್ಲಿ ಚರ್ಚೆ ಮಾಡಿ ಅಂಗೀಕರಿಸುತ್ತಿದ್ದೇವೆ. ಇದು ಹೆಮ್ಮೆ ಮತ್ತು ಸಂತೋಷ ಪಡುವ ವಿಚಾರ. ತಮ್ಮಘನ ಅಧ್ಯಕ್ಷತೆಯಲ್ಲಿ ಈ ಒಂದು ಚರಿತ್ರಾರ್ಹವಾದ ಘಟನೆ ನಡೆದಿರುವುದು ನಮ್ಮಪುಣ್ಯ ಹಾಗೂ ಶುಭ ಸಂಕೇತವೆಂದು ತಿಳಿದು ನಾನು ತಮನ್ನು ಮತ್ತೊಮ್ಮೆ ಅಭಿನಂದಿಸಿ ಈ ನಿರ್ಣಯಕ್ಕೆ ತಮ್ಮೆಬರ ಬೆಂಬಲವನ್ನು ಕೊಡಬೇಕೆಂದು ಪ್ರಾರ್ಥನೆ ಮಾಡಿಕೊಂಡು ನನ್ನ ಮಾತುಗಳನ್ನು ಮುಗಿಸುತ್ತೇನೆ.

(ಎಲ್ಲರೂ ಕರತಾಡನ ಮಾಡಿ ಸಂತೋಷ ವ್ಯಕ್ತಪಡಿಸಿದರು)


ಅಧ್ಯಕ್ಷರು:
ನಾನು ಈ ನಿರ್ಣಯವನ್ನು ಸಭೆಯ ಒಪ್ಪಿಗೆಗೆ ಹಾಕುತ್ತೇನೆ, ಅದು ಹೀಗೆ:

ಭಾರತದ ಸಂವಿಧಾನದಲ್ಲಿ ನಮೂದಿಸಿದ ಈ ರಾಜ್ಯದ ಹೆಸರನ್ನು ಕರ್ನಾಟಕ ಎಂಬುದಾಗಿ ಬದಲಾಯಿಸಬೇಕೆಂದೂ ಈ ಸಭೆಯವರು ತಮ್ಮ ಖಚಿತ ಅಭಿಪ್ರಾಯವನ್ನು ಘೋಷಿಸಿ ಈ ಬಗ್ಗೆ ಅಗತ್ಯವಾದ ಸಂವಿಧಾನದ ತಿದ್ದುಪಡಿಗಳನ್ನು ರಾಜ್ಯ ಸರ್ಕಾರದವರು ಪಡೆದುಕೊಳ್ಳಲು ಕ್ರಮ ಕೈಗೊಳ್ಳಬೇಕೆಂದು ಈ ಸಭೆಯವರು ಶಿಫಾರಸ್ಸು ಮಾಡುತ್ತಾರೆ (ಎಲ್ಲಾ ಸದಸ್ಯರು ಜಯಕಾರ ಮಾಡಿದರು.)

ಅಧಕ್ಷರು:

ನಿರ್ಣಯದ ವಿರೋಧ ಯಾರು ಇಲ್ಲವಾದ್ದರಿಂದ ಈ ನಿರ್ಣಯವನ್ನು (ಸರ್ವಾನುಮತದಿಂದ) ಅಂಗೀಕರಿಸಲ್ಪಟ್ಟಿತ್ತು. The Resolution was Adopted


ಶ್ರೀ ವಾಟಾಳ್‌ ನಾಗರಾಜ್‌:
ಈ ಶುಭ ಸಂತೋಷದ ಸಮಯದಲ್ಲಿ ಸಂತೋಷ ಸೂಚಕವಾಗಿ ನಾನು ಈ ಮಲ್ಲಿಗೆ ಹೂಗಳನ್ನು ಎಲ್ಲರ ಮೇಲೆಯೂ ಚೆಲ್ಲುತ್ತೇನೆ. (ವಾಟಾಳ್‌ ನಾಗರಾಜರು ಮತ್ತು ಎಸ್‌. ಬಂಗಾರಪ್ಪನವರು ಮಲ್ಲಿಗೆ ಹೂಗಳನ್ನು ಚೆಲ್ಲಿದರು)

ಶ್ರೀ ಡಿ. ದೇವರಾಜ್‌ ಅರಸ್‌:
ನಾನು ಈಗ ಕರ್ನಾಟಕಕ್ಕೆ ಎಂದು ಹೇಳುತ್ತೇನೆ. ತಾವೆಲ್ಲರೂ ಒಕ್ಕಂಠದಿಂದ ಜಯವಾಗಲಿ ಎಂದು ಹೇಳಬೇಕು.

ಶ್ರೀ ಡಿ. ದೇವರಾಜ್‌ ಅರಸ್‌:
 ಕರ್ನಾಟಕಕ್ಕೆ.

ಎಲ್ಲ ಸದಸ್ಯರು:
ಜಯವಾಗಲಿ.
(ಎಲ್ಲಾ ಸಧಸ್ಮರು ಕರ್ನಾಟಕಕ್ಕೆ ಜಯವಾಗಲಿ ಎಂದು ಘೋಷಣೆಯನ್ನು ಮತ್ತು ಕರತಾಡನವನ್ನು
ಮಾಡಿದರು).

--------

(ಆಕರ: ಪ್ರತಿಭಾವಂತ ಸಂಸದೀಯ ಪಟುಗಳ ಬದುಕು ಬರಹ ಮಾಲಿಕೆ: ಡಿ. ದೇವರಾಜ ಅರಸು. ಪ್ರಕಟಣೆ: ಗ್ರಂಥಾಲಯ ಉಪಸಮಿತಿ, ಕರ್ನಾಟಕ ವಿಧಾನಸಭೆ ಸಚಿವಾಲಯ. ಇಸವಿ: 2,000)