ಶನಿವಾರ, ಜೂನ್ 11, 2011

ಪ್ರತಾಪ್‌ ಸಿಂಹ ಪ್ರಯೋಗಗಳು ಹಾಗೂ ನನ್ನ ಮನಸ್ಸಿನ ಪ್ರಶ್ನೆಗಳು


          ಪ್ರತಾಪ್ ಸಿಂಹ ನಮ್ಮ ಕಾಲದ ಸೋಕ್ಷ್ಮ ಹಾಗೂ ತೀಕ್ಷ್ಣ ಪತ್ರಕರ್ತ. ಎಷ್ಟೋ ಯುವಕರಿಗೆ ಪತ್ರಿಕೆ ಓದಲು ಇರುವ ಕಾರಣವೇ ಪ್ರತಾಪ್‌ ಸಿಂಹ ಲೇಖನ ಎಂದರೆ ಅಚ್ಚರಿಯಿಲ್ಲ. ಕಾರಣ, ಭಾನುವಾರದಿಂದ ಶುಕ್ರವಾರದವರೆಗೆ ನೋಡಿದ-ಓದಿದ ಸುದ್ದಿಗಳು ಪರಿಹಾರ ಕಾಣದೇ ಓದುಗರ ಮನಸ್ಸಿನಲ್ಲಿ ಸುತ್ತುತ್ತಿರುವಾಗ, ಅದಕ್ಕೆ ಸರಿಯಾಗಿ ಪ್ರತಾಪ್‌ ಸಿಂಹ ಅಂತಹದೇ ಒಂದು ವಿಷಯವನ್ನು ತೆಗೆದುಕೊಂಡು ಲೇಖನ ಬರೆಯುತ್ತಾರೆ. ಓದುಗನ ಮನದಲ್ಲಿ ಸುತ್ತುತ್ತಿದ್ದ ಸಂಶಯದ ಪ್ರಶ್ನೆಗಳಿಗೆಲ್ಲಾ ಒಂದು ಸಮಾಧಾನ ಕೊಡುತ್ತದೆ ಅವರ ಲೇಖನ. 2000ನೇ ಇಸವಿಯಲ್ಲಿ ಬರೆಯುತ್ತಿದ್ದ ಅವರ ಲೇಖನಗಳಷ್ಟೇ 2011ರ ಲೇಖನಗಳೂ ತೀಕ್ಷಣವಾಗಿವೆ, ಅದರಲ್ಲಿ ಎರಡು ಮಾತಿಲ್ಲ.

          ಆದರೆ, ಇತ್ತೀಚೆಗೆ ಪ್ರತಾಪ್‌ ಫೇಸ್‌ಬುಕ್‌ನಲ್ಲಿ ಬೆಳೆಸಿಕೊಂಡಿರುವ ಪರಿಪಾಠದ ಬಗ್ಗೆ ನನ್ನ ಪ್ರಶ್ನೆ. ಮೊದಲನೆಯದಾಗಿ, ಇದೇ ವರ್ಷ ಮೇ ೨೮ರಂದು ಸ್ವಾತಂತ್ರ್ಯವೀರ ಸಾವರ್ಕರ‍್ ಮತ್ತು ಬಾರ್ಸಿಲೋನಾ ಹಾಗೂ ಮ್ಯಾಂಚೆಸ್ಟರ‍್ ಯುನೈಟೆಡ್ ನಡುವಿನ UEFA ಚಾಂಪಿಯನ್‌ ಲೀಗ್‌ ಫೈನಲ್ ಪಂದ್ಯ ಒಂದೇ ದಿನ ಬಂದಿದ್ದವು. "ಇವೆರಡೂ ವಿಷಯಗಳು ಬಹಳ ಒಳ್ಳೆಯವು, ಯಾವುದನ್ನೂ ಬಿಡಲು ಮನಸ್ಸಾಗುತ್ತಿಲ್ಲ. ಯಾವುದರ ಬಗ್ಗೆ ಲೇಖನ ಬರೆಯಲಿ?" ಎಂದು ಪ್ರತಾಪ್‌ ಫೇಸ್‌ಬುಕ್‌ ಸ್ನೇಹಿತರಲ್ಲಿ ಕೇಳಿದರು. ಅದಕ್ಕೆ ಬಂದ ಅಭೂತಪೂರ್ವ ಪ್ರತಿಕ್ರಿಯೆಗಳಿಗೆ ಸೋತೋ ಎನೋ ತಮ್ಮ ಸಂಪಾದಕ ವಿಶ್ವೇಶ್ವರ ಭಟ್ಟರ ಅನುಮತಿ ಪಡೆದು, ಎರಡೂ ಲೇಖನಗಳನ್ನು ಮುಖಾಮುಖಿಯಾಗಿ ಒಂದೇ ದಿನ ಪ್ರಕಟಿಸಿದರು.
ಇನ್ನೊಂದು ಪ್ರಸಂಗ, ಇದೀಗ ನಡೆಯುತ್ತಿರುವ ಕಪ್ಪು ಹಣದ ವಿರುದ್ಧ ಬಾಬಾ ರಾಮದೇವ್‌ ಅವರ ಪ್ರತಿಭಟನೆ ಹಾಗೂ ಮೊನ್ನೆ(ಜೂನ್‌9) ಮೃತರಾದ ಪ್ರಸಿದ್ಧ ಚಿತ್ರಕಾರ ಎಂ.ಎಫ್.ಹುಸೇನರ ವಿಚಾರಗಳ ಕುರಿತು. ಈಗಲೂ ಪ್ರತಾಪ್ ಅದೇ ದಾರಿ ಅನುಸರಿಸಿದರು. ಓದುಗರು ಈ ಹಿಂದಿನಂತೆಯೇ ಅನೇಕ ಅಭಿಪ್ರಾಯ ಕೊಟ್ಟರು. ಆದರೆ, ಹಿಂದಿನ ದಿನವೇ ಹೇಳಿದಂತೆ ಪ್ರತಾಪ್, ಎಂ.ಎಫ್. ಹುಸೇನ್‌ ಬಗ್ಗೆ ಮಾತ್ರ ಲೇಖನ ಬರೆದರು.

ಈಗ ನನಗನ್ನಿಸುವುದು,

1)  ಸುಮಾರು 11-12 ವರ್ಷಗಳಿಂದ ಯಾವುದೇ ಪತ್ರಿಕೆಯಲ್ಲಿ ಒಂದೇ ದಿನ ಒಬ್ಬನೇ ಲೇಖಕನ ಎರಡು ಲೇಖನಗಳು ಎದುರು ಬದರಾಗಿ ಪ್ರಕಟವಾಗಿದ್ದು ನಾನು ನೋಡಿಲ್ಲ.(ನಾನು ನೋಡಿಲ್ಲ ಎಂದಾಕ್ಷಣ ಆಗಿಲ್ಲ ಎಂದೇನೂ ಅಲ್ಲ. ಹಾಗೇನಾದರೂ ಇದ್ದರೆ ತಿಳಿಸಿ.) ಈ ರೀತಿ ಸಂಪ್ರದಾಯವನ್ನು ಮುರಿಯುವುದು ಪತ್ರಿಕೋದ್ಯಮಕ್ಕೆ ಹೊಸ ದಿಕ್ಕು ನೀಡುತ್ತದೆಯೇ ಅಥವಾ ಋಣಾತ್ಮಕವಾಗಿ ಪರಿಣಾಮ ಬೀರಬಹುದೇ?

2) ಒಬ್ಬ ಲೇಖಕ ತಾನು ಏನು ಬರೆಯಬೇಕೆಂದು ಓದುಗರಲ್ಲಿ ಅಭಿಪ್ರಾಯ ಕೇಳುವುದು ಎಷ್ಟು ಸರಿ?

3) ಜನರ ಮನಕ್ಕೆ ಅನುಗುಣವಾಗಿ ಬರೆಯಬೇಕು ಎನ್ನುವುದು ಸರಿಯಾದರೂ, ಓದುಗರು ಬಯಸಿದ್ದನ್ನೇ ಕೊಡುವುದು ವ್ಯಾಪಾರವಾಗುವುದಿಲ್ಲವೇ? ಇದರಿಂದ ಲೇಖಕ ಏನು ಬರೆಯಬೇಕೆಂದು ಓದುಗರೇ Demand ಮಾಡುವ-ಯಾವ ಲೇಕನ ಇರಬೇಕೆಂದು ಅವರೇ ನಿರ್ಧರಿಸುವಂತಾದರೆ, ಲೇಖಕನ ಬೌದ್ಡಿಕ ಸ್ವಾತಂತ್ರ್ಯಕ್ಕೇನು ಬೆಲೆ?

4) ಇನ್ನೊಂದು ಮಗ್ಗುಲಿಂದ ಯೋಚಿಸಿದರೆ, ಒಂದು ಪತ್ರಿಕೆಯಲ್ಲಿ ಪ್ರಕಟವಾಗುವ ಲೇಖನದ ಬಗ್ಗೆ ಇಷ್ಟೊಂದು ಯುವಕರು ಚರ್ಚಿಸುತ್ತಿರುವುದು ಪತ್ರಿಕೋದ್ಯಮದ, ಅದರಲ್ಲೂ ಕನ್ನಡ ಪತ್ರಿಕೋದ್ಯಮದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲವೇ?

5) ಹೀಗೇ ಬರೆಯಬೇಕು, ಹೀಗೇ ಓದಬೇಕು ಎಂಬಂತಹ ಸೂತ್ರಗಳ ಬಲೆಯಲ್ಲಿ ಬಿದ್ದು ಹೊರಳಾಡುವ, ನಿಂತ ನೀರಂತಾಗಿರುವ ಪತ್ರಿಕೋದ್ಯಮದಲ್ಲಿ ಇದು ಹೊಸ ಗಾಳಿ ಬೀಸುವ ಲಕ್ಷಣಗಳೇ ಅಥವಾ ಹೊಸದೊಂದನ್ನು ಮಾಡುವ ಭರದಲ್ಲಿ ಏನೇನೋ ಮಾಡಿದಂತಾಗುತ್ತದೆಯೇ?

ನನಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಶುಕ್ರವಾರ, ಜೂನ್ 03, 2011

ಸಿಯಾಚಿನ್ ಮಹತ್ವ-- ಸೇನೆಗಷ್ಟೇ ಅಲ್ಲ, ರಾಜಕಾರಣಿಗಳಿಗೂ ತಿಳಿಯಲಿ



           ಜಾಗದಲ್ಲಿ ಭಾರತದ ನೂರಾರು ಸೈನಿಕರು ಪಹರೆ ಕಾಯುತ್ತಿದ್ದಾರೆ. ಪಾಕಿಸ್ತಾನದ ಚೆಕ್‌ಪೋಸ್ಟ್‌ನಿಂದ ಕೇವಲ 400 ಮೀಟರ್ ದೂರದಲ್ಲಿ ಭಾರತದ ಸೈನ್ಯ ಇದೆ. ಭಾರತ ತಾನೇ ಅಭಿವೃದ್ದಿ ಪಡಿಸಿದ ಚೀತಾ ಹೆಲಿಕಾಪ್ಟರ್‌ಗಳು ಮಾತ್ರ ಅಲ್ಲಿಗೆ ಹೋಗಬಲ್ಲವು. 2 ರಿಂದ 30 ಸೆಕೆಂಡ್‌ನೊಳಗೆ ತನ್ನ ಕೆಲಸ ಮುಗಿಸಿ ಅಲ್ಲಿನ ಹೆಲಿಪ್ಯಾಡ್‌ನಿಂದ ಹಾರದಿದ್ದರೆ, ಶತ್ರುಗಳ ಗುಂಡಿಗೆ ಬಲಿಯಾಗಬೇಕಾಗುತ್ತದೆ. ಇಂತಹ ದುರ್ಗಮ ಸ್ಥಳವೇ ಸಿಯಾಚಿನ್ ಗ್ಲೇಸಿಯರ್.

  ಕುಮಾವೂನ್ ರೆಜಿಮೆಂಟ್‌ನ ಮೇಜರ್ ಆರ್.ಎಸ್ ಸಂಧು ಅವರ ನೇತೃತ್ವದ ಬೆಟಾಲಿಯನ್ 1984ರಲ್ಲಿ ಕಾರ್ಗಿಲ್‌ನಿಂದ ಈಶಾನ್ಯಕ್ಕಿರುವ-ಎಪ್ಪತ್ತು ಕಿಲೋಮೀಟರ್ ಉದ್ದದ, ಸಮುದ್ರ ಮಟ್ಟದಿಂದ ಇಪ್ಪತ್ತು ಸಾವಿರ ಅಡಿ ಎತ್ತರವಿರುವ ಈ ಪ್ರದೇಶವನ್ನು ಪಾಕಿಸ್ತಾನದ ಕಪಿಮುಷ್ಟಿಯಿಂದ ಬಿಡಿಸಿಕೊಂಡಿತು. ಸಾಮಾನ್ಯವಾಗಿ ಮೈನಸ್ 50 ಡಿಗ್ರಿ ತಾಪಮಾನವಿರುವ  ಸಿಯಾಚಿನ್ ಇಂದು ಭಾರತ-ಪಾಕಿಸ್ತಾನ ನಡುವಿನ ಮಾತುಕತೆಗಳ ಕೇಂದ್ರಬಿಂದುವಾಗಿದೆ. ಇದೇ ಪ್ರಕ್ರಿಯೆಯ ಮುಂದಿನ ಭಾಗವಾಗಿ ಕಳೆದ ತಿಂಗಳು 31ನೇ ತಾರೀಖು ಮಂಗಳವಾರ(ಮೇ 2011) ನವದೆಹಲಿಯಲ್ಲಿ ನಡೆದ 12ನೇ ಸುತ್ತಿನ ಮಾತುಕತೆಯೂ ಯಾವುದೇ ಫಲಿತಾಂಶವಿಲ್ಲದೇ ಮುಗಿದಿದೆ.
ಭಾರತ ನಿರ್ಮಿತ ಚೀತಾ ಹೆಲಿಕಾಪ್ಟರ‍್
1947ರಲ್ಲಿ ಜನಿಸಿದಾಗಿನಿಂದಲೂ  ಕಾಶ್ಮೀರವನ್ನು ಪಡೆಯುವುದೇ ತನ್ನ ಏಕೈಕ ಗುರಿ ಎಂದು ಹೋರಾಡುತ್ತಿರುವ ಪಾಕಿಸ್ತಾನ, ಭಾರತದ ಮೇಲೆ ಬೇರೆ-ಬೇರೆ ರೀತಿಯಿಂದ ಒತ್ತಡ ಹೇರುತ್ತಲೇ ಬಂದಿದೆ. 48, 65, ಹಾಗೂ 99ರಲ್ಲಿ ಭಾರತದೊಂದಿಗೆ ನೇರ ಯುದ್ಧವನ್ನೇ ಮಾಡಿ ಅದು ಸೋತಿದೆ ಎಂಬುದು ಗೊತ್ತಿರುವ ಸಂಗತಿ. ಆದರೆ, ಅದೇ ಪಾಕಿಸ್ತಾನ 90, 95, 96 ಹಾಗೂ 99ರಲ್ಲಿ ನಾಲ್ಕು ಬಾರಿ ಸಿಯಾಚಿನ್ ಮೇಲೆ ದಾಳಿ ಮಾಡಿರುವುದು ಹಲವರಿಗೆ ಗೊತ್ತಿಲ್ಲ. 1999ರಲ್ಲಂತೂ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ ಹಾಗೂ ನವಾಜ್ ಷರೀಫ್, ಐತಿಹಾಸಿಕ ಲಾಹೋರ್ ಒಪ್ಪಂದಕ್ಕೆ ಸಹಿ ಹಾಕಿದ ಕೇವಲ 17 ದಿನಗಳಲ್ಲಿ ಸಿಯಾಚಿನ್ ಮೇಲೆ ಪಾಕ್ ದಾಳಿ ಮಾಡಿತು. 

          ಸಿಯಾಚಿನ್ ಎಂದರೆ ಕಾಡು ಗುಲಾಬಿಗಳು ಇರುವ ಸ್ಥಳ ಎಂದರ್ಥ. ಅದು ಯಾರು ಈ ಹೆಸರಿಟ್ಟರೋ, ಇಲ್ಲಿ ಗುಲಾಬಿಯ ಮಾತಿರಲಿ, ಗುಲಾಬಿ ಬಣ್ಣವೂ ಕಾಣುವುದಿಲ್ಲ. ಎತ್ತ ನೋಡಿದರೂ ಕಣ್ಣಿಗೆ ರಾಚುವ ಬಿಳಿ ಬಣ್ಣ. ಆದರೆ, ಕೆಲಕಾಲ ಇಲ್ಲಿ ಕಂಡದ್ದು ಎರಡೂ ದೇಶಗಳ ಸೈನಿಕರ ರಕ್ತದ ಕೆಂಪು ಬಣ್ಣ ಮಾತ್ರ. 95ರ ದಾಳಿಯಲ್ಲಿ ಪಾಕ್‌ನ 40 ಸೈನಿಕರು ಸಾವನ್ನಪ್ಪಿದರೆ, 96ರ ದಾಳಿಯಲ್ಲಿ ಭಾರತದ ಎಂ.ಐ-17 ಹೆಲಿಕಾಪ್ಟರ್ ನೆಲಕ್ಕುರುಳಿತು. ಸಿಯಾಚಿನ್‌ನ ಮತ್ತೊಂದು ವಿಶೇಷತೆ, ಅಲ್ಲಿ ಮದ್ದು ಗುಂಡಿಗಿಂತ ಹೆಚ್ಚಾಗಿ ಸೈನಿಕರು ಸಾಯುವುದು ವಾತಾವರಣದ ವೈಪರೀತ್ಯದಿಂದಾಗಿ ಎನ್ನುವುದು. 80ರ ದಶಕದಲ್ಲಿ ವರ್ಷಕ್ಕೆ ಸುಮಾರು 400 ಸೈನಿಕರು ಹಿಮಗಡಿತ(Frostbite) ಹಾಗೂ ಹಿಮಪಾತಗಳಿಂದ ಅಲ್ಲಿ ಸಾವನ್ನಪ್ಪುತ್ತಿದ್ದರು. ಆದರೆ, ಆ ನಂತರ ಅದು ವರ್ಷಕ್ಕೆ 20-22 ಕ್ಕೆ ಇಳಿದು ಇದೀಗ ಸೈನ್ಯದ ’ಅಚ್ಚುಕಟ್ಟಿನ’ ವ್ಯವಸ್ಥೆಯ ಪರಿಣಾಮ, ಆರೋಗ್ಯದ ಕಾರಣಕ್ಕೆ ಯಾರೂ ಸಾಯುತ್ತಿಲ್ಲ. ಆದರೆ, ಈ ಅಚ್ಚುಕಟ್ಟಿನ ವ್ಯವಸ್ಥೆಗೆ ತಗಲುವ ವೆಚ್ಚ ಬಲು ದುಬಾರಿ. ಭಾರತದ ಸೈನಿಕರಿಗೆ ಎಲ್ಲವನ್ನೂ ಹೆಲಿಕಾಪ್ಟರ್‌ನಲ್ಲಿ ಸಾಗಿಸಬೇಕಾಗುತ್ತದೆ. ಅಲ್ಲಿಗೆ ತಲುಪುವ ಹೊತ್ತಿಗೆ ಒಂದು ಚಪಾತಿಯ ವೆಚ್ಚ ಬರೋಬ್ಬರಿ 500ರೂಪಾಯಿ ಆಗಿರುತ್ತದೆ. ಭಾರತ ಸರ್ಕಾರಕ್ಕೆ ಸಿಯಾಚಿನ್ ನಿರ್ವಹಣೆಗೆ ದಿನವೊಂದಕ್ಕೆ ತಗಲುವ ವೆಚ್ಚ 10 ಲಕ್ಷದಿಂದ 2ಕೋಟಿಯವರೆಗೆ!!. ಇಷ್ಟೆಲ್ಲಾ ಕಷ್ಟಪಟ್ಟು ಆ ಭೂಮಿಗಾಗಿ ಏಕೆ ಹೋರಾಡಬೇಕು? ಸುಮ್ಮನೆ ಸೈನ್ಯ ಹಿಂತೆಗೆದುಕೊಳ್ಳಬಾರದೇ ಎಂದು ಹಲವರು ಭಾರತಕ್ಕೆ ಉಪದೇಶ ನೀಡುತ್ತಾರೆ. ಆದರೆ, ಭಾರತೀಯ ಸೈನ್ಯ ಮಾತ್ರ ಅದಕ್ಕೆ ಒಪ್ಪುತ್ತಿಲ್ಲ. ಕಾರಣ, ಸಿಯಾಚಿನ್‌ಗಿರುವ Geographical ಹಾಗೂ Stratigical ಮಹತ್ವ.

ಐತಿಹಾಸಿಕ ಲಾಹೋರ್‌ ಒಪ್ಪಂದ
ಸಿಯಾಚಿನ್ ಇರುವುದು ಅಧಿಕೃತವಾಗಿ ಭಾರತ-ಪಾಕ್ ಗಡಿಗಳಲ್ಲಾದರೂ, ಇತ್ತೀಚೆಗೆ ನಡೆದ ಬೆಳವಣಿಗೆಯಲ್ಲಿ, ಯುದ್ಧದಲ್ಲಿ ಭಾರತದಿಂದ ವಶಪಡಿಸಿಕೊಂಡ POK ಯಲ್ಲಿರುವ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶವನ್ನು ಪಾಕಿಸ್ತಾನವು ಚೀನಾಕ್ಕೆ ಬಿಟ್ಟುಕೊಟ್ಟಿದೆ. ಆ ಪ್ರದೇಶದ ಮೂಲಕ ಅರಬ್ ದೇಶಗಳಿಗೆ ರಸ್ತೆ ನಿರ್ಮಿಸಿಕೊಂಡು ತನ್ನ ತೈಲ ಸಾಗಣಿಕೆಯನ್ನು ಸುಲಭಗೊಳಿಸಿಕೊಳ್ಳುವುದು ಚೀನಾದ ಹೊರ ಉದ್ದೇಶವಾದರೆ, ಗ್ಯಾಸ್ ಪೈಪ್‌ಲೈನ್ ಹೆಸರಿನಲ್ಲಿ ಸುರಂಗಗಳನ್ನು ಅಗೆದು ಮಿಸೈಲ್ ಅಡಗಿಸಿಟ್ಟು ಭಾರತವನ್ನು ಬೆದರಿಸುವುದು ಅದರ ಒಳ ಮರ್ಮ. ಪಾಕ್ ಚೀನಾಕ್ಕೆ ಬಿಟ್ಟುಕೊಟ್ಟಿರುವ ಪ್ರದೇಶ ಇರುವುದು ಸಿಯಾಚಿನ್‌ಗೆ ಹೊಂದಿಕೊಂಡಂತೆಯೇ. ಅಂದರೆ, ಸಿಯಾಚಿನ್ ಮೇಲೆ ನಿಂತರೆ, ಪಾಕಿಸ್ತಾನ-ಚೀನಾ ಎರಡೂ ದೇಶಗಳ ಚಟುವಟಿಕೆಗಳನ್ನು ನಿಯಂತ್ರಿಸಬಹುದು, ಅಕ್ರಮ ಒಳನುಸುಳುವಿಕೆಯನ್ನು ತಡೆಯಬಹುದು. ಸಿಯಾಚಿನ್‌ಗಿರುವ ನಿಜವಾದ ಮಹತ್ವ ಅದು.

          1984ರಿಂದಲೂ ಸಿಯಾಚಿನ್ ತನಗೆ ಸೇರಬೇಕೆಂದು ವಾದಿಸುತ್ತಿದ್ದ ಪಾಕಿಸ್ತಾನ ಈಗ ರಾಗ ಬದಲಾಯಿಸಿದೆ. ಸಿಯಾಚಿನ್‌ನ ನಿರ್ವಹಣೆಗಾಗಿ ಎರಡೂ ದೇಶಗಳಿಗೆ ತಗಲುವ ವೆಚ್ಚ, ಸೈನಿಕರ ಮರಣವನ್ನು ಗಮನದಲ್ಲಿಟ್ಟುಕೊಂಡು ಅಲ್ಲಿಂದ ಎರಡೂ ಸೈನ್ಯಗಳನ್ನು ಹಿಂತೆಗೆದುಕೊಳ್ಳೋಣ ಎಂಬ ವಾದವನ್ನು ಮಂಡಿಸುತ್ತಿದೆ. ಕೇವಲ ಭಾರತದ ರಾಜಕಾರಣಿಗಳೇ ಎಲ್ಲ ನಿರ್ಧಾರಗಳನ್ನೂ ತೆಗೆದುಕೊಳ್ಳುವುದು ಸಾಧ್ಯವಾಗಿದ್ದರೆ, ಈ ಹಿಂದಿನ ಯುದ್ಧಗಳಲ್ಲಿ ಗೆದ್ದ ಭೂಮಿಯನ್ನು ವಾಪಸ್ ಪಾಕ್‌ಗೆ ಬಿಟ್ಟುಕೊಟ್ಟಂತೆ ಇದನ್ನೂ ನಮ್ಮ ನಾಯಕರು ಕೊಟ್ಟಿರುತ್ತಿದ್ದರೇನೋ!!. ಆದರೆ, ಭಾರತ ಸೇನೆಯ ಪ್ರಬಲ ವಿರೋಧದ ಪರಿಣಾಮ ಅದು ಇನ್ನೂ ನಮ್ಮ ಕೈಲಿದೆ. ಅಲ್ಲಿಂದ ಕಾಲ್ತೆಗೆದಂತೆ ನಟಿಸಿ, ಭಾರತದ ಸೇನೆ ವಾಪಸಾದ ನಂತರ ಸಿಯಾಚಿನ್ಅನ್ನು ಆಕ್ರಮಿಸಿಕೊಳ್ಳುವ ಪಾಕಿಸ್ತಾನದ ಬುದ್ದಿ ನಮ್ಮ ನಾಯಕರಿಗಿಂತ ಸೇನೆಯ ಅಧಿಕಾರಿಗಳಿಗೆ ಚೆನ್ನಾಗಿ ಗೊತ್ತು. ಯುದ್ಧ ನಡೆಸುತ್ತಿರುವುದು ನಾವಲ್ಲ, ಮುಜಾಹೀದೀನ್‌ಗಳು ಎಂದು ಕಾರ್ಗಿಲ್ ಯುದ್ಧದ ಪ್ರಾರಂಭದಲ್ಲಿ ಪಾಕ್ ಸೇನೆ ನೀಡಿದ್ದ ಮೋಸದ ಮಾತನ್ನು ನಮ್ಮ ಸೇನೆ ಇನ್ನೂ ಮರೆತಿಲ್ಲ.
          ಸುಮಾರು ಕೊನೆ ಹಂತಕ್ಕೆ ಬಂದ್ದಿದ್ದ ಸಿಯಾಚಿನ್ ಮಾತುಕತೆಯನ್ನು 2008ರಲ್ಲಾದ ಮುಂಬೈ ದಾಳಿಯ ನಂತರ ಭಾರತ ಸ್ತಗಿತಗೊಳಿಸಿತು. ಇದೀಗ ಅಮೆರಿಕದ ಕಡೆಯಿಂದ ಒತ್ತಡ ಹೇರುತ್ತಿರುವ ಪಾಕ್, ಮಾತುಕತೆಯನ್ನು ಮತ್ತೆ ಆರಂಭಿಸಿದೆ. ಮೊನ್ನೆ ದಿಲ್ಲಿಯಲ್ಲಿ ಭಾರತದ ರಕ್ಷಣಾ ಕಾರ್ಯದರ್ಶಿ ಪ್ರದೀಪ್ ಕುಮಾರ್ ಹಾಗೂ ಪಾಕಿಸ್ತಾನದ ಸೈಯದ್ ಅಥರ್ ಅಲಿ ನಡುವೆ ನಡೆದ ಮಾತುಕತೆಯೂ ಎಂದಿನಂತೆ ಮುರಿದು ಬಿದ್ದಿದೆ. ಕಾರಣ, 84ರಿಂದ ಅನುಸರಿಸಿಕೊಂಡು ಬರುತ್ತಿರುವ Actual Ground Position Line(AGPL) ಅನ್ನು ಅಧಿಕೃತ ಎಂದು ಪಾಕ್ ಒಪ್ಪಿಕೊಂಡರೆ ಮಾತ್ರ ಸೈನ್ಯದ ಹಿಂತೆಗೆತ ಎಂಬ ಭಾರತದ ಕಠಿಣ ನಿಲುವು. ಆದರೆ, ಎಂದಿನಂತೆ ಪಾಕ್ ಈ ನಿಬಂಧನೆಗೆ ಒಪ್ಪಿಲ್ಲ. ಇಲ್ಲೇ ತಿಳಿಯುತ್ತದೆ ಪಾಕ್‌ನ ಕುತಂತ್ರ! AGPL ಅನ್ನು ಅಧಿಕೃತ ಎಂದು ಒಪ್ಪಿಕೊಂಡರೆ ಸಿಯಾಚಿನ್ ಶಾಶ್ವತವಾಗಿ ಭಾರತಕ್ಕೆ ಸೇರುತ್ತದೆ, ತಾನು ಅದಕ್ಕಾಗಿ ಪಟ್ಟ ’ಶ್ರಮ’ವೆಲ್ಲಾ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ ಎಂಬುದು ಅದಕ್ಕೆ ಗೊತ್ತು.

Click on Image to Enlarge
          ಪಾಕ್‌ನ ಇನ್ನೊಂದು ವಾದವೆಂದರೆ, ಸಿಯಾಚಿನ್ ಸಹ ಕಾಶ್ಮೀರಕ್ಕೇ ಸೇರಿರುವುದರಿಂದ ಅದನ್ನು ವಿವಾದಗ್ರಸ್ತ ಭೂಮಿ ಎಂದು ಪರಿಗಣಿಸಿ ಕಾಶ್ಮೀರ ಮಾತುಕತೆಯಲ್ಲೇ ಅದನ್ನೂ ಸೇರಿಸಬೇಕು ಎಂಬುದು. ಇದಕ್ಕೆ ಆಸ್ಪದ ಕೊಡದ ಭಾರತ, ಸಿಯಾಚಿನ್ ಅನ್ನು ಕಾಶ್ಮೀರ ಮಾತುಕತೆಯಿಂದ ದೂರವೇ ಇಟ್ಟಿದೆ. ಒಮ್ಮೆ ಪಾಕ್ ಕೈಗೆ ಸಿಯಾಚಿನ್ ಸಿಕ್ಕಿತೆಂದರೆ, ಅದನ್ನು ಪಡೆಯುವುದು ಚೀನಾಕ್ಕೆ ಬಹಳ ಸುಲಭದ ಕೆಲಸ. ಆ ಮೂಲಕ ಭಾರತವನ್ನು ಹೆದರಿಸಬಹುದು ಎಂಬುದು ರಕ್ಷಣಾ ವಿಮರ್ಷಕರ ಅಭಿಪ್ರಾಯ.

          ಪಾಕಿಸ್ತಾನದ ಮೇಲಿರುವ ಅಪನಂಬಿಕೆಯಿಂದ ಭಾರತವು ಸಿಯಾಚಿನ್‌ನಿಂದ ಸೇನೆಯನ್ನು ಹಿಂತೆಗೆದುಕೊಳ್ಳುತ್ತಿಲ್ಲ ಎಂಬುದು ಹೊರಗಿನ ಚಿತ್ರವಾದರೂ, ಸೇನೆ ಹಿಂತೆಗೆದುಕೊಂಡರೆ ಶಾಂತಿಯ ಹೆಸರಿನಲ್ಲಿ ಅಮೆರಿಕದ ಒತ್ತಡಕ್ಕೆ ಮಣಿದು ನಮ್ಮ ನಾಯಕರು ಅದನ್ನು ಪಾಕಿಸ್ತಾನಕ್ಕೆ ಒಪ್ಪಿಸುತ್ತಾರೆ ಎಂಬ, ನಮ್ಮ ನಾಯಕರ ಮೇಲೆ ಸೇನೆಗಿರುವ ಬಲವಾದ (ಅಪ)ನಂಬಿಕೆಯೇ ಕಾರಣ ಎಂಬುದು ಸತ್ಯ. ಒಟ್ಟಿನಲ್ಲಿ ಇತಿಹಾಸದಿಂದ ನಾವು ಈಗಲಾದರೂ ಪಾಠ ಕಲಿಯಲೇ ಬೇಕು. ಪಾಕ್‌ನೊಂದಿಗೆ ವ್ಯವಹರಿಸುವಾಗ ಹಿಂದೆ ಆದ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳಬೇಕಾದುದು, ಸೇನೆಯ ಮೇಲೆ ಅನಗತ್ಯ ಒತ್ತಡ ಹೇರದಿರುವುದು ನಮ್ಮ ನಾಯಕರ ಕರ್ತವ್ಯ.

          ಕೊನೆ ಹನಿ: ಇಡೀ ದೇಶದಲ್ಲಿ ನಮ್ಮ ನಾಯಕರ ನಿಜವಾದ ಬಂಡವಾಳ ಗೊತ್ತಿರುವುದು ಭಾರತೀಯ ಸೈನ್ಯಕ್ಕೆ ಮಾತ್ರ !. ನಮ್ಮ ಸೈನ್ಯದ ಮೇಲೆ ಅಭಿಮಾನ ಪಡಲು ಇನ್ನೊಂದು ಕಾರಣ ಸಿಕ್ಕಂತಾಯಿತು.

ಶನಿವಾರ, ಏಪ್ರಿಲ್ 09, 2011

ಊರಿಗೂರೇ ಹೊರಗಿದ್ದರೂ ಗೂಡು ಬಿಡದ ಯುವ ಹಕ್ಕಿಗಳು


     ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಬಹುದೊಡ್ಡ ತಿರುವು ಅಣ್ಣಾ ಹಜಾರೆಯವರ ಹೋರಾಟದಿಂದ ದೊರಕಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಜೆ.ಪಿ ಆಂದೋಲನ ಹಾಗೂ ಭಾರತ ಕ್ರಿಕೆಟ್ ಗೆದ್ದಾಗ ಬಿಟ್ಟರೆ ಇಷ್ಟು ಮಟ್ಟದಲ್ಲಿ ಯುವಕರು ಬೀದಿಗಿಳಿದದ್ದು ಇದೇ ಮೊದಲು. ಆದರೆ, ಇಂತಹ ಬಹುದೊಡ್ಡ ಹೋರಾಟದ ಸಮಯದಲ್ಲಿ ರಾಜಕೀಯ ಪಕ್ಷಗಳಲ್ಲಿರುವ ಯುವ ಮುಖಂಡರು ಏನು ಮಾಡುತ್ತಿದ್ದರು?

    ಯುವಕರು ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂಬ ಮಾತು ಪದೇ ಪದೇ ಕೇಳಿಬರುತ್ತಿರುತ್ತದೆ. ಹಾಗೆಯೇ, ಪ್ರತಿ ಸಲದ ಚುನಾವಣೆಗಳಲ್ಲೂ ಹಲವು ಐ.ಟಿ ಉದ್ಯೋಗಿಗಳು, ಕಾಲೇಜ್ ವಿದ್ಯಾರ್ಥಿಗಳು ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಠೇವಣಿ ಕಟ್ಟಿ ಚುನಾವಣೆಯಲ್ಲಿ ಸ್ಪರ್ದಿಸುತ್ತಾರೆ. ಆದರೆ, ಅವರು ಪಡೆಯುವ ಓಟುಗಳು ಸಾವಿರವನ್ನೂ ದಾಟುವುದಿಲ್ಲ. ಗೆಲ್ಲುವ ಮಾತಿರಲಿ, ಠೇವಣಿಯೂ ಬರುವುದಿಲ್ಲ. ಹಲವು ಬಾರಿ ಇಂತಹವರಿಗೆ ಗೆಲ್ಲಲೇಬೇಕೆಂಬ ಹಂಬಲವೂ ಇರುವುದಿಲ್ಲ. ತಾವು ಓಡಾಡುತ್ತಿರುವ ಸ್ನೇಹಿತರ ಮದ್ಯೆ, ತಮ್ಮ ವೃತ್ತಿ ಬಾಂಧವರ ನಡುವೆ ತಮ್ಮದೊಂದು ಹೆಸರಿನ ಛಾಪು ಮೂಡಿಸಿಕೊಳ್ಳಲೂ ಇಂತಹ ಕೆಲಸಗಳು ನಡೆಯುತ್ತವೆ. ಆದರೆ, ಈಗಾಗಲೇ ಯಾವುದಾದರೂ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿರುವ, ಅಲ್ಲಿ ಕೆಲಸ ಮಾಡುತ್ತಿರುವ ಯುವಕರು ಗೆದ್ದು ಬರುತ್ತಿದ್ದಾರೆ. ಇಂದಿನ ವಯಸ್ಸಾದ ನಾಯಕರ ನಂತರ ಅಧಿಕಾರದ ಗದ್ದುಗೆ ಏರುವವರು ಇಂಥವರೇ. ಆದರೆ, ಅಣ್ಣಾ ಹಜಾರೆಯವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲಿ ಯಾವೊಬ್ಬ ಯುವ ರಾಜಕಾರಣಿಯೂ ತನ್ನ ಪಕ್ಷದ ಸುಳಿಯಿಂದ ಹೊರಬಂದು ಪ್ರತಿಭಟನೆಯಲ್ಲಿ ತೊಡಗಲಿಲ್ಲ್ಲ. ದೇಶದ ಇಂಗ್ಲಿಷ್ ಮಾಧ್ಯಮಗಳಿಂದ ’ಭಾರತದ ಯುವರಾಜ’ ಎಂದೆನಿಸಿಕೊಳ್ಳುತ್ತಿರುವ, " ಬ್ರಷ್ಟಾಚಾರದ ವಿರುದ್ಧ ನಾವೆಲ್ಲರೂ ಒಂದಾಗಿ ಹೋರಾಡಬೇಕು. ಬ್ರಷ್ಟಾಚಾರಿಗಳಿಗೆ ಶಿಕ್ಷೆ ಇಪ್ಪತ್ತು ವರ್ಷಗಳ ಬದಲಾಗಿ ಆರು ತಿಂಗಳಲ್ಲೇ ಸಿಗುವಂತಾಗಬೇಕು. ನಾವು ಈ ವ್ಯವಸ್ಥೆಯನ್ನು ಬದಲಾಯಿಸಬೇಕು, ಯುವಕರು ರಾಜಕೀಯಕ್ಕೆ ಬರಬೇಕು" ಎಂದು ಮಹಾರಾಷ್ಟ್ರದಲ್ಲಿ ಬಾಷಣ ಬಿಗಿದಿದ್ದ  ರಾಹುಲ್ ಗಾಂಧಿ ಮನೆ ಬಿಟ್ಟು ಹೊರಡಲೇ ಇಲ್ಲ. ತಮ್ಮ ಪಕ್ಷವನ್ನು ಅದಿಕಾರಕ್ಕೆ ತಂದರೆ, "ಬ್ರಷ್ಟಾಚಾರದ ಮರವನ್ನು ಬುಡಮೇಲು ಮಾಡುತ್ತೇವೆ" ಎಂದು ಅಸ್ಸಾಂನಲ್ಲಿ ಬಡಬಡಾಯಿಸಿದ್ದ ವರುಣ್ ಗಾಂಧಿ ಮದುವೆಯ ಗುಂಗಿನಿಂದ ಹೊರಗೇ ಬರಲಿಲ್ಲ. ಕರುಣಾನಿಧಿಯವರ ಪುತ್ರಿ ಕನಿಮೋಳಿ 2ಜಿ ಹಗರಣದಲ್ಲಿ, ಚಿದಂಬರಂ ಪುತ್ರ ಕಾರ್ತಿ ಚಿದಂಬರಂ 2009ರ ಓಟಿಗಾಗಿ ನೋಟು ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ. ಇವರುಗಳನ್ನು ಹೊರತು ಪಡಿಸಿ, ವಂಶ ಪಾರಂಪರ್ಯಯವಲ್ಲದ ಅನೇಕ ’ಯುವ ಚೇತನಗಳೂ’!! ರಾಜಕಾರಣಿಗಳಾಗಿದ್ದಾರೆ. 


     ಕರ್ನಾಟಕದಲ್ಲಿ ಹಿಂದೆಂದೂ ಕೇಳರಿಯದಷ್ಟು ಮೊದಲನೇ ಬಾರಿ ಚುನಾವಣೆ ಗೆದ್ದವರಿದ್ದಾರೆ, ಅವರಲ್ಲಿ ಬಹುತೇಕರು ಯುವಕರು, ವಿದ್ಯಾವಂತರು, ವಿದೇಶದಿಂದ ಮರಳಿದವರು.... ಹೀಗೇ ಯುವ ರಾಜಕಾರಣಿಗಳ ದಂಡೇ ಇದೆ. ಕೃಷ್ಣ ಭೈರೇಗೌಡ, ಸಿ.ಟಿ. ರವಿ, ಸುನಿಲ್ ಕುಮಾರ್, ಜನಾರ್ಧನ ಸ್ವಾಮಿ.....ಯಂತಹ ಹಲವರು ಇಲ್ಲಿದ್ದಾರೆ. ಒಂದು ಆಶ್ಚರ್ಯದ ವಿಷಯವೆಂದರೆ, ಅಣ್ಣಾ ಹಜಾರೆಯವರ 98ಗಂಟೆಗಳ ಉಪವಾಸದ ಸಮಯದಲ್ಲಿ ಇವರಾರೂ ತಮ್ಮ ಗೂಡು ಬಿಟ್ಟು ಹೊರಗೆ ಬರಲೇ ಇಲ್ಲ. ಕಾರಣ ಸ್ಪಷ್ಟ. ತಾವು ಪ್ರತಿನಿಧಿಸುತ್ತಿರುವ ಪಕ್ಷದಿಂದ ಈ ಪ್ರತಿಭಟನೆಯಲ್ಲಿ ಭಾಗವಹಿಸಲು ಅಥವಾ ಬೆಂಬಲ ಸೂಚಿಸಲು ಆಜ್ಞೆ ಬಂದಿಲ್ಲ. ಪಕ್ಷದ ಸೂಚನೆಯಿಲ್ಲದೇ ಬಾಗವಹಿಸಿದರೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಸಿಗುವುದಿಲ್ಲ, "ತಮ್ಮ ಬವಿಷ್ಯ" ಮಂಕಾಗುತ್ತದೆ ಎಂದು. 
ಮುಂದೆ ನಮ್ಮನ್ನು ಆಳಲಿರುವ ಇವರು ಇದಾಗಲೇ ಅಧಿಕಾರದ, ಖುರ್ಚಿಯ ಆಸೆಗೆ ಬಿದ್ದಿದ್ದಾರೆ. ಪಕ್ಷ, ಸಿದ್ದಾಂತಗಳ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಮೊದಲು ಇಂತಹ ಯವ ರಾಜಕಾರಣಿಗಳು ತಮ್ಮ ಆವರಣ ಮೀರಿ ರಾಜಕೀಯ ಮಾಡುವುದನ್ನು ಕಲಿಯಬೇಕು. ಪಕ್ಷದ ಸಿದ್ದಾಂತ ಏನೇ ಇರಲಿ, ವಿಷಯಾಧಾರಿತವಾಗಿ ರಾಜಕೀಯ ವಿರೋಧಿಗಳಿಗೂ ಬೆಂಬಲ ಸೂಚಿಸುವಷ್ಟು ದೊಡ್ಡ ಮನಸ್ಸಿನವರಾಗಬೇಕು. ಹೆಚ್ಚು ಲೆಕ್ಕಾಚಾರ ಹಾಕುವುದನ್ನು ಬಿಟ್ಟು ಬೀದಿಗಿಳಿಯಬೇಕು, ವಯಸ್ಸಿನಲ್ಲಿ ಮಾತ್ರ ಅಲ್ಲ, ಮನಸ್ಸಿನಲ್ಲೂ ಯುವಕರಾಗಬೇಕು.

ಬುಧವಾರ, ಮಾರ್ಚ್ 23, 2011

ಬಲಿದಾನವನ್ನು ನೆನೆಯೋಣ


ನಮ್ಮ ಇಂದಿಗಾಗಿ ತಮ್ಮ ನಾಳೆಗಳನ್ನು ತ್ಯಾಗ ಮಾಡಿದರು ಅವರು
ಜೀವ ತ್ಯಾಗ ಮಾಡುವ ಅವಶ್ಯಕತೆ ಇಂದಿಲ್ಲ
ಅವರಲ್ಲಿದ್ದ ಸ್ಫೂರ್ತಿ, ಚೇತನವನ್ನು ಪಡೆಯೋಣ,
ಬಲಿದಾನವನ್ನು ನೆನೆಯೋಣ.


ನಮ್ಮ ಆಸೆ ಈಡೇರಿಸಿಕೊಳ್ಳಲು ಏನು ತ್ಯಾಗ ಮಾಡಬಹುದು ನಾವು?
ನಿದ್ದೆ- ಊಟ? ಮನೆ-ಮಠ? ಅಷ್ಟೇ ತಾನೇ ?
ತ್ಯಾಗಿಗಳಲ್ಲ ಅವರು, ಪರಮ ಸ್ವಾರ್ಥಿಗಳು
ತ್ಯಜಿಸಿದರು ದೇಹವನ್ನೇ ತಮ್ಮ ಆಸೆ, ಆಕಾಂಕ್ಷೆ, ಗುರಿಗಾಗಿ.
ಅವರಂತೆ ಕಳೆಯುವುದರಲ್ಲಿ ಪಡೆಯುವುದ ಕಲಿಯೋಣ
ಬಲಿದಾನವನ್ನು ನೆನೆಯೋಣ.

ಗುರುವಾರ, ಜನವರಿ 27, 2011

Bill Gates -New Health Partnership in Afghanistan and Pakistan



              ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ಬಿಲ್ ಗೇಟ್ಸ್ ಫೌಂಡೇಷನ್ನಿನ ಸಹಭಾಗಿತ್ವದಲ್ಲಿ ನಡೆದ ವಿಷಯವೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಸಂತೋಷವಾಗುತ್ತಿದೆ. ಅಬುದಾಭಿಯ ಉಪನಾಯಕ, ದೊರೆ ಶ್ರೀ ಶ್ರೀ ಶೇಖ್ ಮೊಹಮ್ಮದ್ ಬಿನ್ ಜಯಾದ್ ಅಲ್ ನಹ್ಯಾನ್ ಅವರು ಹಾಗೂ ನಾನು ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದಲ್ಲಿ ವಿವಿಧ ಖಾಯಿಲೆಗಳಿಂದ ನರಳುತ್ತಿರುವ ಮಕ್ಕಳಿಗಾಗಿ ಜೀವನಾವಶ್ಯಕ ಲಸಿಕೆಗಳನ್ನು ಕೊಂಡು- ವಿತರಿಸುವ, ಆ ಮಕ್ಕಳ ಆರೋಗ್ಯ ವೃದ್ದಿಸುವ, ಮೂಲಕ ಜೀವನಪೂರ್ತಿ ರೋಗರಹಿತರನ್ನಾಗಿ ಮಾಡುವ ಕಾರ್ಯವನ್ನು ಆರಂಬಿಸಲಿದ್ದೇವೆ.

            ಮಕ್ಕಳನ್ನು ಮಾರಣಾಂತಿಕ ಹಾಗೂ ತಡೆಗಟ್ಟಬಹುದಾದ ಖಾಯಿಲೆಗಳಿಂದ ರಕ್ಷಿಸುವ ವಿಚಾರ ಬಂದಾಗ ಹನ್ನೆರಡು ಸಾವಿರ ಕಿಲೋಮೀಟರ್ ಗಿಂತ ಹೆಚ್ಚಿನ ಹಾಗೂ ಸುಮಾರು ಹನ್ನೆರಡು ಗಂಟೆಗಳ ಅವಧಿಯ ದೂರ ನಗಣ್ಯವಾಗಿ, ನಮ್ಮಿಬ್ಬರ ವಿಚಾರಗಳೂ ಒಂದುಗೂಡಿದ್ದವು. ಕಡಿಮೆ ಖರ್ಚಿನ ಆದರೆ ಅಮೋಘ ಫಲಿತಾಂಶವುಳ್ಳ, ಮಕ್ಕಳಿಗೆ ಹಾಕುವ ವ್ಯಾಕ್ಸಿನ್ ನ ಕುರಿತು, ವಿವಾದಗ್ರಸ್ಥ ಪ್ರದೇಶದಲ್ಲಿ ವಾಸಿಸುವ ಅತಿನೊಂದ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕಾದ ಪ್ರಾಮುಖ್ಯತೆ ಹಾಗೂ ಉತ್ತಮ ಭವಿಷ್ಯಕ್ಕಾಗಿ ಆ ಮಕ್ಕಳ, ಸಂಸಾರದ, ಸಮುದಾಯದ ಸಹಾಯ ಮಾಡುವ ಅರಿವು ನಮ್ಮಿಬ್ಬರಿಗೂ ಆಗಿದೆ.

Click Here
            ಅದಕ್ಕಾಗಿಯೇ ಶ್ರೀ ಶ್ರೀ ಶೇಖ್ ಮೊಹಮ್ಮದ್ ಆವರು ಹಾಗೂ ಫೌಂಡೇಷನ್ ಜೊತೆಗೂಡಿ, 100 ಮಿಲಿಯನ್ ಡಾಲರ್ ಹಣವನ್ನು ವಿಶ್ವಸಮುದಾಯದ ಆರೋಗ್ಯಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಜಿ.ಎ.ವಿ.ಐ ಅಲಯನ್ಸ್, ವಿಶ್ವ ಆರೋಗ್ಯ ಸಂಸ್ಥೆ, ಯೂನಿಸೆಫ್ ಗಳ ಮೂಲಕ-ಜೀವರಕ್ಷಕ ಪಂಚವೇಲೆನ್ಸೀಯ ವ್ಯಾಕ್ಸಿನ್, ನ್ಯೂಮೊಕಾಕಲ್ ವ್ಯಾಕ್ಸಿನ್ ಹಾಗೂ ಪೋಲಿಯೋ ವ್ಯಾಕ್ಸಿನ್ ಗಳನ್ನು ಕೊಂಡು- ವಿತರಿಸಲು ನಿಡುತ್ತಿದ್ದೇವೆ.

            ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ರಾಜಕೀಯ ಅಸ್ಥಿರತೆಗಳು ಹಾಗೂ ನೈಸರ್ಗಿಕ ವಿಕೋಪಗಳಿಂದಾಗಿ 5ವರ್ಷದ ಒಳಗಿನ ಮಕ್ಕಳು ವ್ಯಾಕ್ಸಿನ್ ನಿಂದ ಮಾತ್ರ ತಡೆಗಟ್ಟಬಹುದಾದ ಖಾಯಿಲೆಗಳಿಂದ ನರಳುತ್ತಿದ್ದಾರೆ. ನವಜಾತ ಹಾಗೂ 5ವರ್ಷದೊಳಗಿನ ಮಕ್ಕಳ ಸಾವಿನ ಸಂಖ್ಯೆಯು ಈ ದೇಶಗಳಲ್ಲಿ ಅತಿ ಹೆಚ್ಚಿದ್ದು, ಕೇವಲ ನ್ಯೂಮೋನಿಯಾ ಖಾಯಿಲೆಯೊಂದರಿಂದಲೇ ಶೇಕಡಾ 26ರಷ್ಟು ಮಕ್ಕಳು ಸಾವನ್ನಪ್ಪುತ್ತಿದ್ದಾರೆ.

            ಇಡೀ ಪ್ರಪಂಚದಲ್ಲೇ ಕಳೆದ 20ವರ್ಷಗಳ ಪರಿಶ್ರಮದ ಫಲವಾಗಿ ಪೋಲಿಯೋವನ್ನು ಶೇಕಡಾ 99ರಷ್ಟು ಹೊಡೆದೋಡಿಸಿದ್ದರೆ, ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನಗಳು ಮಾತ್ರ ಇದರಿಂದ ಹೊರತಾಗಿದ್ದು, ಪೋಲಿಯೋ ಸಂಖ್ಯೆ ಹೆಚ್ಚುತ್ತಿರುವ ಪ್ರಪಂಚದ ನಾಲ್ಕು ದೇಶಗಳ ಪೈಕಿ ಈ ಎರಡೂ ದೇಶಗಳೂ ಸೇರಿವೆ. ಮನುಷ್ಯನನ್ನು ಶಾಶ್ವತವಾಗಿ ಅಂಗವಿಕಲನನ್ನಾಗಿಸುವ ಪೋಲಿಯೊವನ್ನು ತಡೆಗಟ್ಟಬಹುದಾಗಿದ್ದರೂ, ಈ ದೇಶಗಳ ಮಕ್ಕಳು ಮಾತ್ರ ಇದರಿಂದ ನರಳುತ್ತಿದ್ದಾರೆ. ಒಂದು ದೇಶದಿಂದ ಇನ್ನೊಂದಕ್ಕೆ ಪರಸ್ಪರ ಹರಡಿಕೊಳ್ಳುತ್ತಿರುವ ಈ ಖಾಯಿಲೆಯನ್ನು ಎರಡೂ ಕಡೆ ಒಮ್ಮೆಲೇ ನಿವಾರಿಸುವ ಅನಿವಾರ್ಯ ಪರಿಸ್ಥಿತಿ ಇಂದಿನದು.

            ಶ್ರೀ ಶ್ರೀ ಶೇಖ್ ಮೊಹಮ್ಮದ್ ಅವರಂತಹ ವಿಶ್ವನಾಯಕರ ಸಹಕಾರದಿಂದ ಇನ್ನೂ ಹೆಚ್ಚಿನ ಹುಮ್ಮಸ್ಸು ನನಗೆ ದೊರೆತಿದ್ದು, ಅಫ್ಘನ್ ಹಾಗೂ ಪಾಕಿಸ್ತಾನಿ ಮಕ್ಕಳ ಆರೋಗ್ಯವನ್ನು ಸುಧಾರಿಸುವ ಮೂಲಕ ಅವರ ಜೀವನವನ್ನು ಆರೋಗ್ಯಕರವಾಗಿ ಪ್ರಾರಂಭಿಸುವುದರ ಕಡೆಗೆ ದಾಪುಗಾಲು ಹಾಕುವ ವಿಶ್ವಾಸ ನನಗಿದೆ.