ಭಾನುವಾರ, ಡಿಸೆಂಬರ್ 13, 2020

‘ಪ್ರಾಕ್ಟೀಸಿಂಗ್ ಹಿಂದು’ ಬನ್ನಂಜೆ ಗೋವಿಂದಾಚಾರ್ಯ

‘ಬಹಳ ಮಠಗಳು ನಾಟಕ ಕಂಪನಿ ನಡೆಸುತ್ತವೆ....ಒಬ್ಬರು ನೂರೆಂಟು ಶ್ರೀ ಬೇಕೆಂದರೆ ಮತ್ತೊಬ್ಬರು ಸಾವಿರದೆಂಟು ಶ್ರೀ ಇರಲಿ ಎನ್ನುತ್ತಾರೆ...  ಸ್ವಾಮಿಗಳಿಗೆ ಸುತ್ತಮುತ್ತ ಬೇಲಿಗಳಿರುತ್ತವೆ. ಹೊರಗಿನ ಪ್ರಪಂಚದಲ್ಲಿ ಏನು ಆಗುತ್ತಿದೆ ಎಂಬುದು ಅವರಿಗೆ ತಿಳಿಯದಂತೆ ಮಾಡಲಾಗಿರುತ್ತದೆ. ಪ್ರಪಂಚದ ನಿಜಸತ್ಯ ತಿಳಿಯುವುದು ಬಹಳ ಕಷ್ಟ.... ನನಗೂ ಒಂದು ಆಶ್ರಮ ಕೊಡುವ ಪ್ರಸ್ತಾವನೆ ಬಂದಿತ್ತು. ದಮ್ಮಯ್ಯ ನನ್ನನ್ನು ನಾನಾಗಿರಲು ಬಿಟ್ಟುಬಿಡಿ ಎಂದೆ’

ಹೀಗೆ ಮಠಗಳ ಕುರಿತು ಯಾರೇ ಮಾತನಾಡಿದರೂ ಆಸ್ತಿಕರಿಗೆ ಸಿಟ್ಟು ಬರುವುದು ಸಹಜ. ಆದರೆ 2015ರ ಡಿಸೆಂಬರ್ 27ರಂದು ಈ ಮಾತಿಗೆ ಎದುರು ಕುಳಿತ ಸಾವಿರಾರು ಜನರು ಮುಗುಳ್ನಕ್ಕು ಸುಮ್ಮನಾದರು, ಕೆಲವರು ಚಪ್ಪಾಳೆ ತಟ್ಟಿದರು. ಅಲ್ಲಿದ್ದವರಲ್ಲಿ ಶೇ.100 ಜನರು ಆಸ್ತಿಕರೇ ಆಗಿದ್ದು, ಅನೇಕ ಮಠಗಳ ಸ್ವಾಮೀಜಿಗಳೂ ಇದ್ದರು ಎಂಬುದು ವಿಶೇಷ. ಈ ಮಾತುಗಳನ್ನಾಡಿದವರು ಬನ್ನಂಜೆ ಗೋವಿಂದಾಚಾರ್ಯ. 2015ರ ಡಿಸೆಂಬರ್ 23ರಿಂದ ಬೆಂಗಳೂರಿನ ದಯಾನಂದ ಸಾಗರ ಕಾಲೇಜಿನಲ್ಲಿ ಆಯೋಜಿಸಿದ್ದ ಐದು ದಿನಗಳ ‘ಬನ್ನಂಜೆ 80ರ ಸಂಭ್ರಮ’ದಲ್ಲಿ ಈ ಮಾತನ್ನಾಡಿದ್ದರು. ‘ವಿಜಯವಾಣಿ’ಗೆ ಕಾರ್ಯಕ್ರಮದ ವರದಿ ಮಾಡಲು ತೆರಳಿದ್ದು ನನಗೆ ಎಂದೂ ಮರೆಯದ ಅನುಭವ. ಇದೇ ಕಾರ್ಯಕ್ರಮದ ಸಮಾರೋಪದಲ್ಲಿ ಬನ್ನಂಜೆ ಎಂದಿನಂತೆ ಮನಬಿಚ್ಚಿ ಮಾತಾಡಿದ್ದರು.

ಅವರೊಬ್ಬ ‘ಪ್ರಾಕ್ಟೀಸಿಂಗ್ ಹಿಂದು’. ಹಿಂದು ಸಮಾಜ ಎಂದಿಗೂ ಟೀಕೆಗಳಿಗೆ ಹಿಂಜರಿಯುವುದಿಲ್ಲ. ಆದರೆ ಆ ಟೀಕೆ ಯಾರಿಂದ ಬರುತ್ತದೆ ಎಂಬುದು ಮಾತ್ರ ಮುಖ್ಯ. ತಮ್ಮ ವೈಯಕ್ತಿಕ ಜೀವನವನ್ನು ಶುದ್ಧವಾಗಿಟ್ಟುಕೊಂಡು, ಸಂಸ್ಕೃತಿಯನ್ನು ಪಾಲನೆ ಮಾಡಿದವರಾದರೆ ರಾಮನಂಥ ರಾಮನನ್ನು, ಸೀತೆಯಂಥ ಸೀತೆಯನ್ನೂ ವಸ್ತುನಿಷ್ಠವಾಗಿ ವಿಶ್ಲೇಷಣೆ ಮಾಡಿ ಜಯಿಸಿಕೊಳ್ಳಬಹುದು ಎಂಬುದಕ್ಕೆ ಡಾ. ಎಸ್. ಭೈರಪ್ಪನವರೇ ಸಾಕ್ಷಿ. ಆದರೆ ಅದೇ ಯು.ಆರ್. ಅನಂತಮೂರ್ತಿಯವರ ಟೀಕೆಯನ್ನು ಸಮಾಜ ಸಹಿಸಲಿಲ್ಲ, ಏಕೆಂದರೆ ಸಾಂಸ್ಕೃತಿಕ ವಿಚಾರದಲ್ಲಿ ಮಾತನಾಡಲು ಅವರೊಬ್ಬ ‘ಹೊರಗಿನವರು’ ಎಂಬ ಭಾವನೆ ಬೇರೂರಿತ್ತು. ‘ಇನ್‌ಸೈಡ್ ಕ್ರಿಟಿಕ್’ ಬನ್ನಂಜೆ ಮಾಡಿದ ಟೀಕೆಯನ್ನು ಸಹರ್ಷದಿಂದ ಜನರು ಸ್ವೀಕರಿಸಿದ್ದರು.

ಸುಖಾಸುಮ್ಮನೆ ಎಲ್ಲರ ವಿರುದ್ಧ ಮಾತನಾಡುತ್ತಾರೆ ಎಂಬ ಆರೋಪ ಬನ್ನಂಜೆ ಅವರ ಮೇಲೆ ಇದ್ದೇ ಇತ್ತು. ಬನ್ನಂಜೆ ಅವರೇ ಹೇಳಿದಂತೆ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿಯವರನ್ನೂ ಅವರು ಟೀಕಿಸದೇ ಬಿಟ್ಟಿಲ್ಲ. ಆದರೆ 80ರ ಸಂಭ್ರಮ ಕಾರ್ಯಕ್ರಮಕ್ಕೆ ವಿಶ್ವೇಶತೀರ್ಥರು ಆಗಮಿಸಿ ಹರಸಿದರು. ‘ಉಡುಪಿಯಲ್ಲಿ ಕೃಷ್ಣ ತಿರುಗಿಲ್ಲ ಎಂಬುದು ಅಲ್ಲಿನ ವಾಸ್ತು ನೋಡಿದರೆ ತಿಳಿಯಬಹುದು. ಈ ವಿಚಾರ ಸ್ವತಃ ಪೇಜಾವರರಿಗೆ ತಿಳಿದಿದ್ದರೂ ಯಾರೋ ಬೇಸರಪಟ್ಟುಕೊಳ್ಳುತ್ತಾರೆ ಎಂಬ ಕಾರಣಕ್ಕೆ ಸತ್ಯ ಹೇಳುತ್ತಿಲ್ಲ’ ಎಂದು ಅಲ್ಲಿಯೂ ಬನ್ನಂಜೆ ಹೇಳಿದ್ದರು. ಆದರೆ ಮರು ಕ್ಷಣವೇ ‘ಮಠಮಾನ್ಯಗಳಿಂದ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸುವ ಕೆಲಸ ಆಗುತ್ತಿರುವುದು ಸಂತಸದ ವಿಚಾರ‘ ಎಂಬ ಸತ್ಯವನ್ನೂ ಅಷ್ಟೇ ಸಹಜವಾಗಿ ಹೇಳುತ್ತಿದ್ದರು ಬನ್ನಂಜೆ.

ಯಾವುದೇ ಪ್ರವಚನ ಆರಂಭಕ್ಕೆ ಮುನ್ನ ಅವರು ಹೇಳುತ್ತಿದ್ದ ಸಾಲುಗಳನ್ನು ಹಾಗೆಯೇ ಓದಿದರೂ, ಅದು ಬನ್ನಂಜೆ ಅವರ ಧ್ವನಿಯಲ್ಲೇ ಕೇಳಿಸುತ್ತದೆ.

ಜಯತಿ ಪರಾಶರ ಸೂನುಃ ಸತ್ಯವತೀಹೃದಯ ನಂದನೋ ವ್ಯಾಸಃ 

ಯಸ್ಯಾಸ್ಯಕಮಲಗಲಿತಂ ವಾಜ್ಮಯಮ್ ಅಮೃತಂ ಜಗತ್ಬಿಬತಿ ॥

ಭುಜಗಭೋಗಾಭಮುದ್ಯಮ್ಯ ಹೃದ್ಯಂ ನಿಜಭುಜಂ ದಕ್ಷಿಣಂ ಲಕ್ಷಣಾಢ್ಯಮ್ 

ಲಳಿತಮುದ್ರಿಕ್ತವಿಜ್ಞಾನಮುದ್ರಂ ಭಜಭಜ ಅನಂತಮಿತ್ಯಾಲಪಂತಮ್ ॥

ಪ್ರಣತವಾನ್ ಪ್ರಾಣಿನಾಂ ಪ್ರಾಣಭೂತಂ ಪ್ರಣತಿಭಿಃ ಪ್ರೀಣಯೇ ಪೂರ್ಣಬೋಧಮ್ ॥

ಭವದವೋಷ್ಟೇನ ತಾತಪ್ಯಮಾನಾನ್ ಭುವಿ ಪರಂ ನಾಥಮಪ್ರೇಕ್ಷಮಾಣಾನ್ 

ಭುವನಮಾನ್ಯೇನ ಚ ಅನ್ಯೇನ ದೋಷ್ಟಾ ಭವತು ಭೀರ್ಮೇತಿ ನಃ ಸಾಸ್ತ್ವಯನ್ತಮ್ ॥

ಪ್ರಣತವಾನ್ ಪ್ರಾಣಿನಾಂ ಪ್ರಾಣಭೂತಂ ಪ್ರಣತಿಭಿಃ ಪ್ರೀಣಯೇ ಪೂರ್ಣಬೋಧಮ್ ॥


ಅವರ ವಾದಗಳಲ್ಲಿ, ವಿಚಾರಗಳಲ್ಲಿ ಅಧ್ವೈತ, ವಿಶಿಷ್ಟಾಧ್ವೈತ ಅನುಯಾಯಿಗಳಿಗೆ, ಅನೇಕ ಬಾರಿ ಧ್ವೈತ ಅನುಯಾಯಿಗಳಿಗೂ ಭಿನ್ನಾಭಿಪ್ರಾಯವಿರಬಹುದು. ಆದರೆ ದೇಶ, ಧರ್ಮ, ಭಾಷೆ, ಸಂಸ್ಕೃತಿ ಕುರಿತ ನಿಷ್ಠೆಯನ್ನು ಪ್ರಶ್ನಿಸಲು ಸಾಧ್ಯವೇ ಇಲ್ಲ.

ಬನ್ನಂಜೆ 80ರ ಸಂಭ್ರಮಕ್ಕೆ ಒಂದು ವರ್ಷ ಸಂದ ಸಂದರ್ಭದಲ್ಲಿ 2016ರ ಡಿಸೆಂಬರ್ 27ರಂದು ನಡೆದಿದ್ದ ‘ಬನ್ನಂಜೆ 80ರ ಸಂಭ್ರಮಕೆ ಒಂದು ವರುಷ’ ಕಾರ್ಯಕ್ರಮ ವರದಿಗೆ ತೆರಳುವ ಅವಕಾಶವೂ ಸಿಕ್ಕಿತ್ತು. ಈ ಸಂದರ್ಭದಲ್ಲಿ ಬನ್ನಂಜೆ ಹೇಳಿದ ಮಾತು ‘‘ಯಾವುದೇ ಕೆಲಸ ಮಾಡುವ ಮುನ್ನ ಅದನ್ನು ತಿಳಿಯಬೇಕು, ಶ್ರದ್ಧೆಯಿಂದ ಮುಂದುವರಿಯಬೇಕು. ತಿಳುವಳಿಕೆ ಮೂಡುವವರೆಗೂ ಪ್ರಶ್ನಿಸುತ್ತಲೇ ಇರಬೇಕು. ಋಷಿ ಮುನಿಗಳ ಕಾಲದಿಂದಲೂ ಇದ್ದ ಪ್ರಶ್ನೆ ಕೇಳುವ ಪದ್ಧತಿ ತಪ್ಪಿ ಹೋಗಿದ್ದಕ್ಕೆ ನಮ್ಮ ಹಿರಿಯರು ಕಾರಣ. ಮಕ್ಕಳು ಪ್ರಶ್ನಿಸಿದಾಗ ಉತ್ತರ ಹೇಳಲು ಅಶಕ್ತರಾಗಿದ್ದವರು ದಬಾಯಿಸಿದರು. ಪ್ರಶ್ನೆ ಮಾಡಿದರೆ ನರಕ ಪ್ರಾಪ್ತಿಯಾಗುತ್ತದೆ ಎಂದು ಬೆದರಿಸಿದರು. ಹೀಗೆ ಅನೇಕರಿಂದ ದಬಾಯಿಸಿಕೊಂಡು ಪ್ರಶ್ನೆ ಕೇಳುವುದನ್ನೆ ಬಿಟ್ಟಿದ್ದೆ. ಆದರೆ ಒಮ್ಮೆ ನನ್ನ ತಂದೆಯವರು, ‘ಪ್ರಶ್ನೆ ಕೇಳುವ ಶಕ್ತಿಯಿರುವವನು ಉತ್ತರವನ್ನೂ ಕಂಡುಕೊ’ ಎಂದರು. ಆ ಮಾತು ನನ್ನನ್ನು ಅಂತರ್ಮುಖಿಯನ್ನಾಗಿಸಿತು.’

ಈಗಾಗಲೆ ಭಾಗವತ ಭಾಷ್ಯ ರಚನೆ ಚಾಲ್ತಿಯಲ್ಲಿದೆ. ಋಗ್ವೇದದ ಪವಮಾನ ಮಂಡಲಕ್ಕೆ ಭಾಷ್ಯ ಬರೆಯುವ ಇಚ್ಛೆಯಿದೆ. ನನ್ನಲ್ಲಿ ಅಹಂಕಾರ ಬರದಂತೆ ಎಲ್ಲರೂ ಹರಸಿ ಎಂದಿದ್ದರು. ‘ನನಗೆ ಕೆಲವು ಕನಸುಗಳಿವೆ. ಇನ್ನು ಮುಂದೆಯೂ ಆ ಕನಸುಗಳು ನನಸು ಆದೀತು. ಕನಸುಗಳು ನನಸಾಗದೇ ಸಾಯಬಾರದು ಎಂದು ಅಂದುಕೊಂಡಿದ್ದೇನೆ, ಭಗವಂತ ನನ್ನನ್ನು ಹರಸಿ....’ ಎನ್ನುತ್ತ ಮೈಕ್ ಹಿಡಿದು ಗದ್ಗದಿತರಾಗಿದ್ದ ಬನ್ನಂಜೆ ಅವರ ಮಾತು ಈಗಲೂ ಕೇಳಿಸುತ್ತಿದೆ. ಅವರ ಆತ್ಮಕ್ಕೆ ಸದ್ಗತಿ ದೊರಕಲಿ.


-ರಮೇಶ ದೊಡ್ಡಪುರ

ಗುರುವಾರ, ಡಿಸೆಂಬರ್ 10, 2020

ಸೀತೆ ಯಾವತ್ತೂ ಪುರುಷ ವಿರೋಧಿ ಆಗಲಿಲ್ಲ : ಉತ್ತರಕಾಂಡ ಇಂಗ್ಲಿಷ್ ಅನುವಾದದ ಸಂದರ್ಭದಲ್ಲಿ ‘ಡಾ. ಎಸ್. ಎಲ್. ಭೈರಪ್ಪ’ ಸಂದರ್ಶನ

ನಲವತ್ತು ವರ್ಷದ ಹಿಂದೆ ಮಹಾಭಾರತದಲ್ಲಿನ ದ್ರೌಪತಿ, ಕುಂತಿ, ಗಾಂಧಾರಿಯನ್ನು ಚಿತ್ರಿಸಿ ‘ಪರ್ವ’ ಕಾದಂಬರಿ ರಚಿಸಿದ್ದ ಸರಸ್ವತಿ ಸಮ್ಮಾನ್ ಪುರಸ್ಕೃತ ಕಾದಂಬರಿಕಾರ ಡಾ. ಎಸ್. ಎಲ್. ಭೈರಪ್ಪ ಅವರು ಮುರು ವರ್ಷದ ಹಿಂದೆ, ರಾಮಾಯಣದಲ್ಲಿ ಸೀತೆಯನ್ನು ಕೇಂದ್ರವಾಗಿರಿಸಿಕೊಂಡು ‘ಉತ್ತರಕಾಂಡ’ ಕಾದಂಬರಿ ಹೊರತಂದಿದ್ದರು. ಇದೀಗ ಉತ್ತರಕಾಂಡವನ್ನು ‘ರಶ್ಮಿ ತೇರದಾಳ್’ ಇಂಗ್ಲಿಷ್‌ಗೆ ಅನುವಾದಿಸಿದ್ದು, ಏಕಾ(ವೆಸ್ಟ್‌ಲ್ಯಾಂಡ್) ಪ್ರಕಟಿಸಿದೆ. ಈ ಕುರಿತು ಭೈರಪ್ಪ ತಮ್ಮ ಮನದಾಳವನ್ನು ‘ವಿಜಯವಾಣಿ’ ಜತೆಗೆ ಹಂಚಿಕೊಂಡಿದ್ದಾರೆ. 

----------------------------------------


-ರಮೇಶ ದೊಡ್ಡಪುರ 

*ವಾಲ್ಮೀಕಿ ರಾಮಾಯಣದಲ್ಲಿದ್ದ ಸೀತೆಯ ಧ್ವನಿಯನ್ನು ಉತ್ತರ ಕಾಂಡವು ಹೆಚ್ಚು ಮಾಡಿತೇ? ಅಥವಾ ಅದು ಮೂಲದಲ್ಲಿಲ್ಲದ ಧ್ವನಿಯೇ?

-ನಾನು ಉತ್ತರಕಾಂಡ ಬರೆಯುವಾಗ ಮುಖ್ಯವಾದ ಅಂಶಗಳೆಲ್ಲಾ ರಾಮಾಯಣದಲ್ಲಿ ಇದ್ದ ಕಥೆಯೇ. ಉದಾಹರಣೆಗೆ ನೇಗಿಲ ಗೆರೆಯಲ್ಲಿ ಹೆಣ್ಣು ಮಗು ಜನಕನಿಗೆ ಸಿಕ್ಕಿದ್ದು, ನಂತರದಲ್ಲಿ ಜನಕನ ಹೆಂಡತಿಯೂ ಗರ್ಭಿಣಿಯಾಗಿ ಮತ್ತೊಂದು ಹೆಣ್ಣು ಜನಿಸಿ, ಅದಕ್ಕೆ ಊರ್ಮಿಳಾ ಎಂದು ಹೆಸರಿಟ್ಟಿದ್ದು, ಸೀತೆ ರಾ

ವಣನಿಂದ ಬಿಡುಗಡೆ ಹೊಂದಿ ಬರುವಾಗ ಅಲಂಕೃತಳಾಗಿ ಬರಲೆಂದು ರಾಮ ಆದೇಶಿಸಿದ್ದು, ನಂತರದಲ್ಲಿ ರಾಮ ತನ್ನ ವಂಶದ ಕೀರ್ತಿಗಾಗಿ ಯುದ್ಧಮಾಡಿ ನಿನ್ನನ್ನು ಬಿಡಿಸಿದ್ದೇನೆ. ನೀನು ಈಗ ಮುಕ್ತಳು. ಎಲ್ಲಿಗೆ ಬೇಕಾದರೂ ಹೋಗಬಹುದು ಎಂದು ಹೇಳಿದ್ದು ಇವೆಲ್ಲಾ ರಾಮಾಯಣದ ಮೂಲ ಕಥೆಯೇ. ಸೀತೆ ವನವಾಸದಲ್ಲಿದ್ದಾಗ ಮಕ್ಕಳಿಗಾಗಿ ಹಂಬಲಿಸಿದ್ದು, ಅದನ್ನು ಧ್ವನಿಸಲೆಂದೇ ಸೀತೆ ಚಿನ್ನದ ಬಣ್ಣದ ಜೀವಂತ ಜಿಂಕೆ ಮರಿಯನ್ನು ಬೇಕೆಂದು ರಾಮನಲ್ಲಿ ಬೇಡಿಕೆ ಇಟ್ಟಿದ್ದು, ಜಿಂಕೆಯ ಮೇಲೆ ಪ್ರೀತಿ ಹುಟ್ಟಿದ್ದು ಸಹ ಒಂದು ಹೆಣ್ಣು ಸಹಜವಾಗಿ ವ್ಯಕ್ತಪಡಿಸುವ ಆಸೆಗಳಲ್ಲವೇ? ತನ್ನ ಗಂಡ ತನ್ನನ್ನು ತಿರಸ್ಕರಿಸಿದನೆಂದು ಸೀತೆ ಆಹಾರ ತೆಗೆದುಕೊಳ್ಳದೇ ಇರುವುದು, ಇದರಿಂದ ತನ್ನ ಸಖಿ ಸುಕೇಶಿ ಎದೆ ಹಾಲಿನ ಮಹತ್ವದ ಬಗ್ಗೆ ಹೇಳುವ ಮಾತನ್ನು ಸೀತೆ ನೆನೆಯುತ್ತಾಳೆ. ’ಊರ್ಮಿಳೆಯಲ್ಲಿರುವ ಆತ್ಮವಿಶ್ವಾಸ ನನ್ನಲ್ಲಿಲ್ಲ. ಏಕೆಂದರೆ ನಾನು ತಾಯಿಯ ಹಾಲು ಕುಡಿದು ಬೆಳೆದ ಮಗುವಲ್ಲ.’ ತಾಯಿಯ ಹಾಲು ಕುಡಿದ ಮಕ್ಕಳಿಗೆ ಆತ್ಮವಿಶ್ವಾಸ ಹೆಚ್ಚೆಂಬ ಅರಿವು ಸೀತೆಗೆ ಉಂಟಾಗಿ ತನ್ನ ಮಕ್ಕಳಿಗೆ ಹಾಲುಣಿಸಿ ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುತ್ತಾಳೆ. ಇವೆಲ್ಲಾ ಸಹಜ ಪ್ರಕ್ರಿಯೆಗಳು. ’ತಾಯಿ ಹಾಲು ಕುಡಿಸುವುದು’, ’ವನವಾಸದ ಬಗ್ಗೆ ಸೀತೆಯ ಮಾತುಗಳು’, ’ಕಾಡಿನಲ್ಲಿ ಕಲ್ಲು, ಮುಳ್ಳು ಚುಚ್ಚುವುದು’ ಇವೆಲ್ಲಾ ನಿಜ ಜೀವನಕ್ಕೆ ಹತ್ತಿರವಾಗಿವೆ. ಲವ-ಕುಶರಿಗೆ ಜನ್ಮವಿತ್ತ ನಂತರ ರಾಮಾಯಣವನ್ನು ವಾಲ್ಮೀಕಿ ಪದ್ಯ ರೂಪದಲ್ಲಿ ರಚಿಸಿ ರಾಮನ ಮುಂದೆ ಹಾಡಿದಾಗ ರಾಮನಿಗೆ ಆಶ್ಚರ್ಯವಾಗಿ ಈ ಬಾಲಕರು ತನ್ನ ಮಕ್ಕಳೆಂದು ವಾಲ್ಮೀಕಿಯಿಂದ ತಿಳಿಯುತ್ತಾನೆ. ಅಂದರೆ ಹದಿನಾರು ವರ್ಷವಾದರೂ ಅವನಿಗೆ ತನ್ನ ಮಕ್ಕಳ ಗುರುತೂ ಸಿಕ್ಕುವುದಿಲ್ಲ. ಅದು ಮೂಲ ಉತ್ತರಕಾಂಡದಲ್ಲಿದೆ. ಸೀತೆಯ ಪ್ರತಿ ನಡೆಯೂ ವಾಲ್ಮೀಕಿ ರಾಮಾಯಣದಲ್ಲಿ ವ್ಯಕ್ತವಾಗಿದೆ. ಅದರಲ್ಲಿಲ್ಲದ ಸೀತೆಯ ಮನಸ್ಸಿನ್ನ ಅಂತರಾಳವನ್ನು ಉತ್ತರಕಾಂಡದಲ್ಲಿ ಸೇರಿಸಿಲ್ಲ.

ಸೀತೆಯ ಪ್ರತಿ ನಡೆಯನ್ನೂ ವಾಲ್ಮೀಕಿ ಮಹರ್ಷಿ ರಾಮಾಯಣದಲ್ಲಿ ವರ್ಣಿಸಿದ್ದಾರೆ. ಮೂಲ ರಾಮಾಯಣದಲ್ಲಿ ಏನೇನು ಅಂಶಗಳಿವೆಯೋ ಅವನ್ನೇ ತೆಗೆದುಕೊಂಡು ನಾನು ಸಾಮಾನ್ಯ ಮನುಷ್ಯನ ಸಹಜ ಜೀವನಕ್ಕೆ ಹೊಂದುವಂತೆ ಕಥೆ ಬೆಳೆಸಿದ್ದೇನೆ.

*ಭಾರತದ ಮಹಾಕಾವ್ಯಗಳ ಆಧಾರಿತ ಕಾದಂಬರಿಗಳು ಕನ್ನಡದಿಂದ ಇಂಗ್ಲಿಷ್‌ಗೆ ಭಾಷಾಂತರವಾಗುವಾಗಿನ ಸಂದರ್ಭದ ಕುರಿತು.

-ಭಾರತದ ಯಾವುದೇ ಭಾಷೆಯ ಕಾದಂಬರಿಗಳು ಇಂಗ್ಲಿಷ್‌ಗೆ ಅನುವಾದವಾಗುವುದು ಭಾರತದಲ್ಲಿರುವ ಓದುಗರಿಗಾಗಿಯೇ ಹೊರತು ಹೊರದೇಶದ ಜನಗಳಿಗಲ್ಲ. ಏಕೆಂದರೆ ಅನ್ಯದೇಶಗಳ ಜನಕ್ಕೆ ಮೊದಲನೆಯದಾಗಿ ರಾಮಾಯಣ ಗೊತ್ತಿರುವುದಿಲ್ಲ. ಗೊತ್ತಿದ್ದರೂ ಪರದೇಶದ ಮೂಲ ಅನುವಾದಕರು ಮತ್ತು ಭಾರತೀಯ ಇಂಗ್ಲಿಷ್ ಅನುವಾದಕರು ಸೇರಿ ಕೃತಿಗಳನ್ನು ಅನುವಾದ ಮಾಡಬೇಕು. ಹಾಗಾಗಿ ಇಂಗ್ಲಿಷ್‌ಗೆ ಅನುವಾದ ಮಾಡುವುದು ಕಷ್ಟಕರ. ಭಾರತದ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದ ಮಾಡುವುದು ಹೆಚ್ಚು ಕಷ್ಟವಲ್ಲ. ಏಕೆಂದರೆ ಎರಡೂ ಭಾಷೆಗಳ ಮಾತ್ರವಲ್ಲ ಇಡೀ ಭಾರತದಲ್ಲಿ ಸಂಸ್ಕೃತಿಗಳು, ನಿಜ ಜೀವನಕ್ಕೆ ಸಂಬಂಧಪಟ್ಟ ವಿವರಗಳು ಒಂದೇ ರೀತಿಯದ್ದು. ಇನ್ನೂರು ವರ್ಷ ಇಂಗ್ಲಿಷ್ ಭಾಷೆಯು ನಮ್ಮನ್ನು ಆಳಿದರೂ ಭಾಷೆಯ ಬೇರು ಆದ ಸಂಸ್ಕೃತಿಗಳು ದೂರದೂರಾದವು. ಆದ್ದರಿಂದ ಭಾರತೀಯ ಭಾಷೆಯಿಂದ ಇಂಗ್ಲಿಷ್ ಭಾಷೆಗೆ ಅನುವಾದ ಬಹಳ ಕಷ್ಟ.

*ಅನ್ಯ ಭಾಷೆ, ಸಂಸ್ಕೃತಿಗಳ ಅನುವಾದಿತ ಕೃತಿ ಓದುವಾಗಿನ ನಮ್ಮ ಮಾನಸಿಕ ಸಿದ್ಧತೆ ಹೇಗಿರಬೇಕು?

-ಉದಾಹರಣೆಗೆ ರಷ್ಯನ್ನಿನಿಂದ ಅನುವಾದ ಕೃತಿ ಓದುತ್ತೇವೆ ಎಂದಿಟ್ಟುಕೊಳ್ಳೋಣ. ಚಳಿ ಎಂದು ಅದರಲ್ಲಿ ಬರೆದಿದ್ದರೆ, ಅಲ್ಲಿನ ಚಳಿ ಎಂಥದ್ದು? ಎಂಬುದು ತಿಳಿದಿರಬೇಕು. ಅಲ್ಲಿನ ಚಳಿ ಮೈನಸ್ 15ರಿಂದ 20ರವರೆಗೆ ಇರುತ್ತದೆ. ರಷ್ಯಾಕ್ಕೆ ಪ್ರವಾಸ ತೆರಳಿದ್ದರೆ ಸರಿ. ಇಲ್ಲದಿದ್ದರೆ ಆ ಚಳಿ ವಾತಾವರಣದ ೆಟೊ, ವಿವಿರಗಳನ್ನಾದರೂ ತಿಳಿದಿರಬೇಕು. ಮದುವೆ ಎಂದು ಬರೆದಿರುತ್ತಾರೆ. ಮದುವೆ ಎಂದ ಕೂಡಲೆ ನಮ್ಮ ಸಮಾಜದ ಮದುವೆಯೇ ನೆನಪಾಗುತ್ತದೆ. ಅಪ್ಪ ಅಮ್ಮ ಮುಂದೆ ನಿಂತು ಮದವೆ ಮಾಡುವುದು, ಮದುವೆ ನಂತರ ಹುಡುಗನ ಮನೆಗೆ ತೆರಳುವುದು, ವಿಚ್ಛೇದನ ಆಗದೇ ಇರುವುದು, ತವರು ಮನೆಯಲ್ಲೆ ಮೊದಲ ಬಾಣಂತನ ಆಗುವುದು ಇಲ್ಲಿನ ನಂಬಿಕೆ. ಅಲ್ಲಿ ಮದುವೆಯಾದ ಕೂಡಲೆ ಅಪ್ಪ ಅಮ್ಮನಿಂದ ಬೇರೆ ಮನೆ ಮಾಡುತ್ತಾರೆ. ಸಂಸ್ಕೃತಿಯಲ್ಲಿನ ಈ ಭಿನ್ನತೆಯನ್ನು ಅರಿತು ಓದಬೇಕು.



*ಸೀತೆಯ ಧ್ವನಿಯು ಫೆಮಿನಿಸಂ ಹೆಸರಿನಲ್ಲಿ ನಡೆಯುತ್ತಿುವ ಪುರುಷ ವಿರೋಧಿ ಆಂದೋಲನಕ್ಕೆ ಪೂರಕವಾಗುವ ಸಾಧ್ಯತೆ ಇದೆಯೇ?

-ಸೀತೆ ಯಾವತ್ತೂ ಪುರುಷ ವಿರೋಧಿ ಆಗಲೇ ಇಲ್ಲ. ಅವಳ ಅಸಮಾಧಾನವೇನಿದ್ದರೂ ರಾಮನ ಕೆಲವು ನಿರ್ಧಾರಗಳ ಮೇಲೆ ಮಾತ್ರ. ಸೀತೆಗೆ ತನ್ನ ತಂದೆ ಜನಕ ಮಹಾರಾಜನ ಬಗ್ಗೆ ಅಪಾರ ಗೌರವವಿತ್ತು. ಆಶ್ರಯ ಕೊಟ್ಟ ವಾಲ್ಮೀಕಿ ಮಹರ್ಷಿಗಳು ಪುರುಷರೇ. ಅವರಲ್ಲಿಯೂ ಗೌರವ ಭಾವದಿಂದಲೇ ಇದ್ದಳು. ಮೈದುನ ಲಕ್ಷ್ಮಣನ ಮೇಲೆ ಸಹ ಅತ್ತಿಗೆ ತೋರುವಂತಹ ಅಂತಃಕರಣ ಇದ್ದೇ ಇತ್ತು. ಆದ್ಧರಿಂದ ‘ಇಡೀ ಪುರುಷ ಜಾತಿಯೇ ನಮ್ಮ ಶತ್ರು. ಪುರುಷ ಜಾತಿಯಿಂದ ದೂರ ಇರಬೇಕೆಂಬ’ ಪಾಶ್ಚಾತ್ಯ ಆಧುನಿಕ ಫೆಮಿನಿಸ್ಟ್ ರೋಷವು ಸೀತೆಯಲ್ಲಿ ಇರಲಿಲ್ಲ.

*ಭಾರತೀಯ ನೆಲೆಯ ಸ್ತ್ರೀವಾದದ ಪ್ರತೀಕ ಉತ್ತರಕಾಂಡ ಎಂದು ಅನೇಕರು ಹೇಳಿದ್ದಾರೆ. ಅದು ಸತ್ಯವೇ? ಹಾಗಾದರೆ ಭಾರತೀಯ ನೆಲೆಯಲ್ಲಿ ಸ್ತ್ರೀವಾದ ಎಂಬುದೊಂದು ಇದೆಯೇ? ಇದ್ದರೆ ಹೇಗೆ?

-ಪಶ್ಚಿಮ ದೇಶದಲ್ಲಿರುವ ಸ್ತ್ರೀವಾದವೇ ಬೇರೆ, ಭಾರತದ ಸ್ತ್ರೀ ವಾದವೇ ಬೇರೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೇ ಸ್ತ್ರೀಯರಿಗೆ ಮತದಾನದ ಹಕ್ಕು ಕೊಟ್ಟಿದೆ. ಅನೇಕ ಮಹಿಳೆಯರು ರಾಯಭಾರಿಗಳಾದರು. ಇಂದಿರಾಗಾಂಧಿ ನಮ್ಮ ದೇಶದ ಪ್ರಧಾನಿ ಆಗಿದ್ದರು. ನಮ್ಮ ದೇಶದ ಮನೆಗಳಲ್ಲಿ ಯಜಮಾನಿಕೆ ನಡೆಯುವುದು ಹೆಣ್ಣಿನಿಂದಲೇ. ಸಂಸಾರ ನಿಭಾವಣೆಯೂ ಹೆಣ್ಣಿನದೇ. ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕ್ಷೇತ್ರಕ್ಕೆ ಶೇ.30ಕ್ಕೂ ಹೆಚ್ಚು ಹೆಣ್ಣುಮಕ್ಕಳು ಕಾಲಿಡುತ್ತಿದ್ದಾರೆ. ಮುಂದೆ ಈ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತದೆ. ಈಗಿನ ಸಮಾಜದಲ್ಲಿ ಗಂಡು ಮಕ್ಕಳಿಗೂ, ಹೆಣ್ಣು ಮಕ್ಕಳಿಗೂ ಬೇಧ ಮಾಡುವ ಹಳೆಯ ವರ್ತನೆ ಇಲ್ಲ. ಸಮಾನ ವಿದ್ಯಾಭ್ಯಾಸ ನೀಡುವ ಮನಸ್ಥಿತಿ ಅಧಿಕವಾಗಿದೆ. ಆದ್ದರಿಂದ ಭಾರತೀಯ ನೆಲೆಯ ಸ್ತ್ರೀವಾದ ಎಂಬುದು ಸರಿಯಲ್ಲ.

ಉತ್ತರಕಾಂಡದಲ್ಲಿ ಕೌಸಲ್ಯೆಗೆ ಅವಳ ತಂದೆ ಪುಟ್ಟ ರಾಜ್ಯವನ್ನೇ ಕೊಟ್ಟಿರುವ ಉಲ್ಲೇಖವಿದೆ. ಅದನ್ನೂ ನಾನು ಉತ್ತರಕಾಂಡದಲ್ಲಿ ನಮೂದಿಸಿದ್ದೇನೆ. ನಮ್ಮ ಧರ್ಮಶಾಸ್ತ್ರದಲ್ಲಿ ‘ಸ್ತ್ರೀಧನ’ ಎಂಬುದನ್ನು ಉಲ್ಲೇಖಿಸಿದೆ. ಯಾರೇ ಸ್ತ್ರೀಯರಿಗೆ ಕಾಣಿಕೆ ರೂಪದಲ್ಲಿಯೋ ಅಥವಾ ದಾನದ ರೂಪದಲ್ಲಿಯೋ ಏನೇ ಕೊಟ್ಟರೂ ಅದು ಅವಳಿಗೆ ಮಾತ್ರ ಸಲ್ಲುತ್ತದೆ. ಅದರಲ್ಲಿ ಗಂಡನಿಗೆ ಪಾಲಿಲ್ಲ. ಆದ್ದರಿಂದ ವಿದೇಶಿಯರ ಸ್ತ್ರೀವಾದ ಭಿನ್ನವಾದುದು. ಸ್ವೇಚ್ಛೆಯನ್ನೇ ಸ್ತ್ರೀವಾದ ಎಂದು ಒಪ್ಪುವವರು ವಿದೇಶಿಯರು. ನಮ್ಮ ದೇಶದಲ್ಲಿ ಸಂಸ್ಕೃತಿ, ಕೌಟುಂಬಿಕ ಬಂಧಗಳ ಗಟ್ಟಿತನ, ಸೋದರ ಸಂಬಂಧಗಳ ಬೆಸುಗೆ ಇವೆಲ್ಲಕ್ಕೂ ಗೌರವದ ಸ್ಥಾನವಿದೆ. ಆದ್ದರಿಂದ ಭಾರತದಲ್ಲಿ ಪಶ್ಚಿಮ ದೇಶಗಳಲ್ಲಿರುವಂಥ ಸ್ತ್ರೀವಾದ ಗಟ್ಟಿಯಾಗಿ, ವ್ಯಾಪಕವಾಗಿ ಬೇರುಬಿಟ್ಟಿಲ್ಲ.


*ರಾಮಾಯಣ, ಮಹಾಭಾರತದಂತಹ ಕಾವ್ಯಗಳನ್ನು ವಿಶ್ಲೇಷಿಸಿದ ಅನೇಕ ಸಂದರ್ಭಗಳಲ್ಲಿ ಆಕ್ಷೇಪಗಳು, ಲೇಖಕನ ವಿರುದ್ಧ ಮಾತುಗಳು ಕೇಳಿಬರುತ್ತಿವೆ. ಆದರೆ ಭೈರಪ್ಪನವರು ಬರೆದಾಗ ಸಮಾಜ ಸ್ವೀಕರಿಸುತ್ತದೆ. ಕಾವ್ಯಗಳನ್ನು ಕಾದಂಬರಿಯಾಗಿಸುವಾಗ ಲೇಖಕನ ವೈಯಕ್ತಿಕ ಜೀವನವೂ ಗಣನೆಗೆ ಬರಬಹುದೇ?

-ನವ್ಯ ಸಾಹಿತ್ಯ ಬಂದ ಮೇಲೆ ಲೇಖಕ ತನ್ನ ದೌರ್ಬಲ್ಯಗಳನ್ನು ಹೊರ ಪ್ರಪಂಚಕ್ಕೆ ತಿಳಿಯುವಂತೆ ಘೋಷಿಸಿಕೊಳ್ಳುವುದು ಹೆಚ್ಚಾಗಿದೆ. ತಮ್ಮಲ್ಲೇ ದೌರ್ಬಲ್ಯಗಳಿರುವ ಮನುಷ್ಯ ಶುದ್ಧತೆಗೆ ಹೆಸರಾದ ಸೀತೆಯ ಕಥೆ ಬರೆದಾಗ ಅವಳಲ್ಲಿಯೂ ಆ ದೌರ್ಬಲ್ಯಗಳನ್ನು ಆರೋಪಿಸುತ್ತಾನೆ. ಅವಳ ಘನತೆಯನ್ನು ನಾಶಪಡಿಸುತ್ತಾನೆ. ಇದನ್ನು ಜನತೆ ಒಪ್ಪುವುದಿಲ್ಲ. ಆದರೆ ನನ್ನ ಕೃತಿಗಳನ್ನು ಜನತೆ ಒಪ್ಪಿಕೊಂಡಿದೆ. ಕಾರಣ ನಾನು ನಮ್ಮ ದೇಶದ ಸಂಸ್ಕೃತಿಯನ್ನು ಒಪ್ಪಿಕೊಂಡಿದ್ದೇನೆ. ಸಮಾಜದ ಸಂಸ್ಕೃತಿ ಆಧುನಿಕ ಕಾಲಕ್ಕೆ ಯಾವ ರೀತಿ ಇರಬೇಕು ಎಂಬುದಷ್ಟನ್ನೇ ನಾನು ವಿವರಿಸಿ ಬರೆಯುತ್ತೇನೆ. ನಮ್ಮ ದೇಶದಸಂಸ್ಕೃತಿಯನ್ನು ಲೇಖಕ ಒಪ್ಪುವುದಾದರೆ ಅದರ ಆಧಾರದ ಮೇಲೆ ಅವನು ವಿಮರ್ಶೆಗಳನ್ನುಮಾಡಲುಯೋಗ್ಯ. ಆದ್ದರಿಂದ ವೈಯಕ್ತಿಕ ಜೀವನ, ಅವನ ಬರವಣಿಗೆಯ ಮೇಲೆ ಮತ್ತು ಓದುಗರು ಕೃತಿಗಳನ್ನು ಸ್ವೀಕರಿಸುವುದರ ಮೇಲೆ ಪ್ರಭಾವ ಬೀರುತ್ತದೆ.

*ಕಾದಂಬರಿಗಳು ಮಾರಾಟ ಆಗುತ್ತವೆ. ಆದರೆ ತಾವೇ ಒಮ್ಮೆ ಹೇಳಿದಂತೆ ಅಂಚು ಕಾದಂಬರಿಯ ಕುರಿತು ಕರ್ನಾಟಕದಲ್ಲಿ ಚರ್ಚೆ, ಕ್ರಿಟಲ್ ಅನಾಲಿಸಿಸ್ ನಡೆಯಲೇ ಇಲ್ಲ. ಇತರ ಲೇಖಕರ ಕೃತಿಗಳೂ ಹೀಗೆ ಆಗುತ್ತಿವೆ. ಕಾದಂಬರಿಗಳ ಕುರಿತು ಸಾಹಿತ್ಯ ವಲಯದಲ್ಲಿ ಈ ಮೌನದ ಕುರಿತು ತಮ್ಮ ಅಭಿಪ್ರಾಯ?

-ನನ್ನ ಪುಸ್ತಕಗಳ ಮೇಲೆ ಸುಮಾರು 30ಕ್ಕೂ ಹೆಚ್ಚು ವಿಮರ್ಶಾತ್ಮಕ ಪುಸ್ತಕಗಳು ಬಂದಿವೆ. ಪತ್ರಿಕೆಗಳಲ್ಲೂ, ಸಾಮಾಜಿಕ ಜಾಲತಾಣಗಳಲ್ಲಿ ಸಹಾ ಬರೆಯುತ್ತಾರೆ. ‘ಅಂಚು’ ಕಾದಂಬರಿ ನನ್ನ ಬೇರೆಲ್ಲಾ ಕಾದಂಬರಿಗಳಿಗಿಂತ ಭಿನ್ನವಾಗಿದೆ. ಈ ಕಾದಂಬರಿ ತಕ್ಷಣಕ್ಕೆ ಅರ್ಥವಾಗದೆ ‘ಇದೊಂದು ಬೇರೆ ರೀತಿಯ ಕಾದಂಬರಿ’ ಎಂದು ಅನೇಕ ಓದುಗರು ಹೇಳಿದ್ದಾರೆ. ಆದರೆ ‘ಬೇರೆ ರೀತಿಯಲ್ಲಿ ಬರೆದಿರುವ ಕಾದಂಬರಿಯನ್ನು ಬೇರೆ ರೀತಿಯಲ್ಲೇ ಓದಿ ಅರ್ಥೈಸಿಕೊಳ್ಳಬೇಕು’. ಅದನ್ನು ಅರ್ಥಮಾಡಿಕೊಂಡು ಓದಿದರೆ ‘ಅಂಚು’ ಸಹಾ ರಸಮಯವಾದ ಕಾದಂಬರಿಯೇ. ಚರ್ಚೆ ನಡೆಯಲಿಲ್ಲ ಎಂಬುದನ್ನು ಅಂಚು ಕಾದಂಬರಿಯ ವೆಬಿನಾರ್‌ಗೆ ಸಂಬಂಧಪಟ್ಟಂತೆ ಹೇಳೀದ್ದೇ ಹೊರತು, ಬೇರೆ ಕಾದಂಬರಿಗಳಿಗಲ್ಲ. ಮುಂಬೈನ ಮನಃಶಾಸ್ತ್ರಜ್ಞೆ ಅಂಜಲಿ ಜೋಷಿ ಎಂಬುವವರು ‘ಅಂಚು’ ಕಾದಂಬರಿ ಬಹಳ ಗುಣಮಟ್ಟದ್ದೆಂದು ವಿಸ್ತಾರವಾಗಿ ವಿಶ್ಲೇಷಿಸಿದ್ದಾರೆ. ಆದರೆ ಕರ್ನಾಟಕದಲ್ಲಿ ಯಾರೂ ಈ ರೀತಿ ವಿಶ್ಲೇಷಣೆ ಮಾಡಲೇ ಇಲ್ಲ. ಕಾರಣ ಮನಃಶಾಸ್ತ್ರ ಓದಿರುವವರು ಕಡಿಮೆ ಇರಬಹುದೋ ಅಥವಾ ಕನ್ನಡ ಮನಃಶಾಸ್ತ್ರಜ್ಞರು ‘ಅಂಚು’ ಕಾದಂಬರಿಯನ್ನು ಓದಿಲ್ಲದೇ ಇರಬಹುದು.

*ಸೀತಾರಾಮ, ರಾಜಾರಾಮನಾಗುವ ಸಂದರ್ಭದಲ್ಲಿ ಅವನಲ್ಲಿ ಬದಲಾವಣೆಗಳು ಕಂಡವು ಎಂದು ಹೇಳಿದ್ದೀರಿ. ರಾಜನಾಗಿಯೂ ರಾಮನು ಒಬ್ಬ ಪತಿಯಾಗಿಯೇ ನಡೆದುಕೊಂಡಿದ್ದರೆ, ರಾಮ ಪೂಜ್ಯನಾಗುತ್ತಿದ್ದನೇ?

-ದೇವರ ಅವತಾರ ಎಂಬುದು ಪುರಾಣದಲ್ಲಿ ಬಂದಿದೆ. ರಾಮ, ಕೃಷ್ಣ, ಸೀತೆ, ಲಕ್ಷ್ಮಣ ಇವರೆಲ್ಲಾ ಅವತಾರ ರೂಪ ಎಂದು ಪುರಾಣದಲ್ಲಿ ಓದುತ್ತಲೇ ಬಂದಿದ್ದೇವೆ. ದೇವರ ಅವತಾರ ಎಂದರೆ ಅವನು ಆದರ್ಶನೇ ಆಗಿರಬೇಕು. ಅವನು ಮಾಡಿದ್ದೆಲ್ಲಾ ಸರಿಯಾಗಿಯೇ ಇರಬೇಕು. ರಾಮನಿಗೆ ಸೀತೆ ಶುದ್ಧಳೆಂದು ಗೊತ್ತಿತ್ತು. ಕಾವಲು ಕಾಯುತ್ತಿದ್ದ ರಾಕ್ಷಸ ಹೆಂಗಸರು, ವಿಭೀಷಣನ ಹೆಂಡತಿ ಇವರೆಲ್ಲಾ ಸೀತೆಯ ಶುದ್ಧತೆಗೆ ಸಾಕ್ಷಿ ಹೇಳಿದರೂ ರಾಮ ಈ ಸಾಕ್ಷಿಗಳ ಪ್ರಾಮಾಣಿಕತೆಯನ್ನೇ ಪ್ರಶ್ನಿಸುತ್ತಾನೆ. ಅದು ರಾಮನಿಗೆ ಸಲ್ಲುವಂಥ ಮಾತೇ ಎಂಬ ಪ್ರಶ್ನೆ ಹುಟ್ಟುತ್ತೆ. ಭರತನ ಆಡಳಿತದಲ್ಲಿ ಪ್ರಜೆಗಳು ತೆರಿಗೆ ಕಟ್ಟದೇ ಬೊಕ್ಕಸ ಬರಿದು ಮಾಡಿರುತ್ತಾರೆ. ಆಡಳಿತ ಸುಸೂತ್ರವಾಗಿರಲಿಲ್ಲ. ರಾಜ್ಯದಲ್ಲಿ ದಾರಿದ್ರ್ಯ ತುಂಬಿತ್ತು. ಈ ಸಂದರ್ಭದಲ್ಲಿ ರಾಮ, ರಾಜ್ಯ ವಹಿಸಿಕೊಂಡು ಸುಸೂತ್ರವಾಗಿ ನಡೆಸಬೇಕಾದರೆ ಬೊಕ್ಕಸಕ್ಕೆ ಬರುವಂತಹ ತೆರಿಗೆ ಸಲ್ಲಬೇಕು. ಆದರೆ ತೆರಿಗೆ ಕಟ್ಟಲು ವಿರೋಧಿಸುವವರು ಸೀತೆಯ ಬಗ್ಗೆ ಗುಸುಗುಟ್ಟುವಿಕೆ ಶುರುಮಾಡಿದರು. ತೆರಿಗೆ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಸೀತೆಯ ಶುದ್ಧತೆಯ ಪ್ರಶ್ನೆ ಎತ್ತುತ್ತಾರೆ. ಆದರೆ ರಾಮ, ರಾಜನಾಗಿದ್ದವನು ಗೂಢಚಾರರನ್ನು ಬಿಟ್ಟು ಯಾರು ಅಂತಹ ವದಂತಿ ಹಬ್ಬಿಸುತ್ತಿದ್ದಾರೋ ಅವರಿಗೆ ಶಿಕ್ಷೆ ಕೊಟ್ಟಿದ್ದರೆ ಜನತೆ ವದಂತಿಗಳನ್ನು ಕೈಬಿಟ್ಟು ಸುಮ್ಮನಾಗುತ್ತಿದ್ದರು. ಆದರೆ ರಾಮ, ಸೀತೆಯನ್ನು ಕಾಡಿಗೆ ಕಳಿಸಿ, ಇಬ್ಬರೂ ದುಃಖ ಅನುಭವಿಸುವ ಮೂಲಕ ಜನತೆಗೆ ಆದರ್ಶವನ್ನು ತೋರಿಸಬೇಕೆಂದು ಯೋಚಿಸುತ್ತಾನೆ. ವದಂತಿ ಹಬ್ಬಿಸಿದ ಪ್ರಜೆಗಳು ಸಹ ರಾಮ ಹೆಂಡತಿಯನ್ನು ತ್ಯಜಿಸಿದ್ದು ನೋಡಿ ‘ಸೀತೆ ಶುದ್ಧಳಲ್ಲವೆಂದು ರಾಮನು ಒಪ್ಪಿದನು’ ಎಂದು ತಿಳಿಯಬಹುದಿತ್ತಲ್ಲವೇ? ಗೌತಮ ಅಹಲ್ಯೆಯರನ್ನು ಕ್ಷಮಿಸಿ ಒಂದುಗೂಡಿಸಿದ ರಾಮ ತನ್ನ ಹೆಂಡತಿಯನ್ನೇಕೆ ತ್ಯಸಿಜಿದ? ಜನಕನ ಹೆಂಡತಿಯ ಗರ್ಭಸಂಜಾತೆ ಅಲ್ಲದ ಸೀತೆಯನ್ನು ಮದುವೆಯಾಗಲು ದಶರಥ ಒಪ್ಪದೇ ಇದ್ದರೂ, ಬಿಲ್ಲು ಮುರಿದಿದ್ದೇನೆ. ಸೀತೆಯನ್ನೇ ಮದುವೆಯಾಗುವುದಾಗಿ, ಇಲ್ಲವಾದಲ್ಲಿ ಮದುವೆಯೇ ಬೇಡವೆಂದು ತಿಳಿಸಿದ್ದ ಆದರ್ಶಪುರುಷ ರಾಮ. ಶಂಭೂಕನೆಂಬ ಶೂದ್ರನು ತ್ರೇತಾಯುಗದಲ್ಲಿ ತಪಸ್ಸು ಮಾಡುತ್ತಿರುವಾಗ ತಪಸ್ಸು ಮಾಡುವಂತಿಲ್ಲ ಎಂದು ಕಟ್ಟಪ್ಪಣೆ ಮಾಡುತ್ತಾನೆ. ಶೂದ್ರನಾದ ಅವನನ್ನು ಕೊಂದುಹಾಕುತ್ತಾನೆ. ಶಂಭೂಕ ವಧೆ ಮೂಲ ರಾಮಾಯಣದಲ್ಲೇ ಇದೆ. ಆದರ್ಶ ರಾಮನ ಗುಣಗಳು ರಾಜ್ಯಭಾರ ಮಾಡುವ ಹೊತ್ತಿಗೆ ಬದಲಾವಣೆಯಾಗಿದ್ದವು. ಎಂಬುದು ನನ್ನ ಭಾವನೆ. ಆದ್ದರಿಂದ ಮೊದಲು ಸೀತಾರಾಮನಾಗಿದ್ದವನು ನಂತರದಲ್ಲಿ ರಾಜಾರಾಮನಾದ. ರಾಮನ ಅವತಾರವನ್ನು ಒಪ್ಪಿಕೊಂಡರೆ ‘ಪೂಜ್ಯ’ ಎನ್ನಬಹುದು. ಅವನೊಬ್ಬ ಸಾಮಾನ್ಯ ಮನುಷ್ಯ ಎಂದು ಭಾವಿಸಿದರೆ ‘ಒಳ್ಳೆಯ ಮನುಷ್ಯ’ ಎನ್ನಬಹುದು. ಪೂಜ್ಯ ಎಂಬ ಶಬ್ದ ಇಲ್ಲಿ ಹೊಂದುವುದಿಲ್ಲ.


*ಉತ್ತಮ ಕಾದಂಬರಿ ಹೊರಬರಲು ಕಾದಂಬರಿಕಾರ ಜನಸಂಪರ್ಕ, ಪುಸ್ತಕ ಓದು, ಪ್ರವಾಸಗಳಲ್ಲಿ ಯಾವುದರ ಕುರಿತು ಹೆಚ್ಚು ಗಮನ ಕೇಂದ್ರೀಕಿರಸಬೇಕು? ವಸ್ತು ಆಯ್ಕೆಯಲ್ಲಿ ಲೇಖಕನ ಹಿನ್ನೆಲೆ ಎಷ್ಟು ಪ್ರಮುಖ ಪಾತ್ರ ವಹಿಸುತ್ತದೆ?

-ಪುಸ್ತಕದ ಓದು, ಪ್ರವಾಸ, ಜನಸಂಪರ್ಕ ಎಲ್ಲವೂ ಕಾದಂಬರಿಕಾರನಿಗೆ ಮುಖ್ಯ. ನನ್ನ ಅನುಭವದಲ್ಲಿ ವಸ್ತುವನ್ನು ನಾನಾಗಿಯೇ ಆಯ್ಕೆ ಮಾಡಲ್ಲ. ಅದು ತಾನೇ ಹುಟ್ಟುತ್ತೆ. ತಾನೇ ಬೆಳೆಯುತ್ತೆ. ನಂತರದಲ್ಲಿ ನಾನು ಬರೆಯಲು ತೊಡಗುತ್ತೇನೆ. ನನ್ನ ಅನುಭವದಿಂದಲೇ ಪಾತ್ರಗಳು ಸೃಷ್ಟಿಯಾಗುವುದು. ನಮ್ಮ ಅನುಭವದ ಪ್ರಕಾರವೇ ನಮ್ಮ ಮನಸ್ಸು ಚಲಿಸುತ್ತೆ. ನೀವ್ಯಾಕೆ ಶ್ರೀನಿವಾಸ ಶ್ರೋತ್ರಿಗಳ ಪಾತ್ರವನ್ನು ಸೃಷ್ಟಿ ಮಾಡಿದಿರಿ, ಅಂಥವರನ್ನು ಎಲ್ಲಿ ನೋಡಿದ್ರಿ? ಅಂದರೆ ಅಂತಹ ಗುಣವುಳ್ಳ ಹಲವಾರು ಜನರನ್ನು ನೋಡಿದ್ದೆ. ಆ ಗುಣಗಳು ಬಹಳಷ್ಟು ಜನರಲ್ಲಿ ಇತ್ತು. ಈಗಲೂ ಕೆಲವರು ಇದ್ದಾರೆ.


*ಸೀತೆಯ ಪಾತ್ರವನ್ನು ಈಗಿನ ಸಮಾಜದ ಜನರ ಮಾನಸಿಕತೆಗೆ, ಸ್ಪಂದನೆಗೆ ಅನುಗುಣವಾಗಿ ಧ್ವನಿಸಲಾಗಿದೆ ಎಂದು ತಾವು ಹೇಳಿದ್ದೀರಿ. ಅಂದರೆ ಇನ್ನು 20-30 ವರ್ಷ ನಂತರ ಈ ಕಾದಂಬರಿಯನ್ನು ಮತ್ತೊಬ್ಬರು ಬರೆದರೆ ಅಂದಿನ ಸಮಾಜಕ್ಕೆ ಧ್ವನಿ ಬದಲಾಗುತ್ತದೆಯೇ? ಅಥವಾ ಕಾದಂಬರಿಯು ಮಾನವನ ಸಾರ್ವಕಾಲಿಕ ಸ್ವಭಾವವನ್ನು ಧ್ವನಿಸಿದೆಯೇ?

-ಇದು ಸಾರ್ವಕಾಲಿಕ. ವಾಸ್ತವವಾಗಿ ನಾನು ‘ವಂಶವೃಕ್ಷ’ಕ್ಕೆ ಹಿನ್ನುಡಿ ಬರೆದಿದ್ದೇನೆ. ಅದಕ್ಕೆ ‘ಯುಗಸಂಧಿ’ ಅಂತ ಹೆಸರಿಟ್ಟಿದ್ದೇನೆ. ಒಂದು ಸಮಾಜದ ನಂಬಿಕೆ ಯಾವಾಗ ಪೂರ್ತಿಯಾಗಿ ಬದಲಾಗುತ್ತೋ, ಆಗ ಮಾತ್ರ ಹೊಸ ಯುಗ ಎಂದು ಕರೆಯುವುದು. ರಾಮಾಯಣವನ್ನು ಹೊರತುಪಡಿಸಿ ನಮ್ಮ ಇಡೀ ಸಮಾಜದ ಆದರ್ಶ ಹೆಣ್ಣು ಎಂಬ ಕಲ್ಪನೆ ಬದಲಾದರೆ, ಮುಂದೆ ಬದಲಾದ ಸಮಾಜದಲ್ಲಿ ರಾಮಾಯಣ ಓದಿದರೆ ಸೀತೆ ಮತ್ತು ರಾಮನ ಪಾತ್ರ ಮತ್ತಷ್ಟು ಭಿನ್ನವಾಗಿ ಕಾಣಬಹುದು. ಆಧುನಿಕ ವಿಜ್ಞಾನ ಮತ್ತು ಆಧುನಿಕ ಕೈಗಾರಿಕೀಕರಣ ಬಂದ ಮೇಲೆ, ಖಗೋಳ ಜ್ಞಾನ ಮತ್ತು ಖಗೋಳ ಭೌತಶಾಸ್ತ್ರ, ಬಿಗ್ ಬ್ಯಾಂಗ್ ಥಿಯರಿ ಇವೆಲ್ಲಾ ಬಂದ ಮೇಲೆ ಪ್ರಪಂಚದ ದೃಷ್ಟಿಯ ಮೇಲೆ ಪ್ರಭಾವ ಬೀರಿವೆ. ಮೌಲ್ಯಗಳ ಬಗ್ಗೆ ಯೋಚಿಸಿದರೆ ಈಗಲೂ ಮೌಲ್ಯಗಳು ಮನುಷ್ಯನಲ್ಲಿ ಕಾಣುತ್ತಲೇ ಇವೆ. ಉದಾಹರಣೆಗೆ ಬಿಲ್‌ಗೇಟ್ಸ್ ದುಡಿದ ಹಣವನ್ನು ಸಮಾಜಕ್ಕೆ ನೀಡುತ್ತಲೇ ಬಂದಿದ್ದಾರೆ. ವೈಜ್ಞಾನಿಕವಾಗಿ ಯೋಚಿಸಿದರೂ ’ದುರಾಸೆ ಬೇಡ, ನಾವು ಏನನ್ನೂ ಹೊತ್ತುಕೊಂಡು ಹೋಗುವುದಿಲ್ಲ’ ಎಂಬ ಮನೋಭಾವ ಇದ್ದೇ ಇದೆ. ಸಮಾಜಕ್ಕೆ ಒಳ್ಳೆಯದನ್ನು ಬಯಸುವವರು ಇದ್ದಾರೆ. ತಾನು ಮಾಡಿದ್ದು ತನ್ನ ಮಕ್ಕಳಿಗೆ ಮಾತ್ರ ಎಂಬ ಮನೋಭಾವ ಇರುವವರಿಗೆ ನೈತಿಕತೆ ಇರುವುದಿಲ್ಲ.


*ಪ್ರಸ್ತುತ ಸಂದರ್ಭದ ಬಗ್ಗೆ ಕೇಳುವುದದರೆ, ಅಂತಧರ್ಮೀಯ/ ಅನ್ಯ ನಂಬಿಕೆಗಳ ನಡುವೆ ಮದುವೆ ಆಗುವುದನ್ನು ತಡೆಯುವುದು ವೈಯಕ್ತಿಕ ಸ್ವಾತಂತ್ರ್ಯದ ಹರಣ ಎನ್ನಲಾಗುತ್ತಿದೆಯಲ್ಲ?

-ಲವ್ ಜಿಹಾದ್ ಮೂಲಕವೂ ಮುಸ್ಲಿಮರು ಆಕ್ರಮಣ ನಡೆಸುತ್ತಿರುತ್ತಾರೆ. ಮುಸ್ಲಿಮರಲ್ಲಿ ಸೀಯರಿಗೆ ಅಷ್ಟು ಸ್ವಾತಂತ್ರ್ಯವಿಲ್ಲ. ಮನೆಯಿಂದ ಹೊರಗೆ ಹೋಗುವುದೇ ಕಡಿಮೆ, ಹೋದರೂ ಬುರ್ಖಾ ಧರಿಸಿರುತ್ತಾರೆ. ಅವರು ಹೆಣ್ಣು ಎನ್ನುವುದು ತಿಳಿಯುತ್ತದೆಯೇ ವಿನಃ ಅವರ ಮುಖ ಕಾಣಿಸುವುದಿಲ್ಲ. ಆದರೆ ಹಿಂದುಗಳಲ್ಲಿ ಹೆಣ್ಣುಮಕ್ಕಳಿಗೆ ನಿರ್ಬಂಧಗಳು ಕಡಿಮೆ. ಯಾರನ್ನು ಬೇಕಾದರೂ ಮಾತನಾಡಿಸಬಹುದು, ತಡವಾಗಿಯೂ ಮನೆಗೆ ಬರಬಹುದು. ಇದನ್ನೇ ಬಳಸಿಕೊಳ್ಳುವ ಮುಸ್ಲಿಂ ಹುಡುಗರು ಅವರ ಸ್ನೇಹ ಸಂಪಾದಿಸಿ, ಹೋಟೆಲ್, ಪಾರ್ಕುಗಳಲ್ಲಿ ಸುತ್ತಾಡುತ್ತಾರೆ. ಲೈಂಗಿಕ ಆಸಕ್ತಿ ಕೆರಳುವ ವಯಸ್ಸಿನಲ್ಲಿರುವ ಹೆಣ್ಣುಮಕ್ಕಳು ಇದನ್ನು ನಿಜವೆಂದು ನಂಬುತ್ತಾರೆ. ೆಟೊಗಳನ್ನು ತೆಗೆದಿಟ್ಟುಕೊಳ್ಳುತ್ತಾರೆ. ಮದುವೆ ಆಗಲು ಹುಡುಗಿ ಒಪ್ಪದಿದ್ದಾಗ ೆಟೊಗಳನ್ನು ತೋರಿಸಿ ಬೆದರಿಸುತ್ತಾರೆ, ತಮ್ಮ ಮತಕ್ಕೆ ಮತಾಂತರವಾಗುವಂತೆ ಮನವೊಲಿಸುತ್ತಾರೆ. ಇದರ ವಿರುದ್ಧ ಉತ್ತರ ಪ್ರದೇಶದಲ್ಲಿ ಕಾನೂನು ರೂಪಿಸಿದೆ. 18 ವರ್ಷವಾದ ಹೆಣ್ಣು ಮಕ್ಕಳು, 21 ವರ್ಷವಾದ ಗಂಡು ಮಕ್ಕಳು ತಮಗಿಚ್ಛೆ ಬಂದವರನ್ನು ಮದುವೆಯಾಗಲು ಸಂವಿಧಾನಬದ್ಧ ಅಧಿಕಾರವಿದೆ. ನ್ಯಾಯಾಲಯದಲ್ಲಿ ಈ ಕಾನೂನು ಮಾನ್ಯತೆ ಕಳೆದುಕೊಳ್ಳಬಹುದು. ಹಿಂದು ಸಮಾಜ ಒಗ್ಗೂಡುವುದೊಂದೇ ಈ ಸಮಸ್ಯೆಗೆ ಪರಿಹಾರ. ಲವ್ ಜಿಹಾದ್ ನಡೆಸಿದವರ ಜತೆಗೆ ಉದ್ಯಮ, ವ್ಯಾಪಾರ ನಡೆಸದಿದ್ದರೆ ಸರಿಯಾಗುತ್ತದೆ. ಆದರೆ ಹಿಂದುಗಳಲ್ಲಿ ಒಗ್ಗಟ್ಟು ಇಲ್ಲ. ಅವನ ಮಗಳು ತಾನೆ ಎಂದುಕೊಂಡು ಸುಮ್ಮನಾಗುತ್ತಾರೆ.


ಭಾನುವಾರ, ನವೆಂಬರ್ 01, 2020

ವಿಧಾನಸೌಧದಲ್ಲಿ “ಚೆಲ್ಲಿದರು ಮಲ್ಲಿಗೆಯ”: ಕರ್ನಾಟಕಕ್ಕೆ ಜಯವಾಗಲಿ ಎಂದ ದಿನ ಇಂದು

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ದೇವರಾಜ ಅರಸು ಭಾಷಣ. 1973, ನವೆಂಬರ್‌ 1

1956ರಿಂದ ಮೈಸೂರು ರಾಜ್ಯವೆಂದಿದ್ದ ಪ್ರದೇಶ 1973ರ ನವೆಂಬರ್‌ 1ರಿಂದ "ಕರ್ನಾಟಕ ರಾಜ್ಯ”ವಾಯಿತು. ಕರ್ನಾಟಕಕ್ಕೆ ಜಯವಾಗಲಿ ಎಂಬ ಘೋಷಣೆ ಅಧಿಕೃತವಾಗಿ ಮೊಳಗಿದ ಮೊದಲ ದಿನ ಅದು. ಮುಖ್ಯಮಂತ್ರಿ ದೇವರಾಜ ಅರಸು ಕರ್ನಾಟಕದ ನಾಮಕರಣ ಘೋಷಣೆ ಮಾಡುತ್ತಿದ್ದಂತೆಯೇ ಶಾಸಕರಾದ ವಾಟಾಳ್‌ ನಾಗರಾಜ್‌ ಹಾಗೂ ಎಸ್‌. ಬಂಗಾರಪ್ಪ ಅಕ್ಷರಶಃ ಸದನದಲ್ಲಿ ಮಲ್ಲಿಗೆ ಹೂಗಳ ಮಳೆ ಸುರಿಸಿದರು. ದೇವರಾಜ ಅರಸರು ಮಾಡಿದ ಪ್ರಸ್ತಾವನೆಯ ಭಾಷಣ ಹಾಗೂ ನಾಮಕರಣಕ್ಕೆ ಒಪ್ಪಿಗೆ ದೊರೆತ ಅಪೂರ್ವ ಘಳಿಗೆಯ ಯಥಾವತ್‌ ವರದಿ ಇಲ್ಲಿದೆ.

--------------------------

ಮಾನ್ಯ ಅಧ್ಯಕ್ಷರೇ:
ವಿಶಾಲ ಮೈಸೂರಿನ ಮುಖ್ಯಮಂತ್ರಿಯಾದ ನಾನು, ರಾಜ್ಯದ ಹೆಸರನ್ನುಕರ್ನಾಟಕಎಂದು ಮಾರ್ಪಡಿಸುವ ಸರ್ಕಾರದ ನಿರ್ಣಯವನ್ನು ಸಭೆಯ ಮುಂದೆ ಮಂಡಿಸುತ್ತೇನೆ.ಈ ದಿವಸ ನಮ್ಮ ದೇಶದ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯದ ದಿವಸ. ವಿಶಾಲ ಮೈಸೂರು ಆದ ಮೇಲೆ, ಈ ರಾಜ್ಯದ ಹೆಸರು ಬದಲಾವಣೆ ಆಗಬೇಕೆಂಬ ವಿಚಾರ ನಮ್ಮಇಡೀ ರಾಜ್ಯದ ಜನತೆಯ ಮನಸ್ಸನ್ನು ಸೆಳೆದು,
ಆ ಒಂದು ಮಹತ್ವದ ವಿಷಯ ಇದುವರೆಗೂ ಇತ್ಯರ್ಥವಾಗದೆ ಹಾಗೆಯೇ ವಿಚಾರದಲ್ಲಿಯೇ ಉಳಿದು ಬಂದಿದೆ. ಬಹು ಜನರ ಅಪೇಕ್ಷೆ ಬದಲಾವಣೆ ಆಗಬೇಕೆಂಬುದಾಗಿದ್ದರೂ ಅದಕ್ಕೆ ಒಂದು ಪ್ರಬಲ ವಿರೋಧವಿತ್ತು ಎಂದು ನನಗೆ ಗೊತ್ತು. ಆ ಕಾಲದಲ್ಲಿ ರಾಜ್ಯ ಎರಡು ಆಗಬೇಕು ಒಂದು ಆಡಳಿತ ದೃಷ್ಟಿಯಿಂದ, ಇನ್ನೊಂದು ಶಾಸ್ತ್ರೀಯ ದೃಷ್ಟಿಯಿಂದ, ಎಂದು ಹೇಳುವುದರಲ್ಲಿ ನಾನೂ ಒಬ್ಬನಾಗಿದ್ದೆ.
ಮೊದಲು ಕನ್ನಡ ಜನ ಎಲ್ಲಾ ಒಂದು ಕಡೆ ಸೇರೋಣ. ಅದು ಆಗಲಿ ಅನಂತರ ಹೆಸರಿನ ಬದಲಾವಣೆಯ ಬಗ್ಗೆ ನಿಧಾನವಾಗಿ ಯೋಜನೆ ಮಾಡಿ, ಇತರರು ಇದನ್ನು ಮನ ಒಲಿದು ಒಪ್ಪವ ರೀತಿ ಮಾಡಿ ಬದಲಾಯಿಸೋಣ ಎಂದು ಅದನ್ನು ಹಾಗೇ ಇಟ್ಟುಕೊಂಡರು. ಜನತೆ ಒಂದು ಕಡೆ ಹೆಸರು ಬದಲಾವಣೆ ಆಗಬೇಕು ಎಂದು ಇಚ್ಛೆಪಡುತ್ತಾ ಬಂದಿದ್ದರೆ, ಶಾಸನ ಸಭೆಯ ಆಡಳಿತ ಪಕ್ಷದವರು ಇದನ್ನು ಮುಂದೂಡಿಕೊಂಡು ಬಂದಿದ್ದಾರೆ.
1969ನೇ ಜುಲೈ ಕಾಂಗ್ರೆಸ್‌ ಪಕ್ಷದ ಚರಿತ್ರೆ ಬದಲಾವಣೆ ಆಯಿತು. ಆ ಬದಲಾವಣೆಯ ಪರಿಣಾಮವಾಗಿ ನಾವು ಇಲ್ಲಿ ಈ ಸಭೆಯಲ್ಲಿದ್ದೇವೆ. 1970-71ರಲ್ಲಿ ನಡೆದಂಥ ಮಧ್ಯಂತರ ಚುನಾವಣೆ ಕಾಲದಲ್ಲಿ ಅಲ್ಲಲ್ಲಿ ಈ ಹೆಸರು ಬದಲಾವಣೆ ಬಗ್ಗೆ ಬಹಿರಂಗವಾಗಿ, ಅಂತರಂಗವಾಗಿ ವಾದ-ವಿವಾದಗಳು ನಡೆಯುತ್ತಿದ್ದವು. ಮದ್ಯಂತರ ಚುನಾವಣೆ ಆದ ಮೇಲೆ 1972ರ ಚುನಾವಣೆಯ ಕಾಲಕ್ಕೆ ಈ ಹೆಸರಿನ ವಿಚಾರ ಬಹಳ ಪ್ರಬಲವಾಗಿ ಜನಸಾಮಾನ್ಯರ ಮನಸ್ಸನ್ನು ಸೆಳೆಯುವುದಕ್ಕೆ ಒಂದು ಕಾರಣವಾಯಿತು. ಈ ರಾಜಕೀಯ ತಿಕ್ಕಾಟದಲ್ಲಿ ನಾನು ಒಂದು ಕಡೆ ಮಾಡಿದಂಥ ಭಾಷಣದಿಂದ ಸ್ವಲ್ಪ ಕಿಡಿ ಹಾರಿತು. ಅದು ದೇಶದಾದ್ಯಂತ ವ್ಯಾಪ್ತಿಗೊಂಡಿತು.



ನನ್ನ ಅಭಿಪ್ರಾಯ ಏನೇ ಇರಲಿ. ಶ್ರೀ ಸಾಮಾನ್ಯರ ಅಭಿಪ್ರಾಯದಲ್ಲಿ ಅವರಿಗೆ ಈ ಬದಲಾವಣೆಯಿಂದ ಒಂದು ಆನಂದ, ಒಂದು ತೃಪ್ತಿ, ಒಂದು ಸಮಾಧಾನ, ಒಂದು ಭಾವೈಕ್ಯತೆ ಬರುವುದಾದರೆ ನಮಗೆ ಅದರಿಂದ ತೊಂದರೆ ಆಗುವುದು ಏನೂ ಇಲ್ಲ ಸಂತೋಷ ಎಂದು ಹೇಳುವುದರ ಜೊತೆಗೆ ನಾಳೆ ಚುನಾವಣೆ ಆದ ಮೇಲೆ ನಮ್ಮಪಕ್ಷ ಬಹುಮತ ಪಡೆದು ಬಂದು ಅಧಿಕಾರವನ್ನು ಪಡೆಯುವುದಾದರೆ ಸಭೆಯಲ್ಲಿ ಚರ್ಚೆ ಮಾಡಿ, ಶಾಸನ ಸಭೆಯಲ್ಲಿ ಚರ್ಚೆ ಮಾಡಿ, ಶಾಸನ ಸಭೆಯಲ್ಲಿ ನಿಮ್ಮಪ್ರತಿನಿಧಿಗಳು ಯಾರು ಇರುತ್ತಾರೆ ಅವರ ಅಭಿಪ್ರಾಯದಂತೆ ಹೋಗುವುದಕ್ಕೆ ನನ್ನ ಅಡ್ಡಿ ಇಲ್ಲ. ಹೆಸರು ಬದಲಾವಣೆ ಮಾಡೋಣ, ಬಹುಮತ ಅಭಿಪ್ರಾಯದಂತೆ ಹೋಗೋಣ ಎನ್ನುವ ಮಾತನ್ನು ಜನತೆಯ ಮುಂದೆ ನನ್ನ ಪಕ್ಷದ ಪರವಾಗಿ ಹೇಳಿದ್ದುಂಟು. ನಾನು, ನೀವು ಜನತೆಗೆ ಕೊಟ್ಟಂಥ ಮಾತನ್ನು ಉಳಿಸಿಕೊಳ್ಳುವುದಕೋಸ್ಕರ ಇವೊತ್ತು ತಮ್ಮ ಎಲ್ಲರ ಅಪ್ಪಣೆ ಪಡೆದು ಈ ಒಂದು "ಠರಾವನ್ನುನಾನು ಈ ಸಭೆಯ ಮುಂದೆ ಮಂಡಿಸುತ್ತಿದ್ದೇನೆ.

 

ಮತ್ತೆ ಈ ಹೆಸರು ಯಾವುದು ಇರಬೇಕು ಎನ್ನುವ ಬಗ್ಗೆ ಕೂಡ ನಮ್ಮನಾಡಿನಲ್ಲಿ ಬಹಳ ಕಾಲ ಚರ್ಚೆಡೆದಿದೆ. ಇಂತಹ ಬದಲಾವಣೆಯನ್ನು ಮಾಡುವುದು ಎಂದರೆ ಕರ್ನಾಟಕ'” ಎಂದು ಮಾಡಬಹುದು ಎನ್ನುವ ಒಂದು ನಿರ್ಣಯವನ್ನು ಇಲ್ಲಿ ಮಂಡಿಸಿದ್ದೇನೆ. ಕರ್ನಾಟಕ ಎನ್ನುವ ಹೆಸರನ್ನು ಹಿಂದೆ ರಾಜ್ಯಗುರುಗಳು ಉಪಯೋಗಿಸುತ್ತಿದ್ದರು. ಕರ್ನಾಟಕ ಸಿಂಹಾಸನಾಧೀಶ್ವರ ಎಂದು ಒಂದು ಕಾಲದಲ್ಲಿ ಮೈಸೂರು ರಾಜರು ಇಟ್ಟುಕೊಂಡಿದ್ದರು. ಹೊಯ್ಸಳರು ಕದಂಬರರೂ ಇಟ್ಟುಕೊಂಡಿದ್ದರು. ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಈ ಹೆಸರು ಬರುತ್ತಲೇ ಇತ್ತು. ಸಾಹಿತಿಗಳು ಸಾಹಿತ್ಯದಲ್ಲಿ ಕರ್ನಾಟಕಎಂಬ ಹೆಸರನ್ನು ಇಡಬಹುದೆಂದು ಹೇಳಿದ್ದಾರೆ. ಅದರಂತೆ ಇಲ್ಲಿ ನಿರ್ಣಯವನ್ನು ಮಂಡಿಸಿದ್ದೇನೆ.

ಒಂದೂವರೆ ತಿಂಗಳ ಹಿಂದೆ ಈ ಠರಾವನ್ನು ಕ್ಯಾಬಿನೆಟ್‌ ಮುಂದೆ ಬಂದಾಗ ಬಹು ಜನತೆ ಹಾಗೂ ಶಾಸಕರು ಅಭಿಪ್ರಾಯಪಡುವಂತೆ ನಮ್ಮರಾಜ್ಕಕ್ಕೆ ಒಂದು ಶಾಶ್ವತವಾದ ಹೆಸರನ್ನು ಇಟ್ಟು ಈಗಿನ ಹೆಸರನ್ನು ಬದಲಾವಣೆ ಮಾಡಬಹುದು ಎಂಬ ತೀರ್ಮಾನಕ್ಕೆ ಬಂದೆವು. ನಾನು ತಮ್ಮ ಮುಂದೆ ಠರಾದಿನಲ್ಲಿ ಕರ್ನಾಟಕಎಂದು ಏನು ಹೆಸರನ್ನು ಇಟ್ಟಿದ್ದೇನೋ, ಅದೇ ಬಹುಮತ ಅಭಿಪ್ರಾಯ ಎಂದು ನನ್ನ ನಂಬಿಕೆ. ನಮ್ಮಪಕ್ಷದಲ್ಲಿ ಕೂಡ ಇದನ್ನು ಚರ್ಚೆಮಾಡಿ ಎಲ್ಲರೂ ಒಪ್ಪುವಂತೆ ಠರಾವನ್ನು ಇಲ್ಲಿ ತಂದಿದ್ದೇನೆ. ಒಂದು ಸಂತೋಷದ ವಿಚಾರ ಎಂದರೆ ನಮ್ಮಪಕ್ಷದಲ್ಲಿ ಕಿಲವು ವಿಚಾರದಲ್ಲಿ ಅಭಿಪ್ರಾಯ ಭೇದಗಳು ಇದ್ದರೂ ಇದರಲ್ಲಿಲ್ಲ. ಎಲ್ಲರೂ ಇಂತಹ ಒಂದು ಬದಲಾವಣೆಯನ್ನು ಮಾಡಲು ಹೃದಯ ತುಂಬಿ ಒಪ್ಪಿದ್ದಾರೆ.

ಆದರೆ ಪ್ರಜಾಪ್ರಭುತ್ವದ ತತ್ವದ ನೀತಿಗೆ ಕಟ್ಟುಬಿದ್ದು ಬಹುಮತದ ಅಭಿಪ್ರಾಯದಂತೆ ಯಾವ ರೀತಿಯಲ್ಲಿ ಇರಬೇಕೆಂದು ತೀರ್ಮಾನ ಮಾಡುತ್ತಾರೋ ಆ ತೀರ್ಮಾನವನ್ನು ತೆಗೆದುಕೊಂಡು ಅದಕ್ಕೆ ನಾವೆಲ್ಲರೂ ಸಂತೋಷದಿಂದ ಒಪ್ಪಿಕೊಂಡು ಹೋಗೋಣ ಎಂದು ಎಲ್ಲರೂ ಒಂದು ದೊಡ್ಡ ಮನೋಭಾವವನ್ನು ಪ್ರದರ್ಶನ ಮಾಡಿದ್ದಾರೆ. ಇದು ಒಂದು ಹರ್ಷದ ಸಂಗತಿ. ನಾವೆಲ್ಲ ಮೈಸೂರು ಇಲ್ಲವೇ ಕರ್ನಾಟಕ ದೇಶದಲ್ಲಿರಲಿ, ಇಡೀ ಭಾರತ ದೇಶದಲ್ಲಿ ಸೇವೆ ಮಾಡುತ್ತಿದ್ದರೂ ಕಾಲ ಸನ್ನಿವೇಶಕ್ಕೆ ತಕ್ಕ ಹಾಗೆ ಆರ್ಥಿಕವಾಗಿ, ಐಹಿಕ ವಿಚಾರಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತಿದ್ದೇವೆ. ಇದು ಮನುಷ್ಯನಿಗೆ ತೃಪ್ತಿ ತರುವ ವಿಚಾರವಾಗಿದ್ದರೂ ಒಂದು ರೀತಿಯಲ್ಲಿ ಇದರಲ್ಲಿ ಹೊಂದಿಕೊಂಡು ಹೋಗುವ ಒಂದು ಭಾವನೆ ಬೆಳೆಯಬೇಕು.

ಇದು ಮನುಷ್ಯನಿಗೆ ಆನಂದವನ್ನು ತರುವ ಒಂದು ಸಂಗತಿಯಾಗಿದೆ. ಇಂತಹ ಒಂದು ಆನಂದವನ್ನು ಅನುಭವಿಸುತ್ತಿರುವ ಸದಸ್ಯರುಗಳನ್ನು ನೋಡಿ ನಾವೂ ಆ ಆನಂದದಲ್ಲಿ ಭಾಗಿಯಾಗಬೇಕು. ನಮ್ಮರಾಜ್ಯದ ಹೆಸರಿನ ಬದಲಾವಣೆಯಿಂದಾಗಿ ಅವರಿಗೆ ಆನಂದ ಹಾಗೂ ಸಂತೋಷ ಉಂಟಾಗುತ್ತದೆ. ಬಹುಜನರು ಎಂದರೆ ಈ ದೇಶದಲ್ಲಿರುವ ಬೇರೆ ಬೇರೆ ವರ್ಗದವರೂ ಸೇರುತ್ತಾರೆ. ಅನೇಕ ಸಾಹಿತಿಗಳು ಕರ್ನಾಟಕದಲ್ಲಿ ಇದ್ದಾರೆ. ಇಂತಹ ಸಾಹಿತಿಗಳಲ್ಲಿ ಹಿರಿಯರಿಂದ ಕಿರಿಯರವರೆಗೂ ಎಂದರೆ ಶ್ರೀಮಾನ್‌ ಬೇಂದ್ರೆಯವರು, ಹಾಗೂ ರಾಷ್ಟ್ರದ ದೊಡ್ಡ ಕವಿಗಳಾದ ಶ್ರೀಮಾನ್‌ ಕೆ. ವಿ. ಪುಟ್ಟಪ್ಪನವರು ಮತ್ತೆ ಇನ್ನಿತರ ಎಲ್ಲ ಸಾಹಿತಿಗಳೂ ಈಗಿರುವ ಹೆಸರನ್ನು ಬದಲಾವಣೆ ಮಾಡಿ ಕರ್ನಾಟಕ ಎಂದು ಮಾಡಬೇಕೆಂದು ಸತತವಾಗಿ ಒತ್ತಾಯ ಮಾಡುತ್ತಾ ಬಂದಿದ್ದಾರೆ.

ಬುದ್ಧಿ ಜೀವಿಗಳೂ ಕೂಡ ಹೆಸರು ಬದಲಾವಣೆಯಾಗಬೇಕೆಂದು ಹೇಳಿದ್ದಾರೆ. ವಿದ್ಯಾರ್ಥಿಗಳು, ಮಧ್ಯಮ ವರ್ಗದ ಜನರೂ, ಬದಲಾವಣೆ ಯಾಗಬೇಕೆಂದು ಹೇಳಿಕೊಂಡು ಬರುತ್ತಿದ್ದಾರೆ. ಅದೇ ರೀತಿ ಆಡಳಿತ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿರತಕ್ಕ ಜನ ಅಭಿಪ್ರಾಯಪಟ್ಟಿದ್ದಾರೆ. ಇದು ಅವರೆಲ್ಲರ ಹಿರಿದಾದ ಆಸೆ, ನಾವು ಜನತಾ ಪ್ರತಿನಿಧಿಗಳಾಗಿರುವುದರಿಂದ ಅವರ ಆಸೆಗೆ ಅಡ್ಡಿ ತರತಕ್ಕದ್ದು ಸೂಕ್ತವಲ್ಲ, ಇಷ್ಟೊಂದು ಜನಕ್ಕೆ ಸಂತೋಷವಾಗಬೇಕಾದರೆ ಅಂತಹ ಸಂತೋಷವಾಗಿರುವ ಜನತೆಯಲ್ಲಿ ನಾವೂ ಸಹ ಭಾಗಿಯಾಗೋಣ. ನಮ್ಮ ಕೈಲಾದ ಅಲ್ಪ ಸೇವೆಯನ್ನು ಸಲ್ಲಿಸೋಣ ಎನ್ನುವ ಒಂದು ಸಂತೋಷದಿಂದ ನಾನು ಇಲ್ಲಿ ಇಂತಹ ಒಂದು ನಿರ್ಣಯವನ್ನು ತರುವ ಕಾಲ ಬಂತಲ್ಲ ಎಂದು ಸಂತೋಷಿಸುತ್ತೇನೆ ಮತ್ತು ಇದರಲ್ಲಿ ನಮ್ಮ ಜವಾಬ್ದಾರಿಯೂ ಇದೆ ಎನ್ನುವ ಮಾತನ್ನು ಹೇಳಿ ಇಂತಹ ಒಂದು ನಿರ್ಣಯ ಇಲ್ಲಿ ಬಂದಿದೆ. ಇದನ್ನು ತಮ್ಮಅಪ್ಪಣೆ ಪಡೆದು ನಮ್ಮ ಈ ಸಭೆಯ ಮುಂದೆ ಇಟ್ಟಿದ್ದೇನೆ.

ಹಳೆಯ ಮೈಸೂರಿನ ಭಾಗದಿಂದ ಬಂದ ಜನರಿಗೆ ಮೈಸೂರು ರಾಜ್ಯದ ಹೆಸರಿನ ಬಗ್ಗೆ ಹಿಂದಿನಿಂದಲೂ ಚಾರಿತ್ರಿಕವಾಗಿ ಒಂದು ಅಭಿಮಾನ ಬೆಳೆದು ಬಂದಿದೆ. ಮೈಸೂರು ರಾಜ್ಯ ಎಂಬುದು ಇಡೀ ಇಂಡಿಯಾ ದೇಶದಲ್ಲಿ ಕೀರ್ತಿ ಪಡೆದಿರುವುದಲ್ಲದೆ, ಹೊರ ದೇಶಗಳಲ್ಲಿಯೂ ಸಹ ಕೀರ್ತಿಪಡೆದಿದೆ. ಮೈಸೂರು ಜನತೆಯ ವಿಚಾರದಲ್ಲಿ. ಮೈಸೂರು ಸಾಮಾನುಗಳ ವಿಚಾರದಲ್ಲಿ ತಿಳಿದಂತಹ ಜನರು ಹೊರ ದೇಶಗಳಲ್ಲಿ ಇದ್ದಾರೆ. ಅದಕೋಸ್ಕರ ಮೈಸೂರು ರಾಜ್ಯ ಹೆಚ್ಚಿನ ಗೌರವ ಹಾಗೂ ಕೀರ್ತಿ ಪಡೆದುಕೊಂಡಿದೆ. ಮೈಸೂರು ಎಂಬ ಹೆಸರಿಗೆ ಶಕ್ತಿ ಇದೆ.
ಈ ಹೆಸರು ಅಸ್ತಂಗತವಾದರೂ ಸಹ ಇನ್ನೊಂದು ಹೆಸರು ಉದಯವಾಗುತ್ತಿದೆ. ಹೊಸ ಹೆಸರಿನಲ್ಲಿ ಭಾವೈಕ್ಯತೆ ಇದೆ. ವಿಶ್ವಾಸವಿದೆ. ಹೆಚ್ಚಿನ ಜನರಿಗೆ ಸಂಶೋಷ, ಆನಂದ ಉಂಟಾಗುತ್ತದೆ ಬದಲಾವಣೆಯಲ್ಲಿ ಹಳೆಯದು ಹೋಗಿ, ಹೊಸದು ಬರುವಾಗ ತೊಂದರೆ ಇಲ್ಲ. ಆನಂದ ಬರುತ್ತದೆ. ಆದ್ದರಿಂದ ಈ ಬಗ್ಗೆ ಹೆಚ್ಚು ಚಿಂತನೆ ಮಾಡಬೇಕಿಲ್ಲ, ಹೊಸದನ್ನು ನೋಡಿ, ನಲಿದು ಸಂತೋಷ ಪಡುವ ಕಾಲ ಇದು. ಆದ್ದರಿಂದ ಈ ನಿರ್ಣಯಕ್ಕೆ ಮಾನ್ಯ ಸಭೆ ಒಪ್ಪಿಗೆ ಕೊಡುತ್ತದೆಂಬ ಪೂರ್ಣ ವಿಶ್ವಾಸ ನನಗೆ ಇದೆ. ಬಹುಮತದ ವಿಶ್ವಾಸವಲ್ಲ ನಾವೆಲ್ಲರೂ ಸೇರಿ ಒಮತದಿಂದ ಈ ಹೆಸರನ್ನು ಕರೆಯೋಣ. ಆ ರೀತಿ ನಾವು ಆನಂದದಿಂದ, ಸಂತೋಷದಿಂದ ಕರೆಯುವಾಗ ಕನ್ನಡ ಜನತೆಯ ಏಳಿಗೆಯಾಗಲಿ ಮತ್ತು ಈ ಶುಭ ಮುಹೂರ್ತದಲ್ಲಿ ಈ ಹೆಸರನ್ನು ಕರೆದು ರಾಜ್ಯ ಉನ್ನತವಾಗಿ ಬೆಳೆದು, ಹಿಂದಿನಿಂದ ಈ ರಾಜ್ಯ ಚರಿತ್ರೆಯಲ್ಲಿ ಏನು ಒಂದು ಒಳ್ಳೆಯ ಕೀರ್ತಿ, ಹೆಸರನ್ನು ಪಡೆದಿತ್ತೋ ಅದಕ್ಕಿಂತ ಹೆಚ್ಚಿನ ಕೀರ್ತಿಯನ್ನು ಪಡೆದು ಕನ್ನಡ ಜನಕೋಟಿ ಏನಿದ್ದಾರೆ ಅವರ ಬಾಳ್ವೆ ಹಸನಾಗಬೇಕು.

ನಮ್ಮ ಸಂಸ್ಕೃತಿ, ಸಾಹಿತ್ಯ, ಕಲೆ, ಇವೆಲ್ಲವೂ ಬೆಳೆದು ಇಡೀ ಭಾರತದಲ್ಲಿಯೇ ಅಲ್ಲ ಇಡೀ ಪ್ರಪಂಚದಲ್ಲಿಯೇ ಹೆಚ್ಚಿನ ಕೀರ್ತಿ ಪಡೆಯುವಂತಾಗಬೇಕು. ಅಂತಹ ಕಾರ್ಯಕ್ಕೆ ಇವೂತ್ತು ನಾವು ಅಂಕುರಾರ್ಪಣ ಮಾಡೋಣ ಎನ್ನುವ ಮಾತನ್ನು ತಿಳಿಸಿ ಈ ಠರಾವನ್ನು ತಮ್ಮ ಒಪ್ಪಿಗೆಗಾಗಿ ಮಂಡಿಸುತ್ತಿದ್ದೇವೆ. ನಾನು ಸರಕಾರದ ವತಿಯಿಂದ ಮಂಡಿಸಿದಂಥ ನಿರ್ಣಯಕ್ಕೆ ಎಲ್ಲ ಕಡೆಯಿಂದಲೂ, ಎಲ್ಲಾ ಪಕ್ಷಗಳಿಂದಲೂ ಸರ್ವತೋಮುಖವಾದ ಬೆಂಬಲ ಬಂದಿರತಕ್ಕದ್ದು ನನಗಂತೂ, ಬಹಳ ಸಂತೋಷ ಉಂಟುಮಾಡಿದೆ. ನಾನು ಮೊದಲೇ ಈ ಸಭೆಯಲ್ಲಿ ಅರಿಕೆ ಮಾಡಿಕೊಂಡ ಹಾಗೆ ಏನಾದರೂ ಇಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಇದ್ದರೂ, ಹೆಸರು ಬದಲಾವಣೆ ಆಗತಕ್ಕ ಕಾಲದಲ್ಲಿ ಮನಸ್ಸಿಗೆ ಸ್ವಲ್ಪ ನೋವು ಆದಂಥವರು ಕೂಡ ಅಂತಿಮವಾಗಿ ನಿರ್ಣಯಕ್ಕೆ ಬೆಂಬಲ ಕೊಟ್ಟಿದ್ದಾರೆ ಮತ್ತು ಬದಲಾವಣೆಯನ್ನು ಸ್ವಾಗತಿಸಿದ್ದಾರೆ, ನಾವು ಕರ್ನಾಟಕ ಎಂಬ ಹೆಸರು ಇಡಬೇಕು ಎಂಬುದನ್ನು ಕೂಡ ಒಪ್ಪಿದ್ದಾರೆ. ಆದಕಾರಣ ಮೂರು ದಿವಸಗಳಿಂದ ಮಾತನಾಡಿ ತಮ್ಮ ಹೃದಯದಿಂದ ಬಂದ ಬೆಂಬಲವನ್ನು ಕೊಟ್ಟಂಥ ಮಾನ್ಯ ಸದಸ್ಯರಿಗೂ, ಈ ಚರ್ಚೆಯಲ್ಲಿ ಭಾಗವಹಿಸದೆ ಮೌನದಿಂದ ಕುಳಿತು ಮಾತುಗಳನ್ನು ಕೇಳಿದವರಿಗೂ ಮತ್ತು ಮೌನದಿಂದಲೇ ಬೆಂಬಲ ಕೊಟ್ಟಂಥ ಎಲ್ಲಾ ಸದಸ್ಯರಿಗೂ ನನ್ನ ಧನ್ಯವಾದಗಳನ್ನು ಅರ್ಪಿಸುವುದಕ್ಕೆ ನಾನು ಅಪ್ಪಣೆ ಬೇಡುತ್ತೇನೆ. ಈ ಸಂದರ್ಭದಲ್ಲಿನಾನು ಈ ನಿರ್ಣಯವನ್ನು ಮಂಡಿಸುವುದಕ್ಕೆ ಮನಸ್ಸು ಮಾಡಿದ್ದಕ್ಕಾಗಿ ಅಥವಾ ತಂದಿದ್ದಕ್ಕಾಗಿ ನನ್ನ ಬಗ್ಗೆ ಕೆಲವರು ಒಳ್ಳೆಯ ಭಾಷಣವನ್ನು ಮಾಡಿದ್ದಾರೆ, ಮೆಚ್ಚುಗೆಯನ್ನು ನನ್ನ ಮಿತ್ರರು, ಎದುರು ಪಕ್ಷದಲ್ಲಿರತಕ್ಕ ನಾಯಕರು ವ್ಯಕ್ತಪಡಿಸಿದ್ದಾರೆ.

ಇಂತಹ ಮಹತ್ವದ ಕಾರ್ಯಗಳು ಆಗುವಾಗ, ನಾವು ಒಂದೊಂದು ಕಾಲಕ್ಕೆ ನಿಮಿತ್ತ ಮಾತ್ರರಾಗುತ್ತೇವೆ ಅಷ್ಟೇ ಎಂದು ನಾನು ತಿಳಿದುಕೊಂಡಿದ್ದೇನೆ. ಇದು ನನಗೆ ವೈಯಕ್ತಿಕವಾಗಿ ಹೆಮ್ಮೆ ಎಂದಲ್ಲ, ನಾನು ಒಂದು ನಿಮಿತ್ತವಾಗಿದ್ದೇನೆ, ಅದಕ್ಕೆ ಸಂದರ್ಭ ಕಾರಣ. ಇದರಿಂದ ಬರತಕ್ಕ ಕೀರ್ತಿ ಮೆಚ್ಚಿಗೆ ಇಡೀ ಸದನಕ್ಕೆ ಸೇರಿದ್ದು. ಅದರಲ್ಲಿ ನಾನೂ ಒಬ್ಬ ಇದ್ದೇನೆ ಅಷ್ಟೇ. ವೈಯಕ್ತಿಕವಾಗಿ ಇದರಲ್ಲಿ ನನ್ನ ಪ್ರತಿಷ್ಠೆ ಇಲ್ಲ, ಜನಮನಕ್ಕೆ ಸ್ಪಂದಿಸಿದ್ದೇನೆ ನುಡಿದಂತೆ ನಡೆದಿದ್ದೇನೆ ಎಂಬ ನಂಬಿಕೆ. ತಿಳಿವಳಿಕೆ ಇಲ್ಲದೆ ಧ್ಹರ್ಯ ಬರುವುದಿಲ್ಲ. ನಡೆದ ವಿಚಾರವನ್ನು ಸರಿಯಾಗಿ ತಿಳಿಯಬೇಕಾದರೆ ನಿರ್ವಿಕಾರ ಮನಸ್ಸು ಬೇಕು. ಈ ದೃಷ್ಟಿಯಿಂದ ನಡೆಯುವುದಕ್ಕೆ ಧೈರ್ಯ ಮಾಡಿದೆ ಅಷ್ಟೇ.

ಯುಗಯುಗಾಂತರಗಳಿಂದ ಸಾಮಾಜಿಕವಾಗಿ, ಆರ್ಥಿಕವಾಗಿ ನೊಂದು, ಬೆಂದು ಹಿಂದುಳಿದಿರತಕ್ಕೆ, ಜನ-ಜನಾಂಗಗಳ ಉದ್ದಾರ ಆಗಬೇಕು. ಆ ದಿಕ್ಕಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದೇವೆ. ಅದಕ್ಕೆ ಎಲ್ಲರ ತೆರೆದ ಹೃದಯದ ಸಹಕಾರಬೇಕು. ಈ ದಿಕ್ಕಿನಲ್ಲಿ ಅಂಜದೆ ನಾವು ನುಡಿದಂತೆ ನಡೆಯಬೇಕಾದುದ್ದು ನಮ್ಮ ಕರ್ತವ್ಯ. ಅದನ್ನು ಮಾಡುತ್ತೇವೆಂದು ಹೇಳಿ ತಮಗೆ ಆಶ್ವಾಸನೆ ಕೊಡಬಲ್ಲೆ. ಕೆಲವು ಭಾಗಗಳಲ್ಲಿ ಕೆಲವು ತೊಂದರೆಗಳಿವೆ. ನೀರಿನ ಅಭಾವ, ಮಳೆ ಇಲ್ಲದೆ ತೊಂದರೆ, ಯಾವ ಭಾಗದಲ್ಲಿ ತೊಂದರೆಯಾದರೂ ಅದನ್ನು ಪರಿಹರಿಸುವುದು ಸರ್ಕಾರದ ಕರ್ತವ್ಯ. ಎಲ್ಲಿಯವರೆಗೆ ನಮಗೆ ಸರ್ಕಾರ ನಡೆಸುವ ಜವಾಬ್ದಾರಿ ಇರುತ್ತದೆಯೋ ಅಲ್ಲಿಯವರೆಗೆ ಆ ಭಾಗ, ಈ ಭಾಗ, ನಮ್ಮವರು, ನಿಮ್ಮವರು ಎಂಬ ಪಕ್ಷಪಾತಕ್ಕೆ ಎಡೆಯಲ್ಲ. ಎಲ್ಲ ಭಾಗಗಳೂ ನಮ್ಮ ರಾಜ್ಯ, ನಮ್ಮ ಜನ ಎಂಬ ಒಂದೇ ಗುರಿ ಎನ್ನುವ ಆಶ್ವಾಸನೆಯನ್ನು ಕೂಡಾ ನಾನು ಕೊಡುತ್ತೇನೆ.

ಕೊನೆಯದಾಗಿ ಒಂದು ಮಾತು. ಈ ನಿರ್ಣಯವನ್ನು ನನ್ನ ಒಂದು ಸ್ಥಾನದಿಂದ ತಂದಿರತಕ್ಕದ್ದು ಸಂತೋಷ ಎಂಬ ಅಭಿಪ್ರಾಯ, ಇವರು ಅರಸು ಮನೆತನದವರು ಆಗಿದ್ದರೂ ಇದನ್ನು ತಂದಿದ್ದಾರೆಂದು ಹೇಳಿದ್ದಾರೆ. ಇದರ ಬಗ್ಗೆ ನಾನು ಏನೂ ಹೇಳಬೇಕಾದ ಅಗತ್ಯವಿಲ್ಲ. ನಾನು ಯಾವಾಗ ರಾಜಕೀಯದಲ್ಲಿ ಕಾಲಿಟ್ಟನೋ ಆವಾಗಿನಿಂದ ನಾನು ಅರಸು ಮನೆತನಕ್ಕೆ ಸೇರಿದವನು ಜನತೆಯೇ ಬೇರೆ ನಾನು ಬೇರೆ ಎಂದು ತಿಳಿದವನಲ್ಲ. ನಾನು ಹುಟ್ಟಿದ್ದು ಹಳ್ಳಿಯಲ್ಲಿ ಬೆಳೆದಿದ್ದು ಹಳ್ಳಿಯಲ್ಲಿ ಇದ್ದದ್ದೂ ಹಳ್ಳಿಯಲ್ಲಿ ದೇಶದ ವಿಚಾರ ಬಂದಾಗ ದೇಶಾಭಿಮಾನ ಇರುವಂಥವನು, ಯಾವ ಜಾತಿ, ಮತ ಭೇದವಿಲ್ಲದೆ, ಯಾರ್ಯಾರಿಗೆ ಸ್ವಾತಂತ್ರಾಭಿಮಾನ ಇದೆಯೋ, ಅವರೆಲ್ಲರೂ ದೇಶಕ್ಕಾಗಿ ಹೋರಾಟವನ್ನು ಮಾಡಿದ್ದಾರೆ. ಅಂತಹ ಹೋರಾಟ ಮಾಡಿದ ಲಕ್ಟೋಪಲಕ್ಷ ಜನರಲ್ಲಿ ನಾನೂ ಒಬ್ಬ. ನನಗೆ ತನ್ನ ಜಾತಿಯೆಂದು ಏನೂ ಹೆಚ್ಚಿನ ಪ್ರೀತಿಯೂ ಇಲ್ಲ ಅಥವಾ ಬೇರೆ ಜಾತಿಯವರಲ್ಲಿ ಕಡಿಮೆ ರೀತಿಯ ಪ್ರೀತಿಯೂ ಇಲ್ಲ. ನಾವೆಲ್ಲರೂ ಒಂದೇ ಜಾತಿಯವರು ಎಂಬ ಭಾವನೆ. ಈ ರಾಜತತ್ವಕ್ಕೆ ನಾನು ಎಂದೋ ವಿರೋಧಿ ಗಾಂಧೀಜಿಯವರು ಈ ರಾಜರುಗಳ ಬಗ್ಗೆ ಹೇಳಿದಾಗ ಅದು ಸರಿ ಎಂದು ನನಗೆ ತೋರಿ ಆಗಿನಿಂದಲೇ ವಿರೋಧವಾದ ಮನೋಭಾವ ಬೆಳೆದು ಬಂದಿತ್ತು. ಅವರ ವಿರುದ್ಧವಾಗಿ ಎದ್ದು ನಿಂತಿದ್ದೇನೆ.

ತಾವೆಲ್ಲರೂ ಈ ನಿರ್ಣಯವನ್ನು ವಿರೋಧ ಮಾಡದೆ ಸರ್ವಾನುಮತದ ಸ್ವಾಗತ ಮಾಡಿದ್ದಕ್ಕಾಗಿ ತಮಗೆಲ್ಲರಿಗೂ ನಾನು ಅಭಿನಂದಿಸುತ್ತೇನೆ. ಈ ಮಹತ್ತರವಾದ ನಿರ್ಣಯವನ್ನು ತಮ್ಮಅಧ್ಯಕ್ಷತೆಯಲ್ಲಿ ಚರ್ಚೆ ಮಾಡಿ ಅಂಗೀಕರಿಸುತ್ತಿದ್ದೇವೆ. ಇದು ಹೆಮ್ಮೆ ಮತ್ತು ಸಂತೋಷ ಪಡುವ ವಿಚಾರ. ತಮ್ಮಘನ ಅಧ್ಯಕ್ಷತೆಯಲ್ಲಿ ಈ ಒಂದು ಚರಿತ್ರಾರ್ಹವಾದ ಘಟನೆ ನಡೆದಿರುವುದು ನಮ್ಮಪುಣ್ಯ ಹಾಗೂ ಶುಭ ಸಂಕೇತವೆಂದು ತಿಳಿದು ನಾನು ತಮನ್ನು ಮತ್ತೊಮ್ಮೆ ಅಭಿನಂದಿಸಿ ಈ ನಿರ್ಣಯಕ್ಕೆ ತಮ್ಮೆಬರ ಬೆಂಬಲವನ್ನು ಕೊಡಬೇಕೆಂದು ಪ್ರಾರ್ಥನೆ ಮಾಡಿಕೊಂಡು ನನ್ನ ಮಾತುಗಳನ್ನು ಮುಗಿಸುತ್ತೇನೆ.

(ಎಲ್ಲರೂ ಕರತಾಡನ ಮಾಡಿ ಸಂತೋಷ ವ್ಯಕ್ತಪಡಿಸಿದರು)


ಅಧ್ಯಕ್ಷರು:
ನಾನು ಈ ನಿರ್ಣಯವನ್ನು ಸಭೆಯ ಒಪ್ಪಿಗೆಗೆ ಹಾಕುತ್ತೇನೆ, ಅದು ಹೀಗೆ:

ಭಾರತದ ಸಂವಿಧಾನದಲ್ಲಿ ನಮೂದಿಸಿದ ಈ ರಾಜ್ಯದ ಹೆಸರನ್ನು ಕರ್ನಾಟಕ ಎಂಬುದಾಗಿ ಬದಲಾಯಿಸಬೇಕೆಂದೂ ಈ ಸಭೆಯವರು ತಮ್ಮ ಖಚಿತ ಅಭಿಪ್ರಾಯವನ್ನು ಘೋಷಿಸಿ ಈ ಬಗ್ಗೆ ಅಗತ್ಯವಾದ ಸಂವಿಧಾನದ ತಿದ್ದುಪಡಿಗಳನ್ನು ರಾಜ್ಯ ಸರ್ಕಾರದವರು ಪಡೆದುಕೊಳ್ಳಲು ಕ್ರಮ ಕೈಗೊಳ್ಳಬೇಕೆಂದು ಈ ಸಭೆಯವರು ಶಿಫಾರಸ್ಸು ಮಾಡುತ್ತಾರೆ (ಎಲ್ಲಾ ಸದಸ್ಯರು ಜಯಕಾರ ಮಾಡಿದರು.)

ಅಧಕ್ಷರು:

ನಿರ್ಣಯದ ವಿರೋಧ ಯಾರು ಇಲ್ಲವಾದ್ದರಿಂದ ಈ ನಿರ್ಣಯವನ್ನು (ಸರ್ವಾನುಮತದಿಂದ) ಅಂಗೀಕರಿಸಲ್ಪಟ್ಟಿತ್ತು. The Resolution was Adopted


ಶ್ರೀ ವಾಟಾಳ್‌ ನಾಗರಾಜ್‌:
ಈ ಶುಭ ಸಂತೋಷದ ಸಮಯದಲ್ಲಿ ಸಂತೋಷ ಸೂಚಕವಾಗಿ ನಾನು ಈ ಮಲ್ಲಿಗೆ ಹೂಗಳನ್ನು ಎಲ್ಲರ ಮೇಲೆಯೂ ಚೆಲ್ಲುತ್ತೇನೆ. (ವಾಟಾಳ್‌ ನಾಗರಾಜರು ಮತ್ತು ಎಸ್‌. ಬಂಗಾರಪ್ಪನವರು ಮಲ್ಲಿಗೆ ಹೂಗಳನ್ನು ಚೆಲ್ಲಿದರು)

ಶ್ರೀ ಡಿ. ದೇವರಾಜ್‌ ಅರಸ್‌:
ನಾನು ಈಗ ಕರ್ನಾಟಕಕ್ಕೆ ಎಂದು ಹೇಳುತ್ತೇನೆ. ತಾವೆಲ್ಲರೂ ಒಕ್ಕಂಠದಿಂದ ಜಯವಾಗಲಿ ಎಂದು ಹೇಳಬೇಕು.

ಶ್ರೀ ಡಿ. ದೇವರಾಜ್‌ ಅರಸ್‌:
 ಕರ್ನಾಟಕಕ್ಕೆ.

ಎಲ್ಲ ಸದಸ್ಯರು:
ಜಯವಾಗಲಿ.
(ಎಲ್ಲಾ ಸಧಸ್ಮರು ಕರ್ನಾಟಕಕ್ಕೆ ಜಯವಾಗಲಿ ಎಂದು ಘೋಷಣೆಯನ್ನು ಮತ್ತು ಕರತಾಡನವನ್ನು
ಮಾಡಿದರು).

--------

(ಆಕರ: ಪ್ರತಿಭಾವಂತ ಸಂಸದೀಯ ಪಟುಗಳ ಬದುಕು ಬರಹ ಮಾಲಿಕೆ: ಡಿ. ದೇವರಾಜ ಅರಸು. ಪ್ರಕಟಣೆ: ಗ್ರಂಥಾಲಯ ಉಪಸಮಿತಿ, ಕರ್ನಾಟಕ ವಿಧಾನಸಭೆ ಸಚಿವಾಲಯ. ಇಸವಿ: 2,000)

ಶುಕ್ರವಾರ, ಅಕ್ಟೋಬರ್ 02, 2020

ಇತಿಹಾಸದ ಪುಟಗಳಿಗೆ ಮರಳಲು ಬಯಸುವವರಿಗೆ 'ಬಿಜೆಪಿ 25+1' ಕೃತಿ ದಾರಿದೀಪ! - ಮೇಜರ್ ಡಾ. ಕುಶ್ವಂತ್ ಕೋಳಿಬೈಲು ಅವರ ವಿಮರ್ಶೆ

 ರಮೇಶ ದೊಡ್ಡಪುರರು ಬರೆದ BJP 25 + 1 ಪುಸ್ತಕವನ್ನು ಸುಮಾರು ಒಂದು ವಾರದ ಕೆಳಗೆ ಓದಿ ಕೆಳಗಿಟ್ಟಿದ್ದೆ. ನಿನ್ನೆಯ ದಿನ ಅವರ ಜೊತೆ ಮಾತನಾಡಿದ ನಂತರ ( ಆಫ್ ದಿ ರೆಕಾರ್ಡ್ !!)  ಪುಸ್ತಕದ ಬಗ್ಗೆ ಒಂದಷ್ಟು ಬರೆಯಬೇಕೆನಿಸಿತು.ಸಮಕಾಲೀನ ರಾಜಕೀಯ ಬೆಳವಣಿಗೆಗಳ ವಿಶ್ಲೇಷಣೆಯಿರುವ ಈ ಪುಸ್ತಕ ರಾಜ್ಯದ ಕಳೆದ ದಶಕದ ರಾಜಕೀಯ ಬೆಳವಣಿಗೆಗಳ ಅನೇಕ ಸೂಕ್ಷ್ಮ ವಿಚಾರಗಳ ಮೇಲೆ ಬೆಳಕು ಚೆಲ್ಲಿದೆ. ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ರಾಜಕೀಯ ಮತ್ತು ಸಾಮಾಜಿಕ ಬೆಳವಣಿಗೆಗಳ ಬಗ್ಗೆ ಓದಿ ತಿಳಿಯುವ ಚಟವಿರುವ ನಾನು ಲೇಖಕರು  ಈ ಪುಸ್ತಕದಲ್ಲಿ ಸರಳ ರೀತಿಯಲ್ಲಿ ಅನೇಕ ಕುತೂಹಲಕಾರಿ ವಿಚಾರಗಳನ್ನು ಹೇಳಿದನ್ನು ಓದಿ ಅನುಭವಿಸಿದ್ದೇನೆ. ಸೋಜಿಗದ ಸಂಗತಿಯೆಂದರೆ ಅನೇಕ ಸೂಕ್ಷ್ಮ ವಿಚಾರಗಳನ್ನು ಅವರು ಬರೆಯದೆ ನಮ್ಮ ಗ್ರಹಿಕೆಗೆ ಬಿಟ್ಟುಬಿಟ್ಟಿದ್ದಾರೆ (ಉದಾಹರಣೆಗೆ - Why did not Bjp get a clear mandate in 2018 Vidhanasabha polls)

Click here to Purchase Book

ಆ ವಿಷಯಕ್ಕೆ ಆಮೇಲೆ ಬರುತ್ತೇನೆ..
ಮೊದಲಿಗೆ ಲೇಖಕರಿಗೆ ಶುಭಾಶಯಗಳನ್ನು ತಿಳಿಸಬೇಕಿದೆ.ಈ ಮಾದರಿಯ ಪುಸ್ತಕಗಳ ಆಯಾ ಕಾಲಘಟ್ಟದ ರಾಜಕೀಯ ಬೆಳವಣಿಗೆಗಳನ್ನು ದಾಖಲಿಸುವ ಮಹತ್ವದ ಕೆಲಸವನ್ನು ಮಾಡುತ್ತವೆ. ಕನ್ನಡದ ಪತ್ರಿಕೋದ್ಯಮ ವೈಬ್ರೆಂಟ್ ಮತ್ತು ಶಕ್ತಿಶಾಲಿಯಾಗಿದ್ದ ಕಾಲವೂ ಇತ್ತು. ಗುಂಡೂರಾಯರ ಸರಕಾರವನ್ನು ಅಲ್ಲಾಡಿಸುವಲ್ಲಿ ಲಂಕೇಶ್ ಪತ್ರಿಕೆ ಪ್ರಮುಖ ಪಾತ್ರವಹಿಸಿದಂತೆ. ಆದರೆ ಸಮಕಾಲೀನ ರಾಜಕೀಯ ವಿದ್ಯಮಾನಗಳ ಬಗೆಗೆ ಪುಸ್ತಕಗಳು ಕನ್ನಡದಲ್ಲಿ ಕಡಿಮೆ (ನನಗೆ ತಿಳಿದ ಮಟ್ಟಿಗೆ). ಹಾಗಾಗಿ ಈ ಪುಸ್ತಕ ಮುಂದಿನ ದಿನಗಳಲ್ಲಿ ಇತಿಹಾಸದ ಪುಟಗಳಿಗೆ ಮರಳಲು ಬಯಸುವವರಿಗೆ ದಾರಿದೀಪ!!
ಆಯಾ ಕಾಲಘಟ್ಟದ ಸಾಮಾಜಿಕ ಮತ್ತು ರಾಜಕೀಯ ವಿದ್ಯಮಾನಗಳನ್ನು ನಾನು ಈಗಿನ ತನಕ ಗ್ರಹಿಸಿಕೊಂಡದ್ದು ಆಗಿನ ಸಮಕಾಲೀನ‌ ನಾಯಕರ ಆತ್ಮಕಥೆಗಳ ಮೂಲಕ. ಆತ್ಮಕಥೆಗಳು ಅನೇಕ ಬಾರಿ ವಾಸ್ತವತೆಯಿಂದ ದೂರ ಸರಿದು ಸ್ವಪ್ರಶಂಸೆಗೆ ಸೀಮಿತವಾಗಿತ್ತದೆ ಮತ್ತು biased ಇರುವ ಸಂಭವವೂ ಇರುತ್ತದೆ. ಲೇಖಕರು Pro BJP ಪರವಾಗಿ / ಅಥವಾ ಬಲಪಂಥೀಯ ಸಿದ್ಧಾಂತದ ಪರವಾಗಿ  biased ಅಂತ ಅನಿಸದಿದ್ದರೂ ಒಂದಷ್ಟು ಸಾಫ್ಟನೆಸ್ ಇರುವುದಂತೂ ಸತ್ಯ.. After all we all are biased.. ನಮ್ಮ ನಮ್ಮ ಸ್ನೇಹಿತರೆಂದರೆ ಯಾರಿಗೆ ಇಷ್ವವಿರುವುದಿಲ್ಲ ಹೇಳಿ!! ಆದರೆ ಮೆಚ್ಚಬೇಕಾದ ಅಂಶವೆಂದರೆ ಲೇಖಕರು ಬಿಜೆಪಿಯ ಕಹಿಸತ್ಯಗಳ ಮೇಲೂ ಬೆಳಕು ಚೆಲ್ಲುವುದರ ಜೊತೆಗೆ ಬೇರೆ ನಾಯಕರ ಒಳ್ಳೆಯತನವನ್ನೂ ಗಮನಿಸಿದ್ದಾರೆ.
ಉದಾಹರಣೆಗೆ
೧) ಬೆಂಗಳೂರಿನ‌ ರಾಜಕೀಯ ನಾಯಕರ ಪಕ್ಷಾತೀತ ಸ್ನೇಹಗಳು ಮತ್ತು "ತಾಳ ಮೇಳ"
೨) ಶ್ರೀಮತಿ ತೇಜಸ್ವಿ ಅನಂತಕುಮಾರರಿಗೆ ಟಿಕೆಟ್ ಕೊಡದಿರುವ ಹಿಂದಿದ್ದ ಪೊಲಿಟಿಕಲ್ ದೂರದೃಷ್ಟಿ!!
೩) ಚುನಾವಣಾ ಪ್ರಣಾಳಿಕೆಗಳನ್ನು ಗಂಭೀರವಾಗಿ ತಗೆದುಕೊಂಡು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯರ ದಿಟ್ಟತನ.
ಈ ಪುಸ್ತಕದಲ್ಲಿ ಎರಡು ಪ್ರಮುಖ ವಿಷಯಗಳಿವೆ.
ಪುಸ್ತಕದ ಹೆಸರೇ ಹೇಳುವಂತೆ "ಬಿಜೆಪಿ 25+1" ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಒಂದು ರಾಜಕೀಯ ಪಕ್ಷವಾಗಿ ಮಾಡಿದ ಅದ್ಭುತವಾದ ಸ್ಟ್ರಾಟಜಿಗಳು. ರಾಜಕೀಯ ಭಾಷೆಯಲ್ಲಿ ಹೇಳಬೇಕೆಂದರೆ ಪ್ರತಿ ಜಿಲ್ಲಾ ಮಟ್ಟದಲ್ಲಿ ಮಾಡಿದ ಸ್ಥಳೀಯ "ವರ್ಕೌಟುಗಳು"

ಮೇಜರ್ ಡಾ. ಕುಶ್ವಂತ್ ಕೋಳಿಬೈಲು

ಉದಾಹರಣೆಗೆ - ಖರ್ಗೆಸಂತ್ರಸ್ತರನ್ನು ಒಗ್ಗೂಡಿಸಿದ್ದು.. ಸುಮ್ಮನೆ ಸುಮಕ್ಕನ ಬೆನ್ನಿಗೆ ನಿಂತದ್ದು ಇತ್ಯಾದಿ..
ಮೇಲಿನ ವಿಷಯಗಳು ಈ ಪುಸ್ತಕದಲ್ಲಿ ಬಹಳ ಸ್ವಷ್ಟವಾಗಿ ಮೂಡಿಬಂದಿದೆ..
ಪುಸ್ತಕದ ಮೊದಲ  ಅರ್ಧ ಭಾಗದಲ್ಲಿ  ಕರ್ನಾಟಕದ 2018ರ ವಿಧಾನಸಭೆ ಚುನಾವಣೆಗಳ ಆಸುಪಾಸಿನ ಬೆಳವಣಿಗೆಗಳ ಬಗ್ಗೆ ಬರೆದಿದ್ದಾರೆ. ಆಡಳಿತಾರೂಢ ಸರಕಾರದ ವಿರುದ್ಧ ಅಲ್ಪಸಂಖ್ಯಾತರನ್ನು ಓಲೈಸುವದರ ಆಪಾದನೆಯ ಜೊತೆಗೆ ಒಕ್ಕಲಿಗ ಮತ್ತು ಲಿಂಗಾಯಿತ ವಿರೋಧಿ ಸರಕಾರವೆಂಬ ಬಲವಾದ #perception ಸೃಷ್ಟಿಯಾಗಿದ್ದರೂ ಬಿಜೆಪಿಗೆ ಯಾಕೆ ಸ್ಪಷ್ಟವಾದ ಬಹುಮತ ಬರಲಿಲ್ಲವೆಂಬ ಕಹಿ ಸತ್ಯಗಳನ್ನು ಅವರು ಹೇಳದೇ ಉಳಿಸಿದ್ದಾರೆ.
ಆ ಚುನಾವಣೆಯಲ್ಲಿ ಪವರ್ ಸೆಂಟರ್ಗಳಾದ ಯಡಿಯೂರಪ್ಪ , ಬಿ ಯಲ್ ಸಂತೋಷ್ ಮತ್ತು ದೆಹಲಿಯಿಂದ ಬಂದು ಹೆಡ್ ಮಾಸ್ಟರ್ ಮಾದರಿಯಲ್ಲಿ ಕೆಲಸ ಮಾಡುತ್ತಿದ್ದ ಅಮಿತ್ ಶಾ ಈ ಮೂವರೂ ಶಕ್ತಿ ಮೀರಿ ದುಡಿದರೂ ಬಹುಮತದ ಗುರಿಮುಟ್ಟದ ಬಗ್ಗೆ ಇನ್ನೂ ಆಳವಾಗಿ ಬರೆಯಬಹುದಿತ್ತು. ಅವರ individual brilliance ಅದರೆ collective failure ಬಗ್ಗೆ ಪತ್ರಕರ್ತ ಮತ್ತು ರಾಜಕೀಯ ವಿಶ್ಲೇಷಕರಾಗಿರುವ ಲೇಖಕರು ಕುಟುಕಬೇಕಿತ್ತು. ಹೊಗಳಲು ಅವರ ಅಭಿಮಾನಿಗಳು ಇದ್ದಾರೆ, ಪತ್ರಕರ್ತರ ಪೆನ್ನು ಇರುವುದೇ ತಿವಿಯಲು..