ಶುಕ್ರವಾರ, ಅಕ್ಟೋಬರ್ 15, 2021

ರಾಜಕೀಯ ದೃಷ್ಟಿಯಲ್ಲಿ ಮೋಹನ ಭಾಗವತ್‌ ಭಾಷಣ

ವಿಶ್ವದ ಅತಿದೊಡ್ಡ ಮಾನವ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್‌) ಸದ್ಯದಲ್ಲೆ, ಅಂದರೆ 2025ರಲ್ಲಿ 100ನೇ ಸಂಸ್ಥಾಪನಾ ವರ್ಷವನ್ನು ಆಚರಿಸಲಿದೆ. ಪ್ರತಿ ವರ್ಷ ಆರೆಸ್ಸೆಸ್‌ ಸರಸಂಘಚಾಲಕರು ನಾಗಪುರದಿಂದ ನೀಡುವ ವಿಜಯದಶಮಿ ಭಾಷಣ ಸಂಘದ ಕಾರ್ಯಕರ್ತರ ಜತೆಗೆ ಸರ್ಕಾರಗಳು, ಸಾಮಾನ್ಯ ಜನರು, ತಜ್ಞರು, ವಿವಿಧ ಕ್ಷೇತ್ರದವರನ್ನು ಕುರಿತಾಗಿರುತ್ತದೆ. ಇತ್ತೀಚಿನ ದಶಕದಲ್ಲಿ ವಿಜಯ ದಶಮಿ ಭಾಷಣಕ್ಕೆ ಹೆಚ್ಚಿನ ಕುತೂಹಲ ಏರ್ಪಡುತ್ತಿದೆ. ಅದಕ್ಕೆ ಮೊದಲ ಕಾರಣ, ದೇಶದ ರಾಜಕಾರಣದ ಮೇಲೆ ಆರೆಸ್ಸೆಸ್‌ ಹೊಂದಿರುವ ಪ್ರಭಾವ. ತನ್ನನ್ನು ಸಾಂಸ್ಕೃತಿಕ ಸಂಘಟನೆ ಎಂದು ಕರೆದುಕೊಂಡರೂ, ಸಾಂಸ್ಕೃತಿಕ ಭಾರತ ನಿರ್ಮಾಣಕ್ಕೆ ರಾಜಕೀಯವೂ ಒಂದು ಸಾಧನ ಎಂದು ಭಾವಿಸಿರುವುದರಿಂದ ರಾಜಕೀಯದಿಂದ ಸಂಪೂರ್ಣ ವಿಮುಖತೆ ಆರೆಸ್ಸೆಸ್ಸಿಗೆ ಇಲ್ಲ. ಎರಡನೇ ಸರಸಂಘಚಾಲಕ ಗೋಳ್ವಲ್ಕರ್‌ ಗುರೂಜಿ ಅವರ ನಿರ್ದೇಶನದ ಮೇರೆಗೆ, ಕಾರ್ಮಿಕ, ರೈತ, ವಿದ್ಯಾರ್ಥಿ, ಶಿಕ್ಷಣ ಕ್ಷೇತ್ರದ ಜತೆಗೆ ರಾಜಕೀಯ ಕ್ಷೇತ್ರದಲ್ಲೂ ತನ್ನ ಕಾರ್ಯಕರ್ತರ ಮೂಲಕ ಸಂಘಟನೆಯನ್ನು ಆರಂಭಿಸಲಾಯಿತು. ಪ್ರಾರಂಭದಲ್ಲಿ ಜನಸಂಘ ಎಂದಿದ್ದ ಆ ಸಂಘಟನೆ ಈಗ ಭಾರತೀಯ ಜನತಾ ಪಕ್ಷ(ಬಿಜೆಪಿ) ಆಗಿದೆ. ಸದ್ಯ ಕಳೆದ 7 ವರ್ಷದಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದೆ.

ವಿಜಯ ದಶಮಿ ಭಾಷಣವು ರಾಜಕೀಯವಾಗಿದ್ದಲ್ಲ, ಅದು ಒಟ್ಟಾರೆ ಸಮಾಜ, ಇತಿಹಾಸ, ಮುಂದಿನ ದಿಕ್ಕುಗಳ ಕುರಿತಾಗಿದ್ದು ಎಂದು ಹೇಳಿದರೂ, ಚಲನಶೀಲ ಸಂಘಟನೆಯಾಗಿ ತತ್ಕಾಲೀನ ರಾಜಕೀಯ ಪರಿಸ್ಥಿತಿಗಳಿಗೂ ಸ್ಪಂದಿಸುವುದು ಸಹಜವಾಗಿಯೇ ಇರುತ್ತದೆ. ಕೆಲವೊಮ್ಮೆ ನೇರವಾಗಿ, ಆದರೆ ಬಹುತೇಕ ಬಾರಿ ಪರೋಕ್ಷವಾಗಿ ದೇಶದ ರಾಜಕೀಯ ಸ್ಥಿತಿಗತಿಗೆ ವಿಜಯದಶಮಿ ಭಾಷಣ ಸ್ಪಂದಿಸಿದೆ.

ಈ ವರ್ಷದ ವಿಜಯ ದಶಮಿ ಭಾಷಣದಲ್ಲಿ ಸರಸಂಘಚಾಲಕ ಮೋಹನ್‌ ಭಾಗವತ್‌ ಅವರು ರಾಜಕೀಯವಾಗಿ ಅನೇಕ ಸಂದೇಶಗಳನ್ನು ನೀಡಿದ್ದಾರೆ.

1. ಸ್ವಾತಂತ್ರ್ಯ ಪ್ರಾಪ್ತಿಯಾದದ್ದು ಶಾಂತಿಯ ಮಾರ್ಗದ ಜತೆಗೆ ಸಶಸ್ತ್ರ ಕ್ರಾಂತಿಯ ಮೂಲಕವೂ ಹೌದು ಎಂಬ ತನ್ನ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಲಾಗಿದೆ. ಸಶಸ್ತ್ರ ಕ್ರಾಂತಿಯಿಂದಲೇ ಸ್ವತಂತ್ರ್ಯ ದೊರಕಿದ್ದು, ಶಾಂತಿಯ ಪಾತ್ರ ಅತ್ಯಂತ ಕಡಿಮೆ ಎಂದು ಕ್ಲೆಮೆಂಟ್‌ ಆಟ್ಲಿಯನ್ನು ಉದಾಹರಿಸುತ್ತಿದ್ದ ಸ್ಥಿತಿಯಿಂದ ಇದು ಸ್ವಲ್ಪ ಮಟ್ಟಿಗೆ ಹೊರಳಿ ಮಧ್ಯಮ ಮಾರ್ಗವನ್ನು ಕಂಡುಕೊಂಡಿದೆ. ಮಹಾತ್ಮಾ ಗಾಂಧೀಜಿಯವರ ಉದಾಹರಣೆಯನ್ನು ಹೆಚ್ಚೆಚ್ಚು ಧನಾತ್ಮಕ ಸ್ವರೂಪದಲ್ಲಿ ಉದಾಹರಿಸಲಾಗುತ್ತಿರುವುದೂ ಕಳೆದ ಕೆಲವು ವರ್ಷಗಳಲ್ಲಾದ ಬದಲಾವಣೆ.

2. ಜಾತಿಗಳ ನಡುವೆ ಸಮರಸತೆಯ ಬದಲಿಗೆ ಪರಸ್ಪರ ಧ್ವೇಷ ಭಾವನೆ ಮೂಡಿಸಲಾಗುತ್ತಿದೆ ಎಂದು ತಿಳಿಸುವ ಮೂಲಕ, ನೇರವಾಗಿ ರಾಜಕೀಯ ಕ್ಷೇತ್ರದತ್ತ ಬೊಟ್ಟು ಮಾಡಿದ್ದಾರೆ. ಏಕೆಂದರೆ ಜಾತಿಗಳು ಇಂದಿನ ಚುನಾವಣೆಯ ಕೇಂದ್ರವಾಗುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಇತ್ತೀಚೆಗಷ್ಟೇ ಒಂದು ಭಾಷಣದಲ್ಲಿ, ರಾಜಕಾರಣವು ಸಮಾಜವನ್ನು ಒಡೆಯುವ ಶಕ್ತಿಯನ್ನು ಮಾತ್ರ ಹೊಂದಿದೆಯೇ ಹೊರತು, ಜೋಡಿಸುವುದು ಅದರಿಂದ ಸಾಧ್ಯವಿಲ್ಲ ಎಂದು ಹೇಳಿದ್ದರ ಮುಂದುವರಿದ ಭಾಗದಂತೆ ಇದು. ಜತೆಗೆ, ಇತ್ತೀಚೆಗೆ ಅಸ್ಸಾಂ ಹಾಗೂ ಮಿಜೋರಾಂ ರಾಜ್ಯಗಳ ನಡುವೆ ನಡೆದ ರಕ್ತಸಹಿತ ಸಂಘರ್ಷದ ಕುರಿತು ಪರೋಕ್ಷವಾಗಿ, ಕಟುವಾಗಿ ಟೀಕಿಸುತ್ತ, ಒಂದೇ ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುವ ಎರಡು ರಾಜ್ಯಗಳು ಹೊಡೆದಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಭಾಷೆಯ ವಿಚಾರದಲ್ಲೂ ವಿಭಜನೆ ಸೃಷ್ಟಿಸಿ ಅರಾಜಕತೆ ಉಂಟುಮಾಡುವ ಪ್ರಯತ್ನ ನಡೆಯುತ್ತಿದೆ ಎಂದರು.

3.  ಒಟಿಟಿ ಪ್ಲಾಟ್‌ಫಾರಂ, ಬಿಟ್‌ಕಾಯಿನ್‌, ಡ್ರಗ್ಸ್‌ಗಳ ಹಾವಳಿ ತಿಳಿಸುತ್ತಲೇ ಈಗಷ್ಟೇ ಮಾದಕ ವಸ್ತು ಸೇವನೆ ಆರೋಪದಲ್ಲಿ ಬಂಧನದಲ್ಲಿರುವ ಚಿತ್ರನಟ ಶಾಹ್‌ರೂಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ವಿಚಾರವನ್ನು “ಉಚ್ಛ ವರ್ಗದವರಿಂದ” ಎಲ್ಲರಿಗೂ ಇದರ ತೊಂದರೆ ತಟ್ಟಿದೆ ಎಂದು ಉದಾಹರಿಸಿದರು. ಇವುಗಳನ್ನು ತಡೆಯಲು ಕುಟುಂಬ ವ್ಯವಸ್ಥೆ, ಮನಸ್ಸಿನ ನಿಯಂತ್ರಣಕ್ಕೆ ಒತ್ತು ನೀಡಿದರು.

4. ಸ್ವಾತಂತ್ರ್ಯ ಹೋರಾಟದ ಉದಾಹರಣೆಯನ್ನು ನೀಡುತ್ತ ತಮಿಳುನಾಡಿನ ವೀರಪಾಂಡ್ಯ ಕಟ್ಟಬೊಮ್ಮನ್‌ ಅವರ ಉದಾಹರಿಸಿ, ನಂತರದಲ್ಲಿ ಮಹಾತ್ಮಾ ಗಾಂಧೀಜಿ ಉಪ್ಪಿನ ಸತ್ಯಾಗ್ರಹ ನಡೆಸಿದ್ದನ್ನು ಉದಾಹರಿಸಿದರು. ಪರಸ್ಪರ ಎರಡೂ ಪ್ರದೇಶಗಳಲ್ಲಿ ಸಂವಹನ ಇಲ್ಲದೆಯೂ ಸಮಾನ ಆಲೋಚನೆ ಇಡೀ ದೇಶದಲ್ಲಿ ಇದೆ ಎನ್ನುವ ಮೂಲಕ ಉತ್ತರ ಹಾಗೂ ದಕ್ಷಿಣ ಭಾರತ ಪ್ರತ್ಯೇಕ ಎನ್ನುವ ಮಾತಿಗೆ ಉತ್ತರ ನೀಡುವ ಪ್ರಯತ್ನ ಮಾಡಿದರು. ದಕ್ಷಿಣದಲ್ಲೂ ವಿಶೇಷವಾಗಿ, ಪ್ರತ್ಯೇಕತೆಯ ಮಾತನ್ನು ತೀವ್ರವಾಗಿ ಪ್ರತಿಪಾದಿಸುವ ತಮಿಳುನಾಡಿನ ಉದಾಹರಣೆಯನ್ನೇ ನೀಡಿದ್ದು ವಿಶೇಷವಾಗಿತ್ತು.

5. ದೇಶದ ಅಖಂಡತೆ, ಸ್ವತಂತ್ರ ಹೋರಾಟಗಳ ಕುರಿತು ವಿವರಿಸುವಾಗ ಮೋಹನ್‌ ಭಾಗವತ್‌ ಅವರು ಆಯ್ಕೆ ಮಾಡಿಕೊಂಡ ಉದಾಹರಣೆಗಳು ಇಂದಿನ ರಾಜಕೀಯ ಸ್ಥಿತಿಗೆ ಅನುಗುಣವಾಗಿವೆ. ಮೊದಲಿಗೆ, ಧರ್ಮವನ್ನು ಉಳಿಸುವ ಸಲುವಾಗಿ ಬಲಿದಾನಗೈದ ಗುರು ತೇಗ್‌ಬಹದ್ದೂರ್‌ ಅವರ ಉದಾಹರಣೆಯನ್ನು ಮೊದಲಿಗೆ ನೀಡಿದ್ದಾರೆ. ಇದು ಪಂಜಾಬ್‌ ಕೇಂದ್ರಿತವಾಗಿ ಕಳೆದ ಅನೇಕ ತಿಂಗಳುಗಳಿಂದ ನಡೆಯುತ್ತಿರುವ ಕೃಷಿ ಕಾಯ್ದೆಗಳ ವಿರುದ್ಧವಾದ ಮಾತಿಗಿಂತಲೂ, ಆ ಹೋರಾಟದೊಳಗೆ ನುಸುಳಿರುವ ಖಾಲಿಸ್ಥಾನ ಮಾನಸಿಕತೆಯನ್ನು ಉದ್ದೇಶಿಸಿದಂತಿದೆ. ತೇಗ್‌ ಬಹದ್ದೂರ್‌ “ಹಿಂದ್‌ ಕಾ ಚಾದರ್‌ʼ, “ವೀರರ ಆಕಾಶಗಂಗೆಯ ಸೂರ್ಯ” ಎಂದು ಬಣ್ಣಿಸಿದ್ದಾರೆ.

-ಎರಡನೆಯದಾಗಿ ಸ್ವತಂತ್ರ ಜೀವನಎಂಬ ಪದವು ಭಾರತೀಯ ಪರಿಕಲ್ಪನೆಯಲ್ಲಿ ಒಂದು ನಿರ್ದಿಷ್ಟ ಅರ್ಥವನ್ನು ಹೊಂದಿದೆ ಎನ್ನುತ್ತ, ಮೊದಲಿಗೆ ಮಹಾರಾಷ್ಟ್ರದ ಸಂತ ಜ್ಞಾನೇಶ್ವರರ ಪಸಾಯನದಾನ ಹಾಗೂ ಎರಡನೆಯದಾಗಿ ಪಶ್ಚಿಮ ಬಂಗಾಳದ ರವೀಂದ್ರನಾಥ ಠಾಗೋರರ ಕವಿತೆಯನ್ನು ಉದಾಹರಿಸಿದರು. ಮುಂದುವರಿದು, ಭಾರತದ ಜನ, ಭಾರತದ ಇತಿಹಾಸ, ಭಾರತೀಯ ಸಂಸ್ಕೃತಿ ಮತ್ತು ಭಾರತದ ಪುನರುಜ್ಜೀವನಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಗಳ ವಿರುದ್ಧ ಅಪಪ್ರಚಾರದ ಮೂಲಕ ಜಗತ್ತನ್ನು ಮತ್ತು ಭಾರತದ ಪ್ರಜೆಗಳನ್ನೂ ಸಹ ಗೊಂದಲಕ್ಕೀಡುಮಾಡಲು ಒಂದು ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಮುಂಬರುವ ಸೋಲು ಮತ್ತು ಸಂಪೂರ್ಣ ವಿನಾಶದ ಭಯದಿಂದ, ಪಡೆಗಳು ತಮ್ಮ ಕಾರ್ಯಾಚರಣೆಗಳನ್ನು ಬಹಿರಂಗವಾಗಿ ಮತ್ತು ರಹಸ್ಯವಾಗಿ ಕಾರ್ಯಗತಗೊಳಿಸಲು ಒಗ್ಗೂಡುತಿವೆ. ನಾವು ಇಂತಹ ಎಲ್ಲಾ ಪಡೆಗಳು ಸೃಷ್ಟಿಸಿತ್ತಿರುವ ಮಾನಸಿಕ ಮಾಯಾ ಜಾಲಗಳಿಂದ ನಮ್ಮನ್ನು ಮತ್ತು ನಮ್ಮ ಸಮಾಜವನ್ನು ಎಚ್ಚರಿಕೆಯಿಂದ ರಕ್ಷಿಸಬೇಕು ಎಂದಿರುವುದು ಈ ಎರಡೂ ರಾಜ್ಯಗಳಲ್ಲಿರುವ, ಮುಖ್ಯವಾಗಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ಮಮತಾ ಬ್ಯಾನರ್ಜಿ ಸರ್ಕಾರದ ನಡೆಯನ್ನು ಟೀಕಿಸಿದ್ದು ಎಂದು ಅರ್ಥೈಸಬಹುದು.

6. ರೋಗಗಳ ತಡೆಗಟ್ಟುವಲ್ಲಿ ನಮ್ಮ ಸಾಂಪ್ರದಾಯಿಕ ಜೀವನಶೈಲಿಯ ಪರಿಣಾಮಕಾರಿ ಪಾತ್ರ ಮತ್ತು ಕರೋನಾದ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯಲ್ಲಿ ಆಯುರ್ವೇದ ಔಷಧಿಗಳ ಪರಿಣಾಮಕಾರಿ ಪಾತ್ರವನ್ನು ನಾವು ಅರಿತುಕೊಂಡಿದ್ದೇವೆ ಎನ್ನುವ ಮೂಲಕ, ಕರೊನಾ ಸಂದರ್ಭದಲ್ಲಿ ಆಯುರ್ವೇದ ಹಾಗೂ ಅಲೋಪತಿ ನಡುವೆ ನಡೆದ ಸಂಘರ್ಷವನ್ನು ಪ್ರಸ್ತಾಪಿಸಿದರು. ಎಲ್ಲ “ಪಥಿ”ಗಳೂ ತಮ್ಮತನವನ್ನು ಉಳಿಸಿಕೊಂಡು, ತಮ್ಮದೇ ಶ್ರೇಷ್ಠ ಎಂಬ ಅಹಂಕಾರವನ್ನು ತ್ಯಜಿಸಬೇಕು ಎಂದು ಹೇಳಿದರಾದರೂ, ಈ ಮಾತು, ಆಯುರ್ವೇದದ ಕುರಿತು ಬಹಿರಂಗ ಸಮರ ಸಾರಿದ್ದ ಅಲೋಪಥಿ ಕ್ಷೇತ್ರದತ್ತ ಬೊಟ್ಟುಮಾಡಿದಂತಿತ್ತು.

7. ಭಾರತೀಯ ದೃಷ್ಟಿಯ ಧರ್ಮ ಕೇಂದ್ರಿತ ಅರ್ಥ ಮತ್ತು ಕಾಮಗಳನ್ನೊಳಗೊಂಡ ಆರ್ಥಿಕತೆಯ ದಾರಿಯನ್ನು ಕಂಡುಕೊಳ್ಳಬೇಕು ಎಂದು ಕರೆ ನೀಡಿದರು. ಕಳೆದ ಏಳು ವರ್ಷದಲ್ಲಿ ಈ ಕುರಿತು ನಡೆದಿರಬಹುದಾದ ಅಂತಹ ಯಾವುದೇ ಉದಾಹರಣೆಯನ್ನು ನೀಡದೆ ಸಮಸ್ಯೆಯನ್ನಷ್ಟೆ ಪಟ್ಟಿ ಮಾಡಿದ್ದು ಗಮನಿಸಿದರೆ, ಈ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ಈ ನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳು ನಡೆದಿಲ್ಲ ಎಂದು ಸೂಚಿಸುವಂತಿತ್ತು. ಇನ್ನಾದರೂ ಇತ್ತ ಗಮನ ಹರಿಸಿ ಎಂದು ತಿಳಿಸಿದಂತಿತ್ತು.

8. ಜನಸಂಖ್ಯಾ ನಿಯಂತ್ರಣದ ಕುರಿತು ಮುಖ್ಯವಾಗಿ ಮುಸ್ಲಿಂ ಸಮುದಾಯದ ಮೇಲೆ ನೇರ ಆರೋಫ ಮಾಡದೆ, ಬಹಳ ರಾಜತಾಂತ್ರಿಕವಾದ ಭಾಷೆಯನ್ನು ಬಳಸುವ ಮೂಲಕ ಸಮರ್ಥನೆ ಮಾಡಿದರು. ಜತೆಗೆ, ಈ ವಿಷಯವನ್ನು 2015ರ ಸಭೆಯಲ್ಲೇ ನಿರ್ಣಯ ಮಾಡಲಾಗಿದೆ ಎಂದು ಅಲ್ಲಿನ ನಿರ್ಣಯವನ್ನು ಓದಿದರು. ಬಹುಶಃ ಸಮಾನ ನಾಗರಿಕ ಸಂಹಿತೆ ಎಂಬುದು ಸದ್ಯದಲ್ಲೆ ಅಥವಾ 2024ರ ಚುನಾವಣೆಗೆ ಮುನ್ನ ಸಂಸತ್ತಿನಲ್ಲಿ ಮಂಡನೆಯಾಗುವ ಎಲ್ಲ ಲಕ್ಷಣಗಳೂ ಇವೆ. ಚುನಾವಣೆ ಕಾಲದಲ್ಲಿ ಆರೆಸ್ಸೆಸ್‌ ಈ ವಿಚಾರ ಪ್ರಸ್ತಾಪಿಸುತ್ತಿದೆ ಎಂಬ ಆರೋಪ ಬಾರದಂತೆ 2015ರ ನಿರ್ಣಯವನ್ನು ಉಲ್ಲೇಖಿಸಿರುವ ಸಾಧ್ಯತೆಯಿದೆ.

9. ದೇವಸ್ಥಾನಗಳನ್ನು ಸರ್ಕಾರ ನಿರ್ವಹಣೆ ಮಾಡುವುದರ ಕುರಿತು ಬಹುತೇಕ ಆಕ್ಷೇಪ ವ್ಯಕ್ತಪಡಿಸುತ್ತಲೇ ಸಮಾಜಕ್ಕೆ ದೇವಸ್ಥಾನವನ್ನು ನೀಡಿದರೆ ಅದನ್ನು ಸಾಮಾಜಿಕ ದೃಷ್ಟಿಕೋನದಲ್ಲಿ ಮುನ್ನಡೆಸುವ ಸಾಮರ್ಥ್ಯವನ್ನು ಸಮಾಜ ಹೊಂದಿದೆಯೇ ಎಂಬುದನ್ನೂ ಪ್ರಶ್ನಿಸಿದರು. ಇತ್ತೀಚೆಗೆ ಆಂಧ್ರ ಪ್ರದೇಶದಲ್ಲಿ ದೇವಸ್ಥಾನಗಳ ಮೇಲೆ ನಡೆಯುತ್ತಿರುವ ದಾಳಿ, ಕರ್ನಾಟಕದಲ್ಲಿ ದೇವಸ್ಥಾನದ ಕುರಿತು ಇತ್ತೀಚೆಗೆ ನಡೆದ ವ್ಯಾಪಕ ಚರ್ಚೆಗಳ ಹಿನ್ನೆಲೆಯಲ್ಲಿ ದೇಶಾದ್ಯಂತ ದೇವಸ್ಥಾನಗಳ ಕುರಿತು ಏಕಾಭಿಪ್ರಾಯ ಮೂಡಿಸುವ ಪ್ರಯತ್ನ ಇದ್ದಂತಿದೆ. ಭೂಮಿಯ ವಿಚಾರವು ಸಂವಿಧಾನಾತ್ಮಕವಾಗಿ ರಾಜ್ಯ ಸರ್ಕಾರಕ್ಕೆ ಸೇರಿದ್ದಾದ್ಧರಿಂದ ದೇವಸ್ಥಾನ ರಕ್ಷಣೆಗಾಗಿ ಕೇಂದ್ರದಿಂದ ಕಾಯ್ದೆ ತರಲಾಗದು.

10. ಇತ್ತೀಚಿನ ದಿನಗಳಲ್ಲಿ ಮೋಹನ್‌ ಭಾಗವತ್‌ ಅವರು ಪ್ರಬಲವಾಗಿ ಪ್ರತಿಪಾದಿಸುತ್ತಿರುವ ಹಿಂದು ಮುಸ್ಲಿಂ ಏಕ ಮೂಲದ ವಿಚಾರವನ್ನು ಇಲ್ಲಿಯೂ ಪ್ರಬಲವಾಗಿ ಮಂಡಿಸಿದರು. “ಹೊರಗಿನಿಂದ ವಲಸೆ ಬಂದಿರುವ ಸಮುದಾಯಗಳ ಸದಸ್ಯರನ್ನು ಒಳಗೊಂಡಂತೆ ಎಲ್ಲಾ ಭರತವಾಸಿಗಳು, ನಮ್ಮ ಆಧ್ಯಾತ್ಮಿಕ ನಂಬಿಕೆಗಳು ಮತ್ತು ಪೂಜಾ ವಿಧಾನಗಳ ವ್ಯತ್ಯಾಸಗಳ ಹೊರತಾಗಿ ನಾವೆಲ್ಲರೂ ಸಾಮಾನ್ಯ ಶಾಶ್ವತ ನಾಗರೀಕತೆ, ಸಂಸ್ಕೃತಿ ಮತ್ತು ಪೂರ್ವಜರ ವಾರಸುದಾರರು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅನನ್ಯ ಅನುವಂಶಿಕತೆಯೇ ನಮ್ಮ ಧಾರ್ಮಿಕ ಸ್ವಾತಂತ್ರ್ಯದ ಮೂಲವಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ತನಗೆ ಸೂಕ್ತವೆಂದು ಭಾವಿಸುವ ಪೂಜಾ ವಿಧಾನವನ್ನು ಆಯ್ಕೆ ಮಾಡಲು ಸ್ವತಂತ್ರನಾಗಿರುತ್ತಾನೆ. ವಿದೇಶಿ ದಾಳಿಕಾರರ ಜೊತೆಗೆ ಅನೇಕ ಧಾರ್ಮಿಕ ಪಂಥಗಳೂ ನಮ್ಮ ದೇಶಕ್ಕೆ ಬಂದವು ಎಂಬುದು ಐತಿಹಾಸಿಕ ಸತ್ಯ. ಆದರೆ ಇಂದು ಭಾರತದಲ್ಲಿ ಪಂಥಗಳನ್ನು ನಂಬುವವರ ಸಂಬಂಧವು ಆಕ್ರಮಣಕಾರರ ಜೊತೆಗಿಲ್ಲ, ಅವರ ಸಂಬಂಧವಿರುವುದು ದೇಶದ ರಕ್ಷಣೆಗಾಗಿ ಅವರೊಂದಿಗೆ ಹೋರಾಡಿದ ಹಿಂದೂ ಪೂರ್ವಜರೊಂದಿಗೆ. ನಮ್ಮ ಆದರ್ಶಗಳು ನಮ್ಮ ಸಾಮಾನ್ಯ ಪೂರ್ವಜರು” ಎನ್ನುತ್ತ ಹಸನ್ಖಾನ್ ಮೇವತಿ, ಹಕೀಮ್ ಖಾನ್ ಸೂರಿ, ಖುದಾಬಕ್ಷ್ ಮತ್ತು ಗೌಸ್ ಖಾನ್ ರಂತಹ ಹುತಾತ್ಮರನ್ನು ಮತ್ತು ಅಶ್ಫಾಖುಲ್ಲಾ ಖಾನ್ ರಂತಹ ಕ್ರಾಂತಿಕಾರರನ್ನು ದೇಶವು ನೋಡಿದೆ ಎಂದು ಸ್ಮರಿಸಿದರು.

11. ಇತ್ತೀಚೆಗಷ್ಟೆ ಸಾವರ್ಕರ್‌ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮೋಹನ್‌ ಭಾಗವತ್‌ ಈ ಭಾಷಣದಲ್ಲೂ ಸಾವರ್ಕರ್‌ ಉದಾಹರಣೆ ನೀಡಿದರು. ಇದೇ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಭಾಗವಹಿಸಿ, ಸಾವರ್ಕರ್‌ ಕ್ಷಮಾಪಣೆ ಕೋರಿದ್ದು ಗಾಂಧೀಜಿಯವರ ಮಾತಿಗೆ ಬೆಲೆ ಕೊಟ್ಟು ಎಂದಿದ್ದರು. ಜಾಗೃತ ಭಾರತವು ಗೀತೆಯ ಸಾರವನ್ನೇ ಹೇಳುತ್ತದೆ ಎಂಬ ಸಾವರ್ಕರ್‌ ಮಾತನ್ನು ವಿಜಯದಶಮಿ ಭಾಷಣದಲ್ಲಿ ಮೋಹನ್‌ ಭಾಗವತ್‌ ಉದಾಹರಿಸಿದರು. ಇತ್ತೀಚಿನ ದಿನಗಳಲ್ಲಿ ಸಾವರ್ಕರ್‌ ಕುರಿತ ಮಾತುಗಳು ರಾಷ್ಟ್ರ ರಾಜಕಾರಣ, ಚರ್ಚೆಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿವೆ. ಇತ್ತೀಚೆಗಷ್ಟೆ ಕರ್ನಾಟಕದವರೇ ಆದ ವಿಕ್ರಂ ಸಂಪತ್‌ ಅವರು ಸಾವರ್ಕರ್‌ ಕುರಿತು ರಚಿಸಿದ ಕೃತಿಯೂ ಬಿಡುಗಡೆ ಆಗಿದೆ. ಇದೆಲ್ಲದರ ಜತೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಷಾ ಇದೇ ದಿನದಂದು ಅಂಡಮಾನ್‌ನ ಸೆಲ್ಯುಲರ್‌ ಜೈಲಿಗೆ ಭೇಟಿ ನೀಡಿದರು. ಸಾವರ್ಕರ್‌ ಅವರನ್ನು ಕೂಡಿಟ್ಟಿದ್ದ ಕೋಣೆ, ಅವರ ಸ್ಮರಣೆಯುಳ್ಳ ಬರಹಗಳನ್ನು ವೀಕ್ಷಿಸಿದರು. ಸಾವರ್ಕರ್‌ ಅವರ ಜೀವನವನ್ನು ಅನುಮಾನದಿಂದ ನೋಡುವವರನ್ನು ಟೀಕಿಸಿದರು. ಸದ್ಯದಲ್ಲೇ ಸಾವರ್ಕರ್‌ ಕುರಿತು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಳ್ಳುವ ಮುನ್ಸೂಚನೆ ಇದು ಎಂದು ವಿಶ್ಲೇಷಿಸಬಹುದು. ಸಾವರ್ಕರ್‌ ಹೆಸರು ಸದಾ ಸಂಚಲನ ಸೃಷ್ಟಿಸುವ ಶಕ್ತಿ ಹೊಂದಿದ್ದು, ಲೋಕಸಭೆ ಚುನಾವಣೆಗೂ ಇದು ಬಿಜೆಪಿಗೆ ಸಹಾಯವಾಗುವ ಎಲ್ಲ ಸಾಧ್ಯತೆ ಇದೆ.

ಭಾನುವಾರ, ಸೆಪ್ಟೆಂಬರ್ 19, 2021

ಪ್ರತಿಮೆಗಳನ್ನು ಅನಾಥವಾಗಿಸುವುದು ಸರಿಯೇ?

 ನಾಡು, ನುಡಿ, ದೇಶಕ್ಕೆ ಸೇವೆ ಸಲ್ಲಿಸಿದ ಮಹನೀಯರ ಪ್ರತಿಮೆಗಳನ್ನು ಸ್ಥಾಪಿಸಿ ಗೌರವಿಸುವುದು ಸಂಪ್ರದಾಯ. ಆದರೆ ಅವುಗಳ ರೂಪುರೇಷೆ, ನಿರ್ವಹಣೆಯ ಅರಿವಿಲ್ಲದೆ ಕ್ಷಣಕಾಲದ ಉತ್ತೇಜನೆಗೆ ಒಳಗಾಗಿ ಸ್ಥಾಪಿಸುವ ಪ್ರತಿಮೆಗಳು ಸಾರ್ವಜನಿಕರಿಗೆ ಕಿರಿಕಿರಿ, ಸಂಚಾರ ದಟ್ಟಣೆ ಜತೆಗೆ ಮಹನೀಯರಿಗೂ ಅವಮಾನವಾಗುವಂತೆ ಕಸಕಡ್ಡಿಗಳ ನಡುವೆ ತುಂಬಿವೆ. ಧೂಳು ಹಿಡಿದಿರುವ ಪ್ರತಿಮೆಗಳನ್ನು ಕಂಡರೆ ಬೇಸರವಾಗುತ್ತದೆ. ಸುಪ್ರೀಂಕೋರ್ಟ್‌ ಗಮನಕ್ಕೂ ಈ ವಿಚಾರ ಬಂದು ಪ್ರತಿಮೆಗಳನ್ನು ತೆರವುಗೊಳಿಸಲು ಆದೇಶಿಸಿದ್ದು, ಸಮಸ್ಯೆ ಉಲ್ಬಣವಾಗಲು ಸರ್ಕಾರದ ಅನಾಸಕ್ತಿಯೂ ಕಾರಣ.

Web Link: ಪ್ರತಿಮೆಗಳನ್ನು ಸ್ಥಾಪಿಸಿದರೆ ಸಾಕೆ?

(ವಿ.ಸೂ: ಚಿತ್ರವನ್ನು ಡೌನ್‌ಲೋಡ್‌ ಮಾಡಿಕೊಂಡು ಗ್ಯಾಲರಿಯಿಂದ ತೆರೆದರೆ ಲೇಖನವನ್ನು ಸ್ಪಷ್ಟವಾಗಿ ಓದಬಹುದು)



ಗುರುವಾರ, ಜುಲೈ 01, 2021

ಚೀನಾ ಕಮ್ಯುನಿಸ್ಟ್‌ ಸರ್ಕಾರದ ಸಾಫ್ಟ್‌ ಪವರ್‌ ಭಾರತದಲ್ಲೂ ಇದೆ: ತನಿಖಾ ವರದಿ

ಚೀನಾದಲ್ಲಿ ಆಡಳಿತ ನಡೆಸುತ್ತಿರುವ ಕಮ್ಯುನಿಸ್ಟ್‌ ಸರ್ಕಾರಕ್ಕೆ ಇಂದಿಗೆ ನೂರು ವರ್ಷವಾಗಿದೆ. ರಾಷ್ಟ್ರೀಯವಾದಿ ರಿಪಬ್ಲಿಕ್‌ ಆಫ್‌ ಚೀನಾ ಸರ್ಕಾರದ ಜತೆಗೆ ನಾಗರಿಕ ಸಂಘರ್ಷದ ನಂತರ 1949ರಲ್ಲಿ ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಚೈನಾ(ಪಿಆರ್‌ಸಿ) ಹೆಸರಿನಲ್ಲಿ ಸರ್ಕಾರ ಸ್ಥಾಪನೆ ಮಾಡಲಾಯಿತು. ತನ್ನ ಸರ್ಕಾರದ ಕುರಿತು ಸದಭಿಪ್ರಾಯ, ಸಾಫ್ಟ್‌ಕಾರ್ನರ್‌ ಹಾಗೂ ರಾಜತಾಂತ್ರಿಕ ಮೇಲುಗೈ ಸಾಧನೆಗೆ ವಿಶ್ವದ ಅನೇಕ ದೇಶಗಳಲ್ಲಿ ಸಮಾನಾಂತರ ಮಾರ್ಗವನ್ನು ಪಿಆರ್‌ಸಿ ಕಂಡುಕೊಂಡಿದೆ. ಅಂತಹ "ಫ್ರೆಂಡ್‌ಷಿಪ್ ಅಸೋಸಿಯೇಷನ್‌"ಗಳ ಕುರಿತು ಈ ತನಿಖಾ ವರದಿ.


ಚೀನಾ ಸ್ನೇಹ ಜಾಲ

"ಈಚೆಗೆ 1962 ರಲ್ಲಿ ಚೀನಾ ನಮ್ಮ ದೇಶದ ಮೇಲೆ ಆಕ್ರಮಣ ಮಾಡಿ ‘ದಾಗಲೂ ಪೀಕಿಂಗ್‌ವಾದಿ ಕಮ್ಯುನಿಸ್ಟರು ಅದನ್ನು ಆಕ್ರಮಣ ಎಂದು ಕರೆಯಲು ಸಿದ್ಧರಾಗಲಿಲ್ಲ. ಬದಲಾಗಿ, ಭಾರತವೇ ಚೀನದ ಭೂಭಾಗಗಳನ್ನು ಆಕ್ರಮಿಸಿದೆ ಎಂದು ಆಪಾದಿಸಿದರು. ಸರಕಾರವು ಭದ್ರತಾ ಕ್ರಮವಾಗಿ ಕೆಲವು ಪ್ರಮುಖ ಪೀಕಿಂಗ್‌ವಾದಿ ಪಿತೂರಿಗಾರ ಕಮ್ಯುನಿಸ್ಟರನ್ನು ಬಂಧಿಸಿದೊಡನೆ ಇಡೀ ಕಮ್ಯುನಿಸ್ಟ್ ಲೋಕವೆಲ್ಲ - ಎಡ, ಬಲ, ಮಧ್ಯ ಎಲ್ಲ’ಒಂದೇ ಸಮನೆ ಬೊಬ್ಬೆ ಇಟ್ಟವು. ರಷ್ಯದ ʼಪ್ರಾವ್ಡಾ’ ಭಾರತ ಸರ್ಕಾರದ ಕ್ರಮವನ್ನು ಉಗ್ರವಾಗಿ ಟೀಕಿಸಿತು. ಭಾರತ ಸರ್ಕಾರವೂ ಅದಕ್ಕೆ ಮಣಿದು -ಕೂಡಲೇ ಅವರೆಲ್ಲರನ್ನೂ ಬಿಡುಗಡೆ ಮಾಡಿತು..."

"ಇದುವರೆಗಿನ ಮಿಕ್ಕೆಲ್ಲ ಆಕ್ರಮಣಕಾರಿಗಳಿಗಿಂತ ರಷ್ಯ-ಚೀನ ಆಕ್ರಮಣದ ಈ ಸ್ವರೂಪವು ಸಾವಿರ ಪಾಲು ಘಾತಕರವಾಗಿದೆ. ಏಕೆಂದರೆ ಈ ಆಕ್ರಮಣವನ್ನು ಆಕ್ರಮಣವೆಂದೇ ಭಾವಿಸದೆ ಅದನ್ನು ತಾತ್ವಿಕವಾಗಿ ಸ್ವಾಗತಿಸುವ ಗುಂಪು ಒಂದೊಂದು ದೇಶದಲ್ಲಿ ತಯಾರಾಗುತ್ತದೆ. ಇದು ವರೆಗಿನ ಅನ್ಯಾನ್ಯ ಆಕ್ರಮಕರು ಪರದೇಶದವರಾಗಿದ್ದು, ಅವರೇ ನೇರವಾಗಿ ಬಂದು ತಮ್ಮ ರಾಜ್ಯ ಚಲಾಯಿಸುತ್ತಿದ್ದುದರಿಂದ ಅವರನ್ನು ಶತ್ರುಗಳೆಂದು ಗುರುತಿಸಲು ಅಲ್ಲಿನ ಜನಕ್ಕೆ ಸಾಧ್ಯವಾಗುತ್ತಿತ್ತು. ಕಮ್ಯುನಿಸ್ಟರಾದರೋ ಆಯಾ ದೇಶದವರೇ ಆಗಿರುವ ಕಾರಣ, ಅವರ ನಿಜವಾದ ಬಣ್ಣ ಗೊತ್ತಾಗುವುದು ಸಾಮಾನ್ಯ ಜನಕ್ಕೆ ಕಷ್ಟವಾಗುತ್ತದೆ..."

ಇವು ಕರ್ನಾಟಕದ ಪ್ರಮುಖ ಚಿಂತಕರಲ್ಲೊಬ್ಬರಾದ ಹೊ.ವೆ. ಶೇಷಾದ್ರಿ ಅವರು ತಮ್ಮ ಕ್ರಾಂತಿಯಲ್ಲ, ಭ್ರಾಂತಿ(1970) ಕೃತಿಯಲ್ಲಿ ಕಮ್ಯುನಿಸ್ಟ್ ಕುರಿತು ಹೇಳುವ ಮಾತುಗಳು.

ಇನ್ನೊಂದೆಡೆ ಚಿಂತಕ ದೀನದಯಾಳ್ ಉಪಾಧ್ಯಾಯ ಅವರು ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಬಗ್ಗೆ ಹೀಗೆ ಬರೆಯುತ್ತಾರೆ. "ದೇಶದಲ್ಲಿ ಕಮ್ಯುನಿಸ್ಟ್ ಶಕ್ತಿಗೆ ನೆರವಾಗುತ್ತಿರುವ ಅತ್ಯಂತ ಹೆಚ್ಚಿನ ಒಂದೇ ಒಂದು ಸಹಕಾರೀ ಅಂಶವೆಂದರೆ ಪ್ರಧಾನ ಮಂತ್ರಿಯವರು ಅದರ ಬಗೆಗೆ ತಳೆದಿರುವ ಮೃದುಧೋರಣೆ, ಕಮ್ಯುನಿಸಮ್ ಸರಿಯಾದದ್ದೇ ಆಗಿದೆ. ಆದರೆ ಭಾರತದ ಕಮ್ಯುನಿಸ್ಟರು ಮಾತ್ರ ಕೆಟ್ಟವರೆಂಬ ಅವರ ಸಿದ್ಧಾಂತವು ದೇಶದಲ್ಲಿ ಕಮ್ಯುನಿಸಮ್ ಅನ್ನು ಗೌರವಾರ್ಹವನ್ನಾಗಿ ಮಾಡಿದೆ. ಅವರು ಮತ್ತು ಕಾಂಗ್ರೆಸ್ಸಿನ ಇತರ ಅವರ ಸಹ ಪ್ರಯಾಣಿಕರು ಸಿಪಿಐನ ನಿಜವಾದ ಶಕ್ತಿಯಾಗಿದ್ದಾರೆ. (ಪಂಡಿತ್ ದೀನದಯಾಳ ಉಪಾಧ್ಯಾಯ ಅವರ ಸಮಗ್ರ ಬರೆಹಗಳು- ಸಂಪುಟ 8- ಪುಟ76)".

ಭಾರತದ ರಾಜಕಾರಣ ಹಾಗೂ ಯುದ್ಧದ ಮೇಲೆ ಚೀನಾ ಪ್ರಭಾವದ ಕುರಿತು ರಾಷ್ಟ್ರೀಯ ಮಟ್ಟದ ಅನೇಕ ಚಿಂತಕರು ಈ ಮೇಲಿನಂತೆ ಗಮನ ಸೆಳೆದಿದ್ದಾರೆ. ಚೀನಾ ಎಂದೊಡನೆ ಪ್ರಮುಖವಾಗಿ ಅಲ್ಲಿನ ಕಮ್ಯುನಿಸ್ಟ್ ಪಕ್ಷದ ಸರ್ಕಾರದ ಮೇಲೆ ಸಹಜವಾಗಿ ದೃಷ್ಟಿ ಹರಿಯುತ್ತದೆ. ಎರಡನೆಯದು, 1962ರಲ್ಲಿ ಭಾರತದ ವಿರುದ್ಧ ಚೀನಾ ಯುದ್ಧ ಸಾರಿದಾಗ ನಮ್ಮ ನಾಯಕರು(ಪ್ರಧಾನಿ ನೆಹರೂ) ಸರಿಯಾಗಿ ನಿಭಾಯಿಸದೆ ತಲೆತಗ್ಗಿಸುವಂತಹ ಸೋಲನುಭವಿಸಬೇಕಾಯಿತು ಎಂಬುದು. ಮೂರನೆಯದು, ನಮ್ಮ ದೇಶದಲ್ಲಿರುವ ಕಮ್ಯುನಿಸ್ಟರು ಭಾರತದ ಸಂವಿಧಾನಕ್ಕೆ ಬದ್ಧವಾಗಿರದೆ ಚೀನಾ ಪರ ವಾಲುತ್ತಾರೆ ಎನ್ನುವುದು. ನಾಲ್ಕನೆಯದು, ಇತ್ತೀಚಿನ ದಶಕಗಳಲ್ಲಿ ಚೀನಾ ತನ್ನ ಅಗ್ಗದ ಸರಕನ್ನು ಭಾರತದಲ್ಲಿ ಡಂಪಿಂಗ್ ಮಾಡುತ್ತ ದೇಶಿ ಮಾರುಕಟ್ಟೆಯನ್ನು ಕಸಿದುಕೊಳ್ಳುತ್ತಿದೆ ಎಂಬುದು. ರಾಷ್ಟ್ರೀಯ ವಿಚಾರಧಾರೆಯ ಸಾಕಷ್ಟು ಚರ್ಚೆಗಳಲ್ಲಿ ಈ ವಿಚಾರಗಳು ವಿಸ್ತೃತವಾಗಿ ಬಹಿರಂಗಗೊಂಡಿವೆ. ಆದರೆ ಹೆಚ್ಚು ಪ್ರಚಲಿತವಿಲ್ಲದ ಅಂಶವೆಂದರೆ ಸದ್ಯ ಚೀನಾದಲ್ಲಿ ಅಧಿಕಾರದಲ್ಲಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ನಿಯಂತ್ರಣದಲ್ಲಿರುವ ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ(ಪಿಆರ್‌ಸಿ) ಎಂಬ ಆಡಳಿತವು ಸರ್ಕಾರ ಭಾರತ ಸೇರಿದಂತೆ ವಿವಿಧ ದೇಶಗಳ ಜನರಲ್ಲಿ ತನ್ನ ಪರ ಮೃದು ಧೋರಣೆ ತಳೆಯಲು ಬಳಸುವ ತಂತ್ರಗಳು.


ಫ್ರೆಂಡ್‌ಷಿಪ್ ಅಸೋಸಿಯೇಷನ್‌ಗಳು

ಚೀನಾ ಗಣತಂತ್ರವನ್ನು ಸೋಲಿಸಿದ ನಂತರ 1949ರಿಂದ ‘ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ(ಪಿಆರ್‌ಸಿ)’ ಹೆಸರಲ್ಲಿ ಆಡಳಿತ ನಡೆಸುತ್ತಿರುವ ಚೀನಾ ಕಮ್ಯುನಿಸ್ಟ್ ಪಕ್ಷ ಪ್ರಾರಂಭದಲ್ಲಿ ಐಡೆಂಟಿಟಿ ಪಡೆಯಬೇಕಿತ್ತು. ಹಾಂಗ್‌ಕಾಂಗ್, ಟಿಬೆಟ್, ತೈವಾನ್ ಸೇರಿ ಅನೇಕ ಭೂಭಾಗದ ಜನರು ಪಿಆರ್‌ಸಿ ವಿರುದ್ಧ ಹೋರಾಟ ನಡೆಸುತ್ತಿದ್ದವು. ಈಗಾಗಲೆ ವಿಶ್ವಮಾನ್ಯತೆ ಪಡೆದ ದೇಶಗಳು ಪಿಆರ್‌ಸಿಯನ್ನು ತನ್ನ ಅಧಿಕೃತ ಸಂಪರ್ಕದ ಕೊಂಡಿಯಾಗಿ, ಅಂದರೆ ಒಂದು ದೇಶದ ಆಡಳಿತ ಎಂದು ಗುರುತಿಸಬೇಕಿತ್ತು.

Formation of Sino -India Friendship Association in may 16, 1952
1952ರ ಮೇ 16ರಂದು ಚೀನಾ-ಭಾರತ ಫ್ರೆಂಡ್‌ಷಿಪ್‌
ಅಸೋಸಿಯೇಷನ್‌ ಉದ್ಘಾಟನೆ.

ಈಗಾಗಲೆ ಅನೇಕರು ತಿಳಿಸಿರುವಂತೆ ಪಿಆರ್‌ಸಿ ಕುರಿತು ಅಂದಿನ ಭಾರತದ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರಿಗೆ ಅಭಿಮಾನ. ಪಿಆರ್‌ಸಿಯನ್ನು ಒಂದು ದೇಶವಾಗಿ ಅನೇಕ ದೇಶಗಳಿಗೂ ಮೊದಲೇ ಗುರುತಿಸಿದರು. ಆದರೆ ಚೀನಾದ ಆಡಳಿತ, ನೆಹರೂ ತಿಳಿದಷ್ಟು ಪಾರದರ್ಶಕವಾಗಿರಲಿಲ್ಲ. ವಿಸ್ತಾರ ಮನೋಭಾವ ಹೊಂದಿದ್ದ ಚೀನಾ ಕಮ್ಯುನಿಸ್ಟ್ ಪಕ್ಷಕ್ಕೆ, ದೇಶವಿದೇಶಗಳ ಗೌಪ್ಯ ಮಾಹಿತಿ ಸಂಗ್ರಹಿಸಿ ನೀಡಲು ಯುನೈಟೆಡ್ ಫ್ರಂಟ್ ವರ್ಕ್ ಡಿಪಾರ್ಟ್‌ಮೆಂಟ್ ಸ್ಥಾಪನೆ ಮಾಡಿಕೊಂಡಿತು. ವಿವಿಧ ದೇಶಗಳಲ್ಲಿ ಪಿಆರ್‌ಸಿ ಕುರಿತು ಮೃದು ಧೋರಣೆ ತಳೆಯುವಂತೆ ಮಾಡಲು ಹಾಗೂ ಕಾಲಕ್ರಮೇಣ ಅಲ್ಲಿನ ಸಂಸ್ಕೃತಿ, ರಾಜಕೀಯ ಪ್ರಭುತ್ವವನ್ನು ಆಕ್ರಮಿಸಲು ಚೈನೀಸ್ ಪೀಪಲ್ಸ್ ಅಸೋಸಿಯೇಷನ್ ಫಾರ್ ಫ್ರೆಂಡ್‌ಷಿಪ್ ವಿತ್ ಫಾರಿನ್ ಕಂಟ್ರೀಸ್(ಸಿಪಿಎಎಫ್‌ಎಫ್‌ಸಿ) ಸ್ಥಾಪಿಸಿತು. ಸಿಪಿಎಎಫ್‌ಎಫ್‌ಸಿ ಮೂಲಕ ಭಾರತದಲ್ಲಿ ಐಸಿಎಫ್‌ಎ ಸೇರಿದಂತೆ 40 ದೇಶಗಳಲ್ಲಿ ಫ್ರೆಂಡ್‌ಷಿಪ್ ಅಸೋಸಿಯೇಷನ್‌ಗಳನ್ನು ಸ್ಥಾಪಿಸಿದೆ.

ಅನೇಕ ವಿದೇಶಾಂಗ ತಜ್ಞರು ಹೇಳಿರುವಂತೆ, ಸಿಪಿಎಎಫ್‌ಎಫ್‌ಸಿ ಎಂಬುದು ಯುನೈಟೆಡ್ ಫ್ರಂಟ್ ವರ್ಕ್ ಡಿಪಾರ್ಟ್‌ಮೆಂಟ್‌ನ ಮುಖವಾಡ. ಆದರೆ ವಿದ್ಯಾರ್ಥಿಗಳಿಗೆ ಶಿಕ್ಷಣದ ಅವಕಾಶ, ಚೀನಾದ ಕೃಷಿ-ಕೈಗಾರಿಕೆ ಕುರಿತು ಪ್ರಾತ್ಯಕ್ಷಿಕೆ, ಪ್ರವಾಸ ಉತ್ತೇಜನದ ಹೆಸರಿನಲ್ಲಿ ನಡೆಸುತ್ತಿರುವ ಐಸಿಎಫ್‌ಎ ಹಿನ್ನೆಲೆ ಬಹುತೇಕರಿಗೆ ತಿಳಿದಿಲ್ಲ. 1962ರಲ್ಲಿ ಚೀನಾ ಜತೆಗೆ ಯುದ್ಧ ನಡೆದಾಗ ಐಸಿಎಫ್‌ಎ ರದ್ದುಪಡಿಸಲಾಗಿತ್ತು. ಮತ್ತೆ 1992ರಿಂದ ಚಾಲನೆ ನೀಡಲಾಗಿದ್ದು, ಕರ್ನಾಟಕ ಸೇರಿ ಅನೇಕ ರಾಜ್ಯಗಳಲ್ಲಿ ಇದರ ಶಾಖೆಗಳಿವೆ.


ಭಾರತದಲ್ಲಿ ಹೆಚ್ಚಿದ ಮೃದು ಧೋರಣೆ

ದೇಶದಲ್ಲಿ ಐಸಿಎಫ್‌ಎ ಸ್ಥಾಪನೆಯಾದಾಗ ಅದರ ಮೊದಲ ಪ್ರಧಾನ ಕಾರ್ಯದರ್ಶಿ ಆದವರು ಕಲ್ಕತ್ತಾ ವಿವಿಯ ಚೀನಾ ಇತಿಹಾಸ ಪ್ರೊಫೆಸರ್ ತ್ರಿಪುರಾರಿ ಚಕ್ರವರ್ತಿ. ಬಹುತೇಕ ಕಮ್ಯುನಿಸ್ಟ್ ಚಿಂತಕರು ಹಾಗೂ ದೇಶದ ಘಟಾನುಘಟಿ ಚಿಂತಕರ ಗುಂಪನ್ನು ಚೀನಾ ಪ್ರವಾಸಕ್ಕೆ ಕರೆದೊಯ್ಯಲಾಯಿತು. ಈ ನಂತರದಲ್ಲಿ ಇಂಗ್ಲಿಷ್ ಹಾಗೂ ಭಾರತೀಯ ಭಾಷೆಗಳಿಗೆ ಮಾವೋ ತ್ಸೆ ತುಂಗ್ ಕೃತಿಗಳು ದೊಡ್ಡ ಪ್ರಮಾಣದಲ್ಲಿ ಅನುವಾದಗೊಂಡವು. ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಐಸಿಎಫ್‌ಎ ಶಾಖೆಗಳನ್ನು ಸ್ಥಾಪಿಸಲಾಯಿತು. ಮೇ ಡೇ ಆಚರಣೆಗೆ ದೇಶದ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು, ಪ್ರಧಾನಿ ನೆಹರೂ ಸಹೋದರಿ ವಿಜಯಲಕ್ಷ್ಮೀ ಪಂಡಿತ್ ನೇತೃತ್ವದ ಸರ್ಕಾರಿ ನಿಯೋಗ ಸೇರಿ ಅನೇಕರು ತಂಡೋಪತಂಡಗಳಲ್ಲಿ ಚೀನಾ ಪ್ರವಾಸ ನಡೆಸಿ ಈ ಕುರಿತು ಭಾರತದಲ್ಲಿ ಮೃದು ಧೋರಣೆ ಪ್ರಸಾರ ಮಾಡಿದರು.



2001ರಲ್ಲಿ ಚೀನಾ ಪ್ರವಾಸ ಕೈಗೊಂಡಿದ್ದ ಕರ್ನಾಟಕದ ನಿಯೋಗದಲ್ಲಿ ಸಿದ್ದರಾಮಯ್ಯ, ಕಾಗೋಡು ತಿಮ್ಮಪ್ಪ, ಬಿ.ಎಲ್. ಶಂಕರ್, ಮೋಹನ್ ಕೊಂಡಜ್ಜಿ, ಆರ್.ವಿ. ದೇಶಪಾಂಡೆ, ಸಿ. ಭೈರೇಗೌಡ ಮುಂತಾದವರು.

ಸಿಪಿಎಎಫ್‌ಎಫ್‌ಸಿ ಎಂಬುದು ಸುಮ್ಮನೆ ಹಾಡು, ಕುಣಿತಕ್ಕೆ, ಮನರಂಜನೆಗೆ ಸೀಮಿತವಾದ ಸಂಸ್ಥೆಯಲ್ಲ ಎಂಬುದಕ್ಕೆ ಇತ್ತೀಚೆಗೆ ನಡೆದ ಬೆಳವಣಿಗೆಯೇ ಉದಾಹರಣೆ. ಸಿಪಿಎಎಫ್‌ಎಫ್‌ಸಿಯ ಈಗಿನ ಅಧ್ಯಕ್ಷ ಲಿನ್ ಸಾಂಗ್ಟಿಯಾನ್. ಕಳೆದ ವರ್ಷದ ಏಪ್ರಿಲ್‌ವರೆಗೆ ದಕ್ಷಿಣ ಆಫ್ರಿಕಾದಲ್ಲಿ ಚೀನಾ ರಾಯಭಾರಿಯಾಗಿದ್ದ ಲಿನ್ ಸಾಂಗ್ಟಿಯಾನ್, ಇದೀಗ ವಿಶ್ವವನ್ನೇ ಕಾಡುತ್ತಿರುವ ಕರೊನಾ ವೈರಸ್ ಕುರಿತು ಸುದ್ದಿಯಾಗಿದ್ದರು. ಚೀನಾದ ವುಹಾನ್‌ನಲ್ಲಿ ಕರೊನಾ ವೈರಸ್ ಹರಡುವಿಕೆ ಆರಂಭವಾಯಿತು ಎನ್ನುವುದು ಇದೀಗ ಬಹುತೇಕ ಎಲ್ಲರೂ ಒಪ್ಪುವ ಮಾತು. ಆದರೆ ಚೀನಾದಲ್ಲಿ ಈ ಕುರಿತ ಅನೇಕ ಅಂತೆ ಕಂತೆಗಳು ಚಾಲ್ತಿಯಲ್ಲಿವೆ. ವುಹಾನ್‌ಗೆ ಕಳೆದ ವರ್ಷ ಕ್ರೀಡಾಕೂಟಕ್ಕೆ ಆಗಮಿಸಿದ್ದ ಅಮೆರಿಕನ್ನರು ಕರೊನಾ ವೈರಸನ್ನು ಬಿಟ್ಟು ತೆರಳಿದ್ದರು ಎಂಬುದು ಈ ಕಥೆಗಳ ಕೇಂದ್ರಬಿಂದು. ಇದೇ ಕಥೆಯನ್ನು ಜಗತ್ತಿಗೆ ಮಾರಲು ಹೊರಟ ಮೊದಲಿಗರೆಂದರೆ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜಾವ್ ಲಿಜಿಯಾನ್. ಬಹುಶಃ ವುಹಾನ್‌ಗೆ ಚೀನಾ ಸೇನೆಯು ಕರೊನಾ ವೈರಸ್ ಅನ್ನು ಪಸರಿಸಿತು ಎಂದು ಅವರು ತಿಳಿಸಿದ್ದರು. ನಂತರದಲ್ಲಿ ವಿಶ್ವದ ವಿವಿಧ ಭಾಗಗಳಲ್ಲಿ ಈ ಕಥೆ ಮಾರಲು ಸಹಾಯ ಮಾಡಿದವರು ಆ ಸಮಯದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಚೀನಾ ರಾಯಭಾರಿಯಾಗಿದ್ದ ಲಿನ್ ಸಾಂಗ್ಟಿಯಾನ್. ಈ ಹೇಳಿಕೆಗಳಿಗೆ ಕೆರಳಿದ್ದ ಅಂದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕರೊನಾ ವೈರಸ್ ಅನ್ನು ಚೀನಾ ವೈರಸ್ ಎಂದು ಸಂಬೋಧಿಸಿದರು.

ಇಷ್ಟ ಮಟ್ಟಿಗೆ ಚೀನಾ ಕಮ್ಯುನಿಸ್ಟ್ ಪಕ್ಷದ ನೆಚ್ಚಿನ ಸೇನಾನಿಯಾದ ಲಿನ್ ಸಾಂಗ್ಟಿಯಾನ್‌ರನ್ನು ದಕ್ಷಿಣ ಆಫ್ರಿಕಾದ ರಾಯಭಾರಿ ಸ್ಥಾನದಿಂದ ಮಾರ್ಚ್‌ನಲ್ಲಿ ಇದ್ದಕ್ಕಿದ್ದಂತೆ ಹಿಂಪಡೆಯಲಾಯಿತು. ಒಂದು ವರ್ಷದಿಂದ ದಕ್ಷಿಣ ಆಫ್ರಿಕಾ ದೇಶವು ಚೀನಾದ ಬೀಜಿಂಗ್‌ನಲ್ಲಿ ತನ್ನ ರಾಯಭಾರಿಯನ್ನು ನೇಮಿಸದೆ ಅವಮಾನ ಮಾಡಿದೆ, ಈ ಸಿಟ್ಟಿಗಾಗಿ ದಕ್ಷಿಣ ಆಫ್ರಿಕಾದಿಂದ ತನ್ನ ರಾಯಭಾರಿಯನ್ನು ಕರೆಸಿಕೊಳ್ಳುತ್ತಿದೆ ಎಂದು ಸುದ್ದಿ ಹಬ್ಬಿಸಲಾಯಿತು. ಆದರೆ ಕೆಲವೇ ದಿನಗಳಲ್ಲಿ ಅಸಲಿ ಬಣ್ಣ ಬಯಲಾಯಿತು. ಲಿನ್ ಸಾಂಗ್ಟಿಯಾನ್‌ರನ್ನು ಸಿಪಿಎಎಫ್‌ಎಫ್‌ಸಿ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು.

ಚೀನಾದ, ಅದಕ್ಕಿಂತಲೂ ಹೆಚ್ಚಾಗಿ ಈಗಿನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮಹತ್ವಾಕಾಂಕ್ಷೆಯ ಬೆಲ್ಟ್ ಆಂಡ್ ರೋಡ್ ಇನಿಷಿಯೇಟಿವ್(ಬಿಆರ್‌ಐ) ಯೋಜನೆಯನ್ನು ಸಾಕಾರಗೊಳಿಸಲು ಹಾದಿ ಸುಗಮಗೊಳಿಸುವುದು ಈ ನೇಮಕದ ಉದ್ದೇಶ. ಬಿಆರ್‌ಐ ಬಲವಾದ ಸಮರ್ಥಕರಾದ ಲಿನ್, ಚೀನಾದ ಸಾಧನೆಯನ್ನು ತಡೆಯಲಾಗದವರು ಮಾತ್ರ ಇದನ್ನು ವಿರೋಧಿಸುತ್ತಾರೆ ಎಂದು ಅನೇಕ ಬಾರಿ ಸ್ಪಷ್ಟವಾಗಿ ಹೇಳಿದ್ದಾರೆ. ಈ ಬಿಆರ್‌ಐ ಯೋಜನೆಯು ಭಾರತದ ಸಾರ್ವಭೌಮತೆಗೆ ಧಕ್ಕೆ ಉಂಟು ಮಾಡುತ್ತದೆ ಎಂಬ ಕಾರಣಕ್ಕೆ ಭಾರತ ಈಗಲೂ ವಿರೋಧ ಮಾಡುತ್ತಲೇ ಬಂದಿದೆ. ಆದರೆ ಸ್ನೇಹದ ಕುರಿತ ವೇದಿಕೆಯೊಂದಕ್ಕೆ ಆಕ್ರಮಣಕಾರಿ ಮನೋಭಾವದ ವ್ಯಕ್ತಿಯನ್ನು ಚೀನಾ ನೇಮಕ ಮಾಡಿರುವುದರಿಂದಲೇ ಈ ಸಿಪಿಎಎಫ್‌ಎಫ್‌ಸಿ ಒಟ್ಟಾರೆ ಮನೋಭಾವನೆ ತಿಳಿಯುತ್ತದೆ.



ಅನೇಕ ಸಂದರ್ಭಗಳಲ್ಲಿ ಇಂಡೋ-ಚೀನಾ ರೆಂಡ್‌ಷಿಪ್‌ ಅಸೋಸಿಯೇಷನ್‌ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಕರ್ನಾಟಕದ ಪ್ರಮುಖ ರಾಜಕಾರಣಿಗಳು ಹಾಗೂ ಆಹ್ವಾನ ಪತ್ರಿಕೆ.

ದೇಶ ವಿದೇಶಗಳಲ್ಲಿ ಚೀನಾ ಕಮ್ಯುನಿಸ್ಟ್ ಪಕ್ಷದ ಆಡಳಿತಕ್ಕೆ ಅಧಿಕೃತತೆ ಒದಗಿಸಿಕೊಡುವುದು ಈ ಸಂಸ್ಥೆಯ ಉದ್ದೇಶ. ಆಯಾ ದೇಶದ ಪ್ರಮುಖ ರಾಜಕೀಯ, ಸಾಂಸ್ಕೃತಿಕ ನಾಯಕರ ಗಮನ ಸೆಳೆಯುವುದು. ಉಚಿತವಾಗಿ ಕ್ಯುರೇಟೆಡ್ ಚೀನಾ ಪ್ರವಾಸ ಆಯೋಜಿಸುವುದು. ಕಮ್ಯುನಿಸ್ಟ್ ಪಕ್ಷದ ಸರ್ಕಾರದ ಆಡಳಿತದಲ್ಲಿನ ದಕ್ಷತೆ, ಶಿಸ್ತು, ಅದರಿಂದ ದೇಶದ ಕೃಷಿ, ಕೈಗಾರಿಕೆ, ಶಿಕ್ಷಣ ವ್ಯವಸ್ಥೆಯಲ್ಲಿ ಉಂಟಾಗಿರುವ ಅಗಾಧ ಸುಧಾರಣೆಗಳನ್ನು ಪ್ರವಾಸಿಗರ ಮನಸ್ಸಿನಲ್ಲಿ ಬಿತ್ತುವುದು. ಭಾರತದಲ್ಲಿ ಫ್ರೆಂಡ್‌ಷಿಪ್ ಅಸೋಸಿಯೇಷನ್‌ಗಳ ಮೂಲಕ ಕಾರ್ಯಕ್ರಮಗಳನ್ನು ಆಯೋಜಿಸಿ ಭಾರತ-ಚೀನ ಪಾರಂಪರಿಕ ಸಾಂಸ್ಕೃತಿಕ ಸಂಬಂಧಗಳ ಬಗ್ಗೆ ಹೊಗಳುವುದು ಇದರ ಉದ್ದೇಶ. ಅಷ್ಟಕ್ಕೂ ಪ್ರಾಚೀನ ಚೀನ ಹಾಗೂ ಭಾರತದ ಸಂಸ್ಕೃತಿಯ ನಡುವೆ ಅನೇಕ ಸಾಮ್ಯತೆಗಳಿವೆ. ಆದರೆ ಈಗ 7 ದಶಕದಿಂದ ಚೀನಾದಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೂ ಆ ಸಂಸ್ಕೃತಿಗೂ ಸಂಬಂಧವಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿಯುವುದಿಲ್ಲ.


ಇಂತಹ ಪ್ರವಾಸ ಆಯೋಜನೆಯ ಬಲೆಗೆ ಭಾರತದ, ಅದರಲ್ಲೂ ಕರ್ನಾಟಕದ ರಾಜಕಾರಣಿಗಳೂ ಬಿದ್ದಿದ್ದಾರೆ. 2001ರಲ್ಲಿ ಈ ರೀತಿಯ ಕರ್ನಾಟಕದ ನಿಯೋಗದಲ್ಲಿ ಸಿದ್ದರಾಮಯ್ಯ, ಕಾಗೋಡು ತಿಮ್ಮಪ್ಪ, ಬಿ.ಎಲ್. ಶಂಕರ್, ಮೋಹನ್ ಕೊಂಡಜ್ಜಿ, ಆರ್.ವಿ. ದೇಶಪಾಂಡೆ, ಸಿ. ಭೈರೇಗೌಡ ಮುಂತಾದವರು ತೆರಳಿದ್ದರು. ಇದೀಗ ಅಖಿಲ ಭಾರತ ಪಟ್ಟದ ಐಸಿಎಎಫ್‌ಗೆ ಕರ್ನಾಟಕದವರೇ ಆದ ಹಿರಿಯ ರಾಜಕಾರಣಿ ಪಿ.ಜಿ.ಆರ್. ಸಿಂಧ್ಯಾ ಅಧ್ಯಕ್ಷರು. ಕರ್ನಾಟಕ ಶಾಖೆಗೆ ಕೋಲಾರ ಶಾಸಕ ಕೆ. ಶ್ರೀನಿವಾಸ ಗೌಡ ಅಧ್ಯಕ್ಷರು, ವಿ. ಭಾಸ್ಕರನ್ ಪ್ರಧಾನ ಕಾರ್ಯದರ್ಶಿ. 2020ರ ಜ.19ಕ್ಕೆ ಕ್ಯಾಪಿಟಲ್ ಹೋಟೆಲ್‌ನಲ್ಲಿ ಐಸಿಎಫ್‌ಎನ 70ನೇ ವರ್ಷದ ಕಾರ್ಯಕ್ರಮ ನಡೆಯಿತು. ಭಾರತಲ್ಲಿರುವ ಚೀನಾ ರಾಯಭಾರಿ ಸನ್ ವೀಡಾಂಗ್ ಸೇರಿ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಚೀನಾವನ್ನು ಹಾಡಿ ಹೊಗಳಿದ್ದರು.

ಈ ಹಿಂದೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಮಾಜಿ ಮಂತ್ರಿ ಎಂ.ವಿ. ರಾಜಶೇಖರನ್ ಅವರು ಸೇರಿ ದೇಶದ ಗಣ್ಯ ರಾಜಕಾರಣಿಗಳನ್ನು ಈ ಕಾರ್ಯಕ್ರಮಗಳಿಗೆ ಆಹ್ವಾನಿಸಿ ಚೀನಾ-ಭಾರತ ಸಂಬಂಧಗಳ ಬಗ್ಗೆ ಮೃದುಧೋರಣೆ ಮೂಡಿಸುವ ಕೆಲಸ ಆಗಿದೆ. ಇದೇ ಮುಂದುವರಿದ ಭಾಗವಾಗಿ ಕರ್ನಾಟಕದಲ್ಲಿ 2004ರಲ್ಲಿ ನಡೆದ ಐಸಿಎಫ್‌ಎ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಜ್ಯದ ಹಿರಿಯ ರಾಜಕಾರಣಿ ಹಾಗೂ ಅಂದಿನ ಕೇಂದ್ರ ಸಚಿವ ದಿವಂಗತ ಎಂ.ವಿ. ರಾಜಶೇಖರನ್ ಅವರು, ಚೀನಾದ ಇತ್ತೀಚಿನ ಭೇಟಿಯಿಂದ ತಮ್ಮ ಮೇಲೆ ಬೀರಿದ್ದ ಪ್ರಭಾವವನ್ನು ವರ್ಣಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ, ಸ್ಪೀಕರ್ ಕೃಷ್ಣ ಸಹ ಭಾಗವಹಿಸಿದ್ದರು. ಇಂತಹ ಬಹುತೇಕ ಕಾರ್ಯಕ್ರಮಗಳಿಗೆ ಭಾರತದಲ್ಲಿರುವ ಚೀನಾ ರಾಯಭಾರಿ ಆಗಮಿಸುತ್ತಾರೆ, ಚೀನಾದ ಸಾಧನೆಗಳನ್ನು ವಿವರಿಸುತ್ತಾರೆ. ಇದರಿಂದಾಗಿಯೇ, ಭಾರತದಲ್ಲಿ ಪಾಕಿಸ್ತಾನದ ವಿರುದ್ಧ ವ್ಯಕ್ತವಾದಷ್ಟು ಧೋರಣೆಗಳು ಚೀನಾ ವಿರುದ್ಧ ಆಗುವುದೇ ಇಲ್ಲ. ಹಾಗೆಂದು ಈ ಸಂಘಟನೆ ಜತೆಗೆ ಗುರುತಿಸಿಕೊಂಡ ಮೇಲಿನ ಯಾವುದೇ ರಾಜಕೀಯ ನಾಯಕರ ದೇಶಭಕ್ತಿ ಪ್ರಶ್ನಿಸುವುದು ಇಲ್ಲಿನ ಉದ್ದೇಶವಲ್ಲ. ಅವರಿಗೇ ಅರಿವಿಲ್ಲದಂತೆ ಚೀನಾ ಯಾವ ರೀತಿ ತನ್ನ ಕೆಲಸವನ್ನು ಮಾಡಿಕೊಳ್ಳುತ್ತಿದೆ ಎಂಬುದನ್ನು ಗಮನಿಸಬೇಕು.

ನೇರವಾಗಿ ಕಮ್ಯುನಿಸ್ಟರ ಜತೆಗೆ ಗುರುತಿಸಿಕೊಂಡವರು 1962ರ ಯುದ್ಧದಲ್ಲಿ ಭಾರತದ ಸೇನೆಯನ್ನೇ ಟೀಕಿಸಿದ್ದರು. ಆದರೆ ಇದೀಗ ಚೀನಾದ ಈ ಸ್ನೇಹ ಜಾಲಕ್ಕೆ ಸಿಲುಕುವ ಅನೇಕ ನೀತಿ ನಿರೂಪಕರು ಚೀನಾ ವಿರುದ್ಧ ಮಾತನಾಡದೆ ಮೌನಕ್ಕೆ ಶರಣಾಗುತ್ತಾರೆ. ಅಷ್ಟರ ಮಟ್ಟಿಗೆ ಚೀನಾ ಗೆದ್ದಂತೆ. ದೇಶದೊಳಗಿನವರ ಮನಸ್ಸಿನಲ್ಲಿ ತನ್ನ ಪರ ಧೋರಣೆಯನ್ನು ಬಿತ್ತಿ ಬಿಆರ್‌ಐನಂತಹ ಭಾರತ ವಿರೋಧಿ ಯೋಜನೆಯನ್ನು ಸಲೀಸಾಗಿ ಜಾರಿಗೊಳಿಸುವುದು ಚೀನಾದ ಉದ್ದೇಶ. ಭವಿಷ್ಯದಲ್ಲಿ ಬಿಆರ್‌ಐ ಕುರಿತ ಚರ್ಚೆ ಸಂಸತ್ತಿನಲ್ಲೊ, ಸಾರ್ವಜನಿಕ ವಲಯದಲ್ಲೊ ಬಂದರೆ ಈ ಮೃದುಧೋರಣೆ ಹೊಂದಿರುವ ನಾಯಕರು ಚೀನಾ ಸಹಾಯಕ್ಕೆ ಬಂದೇ ಬರುತ್ತಾರೆ ಎಂಬ ನಂಬಿಕೆ ಆ ದೇಶದ್ದು.


(ವರದಿಯನ್ನು ಬೇರೆಡೆ ಬಳಸಬಹುದು. ಪೂರ್ಣ ಪ್ರಮಾಣದಲ್ಲಿ ಅಥವಾ ಭಾಗಶಃ ಬಳಸಿಕೊಂಡರೆ ಮೂಲ ಲೇಖಕರ ಹಾಗೂ ಬ್ಲಾಗ್‌ ವಿಳಾಸವನ್ನು ನಮೂದಿಸುವಂತೆ ಮನವಿ