ಬುಧವಾರ, ಆಗಸ್ಟ್ 11, 2010

ಪ್ರಜಾಪ್ರಭುತ್ವ ಉಳಿಯಬೇಕಾದರೆ 'ಕಾವಲುನಾಯಿ' ಗಟ್ಟಿಯಾಗಿರಬೇಕು ಅಲ್ಲವೇ?

         'ಪ್ರತಿಪಕ್ಷಗಳು ಪ್ರಜಾಪ್ರಭುತ್ವದ ಕಾವಲು ನಾಯಿ' ಎಂದು ಪ್ರಾರಂಭಿಕ ಹಂತದ ರಾಜ್ಯಶಾಸ್ತ್ರದಲ್ಲಿರುವ, ಪ್ರತಿಪಕ್ಷದ ಕುರಿತ ಮೊದಲ ನುಡಿ. ಕರ್ನಾಟಕದ ಮಟ್ಟಿನಲ್ಲಿ ಯೋಚಿಸುವುದಾದರೆ ಆ ನಾಯಿ ಪ್ರಜಾಪ್ರಭುತ್ವವನ್ನು ಕಾಯುವಷ್ಟು ಗಟ್ಟಿಯಾಗಿಲ್ಲ. ಜುಲೈ 25ರಿಂದ ರಾಜ್ಯ ಕಾಂಗ್ರೆಸ್ ನಾಯಕರು ಗಣಿ ಮಾಫಿಯಾದ ವಿರುದ್ಧ ಪ್ರತಿಭಟನೆಯಾಗಿ ಬಳ್ಳಾರಿಗೆ ಪಾದಯಾತ್ರೆ ಕೈಗೊಂಡು ಯಶಸ್ವಿಯಾಗಿ ಮುಗಿಸಿದ್ದಾರೆ. 16 ದಿನ ನಡೆದ ಈ ಪಾದಯಾತ್ರೆಯನ್ನು ನೊಡಿದ ಯಾರೇ ಪ್ರಜಾಪ್ರಭುತ್ವವಾದಿಗಳಿಗೂ ಸಂತೋಷವಾಗುವುದು ಸಹಜ ಹಾಗೂ ಹಾಗಾದಾಗ ಮಾತ್ರ ಅವರು ನಿಜವಾದ ಪ್ರಜಾಪ್ರಭುತ್ವವಾದಿಗಳು. ಕಾರಣ, ಯಾತ್ರೆಯುದ್ದಕ್ಕೂ ಕಾಂಗ್ರೆಸ್ ಅಭೂತಪೂರ್ವ ಒಗ್ಗಟ್ಟನ್ನು ಪ್ರದರ್ಶಿಸುತ್ತಿದೆ , ಅದರಲ್ಲಿ ಭಾಗವಹಿಸುವವರ ಸಂಖ್ಯೆ ಹಾಗೂ ಅವರ ಉತ್ಸಾಹ ದಿನೇ-ದಿನೇ ಹೆಚ್ಚುತ್ತಿದೆ. ಇದು ಪ್ರಜಾಪ್ರಭುತ್ವವು ಬಲಗೊಳ್ಳುವ ದೃಷ್ಟಿಯಿಂದ ಒಳ್ಳೆಯದು.
ಅದು ಯಾವುದೇ ಪಕ್ಷ ಅಧಿಕಾರದಲ್ಲಿರಲಿ, ಸರಿಯಾದ ಪ್ರತಿಪಕ್ಷವಿಲ್ಲದೇ ಆಡಳಿತ ಸುಸೂತ್ರವಾಗಿ ನಡೆಯಲು ಸಾಧ್ಯವಿಲ್ಲ. ವಾಸ್ತವವಾಗಿ ಅದು ಪ್ರಜಾಪ್ರಭುತ್ವವೇ ಅಲ್ಲದ ಸರ್ವಾಧಿಕಾರಿ  ಸರ್ಕಾರವಾಗುತ್ತದೆ. ಇದರಿಂದ ಜನತೆಗೆ ದೊರೆಯುವ ಲಾಭ ಸೊನ್ನೆ. ಪ್ರತಿಪಕ್ಷವನ್ನು ನಿರ್ನಾಮ  ಮಾಡಿ ಮೂವತ್ತು ವರ್ಷ ಅಧಿಕಾರ ಚಲಾಯಿಸಿದ ಪಶ್ಚಿಮ ಬಂಗಾಳದ ಕಮ್ಯೂನಿಸ್ಟ್ ನೇತೃತ್ವದ  ಸರ್ಕಾರವೇ ಇದಕ್ಕೆ ಉದಾಹರಣೆ. ಒಂದು ಕಾಲದಲ್ಲಿ ದೇಶದ ಬಹುಪಾಲು ಉದ್ಯಮದ ಕೇಂದ್ರವಾಗಿದ್ದ ರಾಜ್ಯ ಮೂವತ್ತು ವರ್ಷಗಳಲ್ಲಿ ಹಾಳು ಕೊಂಪೆಯಾಗಿದೆ. ಈ ದೃಷ್ಟಿಯಿಂದ ನೋಡಿದರೆ ಕಾಂಗ್ರೆಸ್ ಬಲಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆ.
ಹಿಂದೆ ಸಿದ್ಧರಾಮಯ್ಯನವರು ಅಹಿಂದ ಚಳುವಳಿಯ ಹಿನ್ನೆಲೆಯಲ್ಲಿ ಜೆ.ಡಿ.ಎಸ್ ನಿಂದ ಬೇರ್ಪಡಿಸಿಕೊಂಡು ಹೊಗುತ್ತಾರೆನ್ನುವ ಸಂದರ್ಭದಲ್ಲಿ, ಕಟ್ಟಾ ಬಿ.ಜೆ.ಪಿ ಬೆಂಬಲಿಗ ಹಿರಿಯರೊಬ್ಬರ ಜೊತೆ ಅವರ ವಕೀಲ ಸ್ನೇಹಿತನ ಮನೆಗೆ ಹೋಗಿದ್ದೆ. ತನ್ನ ಇಂಗಿತವನ್ನು ಹೇಳಲೋ ಅಥವಾ ಬಂದಿದ್ದ ಹಿರಿಯರನ್ನು ಮೆಚ್ಚಿಸಲೋ 'ಸಿದ್ಧರಾಮಯ್ಯ ಪಕ್ಷದಿಂದ ಹೊರಗೆ ಹೋಗಿ ಜೆ.ಡಿ.ಎಸ್ ಎರಡು ಹೋಳಾದರೆ ಇದರಿಂದ ಬಿ.ಜೆ.ಪಿ ಗೆ ಲಾಭ ಹೆಚ್ಚು' ಎಂದರು ವಕೀಲರು. ಅದಕ್ಕೆ ಈ ಹಿರಿಯರು ಹೇಳಿದ್ದು, 'ಅದು ಯಾವುದೇ ಪಕ್ಷವಿರಬಹುದು-ಒಡೆಯುವುದರಿಂದ ಕೇವಲ ರಾಜಕೀಯ ಪಕ್ಷಗಳಿಗೆ ಲಾಭವಿರಬಹುದೇ ಹೊರತು ಜನತೆಗೆ ಅದರಿಂದ ಯಾವ ಲಾಭವೂ ಇಲ್ಲ. ನಕಾರಾತ್ಮಕ ಪ್ರಕ್ರಿಯೆಗಳಿಂದ ಸಕಾರಾತ್ಮಕ ಫಲಿತಾಂಶ ದೊರಕಲು ಸಾಧ್ಯವಿಲ್ಲ. ಈ ರೀತಿಯ ಪ್ರಕ್ರಿಯೆಗಳು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತವೆ' ಎಂದು ಹೇಳಿದರು. ತಕ್ಷಣವೇ ವಕೀಲ ಸ್ನೇಹಿತನ ಮುಖ ಪೆಚ್ಚಾಯಿತು. ಸುಮಾರು ಐದು ವರ್ಷಗಳ ಹಿಂದೆ ನಡೆದ ಈ ಘಟನೆ ಕಾಂಗ್ರೆಸ್ ಪಾದಯಾತ್ರೆಯನ್ನು ನೋಡಿದಾಗ ನೆನಪಾಯಿತು.
Picture:analogengineering.com
ಈ ಪಾದಯಾತ್ರೆಯನ್ನು ಉಪಯೊಗವಿಲ್ಲದ್ದು ಎಂದು ಬಿಂಬಿಸಲು ಹೊರಟ ಕೆಲವರು ಮತಾಂತರ-ಗೋಹತ್ಯೆಗಳಂತಹ ದೊಡ್ಡ ಸಮಸ್ಯೆಗಳಿರುವಾಗ ಕೇವಲ ಅಕ್ರಮ ಗಣಿಗಾರಿಕೆಗೇಕೆ ಪಾದಯಾತ್ರೆ ಎನ್ನುತ್ತಿದ್ದಾರೆ. ಗಣಿ ಮಾಫಿಯಾ, ಅದರಲ್ಲಿನ ರಾಜಕೀಯ ಎಲ್ಲವನ್ನೂ ಬಿಟ್ಟು ಪಾದಯಾತ್ರಿಗಳು ಧರಿಸಿದ್ದ ಉಡುಪು, ಸಿದ್ಧರಾಮಯ್ಯನವರ ದುಬಾರಿ ಬೂಟು.... ಎಂದೆಲ್ಲಾ ಬಡಬಡಿಸುತ್ತ್ತಿದ್ದಾರೆ ಹಾಗೂ ಕಾಂಗ್ರೆಸ್ಗೆ ನಕ್ಸಲರ ಸಮಸ್ಯೆ ದೊಡ್ಡದಾಗಿ ಕಾಣುವುದೇ ಇಲ್ಲ ಎನುತ್ತಿದ್ದಾರೆ. ಅಂದರೆ ಈ ಎಲ್ಲಾ ವಾದಗಳ ಅರ್ಥ ಮತಾಂತರ-ಗೋಹತ್ಯೆ ಬಗ್ಗೆ ತಲೆಕೆಡಿಸಿಕೊಳ್ಳದ ಕಾಂಗ್ರೆಸ್ ಗಣಿ ಮಾಫಿಯಾದ ವಿರುದ್ಧವೂ ಏನೂ ಮಾಡಬಾರದೆಂದೇ? ಗಾಂಧೀ ಪಕ್ಷದ ನಾಯಕರ ಬಟ್ಟೆಯ ಬಗ್ಗೆ ಮಾತನಾಡುವವರು ಶ್ರೀಯುತ ಎಚ್.ಎಸ್ ದೊರೆಸ್ವಾಮಿಯವರು ತುಂಡು ಬಟ್ಟೆ ಧರಿಸುವುದಿಲ್ಲಾ ಎಂದೋ, ಶ್ರೀ ಮತ್ತೂರು ಕೃಷ್ಣಮೂರ್ತಿಯವರು ಕಾರಿನಲ್ಲಿ ಓಡಾಡುತ್ತಾರೆ ಎಂದೋ ಅವರನ್ನು ಗಾಂಧೀವಾದಿಗಳಲ್ಲ ಎಂದು ಹೇಳಲು ಸಾಧ್ಯವಾಗುತ್ತದೆಯೇ? ಬ್ರಿಟಿಷರ ವಿರುದ್ಧ ಪ್ರತಿಭಟಿಸಲು ಗಾಂಧೀಜಿ ಸಾಂಕೇತಿಕವಾಗಿ ತುಂಡುಬಟ್ಟೆ ತೊಟ್ಟರೇ ಹೊರತು ತುಂಡು ಬಟ್ಟೆ ತೊಡುವುದೇ ಗಾಂಧೀವಾದವಲ್ಲ ಎಂಬುದನ್ನು ತಿಳಿಯಬೇಕು. ತುಂಡುಡುಗೆ ಉಟ್ಟವರೆಲ್ಲಾ ಗಾಂಧೀವಾದಿಗಳು ಎನ್ನುದಾದದರೆ ನಮ್ಮದೇಶದ ಬೀದಿಗಳಲ್ಲಿ ಭಿಕ್ಷ್ಷೆ ಬೇಡುತ್ತಿರುವವರೆಲ್ಲಾ ಗಾಂಧೀವಾದಿಗಳು!. ಹಾಗೂ ನಕ್ಸಲ್ ಸಮಸ್ಯೆಯ ಬಗ್ಗೆ ಕಾಂಗ್ರೆಸ್ಗೆ ಯಾವುದೇ ಕಾಳಜಿಯಿಲ್ಲ ಎಂದೂ ಕೆಲವರು ಹೇಳುತ್ತಾರೆ. ಆದರೆ, ಚಂದ್ರಬಾಬು ನಾಯ್ಡು ಅವರ ಕಾಲದಲ್ಲಿ ಮುಖ್ಯಮಂತ್ರಿಯವರ ಕಾರಿಗೇ ಬಾಂಬ್ ಇಡುವಷ್ಟು ಹೆಚ್ಚಿಕೊಂಡಿದ್ದ ಆಂಧ್ರದ ನಕ್ಸಲರನ್ನು ಆಪರೇಷನ್ ಗ್ರೀನ್ ಹಂಟ್ ಹೆಸರಿನಲ್ಲಿ ಬಗ್ಗು ಬಡಿದದ್ದು ಅದೇ ಕಾಂಗ್ರೆಸ್ ಪಕ್ಷದ ವೈ.ಎಸ್ ರಾಜಶೇಖರ ರೆಡ್ಡಿಯವರಲ್ಲವೇ?
ಇಷ್ಟೆಲ್ಲವನ್ನೂ ಕಾಂಗ್ರೆಸ್ ಪಕ್ಷವನ್ನು ಸಾರಾಸಗಟಾಗಿ ಸಮರ್ಥಿಸಲು ಇಲ್ಲಿ ಹೇಳುತ್ತಿಲ್ಲ. ಬದಲಾಗಿ ಈಗಿನ ಪಾದಯಾತ್ರೆಗೂ ಕಾಂಗ್ರೆಸ್ ನ  ಇಲ್ಲಿಯವರೆಗಿನ ಧೋರಣೆಗಳಿಗೂ ಸಂಬಂಧ ಕಲ್ಪಿಸಿ ಒಂದು ದೊಡ್ಡ ಮೋಸದ ಜಾಲವನ್ನು ಸಮರ್ಥಿಸಲು ಯಾರೂ ಮುಂದಾಗಬಾರದು. ಮುಂದೆ ಮತಾಂತರ-ಗೋಹತ್ಯೆ-ಭಯೋತ್ಪಾದನೆಯ ವಿಷಯಗಳು ಬಂದಾಗ ಆ ಪಕ್ಷವನ್ನು ಅಗತ್ಯವಿದ್ದಲ್ಲಿ ವಿರೋಧಿಸೋಣ. ಆದರೆ, ಇದು ಸರಿಯಾದ ಕಾಲವಲ್ಲ. ಈ ಯಾತ್ರೆಯಿಂದ ಕಾಂಗ್ರೆಸ್ನಲ್ಲಿ ನಾಲ್ಕೈದು ಜನ ಪ್ರಭಾವಿ ನಾಯಕರು ಹೊರಹೊಮ್ಮಿ ಪ್ರತಿಪಕ್ಷ ಗಟ್ಟಿಯಾದರೆ ಲಾಭ ಯಾರಿಗೆ? ಪ್ರಜಾಪ್ರಭುತ್ವಕ್ಕೇ ಅಲ್ಲವೇ? ಅಷ್ಟೇ ಅಲ್ಲದೇ ಪ್ರತಿಪಕ್ಷಕ್ಕೆ ವಿದೇಶಗಳಲ್ಲಿ Government-in-Waiting ಎಂದು ಹೇಳುತ್ತಾರೆ. ಅಧಿಕಾರದ ಗದ್ದುಗೆ ಏರಬೇಕೆನ್ನುವುದು ಪ್ರತಿಯೊಂದು ವಿರೋಧಪಕ್ಷದ ಗುರಿಯಾಗಿರುತ್ತದೆ, ಇದಕ್ಕೆ ಕಾಂಗ್ರೆಸ್ ಕೂಡಾ ಹೊರತಲ್ಲ. ಈ ದಿಕ್ಕಿನಲ್ಲಿ ಚರ್ಚೆ ಮುಂದುವರಿಯಲಿ. ದಯವಿಟ್ಟು ಈ ಲೇಖನ ಬರೆದವ ನಾನು ಯಾವ ಪಕ್ಷದವನು ಎಂಬುದರಿಂದ ಯೋಚಿಸಲು ಪ್ರಾರಂಭಿಸದಿರೋಣ, ನಿಜ ಪ್ರಜಾಪ್ರಭುತ್ವವಾದಿಗಳಾಗೋಣ.