ಭಾನುವಾರ, ಡಿಸೆಂಬರ್ 22, 2024

ಮೋಹನ್‌ ಭಾಗವತ್‌ ಅವರ ಮಾತು: ಬೆತ್ತಲಾದ ಬುದ್ಧಿಜೀವಿಗಳು!

ಕೆಲವರು ಎಲ್ಲ ಮಸೀದಿಗಳ ಕೆಳಗೂ ದೇವಸ್ಥಾನವೊಂದನ್ನು ಹುಡುಕಲು ಮುಂದಾಗುವ ಮೂಲಕ ಹಿಂದೂ ಮುಖಂಡರಾಗಲು ಯತ್ನಿಸುತ್ತಿದ್ದಾರೆ ಎಂದು ಆರ್‌ಎಸ್‌ಎಸ್‌ ಸರಸಂಘಚಾಲಕ ಡಾ. ಮೋಹನ್‌ ಭಾಗವತ್‌ ಅವರು ಡಿ.19ರಂದು ಪುಣೆಯಲ್ಲಿ ಮಾತನಾಡುತ್ತಾ ಹೇಳಿರುವುದು ಈಗ ಚರ್ಚೆಯ ವಿಷಯ.

ಮುಖ್ಯವಾಗಿ ಈ ಮಾತಿಗೆ ವಿರೋಧ ಬರುತ್ತಿರುವುದು ಆರ್‌ಎಸ್‌ಎಸ್‌ ಸಿದ್ಧಾಂತವನ್ನು ಬಹುಪಾಲು ಒಪ್ಪುವ, ಅದನ್ನು ಗೌವರಿಸುತ್ತಾ ಬಂದಿರುವ ಸ್ವತಂತ್ರ ಚಿಂತಕರುಗಳು. ʼನಿಮ್ಮದು ಒಂದು ಸಂಘಟನೆ ಮಾತ್ರ. ನೀವೇನು ಇಡೀ ಹಿಂದೂ ಸಮಾಜದ ವಕ್ತಾರರಲ್ಲʼ ಎಂದು ಕೆಲವರು ಹೇಳಿದರೆ ʼಮೋಹನ್‌ ಭಾಗವತ್ ಅವರಿಗೆ ವಯಸ್ಸಾಗಿದೆ, ಮೊದಲು ʼರಾಜೀನಾಮೆ  ಕೊಡಿʼ ಎಂದು ಮತ್ತೊಬ್ಬರು ಹೇಳಿದ್ದಾರೆ. ʼಮೋಹನ್‌ ಭಾಗವತ್‌ ಅವರು ಮೋಹನ್‌ದಾಸ್‌ (ಕರಮ್‌ಚಂದದದ ಗಾಂಧಿ ಗಾಂಧಿ) ರೀತಿಯಲ್ಲಿ ಮಾತನಾಡುತ್ತಿದ್ದಾರೆʼ ಎಂದೂ ಆಕ್ಷೇಪಿಸಿದ್ದಾರೆ.

ಅಷ್ಟಕ್ಕೂ ಯಾವುದೇ ಸಂದರ್ಭದಲ್ಲೂ ಇಡೀ ಹಿಂದೂ ಸಮಾಜ ತನ್ನ ಅಣತಿಯಂತೇ ನಡೆಯಬೇಕು ಎಂದು ಆರ್‌ಎಸ್‌ಎಸ್‌ ಎಂದಿಗೂ ಹೇಳಿದಂತೆ ನನ್ನ ಸೀಮಿತ ತಿಳುವಳಿಕೆಯಲ್ಲಿ ಇಲ್ಲ. ಹಿಂದೂ ಸಮಾಜವೇ ಆರ್‌ಎಸ್‌ಎಸ್‌ ಅನ್ನು ತನ್ನ ರಕ್ಷಣೆ, ದೇಶದ ಅಭಿವೃದ್ಧಿಗೆ ಒಂದು ಪರ್ಯಾಯವಾಗಿ ಆಯ್ಕೆ ಮಾಡಿಕೊಂಡಿದೆ. ಹೀಗೆ ಆರ್‌ಎಸ್‌ಎಸ್‌ ಅನ್ನು ಹಿಂದೂ ಮುಖಂಡರು ಟೀಕಿಸುವುದು ಹೊಸದೇನೂ ಅಲ್ಲವಲ್ಲ? ಇಸ್ಲಾಮಿಕ್‌ ಆಕ್ರಮಣಗಳ ಕುರಿತು ಆಳವಾದ ಅಧ್ಯಯನ ನಡೆಸಿ ಸರಣಿ ಪುಸ್ತಕಗಳನ್ನು ರಚಿಸಿದ ಸೀತಾರಾಂ ಗೋಯೆಲ್‌ ಅವರು ಅನೇಕ ಬಾರಿ ಆರ್‌ಎಸ್‌ಎಸ್‌ ಅನ್ನು ಟೀಕಿಸಿದ್ದಾರೆ. “The RSS is the biggest collection of duffers that ever came together in world history” (1989) ಎನ್ನುವಂತೆ ಅನೇಕ ಬಾರಿ ತೆಗಳಿದ್ದಾರೆ. ವಾಯ್ಸ್‌ ಆಫ್‌ ಇಂಡಿಯಾ ಎಂಬ ಪುಸ್ತಕ ಸರಣಿಗಳ ಮೂಲಕ ಹಿಂದೂಗಳನ್ನು ಜಾಗೃತಗೊಳಿಸಿದ್ದ ಸೀತಾರಾಮ್‌ ಗೋಯೆಲ್‌, ರಾಮಸ್ವರೂಪ್‌ ಅವರನ್ನು ಆರ್‌ಎಸ್‌ಎಸ್‌ ಎಂದಿಗೂ ತಿರಸ್ಕರಿಸಿಲ್ಲ. ಅಸಲಿಗೆ ಇಂದಿಗೂ ವಾಯ್ಸ್‌ ಆಫ್‌ ಇಂಡಿಯಾ ಸರಣಿಯನ್ನು ಮುಂದಿನ ಪೀಳಿಗೆಗೆ ತಲುಪಿಸುತ್ತಿರುವುದು, ಅದನ್ನು ಅನುವಾದಿಸಿ ಬೇರೆ ಬೇರೆ ಭಾಷೆಯ ಜನರಿಗೆ ನೀಡುತ್ತಿರುವುದು ಆರ್‌ಎಸ್‌ಎಸ್‌ಗೆ ಜತೆಗಿರುವ ಸಂಘಟನೆ/ಸಂಸ್ಥೆಗಳೆ..

ಅಂದು ಸೀತಾರಾಮ್‌ ಗೋಯಲ್‌ ಮುಂತಾದವರಾದರೆ ಇಂದು ಆನಂದ ರಂಗನಾಥನ್‌, ಸಾಯಿ ದೀಪಕ್‌, ಜಿ.ಬಿ. ಹರೀಶ್‌‌ ಮುಂತಾದ ಚಿಂತಕರು ಆರ್‌ಎಸ್‌ಎಸ್‌ ಸರಸಂಘಚಾಲಕರನ್ನು ಟೀಕಿಸುತ್ತಿದ್ದಾರೆ. ಈ ಟೀಕೆಯೂ ಮೊದಲನೆಯದಲ್ಲ. ʼಎಲ್ಲ ಮಸೀದಿಗಳ ಕೆಳಗೆ ಶಿವಲಿಂಗವನ್ನು ಏಕೆ ಹುಡುಕಬೇಕು?ʼ ಎಂದು ಈ 2021ರ ಜೂನ್‌ನಲ್ಲಿ ಮೋಹನ್‌ ಭಾಗವತ್‌ ಅವರು ಹೇಳಿದಾಗಲೂ ಈ ರೀತಿ ಅನೇಕರು ಟೀಕಿಸಿದ್ದರು. ಇದು ʼಹಿಂದುತ್ವʼ ಗುಂಪುಗಳಲ್ಲಿ, ವ್ಯಕ್ತಿಗಳಲ್ಲಿ, ಸಂಘಟನೆಗಳಲ್ಲಿ ಇರುವ ಮುಕ್ತತೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತೋರಿಸುತ್ತದೆ. ಏಕೆಂದರೆ  ನನಗೆ ತಿಳಿದ ಮಟ್ಟಿಗೆ ಈಗಲೂ ಟೀಕೆ ಮಾಡುತ್ತಿರುವ ಚಿಂತಕರನ್ನು ಆರ್‌ಎಸ್‌ಎಸ್‌ ನೇರವಾಗಿಯಾಗಲಿ, ಅದರ ವಲಯವಾಗಲಿ ʼಬ್ಲಾಕ್‌ʼ ಮಾಡುವ ʼತಿರಸ್ಕರಿಸುವʼ ಕೆಲಸ ಮಾಡಿಲ್ಲ.

ಮೋಹನ್‌ ಭಾಗವತ್‌ ಅವರು ಕಳೆದ ನಾಲ್ಕೈದು ವಷಗಳಿಂದ ಆಡುತ್ತಿರುವ ಮಾತಿನಲ್ಲಿ ಒಂದು ಸಮಾನ ಅಂಶವಿರುವುದನ್ನು ಯಾರಾದರೂ ಗಮನಿಸಬಹುದು. ಅದು ಸಾಮಾಜಿಕ ಸದ್ಭಾವನೆ. 2021ರಲ್ಲಿ ಮೋಹನ್‌ ಭಾಗವತ್‌ ಅವರು ಮಾಡಿದ್ದ ಒಂದು ಭಾಷಣವನ್ನು ಇಲ್ಲಿ ಉಲ್ಲೇಖಿಸುವುದು ಮುಖ್ಯವಾಗಬಹುದು. ಮುಸ್ಲಿಂ ರಾಷ್ಟ್ರೀಯ ಮಂಚ್‌ ವತಿಯಿಂದ 2021ರ ಜುಲೈಯಲ್ಲಿ ಆಯೋಜಿಸಿದ್ದ ಡಾ. ಖ್ವಾಜಾ ಇಫ್ತಿಕಾರ್‌ ಅಹಮದ್‌ ಅವರ 'The Meeting of Minds': A bridging initiativeʼ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದ್ದರು. ಭಾರತದಲ್ಲಿ ಅಲ್ಪಸಂಖ್ಯಾತರು ಎಂದು ಹೇಳುವವರು ಹೆದರುವ ಅಗತ್ಯವಿಲ್ಲ, ಈ ದೇಶದ ಎಲ್ಲರ ಡಿಎನ್‌ಎ ಒಂದೇ ಎಂದು ಅಲ್ಲಿ ಪುನರುಚ್ಚರಿಸಿದ್ದರು. ಜತೆಗೆ, ಇಲ್ಲಿ ಅಲ್ಪಸಂಖ್ಯಾತರು ಸುರಕ್ಷಿತವಾಗಿರುವುದೇ ಹಿಂದೂಗಳ ಕಾರಣಕ್ಕೆ ಎಂದಿದ್ದರು. “ಯಾವುದೇ ಕಡೆಯಿಂದ ಅತಿಯಾದದ್ದು ನಡೆದರೆ ಅದನ್ನು ಇಲ್ಲಿನ ಬಹುಸಂಖ್ಯಾತರೇ ವಿರೋಧ ಮಾಡುತ್ತಾರೆ. ನಾನು ಉಗ್ರ ಭಾಷಣ ಮಾಡಿ ಕೆಲವು ಹಿಂದೂಗಳ ನಡುವೆ ಪ್ರಸಿದ್ಧ ಆಗಬಹುದು. ಆದರೆ ಇಡೀ ಹಿಂದೂ ಸಮಾಜ ನನ್ನನ್ನು ವಿರೋಧಿಸುತ್ತದೆ. ಹಿಂದೂ ಸಮಾಜ ಯಾವುದೇ ತೀವ್ರವಾದಕ್ಕೆ (ಅತಿ) ಬೆಲೆ ನೀಡುವುದಿಲ್ಲ” ಎಂದು ಹೇಳಿದ್ದರು. ಇದಕ್ಕೂ ಮುನ್ನ ಕೋವಿಡ್‌ 19ರ ಸಂದರ್ಭದಲ್ಲಿ ಆನ್‌ಲೈನ್‌ ಭಾಷಣ ಸರಣಿಯಲ್ಲಿ ಮಾತನಾಡಿದ್ದ ಭಾಗವತ್‌ ಅವರು, “ಕೆಲವರು ಏನೋ ಮಾಡಿದರೆಂಬ ಕಾರಣಕ್ಕೆ ಇಡೀ ಸಮೂಹವನ್ನು ದೂಷಿಸಬಾರದು. ಭಾರತದ 130 ಕೋಟಿ ಜನರೂ ಭಾರತ ಮಾತೆಯ ಮಕ್ಕಳು, ಎಲ್ಲರೂ ಬಂಧುಗಳು ಎಂದು ತಿಳಿಯಬೇಕು.” ಎಂದಿದ್ದರು. ಇದು ಮುಸ್ಲಿಮರು ಕೋವಿಡ್‌ ನಿಯಮ ಮೀರುತ್ತಿರುವುದರಿಂದಲೇ ಕೋವಿಡ್‌ ಹರಡುತ್ತಿದೆ ಎಂಬ ನರೇಟಿವ್‌ ಕುರಿತು ಹೇಳಿದ ಮಾತು. ʼಯಾವುದೇ ಅತಿಗಳಿಗೆ ಬಲಿಯಾಗದೆ ಮಧ್ಯಮ ಮಾರ್ಗದಲ್ಲಿ ನಡೆಯಬೇಕಿದೆʼ ಎಂದೂ ಮೋಹನ್‌ ಭಾಗವತ್‌ ಅವರು ಭಾಷಣಗಳಲ್ಲಿ ಹೇಳಿದ್ದಾರೆ.

ಇದೀಗ ಮೋಹನ್‌ ಭಾಗವತ್‌ ಆಡಿರುವುದೂ ʼಎಲ್ಲ ಮಸೀದಿಗಳಲ್ಲಿ ಶಿವಲಿಂಗ ಏಕೆ ಹುಡುಕಬೇಕು?ʼ ಎಂಬ ಹೇಳಿಕೆಯ ಮುಂದುವರಿಕೆಯ ಭಾಗವೆ. “ಯಾವುದೇ ಅತಿವಾದವು ಇಲ್ಲಿನ ಸಮಾಜದ ಲಕ್ಷಣವಲ್ಲ., ಅದನ್ನು ಒಪ್ಪಲಾಗದು. ಭಾರತ ವಿಶ್ವಗುರು ಆಗಬೇಕಾದರೆ ತನ್ನ ಮೂಲ ಸ್ವಭಾವವನ್ನು ಬಿಡಬಾರದು” ಎಂದಿದ್ದಾರೆ. ಯಾರು ಮೋಹನ್‌ ಭಾಗವತ್‌ ಅವರ ಮಾತುಗಳನ್ನು ವಿರೋಧಿಸುತ್ತಿದ್ದಾರೋ ಅವರು ಒಂದು ಪ್ರಮುಖ ವಿಚಾರ ಮರೆಯುತ್ತಿದ್ದಾರೆ. ಅದೆಂದರೆ 1991ರಲ್ಲಿ ಜಾರಿಗೆ ಬಂದ ಪೂಜಾ ಸ್ಥಳಗಳ ಕಾಯ್ದೆ (ಪ್ಲೇಸಸ್‌ ಆಫ್‌ ವರ್ಷಿಪ್‌ ಆಕ್ಟ್‌). ಇದರ ಪ್ರಕಾರ, ಅಯೋಧ್ಯೆ ರಾಮಜನ್ಮಭೂಮಿ ವಿಚಾರವೊಂದನ್ನು ಬಿಟ್ಟು 1947ರ ಆಗಸ್ಟ್‌ 15ಕ್ಕೆ ಮುಂಚೆ ಇದ್ದ ಎಲ್ಲ ನಂಬಿಕೆಗಳ ಪೂಜಾ ಕೇಂದ್ರಗಳೂ ಅಂದಿನ ಸ್ಥಿತಿಗೇ ಫ್ರೀಜ್‌ ಆಗುತ್ತವೆ. ಅವುಗಳ ಸ್ವರೂಪದಲ್ಲಿ ಬದಲಾವಣೆ ಸಾಧ್ಯವಿಲ್ಲ. ಯಾವುದೇ ಇಂತಹ ಅರ್ಜಿಗಳನ್ನು ನ್ಯಾಯಾಲಯವೂ ವಿಚಾರಣೆ ಮಾಡುವಂತಿಲ್ಲ ಎಂದು ಕಾಯ್ದೆ ಹೇಳುತ್ತದೆ. ಒಂದೆಡೆ ಕಾಯ್ದೆಯನ್ನು ಇಟ್ಟುಕೊಂಡು ಇನ್ನೊಂದೆಡೆ ಮಸೀದಿಗಳನ್ನು ಉತ್ಖನನ ಮಾಡಿ ಎಂದು ಹೇಳುವುದು ಹೇಗೆ ಸರಿಯಾಗುತ್ತದೆ ಎನ್ನುವುದೂ ಪ್ರಶ್ನೆ. ಈಗಾಗಲೆ ಈ ಕಾಯ್ದೆಯನ್ನು ರದ್ದುಪಡಿಸುವಂತೆ 2020ರಿಂದಲೂ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಆ ಕಾಯ್ದೆಯನ್ನು ರದ್ದುಪಡಿಸಲು ಸುಪ್ರೀಂಕೋರ್ಟ್‌ ಆದೇಶಿಸಬೇಕು ಅಥವಾ ಸ್ವತಃ ಕೇಂದ್ರ ಸರ್ಕಾರವೇ ಈ ಕಾಯ್ದೆಯನ್ನು ರದ್ದುಪಡಿಸಬೇಕು. ಈ ದೇಶವು ನೀತಿಗಳಿಂದ ನಡೆಯಬೇಕೆ ವಿನಃ ನ್ಯಾಯಾಲಯಗಳಿಂದ ಅಲ್ಲ ಎನ್ನುವುದನ್ನೂ ಅನೇಕರು ಮರೆತಂತೆ ಕಾಣುತ್ತದೆ.

ಇಷ್ಟಕ್ಕೂ ಮೋಹನ್‌ ಭಾಗವತ್‌ ಅವರು ಹೇಳಿದ ತಕ್ಷಣ, ಮಸೀದಿಗಳ ಕುರಿತು ಪ್ರಕರಣ ದಾಖಲಿಸುವ ಪ್ರಕ್ರಿಯೆ ರದ್ದಾಗಿಬಿಡುವುದಿಲ್ಲ. ತಂತಮ್ಮ ಪ್ರದೇಶಗಳಲ್ಲಿ ಮಸೀದಿಗಳ ಕುರಿತು ದಾಖಲಾಗಿರುವ ಪ್ರಕರಣಗಳು ಮೋಹನ್‌ ಭಾಗವತ್‌ ಅವರು ಹೇಳಲಿ, ಹೇಳದಿರಲಿ ಸ್ಥಗಿತವಾಗುವುದಿಲ್ಲವಾದ್ಧರಿಂದ ಆ ಪ್ರಕ್ರಿಯೆಗೆ ತೊಂದರೆಯೇನೂ ಇಲ್ಲ. ರಾಮಮಂದಿರ ಹೋರಾಟದಲ್ಲಿ, ದೇವಸ್ಥಾನವನ್ನು ಹೇಗೆ ಮುಕ್ತಗೊಳಿಸಬೇಕು ಎಂದು ಆರ್‌ಎಸ್‌ಎಸ್‌ ತೋರಿಸಿಕೊಟ್ಟಿದೆ. ತಾನು ಇನ್ನುಮುಂದೆ ಅಂತಹ ಆಂದೋಲನಗಳನ್ನು ತೆಗೆದುಕೊಳ್ಳುವುದಿಲ್ಲ ಎನ್ನುವುದು ಆರ್‌ಎಸ್‌ಎಸ್‌ ನಿಲುವು. ನೂರು ವರ್ಷದ ಸಂಘಟನೆಯೊಂದು ತನ್ನ ಕುರಿತು ನಿಲುವನ್ನು ತೆಗೆದುಕೊಳ್ಳಲು ಸ್ವತಂತ್ರ ಹೊಂದಿದೆ, ಅದನ್ನು ಯಾರೂ ಪ್ರಶ್ನಿಸಲಾಗದು. 

ಇದು ಬಲಪಂಥೀಯ ಎಂದು ಕರೆಯಲಾಗುವಕಡೆಯ ವಿಚಾರ. ಎಡಪಂಥೀಯ ಹಾಗೂ ʼಪ್ರಗತಿಪರರುʼ ಎಂದು ಹೇಳಿಕೊಳ್ಳುವವರಂತೂ ಕಳೆದ ನಾಲ್ಕೈದು ವರ್ಷಗಳಿಂದ ಬೆತ್ತಲಾಗಿದ್ದಾರೆ. ಆರ್‌ಎಸ್‌ಎಸ್‌ ಎಂದಕೂಡಲೆ ಮುಸ್ಲಿಂ ವಿರೋಧಿ, ಸಂವಿಧಾನ ವಿರೋಧಿ, ಕೋಮುವಾದಿ ಎಂದು ದಿನಬೆಳಗಾದರೆ ಅರಚಿಕೊಳ್ಳುತ್ತಿದ್ದವರು ಮೇಲೆ ಉಲ್ಲೇಖಿಸಿದ ಮೋಹನ್‌ ಭಾಗವತ್‌ ಅವರ ಮಾತುಗಳಿಗೆ ಪ್ರತಿಕ್ರಿಯೆಯನ್ನೇ ನೀಡುತ್ತಿಲ್ಲ. ಹಿಂದೂ ಮುಸ್ಲಿಂ ಒಂದೇ ಡಿಎನ್‌ಎ, ಮಸೀದಿಗಳಲ್ಲಿ ಶಿವಲಿಂಗ ಹುಡುಕುವುದು ಸೇರಿ ಯಾವದೇ ಹೇಳಿಕೆಯನ್ನೂ ಈ ʼಪ್ರಗತಿಪರರುʼ ಸ್ವಾಗತಿಸಿಲ್ಲ. ದೇಶದಲ್ಲಿ ಸಾಮಾಜಿಕ ಸಾಮರಸ್ಯ ಮೂಡಬೇಕು, ಅದು ಕಾಂಗ್ರೆಸ್‌ ಪಕ್ಷದಿಂದಲೇ ಆಗಬೇಕು ಎಂಬ ಧೋರಣೆ ಇವರಲ್ಲಿ ಕಾಣುತ್ತಿದೆ. ಆರ್‌ಎಸ್‌ಎಸ್‌, ಬಿಜೆಪಿ ಸದಾ ಮುಸ್ಲಿಮರ ವಿರುದ್ಧ ಮಾತನಾಡುತ್ತಿರಬೇಕು, ಆಗಮಾತ್ರ ತಮ್ಮ ಬೇಳೆ ಬೇಯುತ್ತದೆ ಎಂಬ ಮಾನಸಿಕೆಯನ್ನು ಹೊಂದಿದ್ದಾರೆ. ಹಾಗಾಗಿಯೇ ಕಾಂಗ್ರೆಸ್‌ ಮಾಡಿದ ಕಾನೂನುಬಾಹಿರ ಕ್ರಮಗಳನ್ನೂ ಈ ವರೆಗೆ ಖಂಡಿಸುತ್ತಿಲ್ಲ.

ಉದಾಹರಣೆಗೆ, ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿಎಸ್‌ಪಿ ಟಿಎಸ್‌ಪಿ ನಿಧಿಯಿಂದ 15 ಸಾವಿರ ಕೋಟಿ ರೂ.ಗೂ ಹೆಚ್ಚಿನ ಮೊತ್ತವನ್ನು ಸರ್ಕಾರ ಖರ್ಚು ಮಾಡುತ್ತಿದೆ. ಇದು ಎಸ್‌ಸಿಎಸ್‌ಟಿ ಸಮುದಾಯಕ್ಕೆ ನೇರವಾಗಿ ಸಲ್ಲಬೇಕಿದ್ದ ಹಣ. ಆದರೆ ಜನರಲ್‌ ಆಗಿ ಎಲ್ಲರಿಗೂ ಬಳಕೆ ಆಗುವ ಯೋಜನೆಗಳಲ್ಲಿ, ನಿರ್ದಿಷ್ಟ ಫಲಾನುಭವಿಗಳನ್ನು ಗುರುತಿಸದೇ ಇರುವ ಯೋಜನೆಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಕರ್ನಾಟಕದ ಪ್ರಗತಿಪರ ಸಮುದಾಯವಾಗಲಿ, ತಾವು ದಲಿತ ಪರ ಎಂದು ಹೇಳಿಕೊಳ್ಳುವವರಾಗಲಿ ಈ ಕುರಿತು ಸರ್ಕಾರವನ್ನು ಟೀಕಿಸಲೇ ಹೋಗುತ್ತಿಲ್ಲ. ಅಲ್ಲಿಗೆ, ಕಾಂಗ್ರೆಸ್‌ ಪಕ್ಷಕ್ಕೆ ತಮ್ಮನ್ನು ತಾವು ಮಾರಿಕೊಂಡಿರುವುದು ಕಾಣುತ್ತದೆ. ಇದರ ಬದಲಿಗೆ ಮನೀಶ್‌ ತಿವಾರಿಯವರಂತಹ ಕಾಂಗ್ರೆಸ್‌ ನಾಯಕರು, ʼಈ ಮಾತನ್ನು ಮೋಹನ್‌ ಭಾಗವತ್‌ ಅವರು ತಮ್ಮ ಬೆಂಬಲಿಗರಿಗೆ ಹೇಳಲಿʼ ಎನ್ುವಂತಹ ಉಡಾಫೆ ಮಾತನ್ನು ಆಡಿದ್ದಾರೆ.

ಯಾವುದೇ ವ್ಯವಸ್ಥೆಯಲ್ಲಿ ಆಂತರಿಕ ಟೀಕೆ, ಟಿಪ್ಪಣಿಗಳಿಗೆ ಅವಕಾಶವಿರುವ ಆಂತರಿಕ ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ ಇರಬೇಕಾಗುತ್ತದೆ. ಮೋಹನ್‌ ಭಾಗವತ್‌ ಅವರ ಮಾತುಗಳನ್ನು ಟೀಕಿಸುವ, ಹಾಗೂ ಟೀಕಿಸಿದವರನ್ನೂ ಒಟ್ಟಿಗೆ ಕರೆದೊಯ್ಯುವ ಸಂಪ್ರದಾಯ ರಾಷ್ಟ್ರೀಯ ವಿಚಾರಧಾರೆಯಲ್ಲಿ ಕಂಡುಬರುತ್ತಿದೆ. ಆದರೆ ತಮ್ಮ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಂಡರೂ ಕಾಂಗ್ರೆಸ್‌ ಪಕ್ಷವನ್ನು ಟೀಕಿಸಲೂ ಆಗದಂತಹ ಸ್ಥಿತಿಗೆ ಎಡಪಂಥ ಅಥವಾ ʼಪ್ರಗತಿಪರʼ ವಲಯ ತಲುಪಿದೆ. ಅಲ್ಲಿ ಸ್ವತಂತ್ರ ಚಿಂತನೆ ಎನ್ನುವುದೇ ಮಾಯವಾದಂತೆ ಕಾಣುತ್ತಿದೆ. ಒಟ್ಟಿನಲ್ಲಿ ಮೋಹನ್‌ ಭಾಗವತ್‌ ಅವರ  ಹೇಳಿಕೆಗಳ ಹಿನ್ನೆಲೆಯಲ್ಲಿ ನೋಡಿದಾಗ ಚಿಂತಕ ವಲಯ (ಬುದ್ಧಿಜೀವಿಗಳು) ಬೆತ್ತಲಾಗಿದೆʼ ಎಂದು ಹೇಳಬಹುದು.

ಲೇಖಕ: ರಮೇಶ ದೊಡ್ಡಪುರ, ಪತ್ರಕರ್ತ. (ಲೇಖನದಲ್ಲಿನ ಅನಿಸಿಕೆಗಳು ವೈಯಕ್ತಿಕ)

ಶುಕ್ರವಾರ, ಅಕ್ಟೋಬರ್ 15, 2021

ರಾಜಕೀಯ ದೃಷ್ಟಿಯಲ್ಲಿ ಮೋಹನ ಭಾಗವತ್‌ ಭಾಷಣ

ವಿಶ್ವದ ಅತಿದೊಡ್ಡ ಮಾನವ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್‌) ಸದ್ಯದಲ್ಲೆ, ಅಂದರೆ 2025ರಲ್ಲಿ 100ನೇ ಸಂಸ್ಥಾಪನಾ ವರ್ಷವನ್ನು ಆಚರಿಸಲಿದೆ. ಪ್ರತಿ ವರ್ಷ ಆರೆಸ್ಸೆಸ್‌ ಸರಸಂಘಚಾಲಕರು ನಾಗಪುರದಿಂದ ನೀಡುವ ವಿಜಯದಶಮಿ ಭಾಷಣ ಸಂಘದ ಕಾರ್ಯಕರ್ತರ ಜತೆಗೆ ಸರ್ಕಾರಗಳು, ಸಾಮಾನ್ಯ ಜನರು, ತಜ್ಞರು, ವಿವಿಧ ಕ್ಷೇತ್ರದವರನ್ನು ಕುರಿತಾಗಿರುತ್ತದೆ. ಇತ್ತೀಚಿನ ದಶಕದಲ್ಲಿ ವಿಜಯ ದಶಮಿ ಭಾಷಣಕ್ಕೆ ಹೆಚ್ಚಿನ ಕುತೂಹಲ ಏರ್ಪಡುತ್ತಿದೆ. ಅದಕ್ಕೆ ಮೊದಲ ಕಾರಣ, ದೇಶದ ರಾಜಕಾರಣದ ಮೇಲೆ ಆರೆಸ್ಸೆಸ್‌ ಹೊಂದಿರುವ ಪ್ರಭಾವ. ತನ್ನನ್ನು ಸಾಂಸ್ಕೃತಿಕ ಸಂಘಟನೆ ಎಂದು ಕರೆದುಕೊಂಡರೂ, ಸಾಂಸ್ಕೃತಿಕ ಭಾರತ ನಿರ್ಮಾಣಕ್ಕೆ ರಾಜಕೀಯವೂ ಒಂದು ಸಾಧನ ಎಂದು ಭಾವಿಸಿರುವುದರಿಂದ ರಾಜಕೀಯದಿಂದ ಸಂಪೂರ್ಣ ವಿಮುಖತೆ ಆರೆಸ್ಸೆಸ್ಸಿಗೆ ಇಲ್ಲ. ಎರಡನೇ ಸರಸಂಘಚಾಲಕ ಗೋಳ್ವಲ್ಕರ್‌ ಗುರೂಜಿ ಅವರ ನಿರ್ದೇಶನದ ಮೇರೆಗೆ, ಕಾರ್ಮಿಕ, ರೈತ, ವಿದ್ಯಾರ್ಥಿ, ಶಿಕ್ಷಣ ಕ್ಷೇತ್ರದ ಜತೆಗೆ ರಾಜಕೀಯ ಕ್ಷೇತ್ರದಲ್ಲೂ ತನ್ನ ಕಾರ್ಯಕರ್ತರ ಮೂಲಕ ಸಂಘಟನೆಯನ್ನು ಆರಂಭಿಸಲಾಯಿತು. ಪ್ರಾರಂಭದಲ್ಲಿ ಜನಸಂಘ ಎಂದಿದ್ದ ಆ ಸಂಘಟನೆ ಈಗ ಭಾರತೀಯ ಜನತಾ ಪಕ್ಷ(ಬಿಜೆಪಿ) ಆಗಿದೆ. ಸದ್ಯ ಕಳೆದ 7 ವರ್ಷದಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದೆ.

ವಿಜಯ ದಶಮಿ ಭಾಷಣವು ರಾಜಕೀಯವಾಗಿದ್ದಲ್ಲ, ಅದು ಒಟ್ಟಾರೆ ಸಮಾಜ, ಇತಿಹಾಸ, ಮುಂದಿನ ದಿಕ್ಕುಗಳ ಕುರಿತಾಗಿದ್ದು ಎಂದು ಹೇಳಿದರೂ, ಚಲನಶೀಲ ಸಂಘಟನೆಯಾಗಿ ತತ್ಕಾಲೀನ ರಾಜಕೀಯ ಪರಿಸ್ಥಿತಿಗಳಿಗೂ ಸ್ಪಂದಿಸುವುದು ಸಹಜವಾಗಿಯೇ ಇರುತ್ತದೆ. ಕೆಲವೊಮ್ಮೆ ನೇರವಾಗಿ, ಆದರೆ ಬಹುತೇಕ ಬಾರಿ ಪರೋಕ್ಷವಾಗಿ ದೇಶದ ರಾಜಕೀಯ ಸ್ಥಿತಿಗತಿಗೆ ವಿಜಯದಶಮಿ ಭಾಷಣ ಸ್ಪಂದಿಸಿದೆ.

ಈ ವರ್ಷದ ವಿಜಯ ದಶಮಿ ಭಾಷಣದಲ್ಲಿ ಸರಸಂಘಚಾಲಕ ಮೋಹನ್‌ ಭಾಗವತ್‌ ಅವರು ರಾಜಕೀಯವಾಗಿ ಅನೇಕ ಸಂದೇಶಗಳನ್ನು ನೀಡಿದ್ದಾರೆ.

1. ಸ್ವಾತಂತ್ರ್ಯ ಪ್ರಾಪ್ತಿಯಾದದ್ದು ಶಾಂತಿಯ ಮಾರ್ಗದ ಜತೆಗೆ ಸಶಸ್ತ್ರ ಕ್ರಾಂತಿಯ ಮೂಲಕವೂ ಹೌದು ಎಂಬ ತನ್ನ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಲಾಗಿದೆ. ಸಶಸ್ತ್ರ ಕ್ರಾಂತಿಯಿಂದಲೇ ಸ್ವತಂತ್ರ್ಯ ದೊರಕಿದ್ದು, ಶಾಂತಿಯ ಪಾತ್ರ ಅತ್ಯಂತ ಕಡಿಮೆ ಎಂದು ಕ್ಲೆಮೆಂಟ್‌ ಆಟ್ಲಿಯನ್ನು ಉದಾಹರಿಸುತ್ತಿದ್ದ ಸ್ಥಿತಿಯಿಂದ ಇದು ಸ್ವಲ್ಪ ಮಟ್ಟಿಗೆ ಹೊರಳಿ ಮಧ್ಯಮ ಮಾರ್ಗವನ್ನು ಕಂಡುಕೊಂಡಿದೆ. ಮಹಾತ್ಮಾ ಗಾಂಧೀಜಿಯವರ ಉದಾಹರಣೆಯನ್ನು ಹೆಚ್ಚೆಚ್ಚು ಧನಾತ್ಮಕ ಸ್ವರೂಪದಲ್ಲಿ ಉದಾಹರಿಸಲಾಗುತ್ತಿರುವುದೂ ಕಳೆದ ಕೆಲವು ವರ್ಷಗಳಲ್ಲಾದ ಬದಲಾವಣೆ.

2. ಜಾತಿಗಳ ನಡುವೆ ಸಮರಸತೆಯ ಬದಲಿಗೆ ಪರಸ್ಪರ ಧ್ವೇಷ ಭಾವನೆ ಮೂಡಿಸಲಾಗುತ್ತಿದೆ ಎಂದು ತಿಳಿಸುವ ಮೂಲಕ, ನೇರವಾಗಿ ರಾಜಕೀಯ ಕ್ಷೇತ್ರದತ್ತ ಬೊಟ್ಟು ಮಾಡಿದ್ದಾರೆ. ಏಕೆಂದರೆ ಜಾತಿಗಳು ಇಂದಿನ ಚುನಾವಣೆಯ ಕೇಂದ್ರವಾಗುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಇತ್ತೀಚೆಗಷ್ಟೇ ಒಂದು ಭಾಷಣದಲ್ಲಿ, ರಾಜಕಾರಣವು ಸಮಾಜವನ್ನು ಒಡೆಯುವ ಶಕ್ತಿಯನ್ನು ಮಾತ್ರ ಹೊಂದಿದೆಯೇ ಹೊರತು, ಜೋಡಿಸುವುದು ಅದರಿಂದ ಸಾಧ್ಯವಿಲ್ಲ ಎಂದು ಹೇಳಿದ್ದರ ಮುಂದುವರಿದ ಭಾಗದಂತೆ ಇದು. ಜತೆಗೆ, ಇತ್ತೀಚೆಗೆ ಅಸ್ಸಾಂ ಹಾಗೂ ಮಿಜೋರಾಂ ರಾಜ್ಯಗಳ ನಡುವೆ ನಡೆದ ರಕ್ತಸಹಿತ ಸಂಘರ್ಷದ ಕುರಿತು ಪರೋಕ್ಷವಾಗಿ, ಕಟುವಾಗಿ ಟೀಕಿಸುತ್ತ, ಒಂದೇ ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುವ ಎರಡು ರಾಜ್ಯಗಳು ಹೊಡೆದಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಭಾಷೆಯ ವಿಚಾರದಲ್ಲೂ ವಿಭಜನೆ ಸೃಷ್ಟಿಸಿ ಅರಾಜಕತೆ ಉಂಟುಮಾಡುವ ಪ್ರಯತ್ನ ನಡೆಯುತ್ತಿದೆ ಎಂದರು.

3.  ಒಟಿಟಿ ಪ್ಲಾಟ್‌ಫಾರಂ, ಬಿಟ್‌ಕಾಯಿನ್‌, ಡ್ರಗ್ಸ್‌ಗಳ ಹಾವಳಿ ತಿಳಿಸುತ್ತಲೇ ಈಗಷ್ಟೇ ಮಾದಕ ವಸ್ತು ಸೇವನೆ ಆರೋಪದಲ್ಲಿ ಬಂಧನದಲ್ಲಿರುವ ಚಿತ್ರನಟ ಶಾಹ್‌ರೂಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ವಿಚಾರವನ್ನು “ಉಚ್ಛ ವರ್ಗದವರಿಂದ” ಎಲ್ಲರಿಗೂ ಇದರ ತೊಂದರೆ ತಟ್ಟಿದೆ ಎಂದು ಉದಾಹರಿಸಿದರು. ಇವುಗಳನ್ನು ತಡೆಯಲು ಕುಟುಂಬ ವ್ಯವಸ್ಥೆ, ಮನಸ್ಸಿನ ನಿಯಂತ್ರಣಕ್ಕೆ ಒತ್ತು ನೀಡಿದರು.

4. ಸ್ವಾತಂತ್ರ್ಯ ಹೋರಾಟದ ಉದಾಹರಣೆಯನ್ನು ನೀಡುತ್ತ ತಮಿಳುನಾಡಿನ ವೀರಪಾಂಡ್ಯ ಕಟ್ಟಬೊಮ್ಮನ್‌ ಅವರ ಉದಾಹರಿಸಿ, ನಂತರದಲ್ಲಿ ಮಹಾತ್ಮಾ ಗಾಂಧೀಜಿ ಉಪ್ಪಿನ ಸತ್ಯಾಗ್ರಹ ನಡೆಸಿದ್ದನ್ನು ಉದಾಹರಿಸಿದರು. ಪರಸ್ಪರ ಎರಡೂ ಪ್ರದೇಶಗಳಲ್ಲಿ ಸಂವಹನ ಇಲ್ಲದೆಯೂ ಸಮಾನ ಆಲೋಚನೆ ಇಡೀ ದೇಶದಲ್ಲಿ ಇದೆ ಎನ್ನುವ ಮೂಲಕ ಉತ್ತರ ಹಾಗೂ ದಕ್ಷಿಣ ಭಾರತ ಪ್ರತ್ಯೇಕ ಎನ್ನುವ ಮಾತಿಗೆ ಉತ್ತರ ನೀಡುವ ಪ್ರಯತ್ನ ಮಾಡಿದರು. ದಕ್ಷಿಣದಲ್ಲೂ ವಿಶೇಷವಾಗಿ, ಪ್ರತ್ಯೇಕತೆಯ ಮಾತನ್ನು ತೀವ್ರವಾಗಿ ಪ್ರತಿಪಾದಿಸುವ ತಮಿಳುನಾಡಿನ ಉದಾಹರಣೆಯನ್ನೇ ನೀಡಿದ್ದು ವಿಶೇಷವಾಗಿತ್ತು.

5. ದೇಶದ ಅಖಂಡತೆ, ಸ್ವತಂತ್ರ ಹೋರಾಟಗಳ ಕುರಿತು ವಿವರಿಸುವಾಗ ಮೋಹನ್‌ ಭಾಗವತ್‌ ಅವರು ಆಯ್ಕೆ ಮಾಡಿಕೊಂಡ ಉದಾಹರಣೆಗಳು ಇಂದಿನ ರಾಜಕೀಯ ಸ್ಥಿತಿಗೆ ಅನುಗುಣವಾಗಿವೆ. ಮೊದಲಿಗೆ, ಧರ್ಮವನ್ನು ಉಳಿಸುವ ಸಲುವಾಗಿ ಬಲಿದಾನಗೈದ ಗುರು ತೇಗ್‌ಬಹದ್ದೂರ್‌ ಅವರ ಉದಾಹರಣೆಯನ್ನು ಮೊದಲಿಗೆ ನೀಡಿದ್ದಾರೆ. ಇದು ಪಂಜಾಬ್‌ ಕೇಂದ್ರಿತವಾಗಿ ಕಳೆದ ಅನೇಕ ತಿಂಗಳುಗಳಿಂದ ನಡೆಯುತ್ತಿರುವ ಕೃಷಿ ಕಾಯ್ದೆಗಳ ವಿರುದ್ಧವಾದ ಮಾತಿಗಿಂತಲೂ, ಆ ಹೋರಾಟದೊಳಗೆ ನುಸುಳಿರುವ ಖಾಲಿಸ್ಥಾನ ಮಾನಸಿಕತೆಯನ್ನು ಉದ್ದೇಶಿಸಿದಂತಿದೆ. ತೇಗ್‌ ಬಹದ್ದೂರ್‌ “ಹಿಂದ್‌ ಕಾ ಚಾದರ್‌ʼ, “ವೀರರ ಆಕಾಶಗಂಗೆಯ ಸೂರ್ಯ” ಎಂದು ಬಣ್ಣಿಸಿದ್ದಾರೆ.

-ಎರಡನೆಯದಾಗಿ ಸ್ವತಂತ್ರ ಜೀವನಎಂಬ ಪದವು ಭಾರತೀಯ ಪರಿಕಲ್ಪನೆಯಲ್ಲಿ ಒಂದು ನಿರ್ದಿಷ್ಟ ಅರ್ಥವನ್ನು ಹೊಂದಿದೆ ಎನ್ನುತ್ತ, ಮೊದಲಿಗೆ ಮಹಾರಾಷ್ಟ್ರದ ಸಂತ ಜ್ಞಾನೇಶ್ವರರ ಪಸಾಯನದಾನ ಹಾಗೂ ಎರಡನೆಯದಾಗಿ ಪಶ್ಚಿಮ ಬಂಗಾಳದ ರವೀಂದ್ರನಾಥ ಠಾಗೋರರ ಕವಿತೆಯನ್ನು ಉದಾಹರಿಸಿದರು. ಮುಂದುವರಿದು, ಭಾರತದ ಜನ, ಭಾರತದ ಇತಿಹಾಸ, ಭಾರತೀಯ ಸಂಸ್ಕೃತಿ ಮತ್ತು ಭಾರತದ ಪುನರುಜ್ಜೀವನಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಗಳ ವಿರುದ್ಧ ಅಪಪ್ರಚಾರದ ಮೂಲಕ ಜಗತ್ತನ್ನು ಮತ್ತು ಭಾರತದ ಪ್ರಜೆಗಳನ್ನೂ ಸಹ ಗೊಂದಲಕ್ಕೀಡುಮಾಡಲು ಒಂದು ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಮುಂಬರುವ ಸೋಲು ಮತ್ತು ಸಂಪೂರ್ಣ ವಿನಾಶದ ಭಯದಿಂದ, ಪಡೆಗಳು ತಮ್ಮ ಕಾರ್ಯಾಚರಣೆಗಳನ್ನು ಬಹಿರಂಗವಾಗಿ ಮತ್ತು ರಹಸ್ಯವಾಗಿ ಕಾರ್ಯಗತಗೊಳಿಸಲು ಒಗ್ಗೂಡುತಿವೆ. ನಾವು ಇಂತಹ ಎಲ್ಲಾ ಪಡೆಗಳು ಸೃಷ್ಟಿಸಿತ್ತಿರುವ ಮಾನಸಿಕ ಮಾಯಾ ಜಾಲಗಳಿಂದ ನಮ್ಮನ್ನು ಮತ್ತು ನಮ್ಮ ಸಮಾಜವನ್ನು ಎಚ್ಚರಿಕೆಯಿಂದ ರಕ್ಷಿಸಬೇಕು ಎಂದಿರುವುದು ಈ ಎರಡೂ ರಾಜ್ಯಗಳಲ್ಲಿರುವ, ಮುಖ್ಯವಾಗಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ಮಮತಾ ಬ್ಯಾನರ್ಜಿ ಸರ್ಕಾರದ ನಡೆಯನ್ನು ಟೀಕಿಸಿದ್ದು ಎಂದು ಅರ್ಥೈಸಬಹುದು.

6. ರೋಗಗಳ ತಡೆಗಟ್ಟುವಲ್ಲಿ ನಮ್ಮ ಸಾಂಪ್ರದಾಯಿಕ ಜೀವನಶೈಲಿಯ ಪರಿಣಾಮಕಾರಿ ಪಾತ್ರ ಮತ್ತು ಕರೋನಾದ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯಲ್ಲಿ ಆಯುರ್ವೇದ ಔಷಧಿಗಳ ಪರಿಣಾಮಕಾರಿ ಪಾತ್ರವನ್ನು ನಾವು ಅರಿತುಕೊಂಡಿದ್ದೇವೆ ಎನ್ನುವ ಮೂಲಕ, ಕರೊನಾ ಸಂದರ್ಭದಲ್ಲಿ ಆಯುರ್ವೇದ ಹಾಗೂ ಅಲೋಪತಿ ನಡುವೆ ನಡೆದ ಸಂಘರ್ಷವನ್ನು ಪ್ರಸ್ತಾಪಿಸಿದರು. ಎಲ್ಲ “ಪಥಿ”ಗಳೂ ತಮ್ಮತನವನ್ನು ಉಳಿಸಿಕೊಂಡು, ತಮ್ಮದೇ ಶ್ರೇಷ್ಠ ಎಂಬ ಅಹಂಕಾರವನ್ನು ತ್ಯಜಿಸಬೇಕು ಎಂದು ಹೇಳಿದರಾದರೂ, ಈ ಮಾತು, ಆಯುರ್ವೇದದ ಕುರಿತು ಬಹಿರಂಗ ಸಮರ ಸಾರಿದ್ದ ಅಲೋಪಥಿ ಕ್ಷೇತ್ರದತ್ತ ಬೊಟ್ಟುಮಾಡಿದಂತಿತ್ತು.

7. ಭಾರತೀಯ ದೃಷ್ಟಿಯ ಧರ್ಮ ಕೇಂದ್ರಿತ ಅರ್ಥ ಮತ್ತು ಕಾಮಗಳನ್ನೊಳಗೊಂಡ ಆರ್ಥಿಕತೆಯ ದಾರಿಯನ್ನು ಕಂಡುಕೊಳ್ಳಬೇಕು ಎಂದು ಕರೆ ನೀಡಿದರು. ಕಳೆದ ಏಳು ವರ್ಷದಲ್ಲಿ ಈ ಕುರಿತು ನಡೆದಿರಬಹುದಾದ ಅಂತಹ ಯಾವುದೇ ಉದಾಹರಣೆಯನ್ನು ನೀಡದೆ ಸಮಸ್ಯೆಯನ್ನಷ್ಟೆ ಪಟ್ಟಿ ಮಾಡಿದ್ದು ಗಮನಿಸಿದರೆ, ಈ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ಈ ನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳು ನಡೆದಿಲ್ಲ ಎಂದು ಸೂಚಿಸುವಂತಿತ್ತು. ಇನ್ನಾದರೂ ಇತ್ತ ಗಮನ ಹರಿಸಿ ಎಂದು ತಿಳಿಸಿದಂತಿತ್ತು.

8. ಜನಸಂಖ್ಯಾ ನಿಯಂತ್ರಣದ ಕುರಿತು ಮುಖ್ಯವಾಗಿ ಮುಸ್ಲಿಂ ಸಮುದಾಯದ ಮೇಲೆ ನೇರ ಆರೋಫ ಮಾಡದೆ, ಬಹಳ ರಾಜತಾಂತ್ರಿಕವಾದ ಭಾಷೆಯನ್ನು ಬಳಸುವ ಮೂಲಕ ಸಮರ್ಥನೆ ಮಾಡಿದರು. ಜತೆಗೆ, ಈ ವಿಷಯವನ್ನು 2015ರ ಸಭೆಯಲ್ಲೇ ನಿರ್ಣಯ ಮಾಡಲಾಗಿದೆ ಎಂದು ಅಲ್ಲಿನ ನಿರ್ಣಯವನ್ನು ಓದಿದರು. ಬಹುಶಃ ಸಮಾನ ನಾಗರಿಕ ಸಂಹಿತೆ ಎಂಬುದು ಸದ್ಯದಲ್ಲೆ ಅಥವಾ 2024ರ ಚುನಾವಣೆಗೆ ಮುನ್ನ ಸಂಸತ್ತಿನಲ್ಲಿ ಮಂಡನೆಯಾಗುವ ಎಲ್ಲ ಲಕ್ಷಣಗಳೂ ಇವೆ. ಚುನಾವಣೆ ಕಾಲದಲ್ಲಿ ಆರೆಸ್ಸೆಸ್‌ ಈ ವಿಚಾರ ಪ್ರಸ್ತಾಪಿಸುತ್ತಿದೆ ಎಂಬ ಆರೋಪ ಬಾರದಂತೆ 2015ರ ನಿರ್ಣಯವನ್ನು ಉಲ್ಲೇಖಿಸಿರುವ ಸಾಧ್ಯತೆಯಿದೆ.

9. ದೇವಸ್ಥಾನಗಳನ್ನು ಸರ್ಕಾರ ನಿರ್ವಹಣೆ ಮಾಡುವುದರ ಕುರಿತು ಬಹುತೇಕ ಆಕ್ಷೇಪ ವ್ಯಕ್ತಪಡಿಸುತ್ತಲೇ ಸಮಾಜಕ್ಕೆ ದೇವಸ್ಥಾನವನ್ನು ನೀಡಿದರೆ ಅದನ್ನು ಸಾಮಾಜಿಕ ದೃಷ್ಟಿಕೋನದಲ್ಲಿ ಮುನ್ನಡೆಸುವ ಸಾಮರ್ಥ್ಯವನ್ನು ಸಮಾಜ ಹೊಂದಿದೆಯೇ ಎಂಬುದನ್ನೂ ಪ್ರಶ್ನಿಸಿದರು. ಇತ್ತೀಚೆಗೆ ಆಂಧ್ರ ಪ್ರದೇಶದಲ್ಲಿ ದೇವಸ್ಥಾನಗಳ ಮೇಲೆ ನಡೆಯುತ್ತಿರುವ ದಾಳಿ, ಕರ್ನಾಟಕದಲ್ಲಿ ದೇವಸ್ಥಾನದ ಕುರಿತು ಇತ್ತೀಚೆಗೆ ನಡೆದ ವ್ಯಾಪಕ ಚರ್ಚೆಗಳ ಹಿನ್ನೆಲೆಯಲ್ಲಿ ದೇಶಾದ್ಯಂತ ದೇವಸ್ಥಾನಗಳ ಕುರಿತು ಏಕಾಭಿಪ್ರಾಯ ಮೂಡಿಸುವ ಪ್ರಯತ್ನ ಇದ್ದಂತಿದೆ. ಭೂಮಿಯ ವಿಚಾರವು ಸಂವಿಧಾನಾತ್ಮಕವಾಗಿ ರಾಜ್ಯ ಸರ್ಕಾರಕ್ಕೆ ಸೇರಿದ್ದಾದ್ಧರಿಂದ ದೇವಸ್ಥಾನ ರಕ್ಷಣೆಗಾಗಿ ಕೇಂದ್ರದಿಂದ ಕಾಯ್ದೆ ತರಲಾಗದು.

10. ಇತ್ತೀಚಿನ ದಿನಗಳಲ್ಲಿ ಮೋಹನ್‌ ಭಾಗವತ್‌ ಅವರು ಪ್ರಬಲವಾಗಿ ಪ್ರತಿಪಾದಿಸುತ್ತಿರುವ ಹಿಂದು ಮುಸ್ಲಿಂ ಏಕ ಮೂಲದ ವಿಚಾರವನ್ನು ಇಲ್ಲಿಯೂ ಪ್ರಬಲವಾಗಿ ಮಂಡಿಸಿದರು. “ಹೊರಗಿನಿಂದ ವಲಸೆ ಬಂದಿರುವ ಸಮುದಾಯಗಳ ಸದಸ್ಯರನ್ನು ಒಳಗೊಂಡಂತೆ ಎಲ್ಲಾ ಭರತವಾಸಿಗಳು, ನಮ್ಮ ಆಧ್ಯಾತ್ಮಿಕ ನಂಬಿಕೆಗಳು ಮತ್ತು ಪೂಜಾ ವಿಧಾನಗಳ ವ್ಯತ್ಯಾಸಗಳ ಹೊರತಾಗಿ ನಾವೆಲ್ಲರೂ ಸಾಮಾನ್ಯ ಶಾಶ್ವತ ನಾಗರೀಕತೆ, ಸಂಸ್ಕೃತಿ ಮತ್ತು ಪೂರ್ವಜರ ವಾರಸುದಾರರು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅನನ್ಯ ಅನುವಂಶಿಕತೆಯೇ ನಮ್ಮ ಧಾರ್ಮಿಕ ಸ್ವಾತಂತ್ರ್ಯದ ಮೂಲವಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ತನಗೆ ಸೂಕ್ತವೆಂದು ಭಾವಿಸುವ ಪೂಜಾ ವಿಧಾನವನ್ನು ಆಯ್ಕೆ ಮಾಡಲು ಸ್ವತಂತ್ರನಾಗಿರುತ್ತಾನೆ. ವಿದೇಶಿ ದಾಳಿಕಾರರ ಜೊತೆಗೆ ಅನೇಕ ಧಾರ್ಮಿಕ ಪಂಥಗಳೂ ನಮ್ಮ ದೇಶಕ್ಕೆ ಬಂದವು ಎಂಬುದು ಐತಿಹಾಸಿಕ ಸತ್ಯ. ಆದರೆ ಇಂದು ಭಾರತದಲ್ಲಿ ಪಂಥಗಳನ್ನು ನಂಬುವವರ ಸಂಬಂಧವು ಆಕ್ರಮಣಕಾರರ ಜೊತೆಗಿಲ್ಲ, ಅವರ ಸಂಬಂಧವಿರುವುದು ದೇಶದ ರಕ್ಷಣೆಗಾಗಿ ಅವರೊಂದಿಗೆ ಹೋರಾಡಿದ ಹಿಂದೂ ಪೂರ್ವಜರೊಂದಿಗೆ. ನಮ್ಮ ಆದರ್ಶಗಳು ನಮ್ಮ ಸಾಮಾನ್ಯ ಪೂರ್ವಜರು” ಎನ್ನುತ್ತ ಹಸನ್ಖಾನ್ ಮೇವತಿ, ಹಕೀಮ್ ಖಾನ್ ಸೂರಿ, ಖುದಾಬಕ್ಷ್ ಮತ್ತು ಗೌಸ್ ಖಾನ್ ರಂತಹ ಹುತಾತ್ಮರನ್ನು ಮತ್ತು ಅಶ್ಫಾಖುಲ್ಲಾ ಖಾನ್ ರಂತಹ ಕ್ರಾಂತಿಕಾರರನ್ನು ದೇಶವು ನೋಡಿದೆ ಎಂದು ಸ್ಮರಿಸಿದರು.

11. ಇತ್ತೀಚೆಗಷ್ಟೆ ಸಾವರ್ಕರ್‌ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮೋಹನ್‌ ಭಾಗವತ್‌ ಈ ಭಾಷಣದಲ್ಲೂ ಸಾವರ್ಕರ್‌ ಉದಾಹರಣೆ ನೀಡಿದರು. ಇದೇ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಭಾಗವಹಿಸಿ, ಸಾವರ್ಕರ್‌ ಕ್ಷಮಾಪಣೆ ಕೋರಿದ್ದು ಗಾಂಧೀಜಿಯವರ ಮಾತಿಗೆ ಬೆಲೆ ಕೊಟ್ಟು ಎಂದಿದ್ದರು. ಜಾಗೃತ ಭಾರತವು ಗೀತೆಯ ಸಾರವನ್ನೇ ಹೇಳುತ್ತದೆ ಎಂಬ ಸಾವರ್ಕರ್‌ ಮಾತನ್ನು ವಿಜಯದಶಮಿ ಭಾಷಣದಲ್ಲಿ ಮೋಹನ್‌ ಭಾಗವತ್‌ ಉದಾಹರಿಸಿದರು. ಇತ್ತೀಚಿನ ದಿನಗಳಲ್ಲಿ ಸಾವರ್ಕರ್‌ ಕುರಿತ ಮಾತುಗಳು ರಾಷ್ಟ್ರ ರಾಜಕಾರಣ, ಚರ್ಚೆಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿವೆ. ಇತ್ತೀಚೆಗಷ್ಟೆ ಕರ್ನಾಟಕದವರೇ ಆದ ವಿಕ್ರಂ ಸಂಪತ್‌ ಅವರು ಸಾವರ್ಕರ್‌ ಕುರಿತು ರಚಿಸಿದ ಕೃತಿಯೂ ಬಿಡುಗಡೆ ಆಗಿದೆ. ಇದೆಲ್ಲದರ ಜತೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಷಾ ಇದೇ ದಿನದಂದು ಅಂಡಮಾನ್‌ನ ಸೆಲ್ಯುಲರ್‌ ಜೈಲಿಗೆ ಭೇಟಿ ನೀಡಿದರು. ಸಾವರ್ಕರ್‌ ಅವರನ್ನು ಕೂಡಿಟ್ಟಿದ್ದ ಕೋಣೆ, ಅವರ ಸ್ಮರಣೆಯುಳ್ಳ ಬರಹಗಳನ್ನು ವೀಕ್ಷಿಸಿದರು. ಸಾವರ್ಕರ್‌ ಅವರ ಜೀವನವನ್ನು ಅನುಮಾನದಿಂದ ನೋಡುವವರನ್ನು ಟೀಕಿಸಿದರು. ಸದ್ಯದಲ್ಲೇ ಸಾವರ್ಕರ್‌ ಕುರಿತು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಳ್ಳುವ ಮುನ್ಸೂಚನೆ ಇದು ಎಂದು ವಿಶ್ಲೇಷಿಸಬಹುದು. ಸಾವರ್ಕರ್‌ ಹೆಸರು ಸದಾ ಸಂಚಲನ ಸೃಷ್ಟಿಸುವ ಶಕ್ತಿ ಹೊಂದಿದ್ದು, ಲೋಕಸಭೆ ಚುನಾವಣೆಗೂ ಇದು ಬಿಜೆಪಿಗೆ ಸಹಾಯವಾಗುವ ಎಲ್ಲ ಸಾಧ್ಯತೆ ಇದೆ.

ಭಾನುವಾರ, ಸೆಪ್ಟೆಂಬರ್ 19, 2021

ಪ್ರತಿಮೆಗಳನ್ನು ಅನಾಥವಾಗಿಸುವುದು ಸರಿಯೇ?

 ನಾಡು, ನುಡಿ, ದೇಶಕ್ಕೆ ಸೇವೆ ಸಲ್ಲಿಸಿದ ಮಹನೀಯರ ಪ್ರತಿಮೆಗಳನ್ನು ಸ್ಥಾಪಿಸಿ ಗೌರವಿಸುವುದು ಸಂಪ್ರದಾಯ. ಆದರೆ ಅವುಗಳ ರೂಪುರೇಷೆ, ನಿರ್ವಹಣೆಯ ಅರಿವಿಲ್ಲದೆ ಕ್ಷಣಕಾಲದ ಉತ್ತೇಜನೆಗೆ ಒಳಗಾಗಿ ಸ್ಥಾಪಿಸುವ ಪ್ರತಿಮೆಗಳು ಸಾರ್ವಜನಿಕರಿಗೆ ಕಿರಿಕಿರಿ, ಸಂಚಾರ ದಟ್ಟಣೆ ಜತೆಗೆ ಮಹನೀಯರಿಗೂ ಅವಮಾನವಾಗುವಂತೆ ಕಸಕಡ್ಡಿಗಳ ನಡುವೆ ತುಂಬಿವೆ. ಧೂಳು ಹಿಡಿದಿರುವ ಪ್ರತಿಮೆಗಳನ್ನು ಕಂಡರೆ ಬೇಸರವಾಗುತ್ತದೆ. ಸುಪ್ರೀಂಕೋರ್ಟ್‌ ಗಮನಕ್ಕೂ ಈ ವಿಚಾರ ಬಂದು ಪ್ರತಿಮೆಗಳನ್ನು ತೆರವುಗೊಳಿಸಲು ಆದೇಶಿಸಿದ್ದು, ಸಮಸ್ಯೆ ಉಲ್ಬಣವಾಗಲು ಸರ್ಕಾರದ ಅನಾಸಕ್ತಿಯೂ ಕಾರಣ.

Web Link: ಪ್ರತಿಮೆಗಳನ್ನು ಸ್ಥಾಪಿಸಿದರೆ ಸಾಕೆ?

(ವಿ.ಸೂ: ಚಿತ್ರವನ್ನು ಡೌನ್‌ಲೋಡ್‌ ಮಾಡಿಕೊಂಡು ಗ್ಯಾಲರಿಯಿಂದ ತೆರೆದರೆ ಲೇಖನವನ್ನು ಸ್ಪಷ್ಟವಾಗಿ ಓದಬಹುದು)